ಗಡಿವಿವಾದ: ಮಹಾರಾಷ್ಟ್ರದ ಅರ್ಜಿ ವಿಚಾರಣೆ ಆರಂಬ
ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ನಡುವಿನ ಗಡಿ ವಿವಾದ ಸಂಬಂಧ ರಾಜ್ಯದ ನಿಲುವು ಸ್ಪಷ್ಟವಾಗಿದ್ದು, ನಮ್ಮ ನಿಲುವು ಸಾಂವಿಧಾನಿಕ ಹಾಗೂ ಕಾನೂನು ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಹೇಳಿದ್ದಾರೆ.
ಗಡಿ ವಿವಾದ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಗುರುವಾರದಿಂದ ವಿಚಾರಣೆ ಆರಂಭವಾಗಿದೆ. ರಾಜ್ಯದ ನಿಲುವು ಸ್ಪಷ್ಟವಾಗಿದೆ. ಮಹಾರಾಷ್ಟ್ರದ ಅರ್ಜಿಯನ್ನು ನ್ಯಾಯಾಲಯ ಪರಿಗಣಿಸುವುದಿಲ್ಲ. ನಮ್ಮ ನಿಲುವು ಸಾಂವಿಧಾನಿಕ ಮತ್ತು ಕಾನೂನು ಬದ್ಧವಾಗಿದೆ ಎಂದು ಹೇಳಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ನಡುವೆ ಹಲವು ದಶಕಗಳಿಂದ ಸಂಘರ್ಷಕ್ಕೆ ಕಾರಣವಾಗಿರುವ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಕುರಿತ ಅರ್ಜಿಯ ವಿಚಾರಣೆ ನಡೆಯಬೇಕಿದೆ. ಗಡಿ ವಿವಾದವನ್ನು ಬಗೆಹರಿಸುವುದು ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆಯೋ, ಇಲ್ಲವೋ ಎಂಬುದುರ ಕುರಿತು ಅಂತಿಮ ತೀರ್ಪು ಪ್ರಕಟವಾಗಬೇಕಿದೆ.
ನ್ಯಾಯಮೂರ್ತಿಗಳು ಬದಲು…
ಗಡಿವಿವಾದದ ವಿಚಾರಣೆಯು ಬುಧವಾರ ನ್ಯಾ.ಕೆ.ಎಂ.ಬೋಸೆಫ್, ನ್ಯಾ.ವಿ.ರಾಮಸುಬ್ರಹ್ಮಣಿಯನ್ ಹಾಗೂ ನ್ಯಾ.ಬಿವಿ ನಾಗರತ್ನ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ನಿಗದಿಯಾಗಿತ್ತು. ಈ ಅರ್ಜಿ ವಿಚಾರಣೆ ಮುಂದೂಡಿದ್ದು ಮಾತ್ರವಲ್ಲದೆ, ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಬೇಕಿದ್ದ ತ್ರಿಸದಸ್ಯ ಪೀಠದಲ್ಲಿದ್ದ ಇಬ್ಬರು ನ್ಯಾಯಾಧೀಶರು ಬದಲಾಗಿದ್ದಾರೆ.
ನ್ಯಾ.ಕೆ.ಎಂ.ಜೋಸೆಫ್ ನೇತೃತ್ವದ ತ್ರಿಸದಸ್ಯ ವಿಚಾರಣಾ ಪೀಠದಲ್ಲಿ ಈ ಹಿಂದೆ ಇದ್ದ ನ್ಯಾ.ವಿ.ರಾಮಸುಬ್ರಹ್ಮಣಿಯನ್ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರ ಜಾಗಕ್ಕೆ .ಅನಿರುದ್ಧ ಬೋಸ್ ಮತ್ತು ನ್ಯಾ.ಹೃಷಿಕೇಶ್ ರಾಯ್ ಅವರು ಸೇರ್ಪಡೆಯಾಗಿದ್ದಾರೆ.