ನಂಜನಗೂಡು : ಬೆಳ್ಳಂಬೆಳ್ಳಗ್ಗೆಯೆ ಜನರನ್ನು ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಮನೆಯಲ್ಲಿದ್ದ ಒಂಟಿ ಮಹಿಳೆಯ ಕೈ, ಬಾಯಿ ಕಟ್ಟಿ, ಮಾನ ಹಾಗೂ ಪ್ರಾಣ ಬೆದರಿಕೆಯೊಡ್ಡಿ ಚಿನ್ನಾಭರಣ ದೋಚಲಾಗಿದೆ. ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ಈ ಭಯಾನಕ ಘಟನೆ ನಡೆದಿದೆ.
ನಂಜನಗೂಡಿನ ರಾಮಸ್ವಾಮಿ ಲೇಔಟ್ ಒಂದನೇ ಬ್ಲಾಕ್ ನಲ್ಲಿ ಘಟನೆ ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಡೂಪ್ಲಿಕೇಟ್ ಪಾರ್ಸಲ್ ಬಾಕ್ಸ್ ಹಿಡಿದು ಪಾರ್ಸಲ್ ಬಂದಿದೆ ಎಂದು ಬಾಗಿಲು ತೆಗೆಸಿರುವ ಖದೀಮರು, ಬಾಗಿಲು ತೆಗೆಯುತ್ತಿದ್ದಂತೆ ಒಳ ನುಗ್ಗಿ ಮಹಿಳೆಯನ್ನು ಬೆದರಿಸಿ ಕೈಕಾಲುಗಳನ್ನು ಕಟ್ಟಿ ಬಾಯಿಗೆ ಪ್ಲಾಸ್ಟರ್ ಅಂಟಿಸಿ ತಮ್ಮ ಕೈಚಳಕ ತೋರಿಸಿದ್ದಾರೆ. ಮಹಿಳೆಯ ಮೈ ಮೇಲಿದ್ದ ಚಿನ್ನದ ಮಾಂಗಲ್ಯ ಸರ, ಕೈ ಬಳೆ ಉಂಗುರ ಹಾಗೂ ಕೊಠಡಿಯ ಬೀರುವಿನಲ್ಲಿದ್ದ ಮತ್ತೊಂದು ಜೊತೆ ಕೈ ಬಳೆ ನೆಕ್ಲೆಸ್ ಹ್ಯಾಂಗಲ್ಸ್ ತಲೆಬೊಟ್ಟು ಸೇರಿ ಒಟ್ಟು 175 ಗ್ರಾಂ ಗೂ ಹೆಚ್ಚು ಚಿನ್ನದ ಒಡವೆಗಳನ್ನು ದೋಚಿ ಪರಾರಿಯಾಗಿದ್ದಾರೆ. ಪ್ರೌಢಶಾಲಾ ಶಿಕ್ಷಕ ಶಂಭುಸ್ವಾಮಿ ಎಂಬುವವರ ಪತ್ನಿ ದಾಕ್ಷಾಯಿಣಿ ಎಂಬುವವರೇ ಚಿನ್ನ ಕಳೆದುಕೊಂಡು ಆಘಾತಕ್ಕೆ ಒಳಗಾಗಿರುವ ಮಹಿಳೆ.
ಪತಿ ಶಿಕ್ಷಕರಾಗಿದ್ದು ಅವರು ಕೆಲಸಕ್ಕೆ ಹೋದಮೇಲೆ ಬೆಳಗ್ಗೆ 8:30ರ ಸಮಯದಲ್ಲಿ ಮಹಿಳೆ ಒಬ್ಬರೇ ಮನೆಯಲ್ಲಿದ್ದ ಸಂದರ್ಭ ಈ ಘಟನೆ ನಡೆದಿದೆ.
ಮೂವರು ಖದೀಮರು ಇದ್ದ ಗುಂಪಿನಲ್ಲಿ ಕನ್ನಡ ತಮಿಳು ಹಿಂದಿ ಮಾತನಾಡುತ್ತಿದ್ದರು ಎಂದು ಹೇಳಲಾಗಿದೆ. ಗಲಾಟೆ ಮಾಡಿದರೆ ರೇಪ್ ಹಾಗೂ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದರು ಎಂದು ಮಹಿಳೆ ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ನಂಜನಗೂಡು ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಶಿವಾನಂಜ ಶೆಟ್ಟಿ ಎ ಎಸ್ ಐ ಚೇತನ್ ಘಟನಾಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.