ಕಾಂಗ್ರೆಸ್ಸಿನಿಂದ ಹಣದ ಚೀಲವಿರುವ ವಿಡಿಯೋ ಬಿಡುಗಡೆ: ಸರಕಾರಕ್ಕೆ ಮುಜುಗರ
ಬೆಂಗಳೂರು: ರಾಜ್ಯಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಪಿಎಸ್ ಐ ನೇಮಕಾತಿ ಪ್ರಕರಣದಲ್ಲಿ ಆಡಳಿತರೂಢ ಬಿಜೆಪಿ ಶಾಸಕರೊಬ್ಬರಿಗೆ ಲಂಚದ ಹಣ ನೀಡಲು ಮುಂದಾಗಿರುವ ಹಣದ ಚೀಲ ಇರುವ ವಿಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿರುವುದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.
ಆದರೆ , ಈ ವಿಡಿಯೋ ರಾಜಕೀಯ ಪ್ರೇರಿತ ಎಂದು ಸರ್ಕಾರ ತಿರುಗೇಟು ನೀಡಿದೆ., ಮೊದಲೇ ಒಂದಿಲ್ಲೊಂದು ವಿವಾದದಿಂದ ಹೈರಾಣಾಗಿರುವ ಸರ್ಕಾರಕ್ಕೆ ಇದು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ
ಮಾಡಿದೆ.
ಕೊಪ್ಪಳ ಜಿಲ್ಲೆ ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ದಡೇಸೂರು ಈ ವಿಡಿಯೋದ
ಪ್ರಮುಖ ಆರೋಪಿ ಸ್ಥಾನದಲ್ಲಿದ್ದಾರೆ. ಪಿಎಸ್ ಐ ನೇಮಕಾತಿ ಸಂದರ್ಭದಲ್ಲಿ ಕೆಲವರಿಗೆ ದುಡ್ಡು ಕೊಟ್ಟರೆ
ಕೆಲಸ ಸಿಗುತ್ತದೆ. ಇದಕ್ಕಾಗಿ ಮುಂಗಡವಾಗಿ ಇಂತಿಷ್ಟು ಹಣ ಕೊಡಬೇಕು ಎಂದು ದಡೇಸೂರು ಹೇಳಿದ್ದರು ಎನ್ನಲಾದ ವಿಡಿಯೋವನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಶಿವರಾಜ್ ತಂಗಡಗಿ ಹಾಗೂ ಶಾಸಕ ಪ್ರಿಯಾಂಕ ಖರ್ಗೆ ಅವರು ಪಿಎಸ್ ಐ ನೇಮಕಾತಿ ಅಕ್ರಮದ ವಿಚಾರವಾಗಿ ಕನಕಗಿರಿ ಶಾಸಕ ಬಸವರಾಜ ದಡೇಸಗೂರ್ ವಿರುದ್ಧ ಭ್ರಷ್ಟಾಚಾರ ನಡೆಸಿರುವ ಆರೋಪ ಮಾಡಿರುವ ಕಾಂಗ್ರೆಸ್ ಈ ಸಂಬಂಧಿಸಿದಂತೆ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಪರಸಪ್ಪ ಆಡಿಯೋ ನನ್ನದಲ್ಲ ಎಂದು ಸುದ್ದಿಗೊಷ್ಠಿ ಮಾಡಿದ್ದರು.ನನ್ನ ಮಗ ಫಿಜಿಕಲ್ ಉತ್ತೀರ್ಣ ಆಗಿಲ್ಲ ಅಂದಿದ್ದಾರೆ. ಪರಸಪ್ಪ ಒಂದು ಹಣದ ಚೀಲ ಕೊಟ್ಟಿದ್ದಾರೆ. ಅದರ ಪೋಟೋ ನಾನು ತೋರಿಸುತ್ತೇನೆ. ಎಲ್ಲಿ ಹಣ ಪಡೆದರು ಎಂಬುದನ್ನು ನಾವು ತೋರಿಸ್ತೇನೆ ಎಂದು ಹಣ ಚೀಲ ಹಿಡಿದುಕೊಂಡಿರುವ ಫೋಟೋ ಬಿಡುಗಡೆಗೊಳಿಸಿದ್ದಾರೆ.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪರಸಪ್ಪ ಅವರು ಒಂದು ವಿಡಿಯೋದಲ್ಲಿ ನನ್ನ ಮಗ ಪಿಎಸ್ಐ ಆಗಲು ಬಯಸಿದಾಗ ಶಾಸಕರ ಆಪ್ತರು ಬಂದು ನಾವು ನಿಮ್ಮ ಕೆಲಸ ಮಾಡುತ್ತೇವೆ ಎಂದು ಕಾರಟಗಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಒಂದು ಮೊತ್ತಕ್ಕೆ ಡೀಲ್ ಮಾಡಿ, 2020 ಆಗಸ್ಟ್ನಲ್ಲಿ ಕನಕಗಿರಿ ಶಾಸಕರು ಶಾಸಕರ ಭವನಕ್ಕೆ ಕರೆಸಿಕೊಂಡರು. ಅಲ್ಲಿ ಸಿಬ್ಬಂದಿ ಹೆಚ್ಚಾಗಿರುವ ಕಾರಣ, ಶಾಸಕರ ಕಾರಿನಲ್ಲೇ ಕರೆದುಕೊಂಡು ಹೋಗುತ್ತಾರೆ.ವ್ಯವಹಾರ ಮಾಡಿ 30 ಲಕ್ಷಕ್ಕೆ ಡೀಲ್ ನಿರ್ಧರಿಸುತ್ತಾರೆ ಎಂದು ಪರಸಪ್ಪ ಅವರೇ ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ.
ಈ ಡೀಲ್ ನಿಗದಿಯಾದ ನಂತರ ಮುಂಗಡವಾಗಿ 15 ಲಕ್ಷ ನೀಡುತ್ತಾರೆ. ನಾವು ಯಾವಾಗಲೂ ಹೇಳುವಂತೆ ವಿಧಾನಸೌಧ ವ್ಯಾಪಾರ ಸೌಧವಾಗಿದೆ. ಶಾಸಕರ ಭವನದಲ್ಲಿ ಡೀಲ್ ಮಾಡಿದ್ದಾರೆ ಎಂದರೆ ಇವರಿಗೆ ನಾಚಿಕೆ ಆಗುವುದಿಲ್ಲವೇ? ಕೆಲಸ ಆಗದ ನಂತರ ಹಣ ಕೇಳಿದಾಗ ನಾನು ಹಣವನ್ನು ಸರ್ಕಾರಕ್ಕೆ ಕೊಟ್ಟಿರುವುದಾಗಿ ಹೇಳುತ್ತಾರೆ. ಈ ಸರ್ಕಾರ ಎಂದರೆ ವಿಧಾನಸೌಧ ಅಲ್ಲವೇ? ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕರು, ಸಚಿವರು ಬ್ರೋಕರ್: ಶಾಸಕರು ಹಣ ವಾಪಸ್ ಮಾಡದ ಹಿನ್ನೆಲೆಯಲ್ಲಿ ಈ ಪ್ರಕರಣ ಬಹಿರಂಗವಾಗಿದೆ. ಬಿಜೆಪಿ ಶಾಸಕರು, ಸಚಿವರು ಬ್ರೋಕರ್ಗಳಾಗಿದ್ದಾರೆ. ಬಿಜೆಪಿ ಭಾರತೀಯ ಜನತಾ ಪಕ್ಷದಿಂದ ಭ್ರಷ್ಟ ಜನತಾ ಪಕ್ಷವಾಗಿತ್ತು. ಈಗ ಶಾಸಕರು ಬ್ರೋಕರ್ ಜನತಾ ಪಕ್ಷವಾಗಿದೆ. ಈ ಪ್ರಕರಣದಲ್ಲಿ ಇಷ್ಟೆಲ್ಲ ಆದರೂ ಶಾಸಕರಿಗೆ ನೋಟೀಸ್ ಹೋಗಿಲ್ಲ.ಸುಮೋಟೋ ಪ್ರಕರಣ ದಾಖಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಸದನದಲ್ಲಿ ಚರ್ಚಿಸಲು ಭ್ರಷ್ಟಾಚಾರ, ಬೆಳೆ ಹಾನಿ, ಬೆಂಗಳೂರು, ಕೆಪಿಎಸ್ಸಿ, ಕೆಇಎ ಅಕ್ರಮ ಸೇರಿದಂತೆ ಹಲವು ವಿಚಾರಗಳಿವೆ. ಶಾಸಕಾಂಗ ಪಕ್ಷದ ನಾಯಕರು ಈ ಎಲ್ಲ ವಿಚಾರ ಪಟ್ಟಿ ಮಾಡಿಕೊಂಡು ಒಂದೊಂದೇ ಚರ್ಚೆಗೆ ತೆಗೆದುಕೊಳ್ಳುತ್ತಾರೆ. ನಾನು ಶೇ.40 ಸರ್ಕಾರದ ಬಗ್ಗೆ ಹಾಗೂ ನೇಮಕಾತಿ ಅಕ್ರಮದ ಬಗ್ಗೆ ಚರ್ಚೆ ಮಾಡುತ್ತೇವೆ. ಸ್ಪೀಕರ್ ಅವರು ಕಳೆದ ಬಾರಿ ಅವಕಾಶ ನೀಡಲಿಲ್ಲ. ಈ ಬಾರಿ ಅವಕಾಶ ನೀಡಬೇಕು. ಚರ್ಚೆಗೆ ಅವಕಾಶ ನೀಡದಿದ್ದರೆ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಮೊದಲ ವಿಡಿಯೋದಲ್ಲಿ ಪಿಎಸ್ಐ ನೇಮಕಾತಿಗೆ 30 ಲಕ್ಷ ಹಣ ಶಾಸಕ ದಡೇಸಗೂರ್ ಕೇಳಿದ್ದನ್ನು ಒಪ್ಪಿದ್ದ ಪರಸಪ್ಪ, ಎರಡನೇ ವಿಡಿಯೋದಲ್ಲಿ ಅಲ್ಲಗೆಳೆದಿದ್ದಾರೆ. ಹಾಗೂ ಯಾವುದೇ ರೀತಿ ಹಣದ ವ್ಯವಹಾರ ಆಗಿಲ್ಲ ಎಂದು ಹೇಳುವ ಮೂಲಕ ಗೊಂದಲ ಹಾಗೂ ಅನುಮಾನ ಸೃಷ್ಟಿಮಾಡಿದ್ದಾರೆ.
ವಿಡಿಯೋ 2 ರಲ್ಲಿ ಇದ್ದ ಬಟ್ಟೆಯನ್ನು ಧರಿಸಿದ್ದ ಪರಸಪ್ಪ ಅದೇ ಬಟ್ಟೆಯಲ್ಲಿ ಫೋಟೋದಲ್ಲಿ ಕಾಣಿಸಿದ್ದಾರೆ. ಹಾಗೂ ಈ ಫೋಟೋದಲ್ಲಿ ಅದೇ ಬಟ್ಟೆಯಲ್ಲಿ ಕಾಣಿಸಿದ್ದು, ಪಕ್ಕದಲ್ಲಿ ಪರಸಪ್ಪ ಅವರ ಪರಿಚಯ ವ್ಯಕ್ತಿಯೊಬ್ಬರು ಹಳದಿ ಬ್ಯಾಗ್ ಹಿಡಿದಿದ್ದಾರೆ. ಹಣ ನೀಡಿ ಪರಸಪ್ಪ ಅವರು ಮಾತು ಬದಲಿಸಿದ್ದಾರೆ ಎಂದು ಮಾಜಿ ಸಚಿವ ತಂಗಡಗಿ ಆರೋಪ ಮಾಡಿದ್ದಾರೆ.
ಈ ಪ್ರಕರಣದ ಬಗ್ಗೆ ಕಾನೂನು ತನಿಖೆಯಾಗಲಿ. 15 ಕ್ಕೂ ಹೆಚ್ಚು ಜನರು ನಮ್ಮ ಕ್ಷೇತ್ರದಲ್ಲಿ ಹಣ ಕೊಟ್ಟಿದ್ದಾರೆ. ಯಾರು ಮುಂದೆ ಬಂದು ಮಾತನಾಡುತ್ತಿಲ್ಲ. ಜಮೀನು ಮಾರಿ ಹಣ ಕೊಟ್ಟಿದ್ದಾರೆ. ಭಯದಿಂದ ಯಾರು ಮುಂದೆ ಬರುತ್ತಿಲ್ಲ ಎಂದ ಅವರು, 40% ಕಮಿಷನ್ ಮುರಿದುಕೊಂಡು ಹಣ ವಾಪಸ್ ಮಾಡಿ ಎಂದು ನಾನು ಮನವಿ ಮಾಡುತ್ತೇನೆ ಎಂದರು.
ಹಣ ಕೊಟ್ಟಾಗ ಗೃಹ ಸಚಿವರು ಯಾರಾಗಿದ್ದರು. ಕೆಲಸ ಆಗಲ್ಲ ಅಂದಾಗ ಪರಸಪ್ಪ ಹಣ ವಾಪಸ್ ಕೇಳಿದ್ದಾರೆ. ಸಚಿವರಿಗೆ, ಶಾಸಕರು ಬ್ರೋಕರ್ ಆಗಿದ್ದರೆ. ಬಿಜೆಪಿ ಈಗ ಭ್ರಷ್ಟ ಜನತಾ ಪಕ್ಷ ಆಗಿದೆ. ಬ್ರೋಕರ್ ಜನತಾ ಪಕ್ಷವಾಗಿ ಬದಲಾಗಿದೆ ಎಂದು ಆರೋಪಿಸಿದ ಅವರು, ಶಾಸಕರ ಮೇಲೆ ಇನ್ನೂ ಯಾಕೆ ಕ್ರಮ ಆಗಿಲ್ಲ. ಒಂದು ನೋಟಿಸ್ ಕೂಡ ಕೊಟ್ಟಿಲ್ಲ ಎಂದು ಕಿಡಿಕಾರಿದರು.
ಮಾಜಿ ಸಚಿವ ಶಿವರಾಜ್ ತಂಗಡಗಿ ಬಮಾತನಾಡಿ, ಸರ್ಕಾರ ನಮ್ಮ ಮಾತು ಕೇಳಿ ತನಿಖೆ ನಡೆಸದಿದ್ದರೂ, ಅವರ ಮಾತು ಕೇಳಿಯಾದರೂ ತನಿಖೆ ಮಾಡಿಸಲಿ. ಸರ್ಕಾರ ಆರಂಭದಿಂದಲೂ ಇದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಈ ಪ್ರಕರಣದಲ್ಲಿ ಸತ್ಯಾಂಶ ಹೊರತರುವ ಉದ್ದೇಶ ಸರ್ಕಾರಕ್ಕೆ ಇದ್ದಿದ್ದರೆ ಇಷ್ಟು ಹೊತ್ತಿಗೆ ನ್ಯಾಯಾಂಗ ತನಿಖೆಗೆ ನೀಡುತ್ತಿದ್ದರು’ ಎಂದು ಹೇಳಿದರು.
ಪಿಎಸ್ಐ ಹುದ್ದೆಗಳನ್ನು ಶಾಸಕರಿಗೆ ಇಂತಿಷ್ಟು ಹಂಚಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಶಿವರಾಜ ತಂಗಡಗಿ, ‘ರಾಜ್ಯದ ಎಲ್ಲ ಭಾಗಗಳಲ್ಲಿ ಆಗುತ್ತಿರುವ ಬೆಳವಣಿಗೆ ನೋಡಿದರೆ ಅದು ನಿಜ ಅನಿಸುತ್ತಿದೆ. ಶಾಸಕರು ಮೊದಲು ಆಡಿಯೋದಲ್ಲಿ ತನ್ನದೇ ಧ್ವನಿ ಎಂದು ಹೇಳಿದ್ದು, ಈಗ ಅಲ್ಲಗೆಳೆಯುತ್ತಿದ್ದಾರೆ. ವಿಡಿಯೋದಲ್ಲಿ ಹಣ ನೀಡಿದ ದಿನಾಂಕವನ್ನು ತಿಳಿಸಿದ್ದು, ಶಾಸಕರ ಭವನದ ಸಿಸಿಟಿವಿ ವಿಡಿಯೋ ಪರಿಶೀಲಿಸಲಿ’ ಎಂದು ತಿಳಿಸಿದರು.
ಕಾನೂನು ವಿಭಾಗದ ಮುಖ್ಯಸ್ಥ ಪೊನ್ನಣ್ಣ ಮಾತನಾಡಿ, ರಾಜ್ಯದಲ್ಲಿ ಭ್ರಷ್ಚಾಚಾರ ನಿಗ್ರಹ ಕಾನೂನು ಇದೆ. ಈ ಕಾನೂನು ಪ್ರಕಾರ ಸ್ವಯಂ ಒಪ್ಪಿಗೆ ಮಾತುಗಳು ಸೆಕ್ಷನ್ 7ಎ ಹಾಗೂ 8ರ ಅಡಿ ಬರುತ್ತವೆ. ಸಾರ್ವಜನಿಕ ಪ್ರತಿನಿಧಿ ಅಲ್ಲದಿದ್ದರೂ ಯಾವುದೇ ವ್ಯಕ್ತಿ ಕೆಲಸ ಮಾಡಿಸಿ ಕೊಡುವುದಾಗಿ ಹಣ ಪಡೆದರೆ ಅದು ಅಪರಾಧವಾಗುತ್ತದೆ.ಸುಮೋಟೋ ಪ್ರಕರಣ ದಾಖಲಿಸಬೇಕಿತ್ತು.
ಹೀಗಾಗಿ ಈ ಆಡಿಯೋ ವಿಚಾರವಾಗಿ ಸುಮೋಟೋ ಪ್ರಕರಣ ದಾಖಲಿಸಬೇಕಿತ್ತು. ಈ ಕಾನೂನು ಅಡಿ 3 ವರ್ಷದಿಂದ 7 ವರ್ಷದವರೆಗೂ ಶಿಕ್ಷೆ ವಿಧಿಸಬಹುದು. ಹೀಗಾಗಿ ಕೂಡಲೇ ಇವರ ವಿರುದ್ಧ ಪ್ರಕರಣ ದಾಖಲಿಸಬೇಕು. ಹೀಗಾಗಿ ಲೋಕಾಯುಕ್ತ ಸಂಸ್ಥೆ ಹಾಗೂ ಸರ್ಕಾರ ಗಮನಿಸಬೇಕು. ಜೊತೆಗೆ ಲೋಕಪಾಲ ಮಟ್ಟದಲ್ಲಿ ಈ ವಿಚಾರವನ್ನು ತೆಗೆದುಕೊಂಡು ಶಾಸಕರನ್ನು ಅನರ್ಹಗೊಳಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.