ಪ್ರಪ್ರಥಮ ಘಟಿಕೋತ್ಸವದಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಅಶ್ವತ್ಥನಾರಾಯಣ
ಬೆಂಗಳೂರು: 120 ಸರ್ಕಾರಿ ಐಟಿಐಗಳನ್ನು ಉನ್ನತೀಕರಿಸಲಾಗುವುದು ಮತ್ತು ಈ ವರ್ಷ ನೂತನವಾಗಿ 30 ಐಟಿಐಗಳನ್ನು ಸ್ಥಾಪಿಸಲಾಗುವುದು ಎಂದು ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.ಪೀಣ್ಯದಲ್ಲಿರುವ ಸರ್ಕಾರಿ ಐಟಿಐನಲ್ಲಿ ಶನಿವಾರ ಏರ್ಪಡಿಸಿದ್ದ ಬೆಂಗಳೂರು ನಗರ ಜಿಲ್ಲಾ ಮಟ್ಟದ ಪ್ರಪ್ರಥಮ ಐಟಿಐ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ಯುವಜನರಿಗೆ ಗುಣಮಟ್ಟದ ಶಿಕ್ಣಣ ಮತ್ತು ಕೌಶಲಗಳನ್ನು ಕಲಿಸಿದರೆ ಸದೃಢ ಹಾಗೂ ಸ್ವಾವಲಂಬಿ ಭಾರತವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದರು. ಸರ್ಕಾರವು ಐಟಿಐ ಶಿಕ್ಷಣವನ್ನು ಪಿಯುಸಿಗೆ ತತ್ಸಮಾನ ಎಂದು ಪರಿಗಣಿಸಲಾಗುವುದು. ಜತೆಗೆ ಇಂಗ್ಲಿಷ್ ಭಾಷೆಯ ಕಲಿಕೆಯನ್ನು ಇದರ ಭಾಗವಾಗಿ ಮಾಡಲಾಗುವುದು ಎಂದು ಅವರು ಭರವಸೆ ನೀಡಿದರು.
ಟಾಟಾ ಸಮೂಹದ ನೆರವಿನಲ್ಲಿ ಈಗಾಗಲೇ 150 ಸರ್ಕಾರಿ ಐಟಿಐಗಳನ್ನು ಅಭಿವೃದ್ಧಿ ಪಡಿಸಿ, ಹೊಸ ಕೋರ್ಸುಗಳನ್ನು ಆರಂಭಿಸಲಾಗಿದೆ. ಇದಕ್ಕಾಗಿ 4,500 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಅವರು ನುಡಿದರು. ಜಪಾನ್, ಚೀನಾ ತರಹದ ದೇಶಗಳು ಉತ್ಪಾದನಾ ವಲಯದಲ್ಲಿ ಸಾಕಷ್ಟು ಸಾಧಿಸಿವೆ. ಭಾರತ ಮತ್ತು ಕರ್ನಾಟಕ ಕೂಡ ಸೇವಾ ವಲಯದ ಜತೆಗೆ ಉತ್ಪಾದನಾ ರಂಗದಲ್ಲಿ ಮುಂಚೂಣಿಗೆ ಬರಬೇಕು. ಇದರಲ್ಲಿ ಐಟಿಐ ಪದವೀಧರರ ಪಾತ್ರವು ನಿರ್ಣಾಯಕವಾಗಿದೆ ಎಂದು ಅವರು ಸಲಹೆ ನೀಡಿದರು.
ಸಮಾಜದಲ್ಲಿ ಎಲ್ಲೆಡೆ ಕೇವಲ ಪದವಿ ಶಿಕ್ಷಣದ ಮೋಹವಿದೆ. ಆದರೆ ಇವತ್ತು ಕೌಶಲ್ಯಗಳಿಗೆ ಮಹತ್ತ್ವ ಬಂದಿದೆ. ಇದನ್ನು ಯುವಜನರು ಅರ್ಥ ಮಾಡಿಕೊಂಡು ಮುನ್ನುಗ್ಗಬೇಕು. ಇದರಿಂದ ಕನಸಿನ ಉದ್ಯೋಗ ಪಡೆಯುವುದು ಸುಲಭವಾಗುತ್ತದೆ ಎಂದು ಅವರು ಕಿವಿಮಾತು ಹೇಳಿದರು. ಪ್ರಧಾನಿ ಮೋದಿಯವರು ವಿಶ್ವಕರ್ಮ ಸಮುದಾಯದ ಕೌಶಲ್ಯವನ್ನು ಗೌರವಿಸಿ, ‘ವಿಶ್ವಕರ್ಮ ದಿನ’ದಂದೇ ದೇಶದಲ್ಲಿ ಇರುವ ಎಲ್ಲಾ 14 ಸಾವಿರ ಐಟಿಐಗಳಲ್ಲಿ ಘಟಿಕೋತ್ಸವ ಆಚರಿಸುವ ಸಂಪ್ರದಾಯ ಆರಂಭಿಸಿದ್ದಾರೆ ಎಂದು ಸಚಿವರು ಅಭಿನಂದಿಸಿದರು. ಈ ವೇಳೆ ಅವರು 2021-22ರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಪ್ರದಾನ ಮಾಡಿದರು. ಕೌಶಲ್ಯಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತೆ ಕೆ.ಜ್ಯೋತಿ, ಐಎಸ್ಡಿಎಸ್ ಪ್ರಾಂತೀಯ ನಿರ್ದೇಶಕ ಬಿ ಎನ್ ಶ್ರೀಧರ್ ಉಪಸ್ಥಿತರಿದ್ದರು.
ಕ್ಯಾಪ್ಶನ್
ಪೀಣ್ಯ ಐಟಿಐನಲ್ಲಿ ಶನಿವಾರ ನಡೆದ ಪ್ರಥಮ ಘಟಿಕೋತ್ಸವದಲ್ಲಿ ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಭಾಗವಹಿಸಿ, ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಿದರು. ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಆಯುಕ್ತೆ ಕೆ.ಜ್ಯೋತಿ, ಐಎಸ್ಡಿಎಸ್ ಪ್ರಾಂತೀಯ ನಿರ್ದೇಶಕ ಬಿ ಎನ್ ಶ್ರೀಧರ್ ಇದ್ದರು.