ಬೆಂಗಳೂರು: ಚಿರತೆ ಚರ್ಮ ಮಾರಾಟಕ್ಕೆ ಯತ್ನ: ಶಿಕ್ಷಕಿ ಸೇರಿ ಐವರ ಬಂಧನ ನಗರದಲ್ಲಿ ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸಿದ ಖಾಸಗಿ ಶಾಲೆ ಶಿಕ್ಷಕಿ ಸೇರಿದಂತೆ ಐದು ಮಂದಿಯನ್ನು ಸಿಐಡಿ ಅರಣ್ಯ ಘಟಕದ ಸಂಚಾರ ದಳ ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆ ಕೆಜಿಎಫ್ನ ಜಾನ್ ವಿಕ್ಟರ್, ಸುರೇಶ್ ಕುಮಾರ್, ಮೈಸೂರು ರಸ್ತೆಯ ಬಾಪೂಜಿ ನಗರದ ಸಂತೋಷ್ ಕುಮಾರ್, ಸ್ವಾತಿ, ಆಕೆಯ ಪ್ರಿಯಕರ ಭಾರತಿ ನಗರದ ಬಾಲು ಬಂಧಿತರಾಗಿದ್ದು, ಆರೋಪಿಗಳಿಂದ ಚಿರತೆ ಚರ್ಮ, 6 ಉಗುರು, ಕೋರೆ ಹಲ್ಲು ಹಾಗೂ ಕೃಷ್ಣ ಮೃಗದ ಕೊಂಬುಗಳನ್ನು ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಾಗರಬಾವಿ ಸಮೀಪದ ಮಲೆ ಮಾದೇಶ್ವರ ದೇವಾಲಯ ಬಳಿ ಚಿರತೆ ಚರ್ಮ ಮಾರಾಟಕ್ಕೆ ಆರೋಪಿಗಳು ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಡಿವೈಎಸ್ಪಿ ಶ್ರೀನಿವಾಸ್ ರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ.