ಹುಬ್ಬಳ್ಳಿ : ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿರುವ ಐದು ಗ್ಯಾರಂಟಿಗಳನ್ನು ಸರ್ಕಾರ ಜಾರಿಗೊಳಿಸುತ್ತದೆ. ಇದು ಗ್ಯಾರಂಟಿ. ಒಂದು ವೇಳೆ ಈ ಯೋಜನೆಗಳು ಜಾರಿಯಾಗದಿದ್ದರೆ ತಾವು ರಾಜಕೀಯ ಸನ್ಯಾಸ ಪಡೆಯುವುದಾಗಿ ನವಲಗುಂದ ಕ್ಷೇತ್ರದ ಕಾಂಗ್ರೆಸ್ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿ ಮಾಡಿಯೇ ತೀರುತ್ತದೆ. ಇದರ ಬಗ್ಗೆ ಯಾವುದೇ ಸಂಶಯ ಬೇಡ. ಆದರೆ ಸ್ವಲ್ಪ ಕಾಲಾವಕಾಶ ಬೇಕು. ಒಂದು ವೇಳೆ ಗ್ಯಾರಂಟಿ ಜಾರಿಯಾಗದಿದ್ದಲ್ಲಿ ನಾನು ನನ್ನ ಶಾಸಕತ್ವಕ್ಕೆ ರಾಜೀನಾಮೆ ನೀಡಿ ರಾಜಕೀಯ ಸನ್ಯಾಸ ಪಡೆಯುತ್ತೇನೆ ಎಂದು ಶಪತ ಮಾಡಿದರು.
ಎಲ್ಲರಿಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಆಗುವ ಆಸೆ ಇದ್ದೆ ಇರುತ್ತೆ. ಇದು ಸಹಜ. ಅದರಂತೆ ನನಗೂ ಕೃಷಿ ಸಚಿವನಾಗುವ ಆಸೆಯಿದೆ. ಸಚಿವ ಸಂಪುಟದಲ್ಲಿ ಯುವಕರಿಗೆ ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬುದು ಇದ್ದರೆ ನನ್ನನ್ನು ಸಹ ಪರಿಗಣಿಸಿ ಎಂದು ವರಿಷ್ಠರಿಗೆ ಮನವಿ ಮಾಡುತ್ತೇನೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಶೆಟ್ಟರ್ ಅವರಿಗೆ ಸಚಿವ ಸ್ಥಾನ ನೀಡಿದರೆ ತಪ್ಪೇನಿಲ್ಲ. ಅವರು ಹಿರಿಯರು ಜತೆಗೆ ಮಾಜಿ ಮುಖ್ಯಮಂತ್ರಿಗಳು. ಅವರಿಗೆ ಸರಿಸಮಾನವಾಗಿರುವ ಹುದ್ದೆ ನೀಡುವುದು ಸೂಕ್ತ ಎಂದರು.
ಮಹದಾಯಿ ಯೋಜನೆ ಜಾರಿ ವಿಚಾರವಾಗಿ ಮಾತನಾಡಿ, ಮಹದಾಯಿ ನೀರಿಗಾಗಿ ಬಿಜೆಪಿ ಹೇಳಿರುವ ಮಾಹಿತಿಯನ್ನು ಪರಿಶೀಲನೆ ಮಾಡಲಾಗುತ್ತಿದೆ. ಬಿಜೆಪಿ ಎಷ್ಟುಸುಳ್ಳು ಹೇಳಿದೆ? ಎಷ್ಟುಸತ್ಯ ಹೇಳಿದೆ ಎಂಬುದನ್ನು ಸಮಾಲೋಚಿಸಲಾಗುವುದು. ಸದ್ಯ ಮಹದಾಯಿ ವಿಚಾರದಲ್ಲಿ ಬಿಜೆಪಿ ಯಾವುದೇ ಟೆಂಡರ್ ಕರೆದಿಲ್ಲ. ಕೇವಲ ನೋಟಿಸ್ ತೋರಿಸಲಾಗಿದೆ. ಅರಣ್ಯ ಇಲಾಖೆ ಯಾವುದೇ ಕ್ಲಿಯರೆನ್ಸ್ ನೀಡಿಲ್ಲ ಎಂದರು.
ಬಜರಂಗ ದಳ ಬ್ಯಾನ್ ಮಾಡುವ ಕುರಿತು ಕೇಳಿದ ಪ್ರಶ್ನೆಗೆ, ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಈ ವಿಚಾರವಾಗಿ ದೊಡ್ಡ ನಾಯಕರು ಮಾತನಾಡುತ್ತಾರೆ. ಅವರನ್ನೇ ಕೇಳಿ ನನಗೆ ಈ ಬಗ್ಗೆ ಗೊತ್ತಿಲ್ಲ. ನನಗೇನಿದ್ದರೂ ಕ್ಷೇತ್ರ ಹಾಗೂ ರೈತರ ಅಭಿವೃದ್ಧಿ ಮಾತ್ರ ಚಿಂತನೆ. ಆ ಬಗ್ಗೆ ಮಾತ್ರ ಯೋಚಿಸುತ್ತೇನೆ ಎಂದರು.