ಬೆಂಗಳೂರು : ಗ್ರಾಮೀಣ ಭಾಗಗಳಲ್ಲಿ ವೈದ್ಯರು ಕರ್ತವ್ಯ ನಿರ್ವಹಿಸದೇ ನಗರ ಪ್ರದೇಶಗಳಿಗೆ ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಪಕ್ಷ ಬೇಧ ಮರೆತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಯಶವಂತರಾಯಗೌಡ ವಿಠ್ಠಲಗೌಡ ಪಾಟೀಲ್ ಪರವಾಗಿ ಸದಸ್ಯ ಅಜಯ್ ಧರ್ಮಸಿಂಗ್ ಅವರು ಪ್ರಶ್ನೆ ಕೇಳಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಧಾಕರ್ ಅವರು, ವಿಜಾಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡುತ್ತಿದ್ದರು. ಈ ವೇಳೆ ಮಧ್ಯೆ ಪ್ರವೇಶ ಮಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ವೈದ್ಯರಲ್ಲಿ ಸೇವಾ ಮನೋಭಾವದ ಕೊರತೆಯಿಂದಾಗಿ ಗ್ರಾಮೀಣ ಭಾಗಕ್ಕೆ ಹೋಗಲು ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವೈದ್ಯಕೀಯ ಶಿಕ್ಷಣ ಪಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ಗ್ರಾಮೀಣ ಸೇವೆಗೆ ಹೋಗುವ ಭೂಮಿಕೆಯನ್ನು ಆಯಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಿಳಿ ಹೇಳಬೇಕು. ಆಗ ಮಾತ್ರ ಗ್ರಾಮೀಣ ಜನರಿಗೆ ಉತ್ತಮ ವೈದ್ಯರ ಸೇವೆ ದೊರೆಯುತ್ತದೆ ಹೊರತು ಕೇವಲ ಗ್ರಾಮೀಣ ಸೇವೆ ಮಾಡಲು ಆದೇಶ ಹೊರಡಿಸಿದರೆ ಪ್ರಯೋಜನವಾಗಲ್ಲ ಎಂದರು.
ಕೇವಲ ನಗರ ಪ್ರದೇಶಗಳಲ್ಲೇ ವಾಸ್ತವ್ಯ ಹೂಡಲು ಬಯಸುತ್ತಾರೆ. ನೀವು ಕಾನೂನುಗಳನ್ನು ಜಾರಿ ಮಾಡಿರಬಹದು. ಆದರೆ, ವೈದ್ಯರು ನಗರ ಬಿಟ್ಟು ಹೋಗುವುದಿಲ್ಲ ಎಂಬ ಮನಸ್ಥಿತಿಗೆ ಬಂದಿದ್ದಾರೆ. ಹೀಗಾದರೆ, ಆಸ್ಪತ್ರೆಗಳ ಸ್ಥಿತಿ ಏನಾಗಬೇಕು? ಮೊದಲು ಇದಕ್ಕೆ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಲೇಬೇಕು ಎಂದು ಸೂಚಿಸಿದರು.
ಶಾಸಕರಾದ ಅನ್ನದಾನಿ, ಪ್ರಿಯಾಂಕ ಖರ್ಗೆ ದನಿಗೂಡಿಸಿ ಗ್ರಾಮೀಣ ಭಾಗಗಳಿಗೆ ಹೋಗದ ವೈದ್ಯರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಮಳವಳ್ಳಿಯಲ್ಲಿ ಆಸ್ಪತ್ರೆ ಇದ್ದರೆ, ಬೆಂಗಳೂರು, ಇಲ್ಲವೇ ಮೈಸೂರಿನಿಂದ ಬಂದು ಕಾರ್ಯನಿವರ್ಹಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಗ ಸಚಿವ ಸುಧಾಕರ್ ಅವರು, ವೈದ್ಯರು ಹಳ್ಳಿಗಳಿಗೆ ಹೋಗಿ ಕೆಲಸ ಮಾಡುವ ಮನಸ್ಥಿತಿ ಬೆಳಸಿಕೊಳ್ಳಬೇಕು. ಇದೊಂದು ಗೌರವಯುತವಾದ ವೃತ್ತಿ. ಈ ಕಾರಣಕ್ಕಾಗಿ ಸರ್ಕಾರ ಕಠಿಣವಾದ ಕೌನ್ಸಿಲಿಂಗ್ ವ್ಯವಸ್ಥೆ ಮಾಡಿದ್ದು, ಕಟ್ಟುನಿಟ್ಟಾಗಿ ಜಾರಿ ಮಾಡಲು ಹೋದಾಗ ಅನೇಕ ಟೀಕೆ, ಟಿಪ್ಪಣಿಗಳನ್ನು ಎದುರಿಸಬೇಕಾಯಿತು. ಆದರೂ ಕೌನ್ಸಿಲಿಂಗ್ ಮೂಲಕ ವೈದ್ಯರನ್ನು ನಿರೋಜಿಸಲಾಯಿತು. ರಾಜಕೀಯ ವ್ಯವಸ್ಥೆ ಕಾರಣಕ್ಕೆ ಈ ರೀತಿ ನಡೆಯುತ್ತದೆ ಎಂದು ಪರೋಕ್ಷವಾಗಿ ವರ್ಗಾವಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.