ಬೆಂಗಳೂರು : ಅಶ್ವಥ್ ನಾರಾಯಣ ಅಲ್ಲ, ನವರಂಗಿ ನಾರಾಯಣ ಎಂಬ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆಗೆ ಮಾಜಿ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಟಕ್ಕರ್ ಕೊಟ್ಟಿದ್ದಾರೆ.
ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರ ಬೆಳೆಸಿರುವ ಪಕ್ಷ, ಅದನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಅಂತ ಅವರ ಪಕ್ಷದವರೇ ಹೇಳುತ್ತಾರೆ. ಭ್ರಷ್ಟಾಚಾರದ ಜೊತೆ ಬದುಕಲು ಕಲಿಯಿರಿ ಅಂತ ಹೇಳಿದ ಪಕ್ಷ ಅದು. ಕಾಂಗ್ರೆಸ್ ರಾಜ್ಯದಲ್ಲಿ ಅಂಗಲಾಚಿ ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬಂದು ಸಟಕ್ ಅಂತ ಬದಲಾದರು. ಇವರೇ ನವರಂಗಿ, ನಾವಲ್ಲ. ಮಾತು ಗೊತ್ತು ಅಂತ ಡಿಕೆಶಿ ಭಂಡತನ ತೋರುತ್ತಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂತಹ ಭಂಡರು ಎಲ್ಲವನ್ನೂ ಸಮರ್ಥಿಸಿಕೊಳ್ಳುತ್ತಾರೆ. ರಾಮನಗರದಲ್ಲಿ ಜನರಿಗೆ ಮೋರಿ ನೀರು ಕುಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಡಿಕೆಶಿ ಏಳು ಸಲ ಗೆದ್ದರೂ ಕನಕಪುರ ಹಿಂದುಳಿದ ಕ್ಷೇತ್ರ. ರಾಮನಗರ ಹಿಂದುಳಿದ ಜಿಲ್ಲೆ. ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಸೌಲಭ್ಯ ಕೊಟ್ಟಿಲ್ಲ. ಡಿಕೆಶಿ ರಾಮನಗರಕ್ಕೆ ದ್ರೋಹ ಬಗೆಯುವ ವ್ಯಕ್ತಿ. ರಾಮಮಂದಿರ ಕಟ್ಟಲು ನಾವು ಮುಂದಾಗಿದ್ರೆ ತಡೆದವರು ಅವರು. ಲೋಕಸಭೆ ಚುನಾವಣೆಯಲ್ಲಿ ಜನ ಇವರಿಗೆ ತಕ್ಕ ಪಾಠ ಕಲಿಸುತ್ತಾರೆ. ರಾಮನಗರದ ಜನಕ್ಕೆ ದ್ರೋಹ ಬಗೆದಿದ್ದಾರೆ. ರಾಮನಗರದಲ್ಲಿ ನೆಟ್ಟಗೆ ಒಂದು ಕೆಲಸ ಮಾಡಿಲ್ಲ ಎಂದರು.
ಡಿಕೆಶಿ ಹೇಗೆ ಶ್ರೀಮಂತರಾದರು ಇದರ ಗುಟ್ಟು ಜನರಿಗೂ ಹೇಳಿಕೊಡಿ ಶಿವಕುಮಾರ್. ಜನರೂ ಸಮೃದ್ಧಿ ಆಗಲಿ. ಈ ಕಡೆ ಆಲೂಗೆಡ್ಡೆ ಹಾಕಿ ಆ ಕಡೆ ಚಿನ್ನ ತೆಗೆದವರು ಅಲ್ವಾ ಅವರು. ಸೈನಿಕರನ್ನು ಸ್ಮರಿಸಿಕೊಳ್ಳಿ, ತ್ಯಾಗ ಬಲಿದಾನದ ಅರ್ಥ ಮಾಡಿಕೊಳ್ಳಿ. ಡಿಕೆಎಸ್ ಟ್ಯಾಕ್ಸ್ ಅನ್ನಿ, ವೈಎಸ್ಟಿ ಟ್ಯಾಕ್ಸ್ ಅನ್ನಿ ನಾವು ಮಾಡೋದು ಮಾಡ್ತೀವಿ ಅನ್ನೋರು ನೀವು ಈ ರೀತಿ ಎಲ್ಲ ಕಾಮಿಡಿ ಮಾಡಬೇಡಿ. ಶ್ರೀಮಂತರಾಗೋದು ಹೇಗೆ ಅಂತ ಹೇಳಿಕೊಡಲು ಡಿಕೆಎಸ್ ಯೂನಿವರ್ಸಿಟಿ ಆರಂಭಿಸಿ ಎಂದು ಹೇಳಿದರು.