ಬೆಂಗಳೂರು: ನ್ಯಾಯಾಂಗದ ಸಮಗ್ರತೆ ಎತ್ತಿಹಿಡಿಯಲು, ನ್ಯಾಯಾಧೀಶರನ್ನು ದುರುದ್ದೇಶಪೂರಿತ ಮತ್ತು ಸುಳ್ಳು ಆರೋಪಗಳಿಂದ ರಕ್ಷಿಸಲು ಕಠಿಣ ಮತ್ತು ನವೀನ ಕ್ರಮಗಳ ಅಗತ್ಯವಿದ್ದು, ನ್ಯಾಯಮೂರ್ತಿಗಳು ಮತ್ತು ದೂರುದಾರರನ್ನು ಮಂಪರು ಪರೀಕ್ಷೆಗೆ ಒಳಪಡಿಸುವ ಅಗತ್ಯವಿದೆ ಎಂದು ನಿರ್ಗಮಿತ ನ್ಯಾಯಮೂರ್ತಿ ಪಿ ಕೃಷ್ಣ ಭಟ್ ಹೇಳಿದರು.
ಕರ್ನಾಟಕ ರಾಜ್ಯ ವಕೀಲ ಪರಿಷತ್ ಹೈಕೋರ್ಟ್ ಪ್ರಧಾನ ಪೀಠದ ಕೋರ್ಟ್ ಹಾಲ್ 1ರಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ನ್ಯಾ. ಭಟ್ ಮಾತನಾಡಿದರು.
ನ್ಯಾಯಾಂಗದ ಅಧಿಕಾರಿಗಳು ತಮ್ಮ ಸ್ವಾತಂತ್ರ್ಯ ಮತ್ತು ಪ್ರಾಮಾಣಿಕತೆಯನ್ನು ರಕ್ಷಿಸಲು ಎಷ್ಟೇ ಪ್ರಯತ್ನಪಟ್ಟರೂ ನ್ಯಾಯಮೂರ್ತಿಗಳ ವೃತ್ತಿ ಬದುಕಿನ ಅತ್ಯಂತ ಮಹತ್ವದ ಘಟ್ಟಗಳಲ್ಲಿ ದುರ್ನಡತೆ ದೂರುಗಳು ಕೇಳಿಬರುವುದು ಆತಂಕಕಾರಿ ಬೆಳವಣಿಗೆಯಾಗಿದೆ. “ಆರೋಪ ಸಾಬೀತಾದರೆ ಅಥವಾ ಅಂತಹ ಭಾವನೆ ಉಳಿದರೆ ನ್ಯಾಯಾಧೀಶರು ಸ್ವತಂತ್ರವಾಗಿ ಇರುವುದಿಲ್ಲ ಮತ್ತು ಅವರ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ. ಇದಕ್ಕೆ ಪರಿಹಾರವೇನು?” ಎಂದು ಪ್ರಶ್ನೆ ಎತ್ತಿದರು.
ಮುಂದುವರೆದು, ಪರಿಹಾರವನ್ನು ಸೂಚಿಸಿದ ನ್ಯಾ. ಭಟ್ ಅವರು ಅಂತಹ ಸಂದರ್ಭಗಳಲ್ಲಿ ನ್ಯಾಯಾಂಗದ ಅಧಿಕಾರಿಗಳು, ದೂರುದಾರರನ್ನು ಒಳಗೊಂಡಂತೆ ಮಂಪರು ಪರೀಕ್ಷೆಗೆ ಒಳಗಾಗಲು ಇಚ್ಛಿಸಬೇಕು. ಇದು ಮೊದಲಿಗೆ ಅಸಂಬಂದ್ಧ ಮತ್ತು ವಿಪರೀತ ಎನಿಸಬಹುದು ಎಂದರು.
“ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು ಮತ್ತು ಲೋಕಾಯುಕ್ತ, ಉಪಲೋಕಾಯುಕ್ತದಂಥ ಮಹತ್ವದ ಸ್ಥಾನದಲ್ಲಿರುವವರು ಮಂಪರು ಪರೀಕ್ಷೆಗೆ (ನಾರ್ಕೊ ಅನಾಲಿಸಿಸ್ ಟೆಸ್ಟ್) ಮುಂದಾಗಬೇಕು. ಅದೇ ರೀತಿ ಈ ಹುದ್ದೆಯಲ್ಲಿರುವವರು ಸೂಚಿಸಿದ ದೂರು ನೀಡಿದ ನಿರ್ದಿಷ್ಟ ವ್ಯಕ್ತಿಗೆ ಮಂಪರು ಪರೀಕ್ಷೆಗೆ ಒಳಪಡಿಸಬೇಕು” ಎಂದು ಅಭಿಪ್ರಾಯಪಟ್ಟರು.
ತಾವು ಕರ್ತವ್ಯ ನಿಭಾಯಿಸುತ್ತಿರುವ ಹುದ್ದೆಗೆ ವ್ಯಕ್ತಿಗತವಾಗಿ ಪ್ರತಿಯೊಬ್ಬ ನ್ಯಾಯಮೂರ್ತಿಯು ಪ್ರಾಮಾಣಿಕವಾಗಿ ನಡೆದುಕೊಂಡರೆ ನ್ಯಾಯಾಂಗದ ಸ್ವಾತಂತ್ರ್ಯ ಕಾಪಾಡಬಹುದು ಎಂದು ಹೇಳಿದರು. “ನನ್ನ ಪ್ರಕಾರ ನ್ಯಾಯಾಂಗದ ಸ್ವಾಯಂತ್ರ್ಯಕ್ಕೆ ಬೆದರಿಕೆ ಎಂಬುದು ಕಲ್ಪಿತ ಕತೆ. ವ್ಯಕ್ತಿಗತವಾಗಿ ನ್ಯಾಯಮೂರ್ತಿಯು ಸ್ವತಂತ್ರವಾಗಿ ಉಳಿದರೆ ನ್ಯಾಯಾಂಗದ ಸ್ವಾತಂತ್ರ್ಯ ಸಾಧನೆ ಸಾಧ್ಯ. ಇದನ್ನು ಸಾಧಿಸುವುದು ಹೇಗೆ? ನ್ಯಾಯಾಧೀಶರು ತಾತ್ವಿಕ ಗುಣ ಮತ್ತು ಸಚ್ಚಾರಿತ್ರ್ಯವನ್ನು ಅಂತರ್ಗತಗೊಳಿಸಿಕೊಳ್ಳಬೇಕು. ನ್ಯಾಯಾಧೀಶರು ನಿಸ್ಸಂಗಿಯಾದಾಗ (ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಇ ಎಸ್ ವೆಂಕಟರಾಮಯ್ಯ ಅವರ ಸಮಯೋಚಿತ ನುಡಿ) ಸ್ವತಂತ್ರ ನ್ಯಾಯಾಂಗ ಸಾಧ್ಯ. ನ್ಯಾಯ ಮಾರ್ಗದಲ್ಲಿ ನಡೆಯುವ ನ್ಯಾಯಾಧೀಶರಿಗೆ ಕಾನೂನಿನಲ್ಲಿ ಹಲವು ರಕ್ಷಣೆಗಳಿವೆ” ಎಂದು ಹೇಳಿದರು.
ನ್ಯಾಯಾಂಗದಲ್ಲಿನ ಶ್ರೇಣೀಕೃತ ವ್ಯವಸ್ಥೆಯು ಕೆಲವು ಸಂದರ್ಭದಲ್ಲಿ ನ್ಯಾಯಾಂಗ ಅಧಿಕಾರಿಯ ಆತ್ಮ ಗೌರವ ಮತ್ತು ಸ್ವಾತಂತ್ರ್ಯದ ಭಾವನೆಗೆ ಹೇಗೆ ಧಕ್ಕೆ ಉಂಟು ಮಾಡುತ್ತದೆ ಎಂಬುದನ್ನೂ ಅವರು ವಿವರಿಸಿದರು. ಅಲ್ಲದೇ, ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳ ಮಕ್ಕಳು ನ್ಯಾಯಾಂಗದ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ವಿಧಾನಕ್ಕೆ ನ್ಯಾ. ಭಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.