ಬೆಂಗಳೂರು : ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ ಪಕ್ಷದ ಗುರಿ, 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ನಮ್ಮ ಸಮೀಕ್ಷೆಯೂ ನಿರೀಕ್ಷೆಯಂತೆಯೇ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮತ್ತು ಅವರ ಪಕ್ಷ ಏನೇ ಹೇಳಲಿ ಸ್ಪಷ್ಟಬಹುಮತದ ಮೂಲಕ ನಾವು ಗೆಲ್ಲುವುದು ಖಚಿತ ಎಂದಿದ್ದಾರೆ.
ಮುಂದುವರಿದು ನಾನೆಂದೂ ಹುಟ್ಟುಹಬ್ಬವನ್ನು ಬಹಿರಂಗವಾಗಿ ಆಚರಿಸಿದವನಲ್ಲ, ಈ ಬಾರಿ 75 ವರ್ಷ ಪೂರ್ಣಗೊಳಿಸಲಿರುವ ಕಾರಣ ಸ್ನೇಹಿತರು ಮತ್ತು ಅಭಿಮಾನಿಗಳು ಆಚರಣೆ ಮಾಡುತ್ತಿದ್ದಾರೆ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರೇ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಕಾರಣ ವಿಶೇಷ ಸಂದರ್ಭವಾಗಿದ್ದು ನಾನೂ ಭಾಗವಹಿಸುತ್ತಿದ್ದೇನೆ. ನಾನು ಸಾಮಾಜಿಕ ನ್ಯಾಯ, ಅಹಿಂದ ವರ್ಗ ಮತ್ತು ಬಡವರ ಪರವಾಗಿ ಇರುವವನು, ಸರ್ವರು ಸಮಾನ ಮತ್ತು ನ್ಯಾಯಬದ್ದ ಅವಕಾಶ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂಬ ಆಶಯದೊಂದಿಗೆ ನಾನು ಹೋರಾಟ ಮಾಡುತ್ತಾ ಬಂದವನು. ಯಾರು ಏನೇ ಹೇಳಿದರೂ ಈ ವಿಷಯದಲ್ಲಿ ರಾಜಿ ಇಲ್ಲ.
ರಾಜ್ಯದ ಒಂದೊಂದು ಕ್ಷೇತ್ರದಲ್ಲಿ ನಮ್ಮ ಪಕ್ಷದಿಂದ 10-12 ಗೆಲ್ಲುವ ಅಭ್ಯರ್ಥಿಗಳಿದ್ದಾರೆ. ಇದೇ ಸಮಸ್ಯೆಯಾಗಿದೆ. ಈ ಸಮಸ್ಯೆ ಬಿಜೆಪಿಗೆ ಇಲ್ಲ. ಅದು ನಮ್ಮಂತೆ ಇಡೀ ರಾಜ್ಯದಲ್ಲಿ ನೆಲೆ ಇರುವ ಪಕ್ಷ ಅಲ್ಲ. ಇದಕ್ಕಾಗಿ ನಮ್ಮಲ್ಲಿ ಗೆದ್ದವರನ್ನು ಆಪರೇಷನ್ ಮಾಡಿ ಅವರು ಹೊತ್ತುಕೊಂಡು ಹೋಗುತ್ತಾರೆ.
ಬಿಜೆಪಿಗೆ ಅಭ್ಯರ್ಥಿಗಳ ಖಂಡಿತ ಕೊರತೆ ಇದೆ. ಉದಾಹರಣೆಗೆ ಹುಣಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ವಿಶ್ವನಾಥ್ ಈಗ ಪರಿಷತ್ ಸದಸ್ಯರಾಗಿದ್ದಾರೆ. ಕೆ.ಆರ್ ನಗರದಲ್ಲಿ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಗೆ ಅಭ್ಯರ್ಥಿ ಯಾರಿದ್ದಾರೆ? ಇಡೀ ಮಂಡ್ಯ ಜಿಲ್ಲೆಯಲ್ಲಿ ಅವರಿಗೆ ಅಭ್ಯರ್ಥಿಗಳೇ ಇಲ್ಲ.
ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಹಲವು ನಾಯಕರು ನನ್ನ ಸಂಪರ್ಕದಲ್ಲಿರುವುದು ನಿಜ. ಚುನಾವಣೆಗೆ 9 ತಿಂಗಳು ಇದೆ, ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇಟ್ಟು, ಪಕ್ಷದ ನಾಯಕತ್ವ ಒಪ್ಪಿಕೊಂಡು ಪಕ್ಷಕ್ಕೆ ನಿಷ್ಠಾವಂತರಾಗಿ ಇರುವವರಿಗೆ ಟಿಕೇಟ್ ನೀಡುತ್ತೇವೆ. ಬಿಜೆಪಿಯಲ್ಲಿರುವವರೆಲ್ಲರೂ ಆರ್ ಎಸ್ ಎಸ್ ಮೂಲದವರಲ್ಲ, ಉದಾಹರಣೆಗೆ ಸಚಿವ ಎಸ್.ಟಿ.ಸೋಮಶೇಖರ್ ಆರ್ ಎಸ್ ಎಸ್ ನವರಲ್ಲ. ಹೀಗೆ ಬಹಳ ಮಂದಿ ಇದ್ದಾರೆ ಇದರ ಅರ್ಥ ಸೋಮಶೇಖರ್ ಮರಳಿ ಬರುತ್ತಾರೆ ಎಂದಲ್ಲ. ಕಾಂಗ್ರೆಸ್ ಸಿದ್ದಾಂತ ಒಪ್ಪಿಕೊಂಡು ಬರುವವರಿಗೆ ಸ್ವಾಗತ.
ಉದಯಪುರದಲ್ಲಿ ಕನ್ಹಯ್ಯ ಲಾಲ್ ಕೊಲೆ ಅತ್ಯಂತ ಖಂಡನೀಯ ಕೃತ್ಯ. ಕೊಲೆಯಾದ ದಿನವೇ ಇದನ್ನು ಹೇಳಿದ್ದೇನೆ. ಈ ರೀತಿ ತಲೆ ಕತ್ತರಿಸುವ ದುಷ್ಕರ್ಮಿಗಳಿಗೆ ಮರಣದಂಡನೆಯೇ ಸರಿಯಾದ ಶಿಕ್ಷೆ. ರಾಜಸ್ತಾನ ಸರ್ಕಾರ ಖಂಡಿತ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗುವಂತೆ ಕ್ರಮಕೈಗೊಳ್ಳುವ ಭರವಸೆ ಇದೆ ಎಂದರು.