ಮೈಸೂರು: ಗುಜರಾತ್ ವಿಧಾನಸಭೆ ಚುನಾವಣೆಯ ಫಲಿತಾಂಶ ಕರ್ನಾಟಕದಲ್ಲಿ ಮುಂಬರುವ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಗುಜರಾತ್ ಚುನಾವಣೆ ಫಲಿತಾಂಶದ ಬಗ್ಗೆ ಗುರುವಾರ ಪ್ರತಿಕ್ರಿಯಿಸಿದ ಅವರು, ’ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ನಿರೀಕ್ಷೆ ಇತ್ತು. ಆಮ್ ಆದ್ಮಿ ಪಕ್ಷದವರು ಸ್ಪರ್ಧೆ ಮಾಡಿ ಕಾಂಗ್ರೆಸ್ ಮತಗಳನ್ನು ತಿಂದರು. ಆ ಪಕ್ಷದವರು ಪಡೆದ ಮತಗಳೆಲ್ಲ ಕಾಂಗ್ರೆಸ್ನದ್ದೇ ಎಂದು ಹೇಳಿದರು.
ಒಂದು ರಾಜ್ಯದ ಚುನಾವಣಾ ಫಲಿತಾಂಶದ ಗಾಳಿ ಇನ್ನೊಂದು ರಾಜ್ಯಕ್ಕೆ ಬೀಸುವುದಿಲ್ಲ. ಇಲ್ಲಿನ ಬಿಜೆಪಿ ಸರ್ಕಾರ ಅತಿ ಭ್ರಷ್ಟ ಸರ್ಕಾರ. ಕಾಂಗ್ರೆಸ್ ಸಂಘಟನೆ ಇಲ್ಲಿ ಶಕ್ತಿಯುತವಾಗಿದೆ. ಗುಜರಾತ್ಗೆ ಹೋಲಿಸಬಾರದು. ಕರ್ನಾಟಕದಲ್ಲಿ ಸೋಲುತ್ತೇವೆ ಎಂಬುದು ಬಿಜೆಪಿಯವರಿಗೂ ಗೊತ್ತಿದೆ ಎಂದರು.
ಹಿಮಾಚಲ ಪ್ರದೇಶದಲ್ಲಿ ಆಡಳಿತ ವಿರೋಧಿ ಅಲೆ ಇತ್ತು. ಕಾಂಗ್ರೆಸ್ಗೆ ಪ್ಲಸ್ ಆಗಿದೆ ಎಂದ ಅವರು, ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷ ಬಹಳ ಹಣ ಖರ್ಚು ಮಾಡಿತು. ಬಿಜೆಪಿಯವರೇ ಆ ಪಕ್ಷಕ್ಕೆ ಫಂಡ್ ಮಾಡಿದ್ದಾರೆ (ಹಣ ಒದಗಿಸಿದ್ದಾರೆ). ಕಾಂಗ್ರೆಸ್ ಮತ ವಿಭಜನೆಗಾಗಿ ಆಮ್ ಆದ್ಮಿ ಪಕ್ಷಕ್ಕೆ ಬಿಜೆಪಿ ಫಂಡ್ ಮಾಡಿತು ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸುಮ್ಮನೆ ಇದ್ದರೂ ಗೆಲ್ಲುತ್ತದೆ. ನಾವು ಯಾವುದೇ ತಂತ್ರಗಾರಿಕೆ ವಾಡುವುದೇ ಬೇಡ. ಮೋದಿ ಹವಾ ಎಲ್ಲೂ ಇಲ್ಲ. ಹವಾ ಇದ್ದಿದ್ದರೆ ದಿಲ್ಲಿಯಲ್ಲಿ ಸೋಲುತ್ತಿದ್ದರೇಕೆ. ಎಲ್ಲಿ ಹೋಯಿತು ಮೋದಿ ಹವಾ?’ ಎಂದು ವ್ಯಂಗ್ಯವಾಗಿ ಕೇಳಿದರು.