ಬೆಂಗಳೂರು : ಅನೆ ದಾಳಿಯಿಂದಾದ ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ನಿಯಮ 69 ಅಡಿಯಲ್ಲಿ ಹಾಸನ ಜಿಲ್ಲೆಯಲ್ಲಿ ಕಾಡಾನೆ ಹಾವಳಿ ವಿಚಾರವಾಗಿ ನಡೆದ ಚರ್ಚೆಯ ಸಂದರ್ಭದಲ್ಲಿ ಸಿಎಂ ಈ ಘೋಷಣೆ ಮಾಡಿದರು.
ಕಾಡಾನೆ ಹಾವಳಿ ಬಗ್ಗೆ ಮಾತನಾಡಿದ ಸಕಲೇಶಪುರ ಶಾಸಕ ಎಚ್. ಕೆ. ಕುಮಾರಸ್ವಾಮಿ, ಆನೆ ದಾಳಿಯಿಂದ ಸತ್ತವರಿಗೆ 25 ಸಾವಿರ ಪರಿಹಾರ ಕೊಡಿ ಅಥವಾ ಸರ್ಕಾರಿ ಹುದ್ದೆ ಕೊಡಿ ಎಂದು ಮನವಿ ಮಾಡಿದರು. ಪ್ರತಿ ವರ್ಷ ಬೆಳೆ ನಷ್ಟ ನಿಗದಿ ಮಾಡಿ ಪರಿಹಾರ ಕೊಡಬೇಕು. ಬ್ಯಾರಿಕೇಡ್ ಕೊಟ್ಟಿದ್ದಾರೆ. ಆದರೆ ಶಾಶ್ವತ ಪರಿಹಾರ ನೀಡಬೇಕು ಹಾಗೂ ಆನೆಗಳನ್ನು ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಿಎಂ ಬೊಮ್ಮಾಯಿ, ಅರಣ್ಯ ಅಂಚಿನಲ್ಲಿರುವ ಜಿಲ್ಲೆಗಳಲ್ಲಿ ಆನೆ ಹಾವಳಿ ಇದೆ. ಆದರೆ ಆನೆಗಳನ್ನು ಒಕ್ಕಲೆಬ್ಬಿಸುವುದು ಸುಲಭದ ಕೆಲಸ ಅಲ್ಲ, ಅವು ಗುಂಪಿನಲ್ಲಿ ಇರುತ್ತವೆ. ಕಾಡಾನೆ ಹಾವಳಿ ತಡೆಗೆ ರೈಲ್ವೇ ಬ್ಯಾರಿಕೇಡ್ ಅಳವಡಿಸಲಾಗುತ್ತಿದೆ. ಬಂಡೀಪುರದಲ್ಲಿ ಹೊಸ ರೀತಿಯ ಬೇಲಿಯನ್ನು ಪ್ರಾಯೋಗಿಕವಾಗಿ ಅಳವಡಿಸಲಾಗುತ್ತಿದೆ ಎಂದರು. ಕಾಡಾನೆ ಹಾವಳಿ ತಡೆಯಲು ಹಾಸನ ಜಿಲ್ಲೆಯಲ್ಲಿ 74 ಕಿ ಮೀ ತಡೆ ಬೇಲಿ ಹಾಕಲಾಗುತ್ತದೆ. ಇದಕ್ಕಾಗಿ 100 ಕೋಟಿ ಖರ್ಚು ಮಾಡಲಾಗುತ್ತಿದೆ. ಆನೆ ದಾಳಿಯಿಂದ ಬೆಳೆ ಹಾನಿಯಾದರೆ ಪರಿಹಾರ ದುಪ್ಪಟ್ಟು ಮಾಡಲಾಗುತ್ತದೆ. ಪ್ರಾಣ ಹಾನಿ ಪರಿಹಾರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.