ಬೆಂಗಳೂರು : ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ನಲ್ಲಿ ಕರ್ನಾಟಕ, ಬೆಂಗಳೂರು ಜನರು ಹಾಗೂ ಕನ್ನಡ ಭಾಷೆಯ ಬಗ್ಗೆ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಪಶ್ಚಿಮ ಬಂಗಾಳದ ಯುವಕನನ್ನು ಕೊಡಿಗೆ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರ್ಟಿ ನಗರದಲ್ಲಿ ವಾಸವಾಗಿದ್ದ ನಿಲಯ್ ಮಂಡಲ್ (23) ಬಂಧಿತ ಯುವಕ. ಈತ ಕೊಡಿಗೆಹಳ್ಳಿಯಲ್ಲಿರುವ ಕಂಪೆನಿಯೊಂದರ ಉದ್ಯೋಗಿ.
ನಗರದಲ್ಲಿ ವಾಸವಾಗಿದ್ದುಕೊಂಡು ಈ ಯುವಕ ಕರ್ನಾಟಕದ ಬಗ್ಗೆ ಕೆಟ್ಟದಾಗಿ ಅವಹೇಳನ ಮಾಡಿದ್ದಲ್ಲದೆ, ಉತ್ತರ ಭಾರತದವರು ಬೆಂಗಳೂರಿನಿಂದ ಹೊರಟು ಹೋದರೆ ಬೆಂಗಳೂರಿಗರು ಕಾಡು ಜನರಿಗೆ ಸಮವಾಗುತ್ತಾರೆ ಎಂದು ಅತಿರೇಕವಾಗಿ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದಾನೆ.
ರಾಜ್ಯ, ಜನ, ಕನ್ನಡ ಭಾಷೆ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂಧಿಸಿದ ಬರಹದಿಂದ ರಾಜ್ಯದ ಜನರ ನಡುವೆ ಗೊಂದಲ ಸೃಷ್ಟಿಸಿ ಭಾಷೆ ಮತ್ತು ವಾಸ ಮಾಡುವ ಸ್ಥಳ, ಇತ್ಯಾದಿಗಳ ಆಧಾರದ ಮೇಲೆ ದ್ವೇಷವನ್ನುಂಟು ಮಾಡುವ ಮತ್ತು ಸೌಹಾರ್ದತೆಗೆ ಬಾಧಕವಾಗುವ ರೀತಿ ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ನಲ್ಲಿ ಸಂದೇಶವನ್ನು ಫೋಸ್ಟ್ ಮಾಡಿದ್ದನು.
ಈ ಬಗ್ಗೆ ಅನೇಕ ಕನ್ನಡಪರ ಸಂಘಟನೆಗಳು, ಕಾರ್ಯಕರ್ತರು ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವಂತೆ, ಕೆಲಸ ಮಾಡುತ್ತಿದ್ದ ಕಂಪೆನಿ ಹಾಗೂ ಬೆಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ಕೀಳು ಅಭಿಪ್ರಾಯದ ವಿರುದ್ಧ ಕಂಪೆನಿ ಸಹ ಆತನ ವಿರುದ್ಧ ಸೂಕ್ತ ಕ್ರಮದ ಭರವಸೆ ನೀಡಿತ್ತು. ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಕೊಡಿಗೆಹಳ್ಳಿ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.