ಬೆಂಗಳೂರು: ನೂತನ ಶಿಕ್ಷಣ ನೀತಿ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶಿಕ್ಷಣಕ್ಕಾಗಿ ನಾಯಕತ್ವ ಕುರಿತ ಅಂತರರಾಷ್ಟ್ರೀಯ ಶೃಂಗಸಭೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಈ ಕಾರಣಕ್ಕಾಗಿಯೇ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಲು ತೀರ್ಮಾನಿಸಲಾಯಿತು. ಉನ್ನತ ಶಿಕ್ಷಣದಿಂದ ಇದನ್ನು ಪ್ರಾರಂಭಿಸಲಾಗಿದ್ದು, ಈ ವರ್ಷ ಮಾಂಟೆಸರಿಯಿಂದ ಪ್ರಾರಂಭಿಸಲಾಗುತ್ತಿದೆ. ನೂತನ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತಂದ ಮೊದಲ ರಾಜ್ಯ ಕರ್ನಾಟಕ. ರಾಜ್ಯದ ಮಕ್ಕಳು ಎಲ್ಲಾ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮಥ್ರ್ಯವನ್ನು ಬೆಳಸಿಕೊಂಡು ಜ್ಞಾನವಂತರಾಗಬೇಕು ಎನ್ನುವುದು ನಮ್ಮ ಉದ್ದೇಶ ಎಂದರು.
ಶಿಕ್ಷಣ ಮನುಷ್ಯನ ಸಹಜ ಗುಣಗಳಲ್ಲಿ ಒಂದು. ಅದು ಔಪಚಾರಿಕ ಅಥವಾ ಅನೌಪಚಾರಿಕ ಶಿಕ್ಷಣವಾಗಿರಬಹುದು, ಮನುಷ್ಯನ ಜ್ಞಾನದಾಹ ಹಲವಾರು ಶತಮಾನಗಳದ್ದು. ಆತನ ಎಲ್ಲಾ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಲು ಅವನು ಸತತ ಪ್ರಯತ್ನ ಮಾಡುತ್ತಾನೆ. ಆದರೆ, ಪರಿಪೂರ್ಣ ಶಿಕ್ಷಣ ಇದಕ್ಕೆ ಉತ್ತರವಲ್ಲ. ಎಲ್ಲಾ ಸಮಸ್ಯೆಗಳಿಗೆ ಅದು ಉತ್ತರವನ್ನು ದೊರಕಿಸಿಕೊಡುವುದಿಲ್ಲ. ಸಮಸ್ಯೆಗಳು ತಾತ್ಕಾಲಿಕವಾದವು. ಶಿಕ್ಷಣ ನೀತಿಯು ಸುಲಭವಾಗಿದ್ದು, ಚಲನಶೀಲವಾಗಿರಬೇಕು. ಇದನ್ನೇ ಎಲ್ಲಾ ಶಿಕ್ಷಣ ತಜ್ಞರು ಪ್ರತಿಪಾದಿಸಿದ್ದರು. ಭಾರತದಲ್ಲಿ ಸಾಂಪ್ರದಾಯಿಕ ಮಾದರಿಯ ಶಿಕ್ಷಣವಿದೆ. ಮಾನವನ ಮೆದುಳಿನ ಪರಿಪೂರ್ಣ ಸಾಮಥ್ರ್ಯವನ್ನು ಬಳಕೆ ಮಾಡಿಲ್ಲವಾದ್ದರಿಂದ ಇನ್ನೂ ಹೆಚ್ಚಿನ ಜ್ಞಾನವನ್ನ ಪಡೆಯಲು ಸಾಧ್ಯವಿದೆ ಎಂದರು.
ಹೊಂದಾಣಿಕೆಯ ಗುಣ : ಮನುಷ್ಯ ಎಂಥ ಸ್ಥಿತಿಯಲ್ಲಿಯೂ ಹೊಂದಿಕೊಂಡು ಬದುಕಬಲ್ಲ. ಈ ಹೊಂದಿಕೊಳ್ಳುವ ಗುಣವನ್ನೇ ನಾವು ಶಿಕ್ಷಣದಲ್ಲಿ ಬಳಕೆ ಮಾಡಿಕೊಳ್ಳಬೇಕು. ಶಿಕ್ಷಣ ನೀತಿ ಹೊಂದಕೊಳ್ಳಲು ಸಾಧ್ಯವಿರುವಂಥ ಅಂಶಗಳನ್ನು ಒಳಗೊಂಡಿದೆ. ವಿದ್ಯಾರ್ಥಿಗಳು ಶಿಕ್ಷಣದ ವೈವಿಧ್ಯತೆಗೆ ಹೊಂದಿಕೊಳ್ಳುವುದು ಹಾಗೂ ಜ್ಞಾನವನ್ನು ಅತ್ಯಂತ ಸುಲಭವಾಗಿ ವರ್ಗಾಯಿಸುವ ಅಂಶವಿರಬೇಕು. ಆಗ ಮಾತ್ರ ಒಂದು ಮಟ್ಟದಿಂದ ಇನ್ನೊಂದು ಮಟ್ಟಕ್ಕೆ ಸುಲಭವಾಗಿ ಹೊಂದಿಕೊಳ್ಳಲು ಸಾಧ್ಯ. ನೂತನ ಶಿಕ್ಷಣ ನೀತಿಯಲ್ಲಿ ಈ ಹೊಂದಾಣಿಕೆಯ ಅಂಶವಿದೆ. ಹತ್ತು, ಹನ್ನೆರಡನೇ ತರಗತಿಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು ಅಪಾರ ಅವಕಾಶಗಳಿವೆ. ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ವರ್ಗಾವಣೆ ಮಾಡಿಕೊಂದಾಗ ಹೊಂದಾಣಿಕೆಯನ್ನು ಸುಲಭವಾಗಿಸಲಾಗಿದೆ ಎಂದರು.
ನಮ್ಮ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಬೇಕು :21 ನೇ ಶತಮಾನ ಜ್ಞಾನದ ಶತಮಾನ. ಜ್ಞಾನವುಳ್ಳವರು ಜಗತ್ತನ್ನು ಆಳುತ್ತಾರೆ. ಭಾರತ ಎಲ್ಲಾ ಜ್ಞಾನಗಳಿಗೆ ತಾಯಿ. ಜ್ಞಾನ ಕೇಂದ್ರಿತವಾದ ಸಮಾಜ ನಮ್ಮದು. ಪ್ರಾಚೀನ ಕಾಲದಲ್ಲಿಯೂ ಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳು ಇಲ್ಲಿ ನಡೆದಿವೆ. ಬಹಳಷ್ಟು ಸಾಧನೆಗಳನ್ನು ಪ್ರಾಚೀನ ಭಾರತ ಮಾಡಿದೆ. ಇಂದು ಜಗತ್ತು ಒಂದು ಹಳ್ಳಿಯಾಗಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿ ವಿವಿಧ ದೇಶಗಳ ವಿದ್ಯಾರ್ಥಿಗಳೊಂದಿಗೆ ಸ್ಪರ್ಧಿಸಬೇಕಾದರೆ, ನಮ್ಮ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಂತೆ ತಯಾರು ಮಾಡಬೇಕು. ಸ್ಪರ್ಧೆಗಳು ಇಂದು ಜಾಗತಿಕ ಮಟ್ಟದಲ್ಲಿವೆ. ಆದ್ದರಿಂದಲೇ ನಮ್ಮ ಪ್ರಧಾನಮಂತ್ರಿಗಳು ನೂತನ ಶಿಕ್ಷಣ ನೀತಿ ಸೇರಿದಂತೆ ಕೌಶಲ್ಯಾಭಿವೃದ್ಧಿ, ಮೇಕ್ ಇನ್ ಇಂಡಿಯಾ, ವಿಜ್ಞಾನಿಗಳಿಗೆ ನೆರವು, ವಿಜ್ಞಾನಕ್ಕೆ ಒತ್ತು ನೀಡಿದ್ದಾರೆ. ನಮ್ಮ ಪ್ರಧಾನಮಂತ್ರಿಗಳು ವಿಜ್ಞಾನ ಮತ್ತು ಆಧ್ಯಾತ್ಮ ಎರಡರ ಕುರಿತು ಮಹತ್ವ ನೀಡಿದ್ದಾರೆ ಎಂದರು.
ಕರ್ನಾಟಕ ಶಿಕ್ಷಣ ಮತ್ತು ಜ್ಞಾನದ ಕೇಂದ್ರ ಸ್ಥಾನ : ಖಾಸಗಿ ವಲಯವೂ ಸಹ ಶಿಕ್ಷಣವನ್ನು ನೀಡುವುದರಲ್ಲಿ ಹಾಗೂ ಕೌಶಲ್ಯ ಒದಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಮಲ್ಲೇಶ್ವರಂ ಸರ್ಕಾರಿ ಶಾಲೆಯನ್ನೂ ಸಂಪೂರ್ಣವಾಗಿ ಡಿಜಿಟಲೀಕರಣ ಮಾಡಿದ್ದು, ರಾಜ್ಯಕ್ಕೇ ಮಾದರಿಯಾಗಿದೆ. ಖಾಸಗಿ ವಲಯದವರೂ ಇದಕ್ಕೆ ಸಹಕರಿಸಿದ್ದಾರೆ. ಯಶಸ್ಸು ಮತ್ತು ಸಾಧನೆ ಎರಡೂ ವಿಭಿನ್ನ. ಯಶಸ್ಸು ಮಾರ್ಗವಾದರೆ, ಸಾಧನೆ ಒಂದು ಸಿದ್ದಿ. ಇದು ಪರಿಪೂರ್ಣವಾದರೆ, ಸಿದ್ದಿಸಿರುವುದು ರಾಜ್ಯ, ರಾಷ್ಟ್ರದ ಸಾಧನೆಯಾಗುತ್ತದೆ ಎಂದರಲ್ಲದೇ ಕರ್ನಾಟಕ ರಾಜ್ಯವನ್ನು ಶಿಕ್ಷಣ ಮತ್ತು ಜ್ಞಾನದ ಕೇಂದ್ರ ಸ್ಥಾನವನ್ನಾಗಿಸಲು ಸಾಧ್ಯವಿದೆ.
ಅದಕ್ಕಾಗಿ ಈ ವರ್ಷ ಅತ್ಯಧಿಕ ಮೊತ್ತವನ್ನು ಬಜೆಟ್ ನಲ್ಲಿ ಮೀಸಲಿರಿಸಿದೆ. 8000 ಶಾಲಾ ಕೊಠಡಿಗಳನ್ನು 6 ತಿಂಗಳ ಅವಧಿಯಲ್ಲಿ ನಿರ್ಮಿಸಲಾಗುತ್ತಿದೆ. ಆಗಸ್ಟ್ 15 ರೊಳಗೆ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ, ಪ್ರತಿ ಬ್ಲಾಕ್ನಲ್ಲಿ ಆಧುನಿಕವಾದ ಡಿಜಿಟಲ್ ಶಾಲೆಯನ್ನು ನಿರ್ಮಿಸಲಾಗುವುದು ಎಂದರು. ಕಲಿಕೆಯ ಆಸಕ್ತಿ ಎಂದಿಗೂ ಇರಬೇಕು. ಶಾಲೆಗಳಲ್ಲಿ ಪಠ್ಯಕ್ರಮವಿರುತ್ತದೆ. ಆದರೆ ಜೀವನದಲ್ಲಿ ಮೊದಲು ಪರೀಕ್ಷೆ ನಂತರ ಕಲಿಕೆ ಉಂಟಾಗುತ್ತದೆ. ಇದಕ್ಕೆ ತಯಾರಾಗಲು ಸೂಕ್ತ ಶಿಕ್ಷಣ ಅಗತ್ಯ. ಇದನ್ನು ನೂತನ ಶಿಕ್ಷಣ ನೀತಿ ಸಾಧ್ಯವಾಗಿಸುತ್ತದೆ ಎಂದರು.
ಇಸ್ರೋ ಖ್ಯಾತ ವಿಜ್ಞಾನಿ ಪದ್ಮಭೂಷಣ ನಂಬಿ ನಾರಾಯಣ್, ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ ಜಂಟಿ ಕಾರ್ಯದರ್ಶಿ ಪವನ್ ಕುಮಾರ್ ಜೈನ್, ನ್ಯೂಸ್ ಫಸ್ಟ್ ಮುಖ್ಯಸ್ಥ ರವಿಕುಮಾರ್, ಹ್ಯೂಡಿ ಟೆಕ್ ನ ಕಾರ್ತಿಕ ನಾರಾಯಣ್, ಸಮಾಲೋಚಕ ಆಂಡಿ ಕೌಲ್ ಉಪಸ್ಥಿತರಿದ್ದರು.