ಧಾರವಾಡ: ‘ಇಂದು ನಿರ್ಮಾಣಗೊಂಡಿರುವ ಅಘೋಷಿತ ತುರ್ತು ಪರಿಸ್ಥಿತಿ ಹಾಗೂ ಜನವಿರೋಧಿ ಕಾನೂಗಳ ಜಾರಿ ಮೂಲಕ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುತ್ತಿರುವ ಸರ್ಕಾರಗಳ ಧೋರಣೆ ಖಂಡನೀಯ’ ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಹರೀಂದ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಆಲೂರು ವೆಂಕಟರಾವ್ ಭವನದಲ್ಲಿ ಭಾನುವಾರ ನಡೆದ ಅಖಿಲ ಭಾರತ ವಕೀಲರ ಒಕ್ಕೂಟದ 9ನೇ ರಾಜ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತಾಡಿದರು.
‘1975ರಲ್ಲಿ ತುರ್ತು ಪರಿಸ್ಥಿತಿ ಜಾರಿ ಮಾಡಿದಾಗ ನ್ಯಾಯಾಲಯಗಳು ಮೂಕಪ್ರೇಕ್ಷಕರಾಗಿದ್ದವು. ಆಗ ಪ್ರಜಾಪ್ರಭುತ್ವ ಉಳಿಸಲು ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಅಖಿಲ ಭಾರತ ವಕೀಲರ ಒಕ್ಕೂಟ ಜನ್ಮ ತಾಳಿತು. ಈಗಲೂ ಅದೇ ಉದ್ದೇಶದಿಂದ ಸಂಘಟನೆ ಕಾರ್ಯನಿರ್ವಹಿಸುತ್ತದೆ’ ಎಂದರು.
ನಿವೃತ್ತ ನ್ಯಾಯಾಧೀಶ ಎಸ್.ಎಚ್. ಮಿಠ್ಠಲಕೋಡ ಮಾತನಾಡಿ, ‘ಸಮಾಜದಲ್ಲಿ ಒಳ್ಳೆಯ ವ್ಯವಸ್ಥೆ ಬಯಸುವುದು ಸಹಜ. ಅನ್ಯಾಯದ ವಿರುದ್ಧ ಹೋರಾಡಿ ಸಮಾಜಕ್ಕೆ ಒಳಿತು ಮಾಡುವುದು ಪ್ರಮುಖವಾದದ್ದು. ದೇಶದ ಸಂವಿಧಾನ ಹಾಗೂ ಜನರ ಹಕ್ಕುಗಳನ್ನು ರಕ್ಷಿಸುವಲ್ಲಿ ವಕೀಲರ ಪಾತ್ರ ಬಹಳ ದೊಡ್ಡದು. ಅದನ್ನು ಶ್ರದ್ಧೆಯಿಂದ ನಿರ್ವಹಿಸಬೇಕು. ಆ ನಿಟ್ಟಿನಲ್ಲಿ ಈ ರಾಜ್ಯ ಸಮ್ಮೇಳನವು ಕಂಡಿತ ಸ್ಫೂರ್ತಿ ನೀಡಿದೆ’ ಎಂದರು.
ಒಕ್ಕೂಟದ ಮಾಜಿ ಅಧ್ಯಕ್ಷ ಎಸ್. ಶಂಕರಪ್ಪ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ಕುಮಾರ್, ವಕೀಲ ಎಸ್. ಶಂಕರಪ್ಪ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿ.ಡಿ. ಕಾಮರೆಡ್ಡಿ, ಕೆ. ಕೋಟೇಶ್ವರ ರಾವ್, ಪಿ.ಎಚ್. ನೀರಲಕೇರಿ, ವಕೀಲ ರಾಮಚಂದ್ರ ರೆಡ್ಡಿ, ಎಸ್.ಎಸ್. ಯಡ್ರಾಮಿ, ಪ್ರಕಾಶ ಉಡಿಕೇರಿ, ಬಿ.ಎಸ್. ಸೊಪ್ಪಿನ, ಮಹೇಶ ಪತ್ತಾರ, ಬಸವರಾಜ ಪೂಜಾರ, ನಾಗರಾಜ ಗೌರಿ, ಸದಾನಂದ ದೊಡಮನಿ, ಎಂ.ಬಿ ಕಟ್ಟಿ, ಪಾರ್ವತಿ ಕಲಾಲ್, ಬಿ.ಐ ಈಳಗೇರ, ಡಿ. ಸ್ಯಾಮ್ಸನ್, ಟಿ.ಎನ್ ಶಿವಾರೆಡ್ಡಿ, ಶಿವಶಂಕರಪ್ಪ, ವೇಗಾನಂದ ಇದ್ದರು.