ಮೈಸೂರು : ಆಧುನಿಕ ಕಾಲದಲ್ಲಿ ಮಹಿಳೆಯರು ಮನೆಯಿಂದ ಹೊರಗೆ ಬಂದು ದುಡಿಯುತ್ತಿರುವುದರಿಂದ ಅವರ ಜವಾಬ್ದಾರಿಯ ವ್ಯಾಪ್ತಿಯು ಹೆಚ್ಚಿದೆ. ಹಿಂದಿನಂತೆಯೇ ಗೃಹಕೃತ್ಯಗಳ ಜೊತೆ ಜೊತೆಗೆ ಔದ್ಯೋಗಿಕ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸುತ್ತಿದ್ದಾರೆ. ಹಾಗಾಗಿ ಹೆಣ್ಣು ಸರ್ವಕಾಲಕ್ಕೂ ಸಮಾಜದ ಕಣ್ಣು ಎಂದು ಡಾ. ಜಾನ್ಹವಿ ಅಭಿಪ್ರಾಯಪಟ್ಟರು.
ಮೈಸೂರಿನ ವಿಜಯನಗರದ ಸ್ಪೋರ್ಟ್ಸ್ ಕ್ಲಬ್ ನ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹೆಣ್ಣಿನ ಜವಾಬ್ದಾರಿಯನ್ನು ಅನುಪಮವಾದುದೆಂದೇ ಹೇಳಬೇಕಾಗಿದೆ. ಗಂಡನಿಗೆ ಸ್ಫೂರ್ತಿ ತುಂಬುವ ಹೆಂಡತಿಯಾಗಿ, ಮಕ್ಕಳಿಗೆ ಶಕ್ತಿ ತುಂಬುವ ತಾಯಿಯಾಗಿ, ಅತ್ತೆ, ಮಾವಂದಿರ ಆರೈಕೆ ಮಾಡುವ ದಾದಿಯಾಗಿ, ಮನೆಯನ್ನು ಆರ್ಥಿಕವಾಗಿ ಮೇಲೆತ್ತುವ ಧ್ಯೇಯವನ್ನಿಟ್ಟುಕೊಂಡು ಸಕಲ ಕಾರ್ಯಗಳನ್ನು ನಿರ್ವಹಿಸುತ್ತಾಳೆ.
ಇತಿಹಾಸ ಮತ್ತು ಪುರಾಣ ಕಾಲದಿಂದಲೂ ಮಹಿಳೆ ಸಬಲೆಯಾಗಿದ್ದರೂ ಸಾಮಾಜಿಕ ಸ್ವಾತಂತ್ರ್ಯ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಶಿಕ್ಷಣಗಳ ವಂಚನೆಯಿಂದಾಗಿ ಹಾಗೆಯೇ ಪುರುಷ ದೌರ್ಜನ್ಯದ ಕಾರಣದಿಂದಲೂ ಅಬಲೆ ಎನಿಸಿಕೊಳ್ಳುವಂತಾಗಿತ್ತು. ಆದರೆ ಆಧುನಿಕ ಕಾಲದ ಕಾನೂನು, ಸರ್ವರಿಗೂ ಶಿಕ್ಷಣ ದೊರೆಯುತ್ತಿರುವುದು, ವಿದ್ಯಾವಂತ ಮತ್ತು ವಿಚಾರವಂತ ಪುರುಷರ ಸಮಾನತಾ ನಡೆಯಿಂದಾಗಿ ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮತ್ತೆ ತನ್ನ ಸಬಲತೆಯನ್ನು ಸಾಬೀತುಪಡಿಸಿದ್ದಾಳೆ.
ಮಹಾನಗರಗಳಲ್ಲಿನ ಗಾರ್ಮೆಂಟ್ಸ್ ಗಳಿಗೆ ಹೋಗುವ ಮಹಿಳೆಯರಿಂದ ಸಾವಿರಾರು ಸಂಸಾರಗಳು ನಡೆಯುತ್ತಿವೆ. ಆದರೂ ಕೆಲವು ಕುಡುಕ ಗಂಡಂದಿರು, ವರದಕ್ಷಿಣೆ ಆಸೆಯ ಕೆಲವು ಅತ್ತೆ ಮಾವಂದಿರ ದೌರ್ಜನ್ಯದಿಂದ ಇಂದಿಗೂ ಎಷ್ಟೋ ಹೆಣ್ಣು ಮಕ್ಕಳು ಸಂಕಟ ಅನುಭವಿಸುತ್ತಿದ್ದಾರೆ. ಅಂಥವರು ತಮ್ಮ ಕಾಲಮೇಲೆ ತಾವು ನಿಂತು ಸ್ವತಂತ್ರವಾಗಿ ಬದುಕುವಂತೆ ಮಾಡಲು ಸ್ವಉದ್ಯೋಗದ ಅವಕಾಶ ಕಲ್ಪಿಸಿಕೊಡುವುದು ಸರ್ಕಾರ ಹಾಗೂ ಸಂಘ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿಯಾಗಿದೆ.
ಅಂಥ ಸದುದ್ದೇಶವಿರುವ ಲಯನ್ ಸಂಸ್ಥೆಯ ಹೊಲಿಗೆ ಯಂತ್ರಗಳನ್ನು ನೀಡುವ ಈ ಕಾರ್ಯ ಆದರ್ಶಪ್ರಾಯವಾದುದೆಂದು ಶ್ಲಾಘಿಸಿ, ಅವಿವಾಹಿತ ಹಾಗೂ ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳು ಇದನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿರೆಂದು ಕರೆ ನೀಡಿದರು.
ಲಯನ್ ಸಂಸ್ಥೆಯ ಅಧ್ಯಕ್ಷ ಲಯನ್ ಮಕಾಳ ಶಿವಕುಮಾರ್ ಮಾತನಾಡಿ, ಇರುವೆಯಷ್ಟು ಶಕ್ತಿ ಕೊಡು, ಹೆಣ್ಣಿನಷ್ಟು ಧೈರ್ಯ ಕೊಡು ಎಂಬ ಒಂದು ಗಾದೆ ಮಾತಿದೆ. ಮನೆ ಮತ್ತು ಮಕ್ಕಳ ಅಭ್ಯುದಯಕ್ಕಾಗಿ ಟೊಂಕ ಕಟ್ಟಿ ನಿಲ್ಲುವ ತಾಯಂದಿರನ್ನು ನೋಡಿದಾಗ ಈ ಗಾದೆಯ ಅರ್ಥ ತಿಳಿಯುತ್ತದೆ. ಎಷ್ಟೋ ಮಂದಿ ಪುರುಷರು ಕುಡಿತಕ್ಕೆ ದಾಸರಾಗಿ ಸಂಸಾರದಿಂದ ವಿಮುಖರಾದರೂ ತಾಯಿಯಾದವಳು ಕೂಲಿನಾಲಿ ಮಾಡಿ ಮಕ್ಕಳನ್ನು ದಡ ಮುಟ್ಟಿಸಲು ಪ್ರಯತ್ನಿಸುತ್ತಾಳೆ. ಅಂಥವರಿಗೆ ಇಂಥ ಸಹಾಯ ಹಸ್ತವು ಸಂಜೀವಿನಿಯಿದ್ದಂತೆ. ಈ ಮೂಲಕ ಸಾಮಾಜಿಕ ಸಬಲತೆಯೂ ಸಾಕಾರಗೊಂಡಂತಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಲಯನ್ T.H ವೆಂಕಟೇಶ್ ರವರು ಮಹಿಳಾ ನಿರುದ್ಯೋಗಿಯನ್ನು ಗುರುತಿಸಿ ಹೊಲಿಗೆ ಯಂತ್ರಗಳನ್ನು ನೀಡುವ ಮೂಲಕ ಸ್ವ ಉದ್ಯೋಗಕ್ಕೆ ಅವಕಾಶವನ್ನು ನಮ್ಮ ಸಂಸ್ಥೆಯು ಮಾಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಖಜಾಂಚಿ ಮಹದೇವ್ ಪ್ರಸಾದ್, ಎನ್ .ರಾಕೇಶ್ , ಡಾ .ಆರ್ .ಡಿ.ಕುಮಾರ್ , ಸಿ.ಆರ್ .ದಿನೇಶ್, ಪ್ರಸನ್ನ ಹೆಚ್ .ಕೆ., ಹೆಚ್ .ಸಿ. ಕಾಂತರಾಜು, ಭಾಸ್ಕರಾನಂದಾ,ನಾಗರಾಜ್ ಶ್ರೀಧರ್ , ಅರುಣ್ ಸಾಗರ್ ಅಮರಭವಾನಿ ,,ಲಕ್ಷ್ಮಿ ,ಅಂಬುಜಾ ಯಶೋಧಮ್ಮ, ಜಾಹ್ನವಿ ದಿನೇಶ್ ಇತರರು ಹಾಜರಿದ್ದರು.