ರಾಜ್ಯ

ನಿಮಗೇ ನಾನೇ ರಾಜಕೀಯ ವಿಲನ್: ಡಿಕೆಶಿ ಬಹಿರಂಗ ಚರ್ಚೆಯ ಸವಾಲು ಸ್ವೀಕರಿಸಿದ ಎಚ್‌ಡಿಕೆ

ಬೆಂಗಳೂರು: ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವ ವಿಚಾರವಾಗಿ ಬಹಿರಂಗ ಚರ್ಚೆಗೆ ಡಿಕೆ ಶಿವಕುಮಾರ್ ಹಾಕಿರುವ ಸವಾಲನ್ನು ಮಾಜಿ ಸಿಎಂ ಎಚ್.​ಡಿ ಕುಮಾರಸ್ವಾಮಿ ಸ್ವೀಕರಿಸಿದ್ದಾರೆ.

ನಾನು ಪಲಾಯನ ಮಾಡಲ್ಲ, ನನ್ನ ಬಳಿಯೂ ಸಾಕಷ್ಟು ಸರಕು ಇದೆ ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದರೊಂದಿಗೆ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ನಡುವೆ ಮತ್ತೊಂದು ರಾಜಕೀಯ ಕದನ ಶುರುವಾಗಿದೆ. ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ವಿಜಯದಶಮಿಯ ಆಸುಪಾಸಿನಲ್ಲಿ ಹಬ್ಬದ ಆಚರಣೆ ಜೊತೆಗೆ ಸಿಎಂ ಹಾಗೂ ಡಿಸಿಎಂ ವಯ್ಯಕ್ತಿಕವಾಗಿ ನನ್ನ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಅದಕ್ಕೆ ಸಂಬಂಧಪಟ್ಟ ಎರಡು ಮೂರು ವಿಚಾರಗಳಿಗೆ ಡಿಸಿಎಂ ನನಗೆ ಸವಾಲು ಹಾಕಿದ್ದಾರೆ. ಅದಕ್ಕೆ ನಾನು ಚರ್ಚೆಗೆ ಸಿದ್ದನಿದ್ದೇನೆ. ನಾನು ಸ್ವೀಕಾರ ಮಾಡುತ್ತೇನೆ. ಪಲಾಯನ ಮಾಡಲ್ಲ. ನನ್ನ ಹತ್ತಿರ ಸಹ ಸರಕು ಇದೆ. ಇವತ್ತಿನ ಆರ್ಥಿಕ ಪರಿಸ್ಥಿತಿಗೆ ಹಿಂದಿನ ಬಿಜೆಪಿ ಕಾರಣ ಎಂದು ಸಿಎಂ ಹೇಳಿದ್ದಾರೆ. ಇದಕ್ಕೆ ಶ್ವೇತ ಪತ್ರ ಹೊರಡಿಸುತ್ತೇನೆ ಎಂದು ಹೇಳಿದ್ದಾರೆ ಇದನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ.

ನಾನೇ ವಿಲನ್: ರಾಜಕೀಯವಾಗಿ ವಿಲನ್ ನಾನೇ, ವಿಪಕ್ಷದವನಾಗಿ ನಾನು ಅವರಿಗೆ ಸ್ನೇಹಿತನಾಗಲು ಆಗುತ್ತಾ, ನೀವು ಮಾಡುವ ತಪ್ಪು ಕೆಲಸಕ್ಕೆ ನಾನು ವಿಲನ್ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.

ಸರ್ಕಾರ ರಚನೆಯಾದ ಹದಿನೈದೇ ದಿನದಲ್ಲಿ ರಮೇಶ್ ಜಾರಕಿಹೊಳಿ ಅಜ್ಮೀರ್‌ಗೆ ಹೋದ್ರಲ್ಲ ನನ್ನಿಂದ ಹೋದರಾ ಎಂದರು. ಬೆಳಗಾವಿ ಬಂಡಾಯ ಯಾರು ಸರಿಪಡಿಸಬೇಕಿತ್ತು. ನಾನು ಜಾರಕಿಹೊಳಿ ಮನೆಗೆ ಎಷ್ಟು ಬಾರಿ ಹೋದೆ ನೀವು ಕೈ ಜೋಡಿಸದಿದ್ರೆ ಅವರು ಯಾಕೆ ಸರ್ಕಾರ ತೆಗೆಯುತ್ತಿದ್ರು ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನೆ ಮಾಡಿದರು.

ಅಪ್ಪ ನಮಸ್ಕಾರ ಕಣ್ರಪ್ಪ, 14 ತಿಂಗಳಲ್ಲಿ ಜನ ಸೇವೆ ಮಾಡಲು ಅವಕಾಶ ಕೊಟ್ಟಿದ್ದಕ್ಕೆ ಕೃತಜ್ಞತೆ ಕಣ್ರಪ್ಪ ಎಂದು ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಅಪ್ಪ ಶಿವಕುಮಾರ್ ಸಾಹಬ್ರೇ ಕನಕಪುರದಲ್ಲಿ ಬಮೂಲ್ ಮಿಲ್ಕ್ ಪೌಡರ್ ಕಾರ್ಖಾನೆಗೆ ಭೂಮಿ ಕೊಟ್ಟ ರೈತರ ಹೆಸರಲ್ಲಿ ಪರಿಹಾರವನ್ನು ನಿಮ್ಮ ಪಟಾಲಂ‌ ಲೂಟಿ ಹೊಡೆದ್ರು. ಒಟ್ಟು ಐವತ್ತು ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದೆ. ಆ ರೈತರ ಬಳಿ ಇವರ ಪಟಾಲಂ ಜಿಪಿಎ ಮಾಡಿಕೊಂಡು ಹೆಚ್ಚಿನ ಪರಿಹಾರ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಆಣೆ ಪ್ರಮಾಣಕ್ಕೆ ಸವಾಲು ಹಾಕಿದ ಕುಮಾರಸ್ವಾಮಿ: ವರ್ಗಾವಣೆಯಲ್ಲಿ ಯಾವುದೇ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಿ. ಸಿಎಂ, ಡಿಸಿಎಂ ಹಾಗೂ ಎಲ್ಲಾ ಮಂತ್ರಿಗಳು ಬಂದು ಪ್ರಮಾಣ ಮಾಡಿ ಎಂದು ಸವಾಲು ಹಾಕಿದ ಕುಮಾರಸ್ವಾಮಿ, ಕಳೆದ ಐದು ತಿಂಗಳಲ್ಲಿ ಯಾವುದೇ ವರ್ಗಾವಣೆಯಲ್ಲಿ ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡಿ. ನಾನು ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡುತ್ತೇನೆ.

ಹಳೇ ವಿಚಾರ ಬೇಡ ಈ 5 ತಿಂಗಳಲ್ಲಿ ಲಂಚ ಪಡೆದಿಲ್ಲವೆಂದು ಪ್ರಮಾಣ ಮಾಡಿ. ಧರ್ಮಸ್ಥಳ ಬೇಡ ಅಂದ್ರೆ ಚಾಮುಂಡೇಶ್ವರಿ ಬೆಟ್ಟಕ್ಕೆ ಹೋಗೋಣ ಬನ್ನಿ. ನೀವು ದೊಡ್ಡ ಆಲಹಳ್ಳಿಯಲ್ಲಿ ಏನೇನು ಮಾಡಿದ್ದೀರಾ ಅಂತಾ ಗೊತ್ತಿದೆ. ನಾನು ಒಂದು ಬಾರಿ ತಪ್ಪು ಮಾಡಿದ್ದೇನೆ. ಅದನ್ನು ಒಪ್ಪಿಕೊಂಡಿದ್ದೇನೆ. ನಾನು ನಿಮ್ಮ ರೀತಿ ಕೆಲಸ ಮಾಡಿಲ್ಲ ಎಂದರು.

ವಸತಿ ಇಲಾಖೆಯಲ್ಲಿ ಅಕ್ರಮ: ನಾನು ಮೈತ್ರಿ ಸರ್ಕಾರ ಮಾಡಿದಾಗ ವಸತಿ ಇಲಾಖೆಗೆ ಸಂಬಂಧಪಟ್ಟ ವಿಚಾರ ಹೇಳುತ್ತೇನೆ. ಚುನಾವಣೆಗೆ ಮುಂಚೆ 15 ಲಕ್ಷ ಮನೆ ಕಟ್ಟುವುದಕ್ಕೆ ಆದೇಶ ಪ್ರತಿ ಹೊರಡಿಸಿದ್ದರು. 2018 ಫೆಬ್ರುವರಿಯಲ್ಲಿ ಬಜೆಟ್ ಮಂಡನೆ ಮಾಡಿದ್ದು, 2,700 ಕೋಟಿ ರೂಪಾಯಿ ಬಜೆಟ್ ನಲ್ಲಿ ಇಟ್ಟಿದ್ದರು. ನಾನು ಅಧಿಕಾರ ಸ್ವೀಕಾರ ಮಾಡಿದಾಗ 29 ಸಾವಿರ ಕೋಟಿ ರೂಪಾಯಿ ಕಮಿಟ್​ಮೆಂಟ್ ಇತ್ತು. ಆದರೆ, ಅದಕ್ಕೆ ಫೈನಾನ್ಸ್ ಅಪ್ರುವಲ್ ಅಗಿರಲಿಲ್ಲ. 1,500 ಕೋಟಿ ದುಡ್ಡು ಯಾರು ಕೊಡುತ್ತಿದ್ದರು. ಫೈನಾನ್ಸ್ ಅಪ್ರುವಲ್ ಇಲ್ಲ. 1,500 ಕೊಟಿಯಲ್ಲಿ ಎಷ್ಟು ವಸೂಲಿ ಮಾಡಿದ್ದಿರಾ? ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆ. ಈಗ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದಾರೆ. 80 ಶಾಸಕರು ಯಾವುದೇ ಷರತ್ತಿಲ್ಲದೆ ಸಿಎಂ ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಲಿಲ್ಲ ಎಂದು ಡಿಸಿಎಂ ಹೇಳಿದ್ದಾರೆ. ಮೊದಲ ದಿನದಿಂದ ಷರತ್ತುಗಳನ್ನ ಹಾಕುತ್ತಿದ್ದರು. ನಾವೇನು ನಿಮ್ಮ ಹೈಕಮಾಂಡ್ ಮುಂದೆ ಹೋಗಿದ್ನಾ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

andolanait

Recent Posts

KSOU | ಕುಲಸಚಿವೆಯಾಗಿ ಕೆಎಎಸ್‌ ಅಧಿಕಾರಿ ಕುಸುಮಾಕುಮಾರಿ ನೇಮಕ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾಕುಮಾರಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಈವರೆಗೆ…

17 mins ago

ಏ.9ರವರೆಗೆ ರಾಜ್ಯಾದ್ಯಂತ ಯಲ್ಲೋ ಅಲರ್ಟ್, ಮಳೆ ಮುನ್ಸೂಚನೆ

ಮೈಸೂರು : ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಏ.9ರವರೆಗೆ ಯಲ್ಲೋ…

32 mins ago

ಕಾಂತರಾಜು-ಹೆಗಡೆ ವರದಿಗಳು ಇನ್ನೂ ಸ್ಟೋರೇಜ್‌ನಲ್ಲೇ ಏಕಿದೆ? ; ಕುಮಾರಸ್ವಾಮಿ ಪ್ರಶ್ನೆ

ದಾವಣಗೆರೆ : ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಎರಡು ವರದಿಗಳನ್ನು…

56 mins ago

ಅಹಿಂದ ಹತ್ತಿಕ್ಕುತ್ತಿರುವ ಸಿದ್ದರಾಮಯ್ಯ : ಕುಮಾರಸ್ವಾಮಿ ಆರೋಪ

ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಕುರ್ಚಿ ಉಳಿಸಿಕೊಳ್ಳಲು ತಮ್ಮನ್ನು ಬೆಳೆಸಿದ್ದ ಅಹಿಂದ ವರ್ಗವನ್ನೇ…

1 hour ago

ಕೊಡಗು | ಟೆಕ್ಕಿ ಶರಣ್ಯ ಕೊನೆಗೂ ಪತ್ತೆ

ಮಡಿಕೇರಿ : ಮಡಿಕೇರಿಯ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಕೊ‌ನೆಗೂ ಪತ್ತೆ…

1 hour ago

ತಮಿಳುನಾಡು ಚುನಾವಣೆ : ಅಫಿಡವಿಟ್‌ನಲ್ಲಿ 2 ಕ್ರಿಮಿನಲ್‌ ಪ್ರಕರಣ ಘೋಷಿಸಿಕೊಂಡ ವಿಜಯ್‌

ಚೆನ್ನೈ : ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೆ…

2 hours ago