ಬೆಂಗಳೂರು : ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದಾದರೂ ಹಗರಣ ನಡೆದಿದ್ದರೆ ರಾಜ್ಯ ಸರ್ಕಾರದ ತನಿಕೆಯನ್ನು ಎದುರಿಸಲು ನಾವು ಸಿದ್ದರಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮ ಅಧಿಕಾರವಧಿಯಲ್ಲಿ ಆಕ್ರಮ ಇಲ್ಲವೇ ಕಾನೂನನ್ನು ಉಲ್ಲಂಘಿಸಿ ಕಾಮಾಗಾರಿ ನಡೆಸಿದ್ದರೆ ರಾಜ್ಯ ಸರ್ಕಾರ ಯಾವುದೇ ರೀತಿ ತನಿಖೆ ನಡೆಸಲಿ.ಅದಕ್ಕೆ ನಮ್ಮದೇನು ತಕರಾರು ಇಲ್ಲ. ಎಲ್ಲವನ್ನೂ ಎದುರಿಸಲು ನಾವು ಸಿದ್ದರಿದ್ದೇವೆ. ಆದರೆ, ತನಿಖೆ ಪಾರದರ್ಶಕವಾಗಿರಲಿ ಎಂದು ಒತ್ತಾಯ ಮಾಡಿದರು.
ಬಿಜೆಪಿ ಅವಧಿಯಲ್ಲಿ ಆದ ಹಗರಣ ತನಿಖೆ ವಿಚಾರವಾಗಿ ಮಾತನಾಡಿದ ಅವರು, ಯಾವುದೇ ದೂರು ಇದ್ದರೂ ತನಿಖೆ ಮಾಡಬಹುದು.ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ತನಿಖೆ ಕಾಮಗಾರಿಗೆ ಅಡ್ಡಿ ಆಗಬಾರದು.ಟಾರ್ಗೆಟ್ ಮಾಡಿ ಕಾಮಗಾರಿ ಬದಲಾವಣೆ ಮಾಡುವ ದುರುದ್ದೇಶ ಆಗಬಾರದು.ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲವು ಹಗರಣಗಳು ನಡೆದಿರುವ ಬಗ್ಗೆ ಸಿಐಡಿ ತನಿಖೆ ನಡೆಸಲು ನಮ್ಮ ಸರ್ಕಾರವೇ ನಿರ್ಧರಿಸಿತ್ತು. ತನಿಖೆಗೆ ನಾನೆ ಹಿಂದೆ ದೂರು ನೀಡಿದ್ದೆ. ಚುನಾವಣಾ ನೀತಿ ಸಂಹಿತೆ ಇದ್ದ ಹಿನ್ನೆಲೆ ಆಗಿರಲಿಲ್ಲ.ಹೊಸ ಸರ್ಕಾರ ಬಂದಿದೆ. ಎಲ್ಲವೂ ಅವರ ಕೈಯಲ್ಲೇ ಇದೆ ಎಂದರು.
ಪಠ್ಯ ಪುಸ್ತಕ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ಭಾರತದ ಸಂಸ್ಕೃತಿ, ಸಾಹಿತ್ಯ, ವಿಚಾರಗಳ ಆಧಾರಮ ಮೇಲೆ ಕೆಲವು ವಿಚಾರಗಳನ್ನು ಹೊಸದಾಗಿ ಮಕ್ಕಳಿಗೆ ಪರಿಚಯಿಸಲು ಮುಂದಾಗಿದ್ದೇವು. ಈಗ ಹೊಸ ಸರ್ಕಾರ ಅದೇ ಜಾಡನ್ನ ಹಿಡಿದು ಹೊಸ ಸಮಿತಿ ಮಾಡಲು ಹೊರಟಿದೆ. ಇದಕ್ಕೆ ಸಮಾಜವೇ ಪ್ರತಿಕ್ರಿಯೆ ನೀಡಲಿದೆ.ಮಕ್ಕಳಿಗೆ ಶಿಕ್ಷಣ ನೀಡುವ ಬಗ್ಗೆ ಪೋಷಕರು ಗಮನಿಸುತ್ತಾರೆ. ಪಠ್ಯ ಪದೇ ಪದೇ ಬದಲಾವಣೆ ಇಂದ ಮಕ್ಕಳಿಗೆ ಸಮಸ್ಯೆ ಆಗಬಾರದು ಎಂದು ಬೊಮ್ಮಯಿ ಅವರು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸಭೆ ಮಾಡಿದ್ದಾರೆ.ಸುಧೀರ್ಘ ಸಭೆಯಲ್ಲಿ ಏನಾಗಿದೆ ಗೊತ್ತಿಲ್ಲ.ಮಾಧ್ಯಮದಿಂದ ಮಾತ್ರ ನನಗೆ ಈ ವಿಷಯ ಗೊತ್ತಾಗಿದೆ. ಎಲ್ಲವನ್ನೂ ಉಚಿತವಾಗಿ ನೀಡಿದರೆ, ಅಭಿವೃದ್ಧಿ ಕಾರ್ಯ ಕುಂಟಿತ ಆಗಲಿದೆ ಎಂದು ಅಭಿಪ್ರಾಯಪಟ್ಟರು.
ಚುನಾವಣೆಗೂ ಮುನ್ನಾ ಎಲ್ಲರಿಗೂ ಸಿಗುತ್ತೆ ಎಂದು ಆಶ್ವಾಸನೆ ನೀಡಿದ್ದರು. ಅತ್ತೆಗೋ, ಸೊಸೆಗೋ ಅಂತ ಮೊದಲು ಹೇಳಿರಲಿಲ್ಲ.ಏನು ಮಾಡಲಿದ್ದಾರೆ ಅಂತ ಕರ್ನಾಟಕದ ಜನತೆ ಕಾಯುತ್ತಾ ಇದ್ದಾರೆ. ಜೂನ್ ಒಂದರಂದು ಸಚಿವ ಸಂಪುಟ ಸಭೆ ಇದೆ.ಅಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಎಂದು ಹೇಳಿದರು.
ಗ್ಯಾರಂಟಿ ಯೋಜನೆಗಳ ಅನುಷ್ಟಾನ ಆರ್ಥಿಕವಾಗಿ ಕಷ್ಟ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಜನರನ್ನ ಯಾಮಾರಿಸಿ ಗೆಲ್ಲಬೇಕು ಎಂದು ಈ ರೀತಿ ವಾಗ್ದನ ಮಾಡಿದ್ದರು. ಜನ ಈಗ ಅಧಿಕಾರ ಕೊಟ್ಟಿದ್ದಾರೆ.ಏನು ಮಾಡುತ್ತಾರೆ ಕಾದು ನೋಡೋಣ ಎಂದರು.
ಉಚಿತ ಯೋಜನೆ ಘೋಷಣೆ ಜಾರಿ ಮಾಡದೆ ಇದ್ದರೆ, ಕೆಲವರು ಕಾನೂನು ಹೋರಾಟ ಮಾಡಲಿದ್ದಾರೆ ಎನ್ನುವ ಎಚ್ಚರಿಕೆ ವಿಚಾರವಾಗಿ ಸರ್ಕಾರದವರೇ ಈ ರೀತಿ ಹೋರಾಟ ಮಾಡಲು ಹೇಳಿ, ನ್ಯಾಯಾಲಯದಲ್ಲಿ ಉಚಿತ ಯೋಜನೆಗೆ ತಡೆ ತರುವ ತಂತ್ರ ಇದ್ದರೂ ಇರಬಹುದು. ಹೇಳಲು ಆಗುವುದಿಲ್ಲ ಎಂದು ಬೊಮ್ಮಯಿ ಅನುಮಾನ ವ್ಯಕ್ತಪಡಿಸಿದರು.