ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸೂಚನೆ ನೀಡಿರುವ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ರಾಜ್ಯಸರ್ಕಾರ ದಿಕ್ಕರಿಸಬೇಕೆಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕೀಲರು ಯಾವಾಗಲೂ ಆದೇಶ ಪಾಲನೆ ಮಾಡುವಂತೆ ಸಲಹೆ ಕೊಡುತ್ತಲೇ ಇರುತ್ತಾರೆ, ಇದನ್ನು ಒಪ್ಪಬೇಕೆಂಬ ನಿಯಮವಿಲ್ಲ. ಸರ್ಕಾರ ತನ್ನ ನಿಯಮವನ್ನು ಬದಲಾಯಿಸಲಿ ಎಂದು ಮನವಿ ಮಾಡಿದರು.
ಈ ಹಿಂದೆ ನಿರ್ವಹಣಾ ಪ್ರಾಧಿಕಾರ ನೀರು ಹರಿಸಲು ನಮಗೂ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಆದೇಶ ನೀಡಿದರು. ಇದನ್ನು ನಾವು ಬದಲಾಯಿಸಿದ ನಿದರ್ಶನ ಇದೆ. ರಾಜ್ಯಸರ್ಕಾರಕ್ಕೂ ನಾನು ನೀಡಬಹುದಾದ ಸಲಹೆ ಇದಿಷ್ಟೇ ಎಂದರು.
ನಾವು ಸರ್ಕಾರವನ್ನಾಗಲಿ ಅಥವಾ ಇನ್ಯಾರನ್ನೂ ಇಕ್ಕಟ್ಟಿಗೆ ಸಿಲುಕಿಸುವ ಭ್ರಮೆಯಲ್ಲಿಲ್ಲ. ಸುಪ್ರೀಂ ಕೋರ್ಟ್ನಲ್ಲಿ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಅಫಿಡವಿಟ್ ಹಾಕಿದೆ. ಅಫಿಡವಿಟ್ ಎಂದರೆ ಸಣ್ಣ ಮಾತಲ್ಲ. ಇದಕ್ಕೆ ಸರ್ಕಾರ ಬದ್ಧವಾಗಿರಬೇಕೆಲ್ಲವೇ, ನಾವೇಕೆ, ಇಕ್ಕಟ್ಟಿಗೆ ಸಿಲುಕಿಸಬೇಕೆಂದು ಪ್ರಶ್ನೆ ಮಾಡಿದರು. ನಾವು ಏನಾದರೂ ಹೇಳಿದರೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವೆಂದು ಉಪಮುಖ್ಯಮಂತ್ರಿ ಡಿಕೆಶಿ ಹೇಳುತ್ತಾರೆ.
ರಚನಾತ್ಮಕ ಸಲಹೆ ಕೊಟ್ಟರೆ ಅದನ್ನು ಸ್ವೀಕರಿಸುವಷ್ಟು ವ್ಯವದಾನವೂ ಇಲ್ಲ, ಸರ್ಕಾರದ ನಡೆ ಕಾವೇರಿ ಭಾಗದ ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ಬೊಮ್ಮಾಯಿಯವರು ಕಿಡಿ ಕಾರಿದರು.
ಪ್ರಧಾನಿ ನರೇಂದ್ರಮೋದಿಯವರ ಬಳಿ ಸರ್ವಪಕ್ಷ ಇಲ್ಲವೇ, ಸಂಸದರ ನಿಯೋಗವನ್ನು ಕೊಂಡೊಯ್ಯಲು ನಮ್ಮ ಅಭ್ಯಂತರವೇನಿಲ್ಲ, ಪ್ರಧಾನಿ ಭೇಟಿಗೆ ಸಮಯಾವಾಕಾಶ ಕೊಟ್ಟರೆ ನಾವು ತೆರಳಲು ಸಿದ್ದರಿದ್ದೇವೆ ಎಂದು ಹೇಳಿದರು.
ನನ್ನ ವೈಯಕ್ತಿಕ ಅಭಿಪ್ರಾಯದಲ್ಲಿ ಹೇಳುವುದಾದರೆ ಈಗ ಪ್ರಧಾನಿ ಬಳಿ ಸರ್ವಪಕ್ಷ ನಿಯೋಗ ಇಲ್ಲವೇ, ಸಂಸದರನ್ನು ಕರೆದೊಯ್ಯುವುದರಲ್ಲಿ ಅರ್ಥವೇ ಇಲ್ಲ, ಏಕೆಂದರೆ 1990ರ ಮುಂಚೆಯೇ ಪ್ರಧಾನಿ ಬಳಿ ಚರ್ಚೆ ಆಗಿದೆ, ಈಗ ಅಲ್ಲಿ ಚರ್ಚೆ ಮಾಡಬೇಕಾದ ಅಗತ್ಯವೇ ಇಲ್ಲ, ಸುಮ್ಮನೆ ರಾಜ್ಯದ ಜನರ ದಿಕ್ಕು ತಪ್ಪಿಸಲು ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ನಲ್ಲಿ ರಾಜ್ಯವನ್ನು ಪ್ರತಿನಿಸುವ ವಕೀಲರು ತಮಿಳುನಾಡಿನ ಆಣೆಕಟ್ಟುಗಳಲ್ಲಿ ಎಷ್ಟು ನೀರು ಸಂಗ್ರಹವಾಗಿದೆ ಎಂಬುದರ ಕುರಿತು ವಸ್ತು ಸ್ಥಿತಿಯನ್ನು ಅಧ್ಯಯನ ನಡೆಸಬೇಕು.
ಈವೆರೆಗೂ ಎಷ್ಟು ನೀರು ಹರಿಸಲಾಗಿದೆ. ಬಳಕೆ ಮಾಡಿರುವ ಪ್ರಮಾಣ ಇತ್ಯಾದಿಗಳ ಕುರಿತು ವಸ್ತು ಸ್ಥಿತಿಯನ್ನು ಮನವರಿಕೆ ಮಾಡದಿದ್ದರೆ, ಸಮಸ್ಯೆಗೆ ಪರಿಹಾರ ಸಿಗುವುದಿಲ್ಲವೆಂದು ಬೊಮ್ಮಾಯಿ ಅಭಿಪ್ರಾಯ ಪಟ್ಟರು.
ನಾವು ಅಧಿಕಾರದಲ್ಲಿದ್ದಾಗ, ರಾತ್ರೊರಾತ್ರಿ ತಮಿಳುನಾಡಿಗೆ ನೀರು ಹರಿಸಲು ವಕೀಲರು, ಮೊದಲಿನಿಂದಲೂ ಇದ್ದಾರೆ. ನಾವು ಸರ್ಕಾರಕ್ಕೆ ಸೂಕ್ತ ಸಲಹೆ ಕೊಡಲು ಸಿದ್ದರಿದ್ದೇವೆ. ಆದರೆ ಅದನ್ನು ಸ್ವೀಕರಿಸಲು ಅವರೇ ಸಿದ್ದರಿಲ್ಲವೆಂದರೆ ಏನು ಮಾಡುವುದು ಎಂದು ಪ್ರಶ್ನಿಸಿದರು.
ಮಾತುಕತೆಗೆ ತಮಿಳುನಾಡಿನ ಸರ್ಕಾರ ಸಹಕಾರ ನೀಡುವುದಿಲ್ಲ. ನಮ್ಮ ಸಂಸದರು ಕೇಂದ್ರ ನೀರಾವರಿ ಸಚಿವರನ್ನು ಭೇಟಿ ಮಾಡಿ ರಾಜ್ಯದ ವಸ್ತುಸ್ಥಿತಿಯನ್ನು ಮನವರಿಕೆ ಮಾಡಲು ಸೂಚಿಸಿದ್ದೇನೆ. ಕಾವೇರಿ ವಿಷಯದಲ್ಲಿ ನಾವು ಖಂಡಿತವಾಗಿಯೂ ರಾಜಕೀಯ ಮಾಡುವುದಿಲ್ಲವೆಂದು ಬೊಮ್ಮಾಯಿ ಹೇಳಿದರು.
ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಒದಗಿಸುವ ಮಸೂದೆ ಮಂಡನೆ ಆಗಿರುವುದು ಕ್ರಾಂತಿಕಾರಕ ಹೆಜ್ಜೆ ಆಗಿದೆ. 2009ರಲ್ಲಿ ಯಪಿಎ ಅವಧಿಯಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಆದರೆ ಲೋಕಸಭೆಯಲ್ಲಿ ಯುಪಿಎ ಮೈತ್ರಿಕೂಟದ ಅಂಗಪಕ್ಷಗಳೆ ಒಪ್ಪಿರಿರಲಿಲ್ಲ. ಆಗ ಪ್ರಧಾನಿ ನರೇಂದ್ರ ಮೋದಿಯವರು ದೃಢಸಂಕಲ್ಪ ಮಾಡಿ, ಈ ಕ್ರಾಂತಿಕಾರಿಕ ಮಸೂದೆಯನ್ನು ಮಂಡಿಸಲು ಮುಂದಾಗಿದ್ದಾರೆ. ಸಂಸತ್ತಿನಲ್ಲಿ ಇದು ಮಂಡನೆಯಾಗಿ ಜಾರಿಗೆ ಬರುವ ವಿಶ್ವಾಸವಿದೆ ಎಂದು ಬೊಮ್ಮಾಯಿ ಹೇಳಿದರು.