ಬೆಂಗಳೂರು : ಚೈತ್ರಾ ಕುಂದಾಪುರ ವಂಚನೆ ಪ್ರಕರಣದಲ್ಲಿ ತಮ್ಮ ಹಾಗೂ ತಮ್ಮ ಪುತ್ರನ ಹೆಸರನ್ನು ಬಳಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಸೂಕ್ರ ಕಾನೂನು ಕ್ರಮ ಕೈಗೊಳ್ಳುವಂತೆ ಸಾಲುಮರದ ತಿಮ್ಮಕ್ಕ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಪೊಲೀಸ್ ಆಯುಕ್ತರ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿರುವ ಅವರು, ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಸಾಲುಮರದ ತಿಮ್ಮಕ್ಕ ಅವರನ್ನು ಪರಿಸರ ರಾಯಭಾರಿಯಾಗಿ ರಾಜ್ಯ ಸರ್ಕಾರ ನೇಮಿಸಿದ್ದು, ಸಂಪುಟದ ದರ್ಜೆಯ ಸ್ಥಾನಮಾನ ನೀಡಲಾಗಿದೆ. ಉದ್ಯಮಿ ಗೋಪಾಲಬಾಬು ಪೂಜಾರಿಗೆ ವಿಧಾನಸಭೆಯ ಟಿಕೆಟ್ ಕೊಡಿಸುವುದಾಗಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಹಾಗೂ ಬಿಜೆಪಿ ಮುಖಂಡ ಗಗನ್ ಕಡೂರು ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬಾಬು ಪೂಜಾರಿಯವರನ್ನು ನಂಬಿಸಲು ಸಾಲುಮರದ ತಿಮ್ಮಕ್ಕ ಅವರಿಗೆ ಸರ್ಕಾರದಿಂದ ನೀಡಲಾಗಿರುವ ಕಾರನ್ನು ಬಳಕೆ ಮಾಡಿಕೊಳ್ಳಲಾಗಿತ್ತು ಮತ್ತು ವಿಧಾನಸೌಧದಲ್ಲಿರುವ ಸಾಲುಮರದ ತಿಮ್ಮಕ್ಕ ಅವರ ಕಚೇರಿಯನ್ನು ಆರೋಪಿ ಗಗನ್ ನವೀಕರಣ ಮಾಡಿದ್ದ ಎಂಬ ಆರೋಪಗಳು ಕೇಳಿಬಂದಿದ್ದವು. ಆದರೆ ಇದನ್ನು ಅಲ್ಲಗಳೆದಿರುವ ಸಾಲುಮರದ ತಿಮ್ಮಕ್ಕ ಅವರು, ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ವೃಕ್ಷ ಸಂಪತ್ತಿಗಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟು ಬದುಕಿದ್ದೇನೆ. ತಮ್ಮ ಪುತ್ರ ಉಮೇಶ್ ಕೂಡ ಎರಡು ದಶಕಗಳಿಂದಲೂ ಮರ, ಗಿಡಗಳನ್ನು ಸಾಕು ಸಲಹುದುವರಲ್ಲೇ ತೊಡಗಿಸಿಕೊಂಡಿದ್ದೇನೆ. ತಮ್ಮ ಈ ಇಳಿವಯಸ್ಸಿನಲ್ಲಿ ಸುಳ್ಳು ಹಾಗೂ ಅಪಪ್ರಚಾರ ಕಂಡು ಮಾನಸಿಕವಾಗಿ ನೊಂದಿದ್ದೇನೆ. ಸುದ್ದಿ ಹಬ್ಬಿಸುವವರಿಗೆ ಅದು ದೈನಂದಿನ ಕೆಲಸ ಆಗಿರಬಹುದು. ಆದರೆ ನಮ್ಮ ಮನಸ್ಸಿನ ಮೇಲೆ ಭಾರೀ ಆಘಾತ ಬೀರಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಒಂದು ವೇಳೆ ಈ ಪ್ರಕರಣದಲ್ಲಿ ತಾವು ಭಾಗಿಯಾಗಿದ್ದರೆ ಕಾನೂನು ರೀತಿಯ ಕ್ರಮ ಜರುಗಿಸಿ, ಇಲ್ಲವಾದರೆ ಸುಳ್ಳು ಸುದ್ದಿ ಹರಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ತಿಮ್ಮಕ್ಕ ಒತ್ತಾಯಿಸಿದ್ದಾರೆ.