ಬೆಂಗಳೂರು: ಇಡೀ ಪ್ರಪಂಚ ಭಾರತವನ್ನು ಇಂದು ಸ್ಟಾರ್ಟಪ್ ಕ್ಯಾಪಿಟಲ್ ಆಗಿ ಗುರುತಿಸುತ್ತಿದೆ. ಇದಕ್ಕೆ ಮೂಲ ಕಾರಣ ಬೆಂಗಳೂರು. ಸ್ಟಾರ್ಟಪ್ ಕ್ಯಾಪಿಟಲ್ ಬೆಂಗಳೂರು. ಹೊಸದನ್ನು ಮಾಡಲು, ಬೌಂಡರಿ ಆಚೆ ನಿಂತು ಚಿಂತಿಸಲು, ಹೊಸ ಪ್ರಯೋಗಗಳು ಹುಟ್ಟುವುದೇ ಸ್ಟಾರ್ಟಪ್ನಲ್ಲಿ. ಮತ್ತು ಬೆಂಗಳೂರು ಭಾರತದ ಸ್ಟಾರ್ಟಪ್ನ ನಿಜವಾದ ರಾಜಧಾನಿ,” ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆಯ ನುಡಿಗಳನ್ನಾಡಿದ್ದಾರೆ.
ಕೆಂಪೇಗೌಡರ ಪ್ರಗತಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕರ್ನಾಟಕದ ಸಮಸ್ತ ಜನರಿಗೆ ನನ್ನ ಕೋಟಿಕೋಟಿ ಪ್ರಣಾಮಗಳು ಎಂದು ಕನ್ನಡದಲ್ಲಿ ಭಾಷಣ ಆರಂಭಿಸಿದರು. ಕರ್ನಾಟಕದಿಂದ ದೇಶಕ್ಕೆ ಹಲವು ಕೊಡುಗೆ ಸಿಕ್ಕಿದೆ. ಕನ್ನಡ ನೆಲದ ಸಾಧಕರನ್ನು ಗೌರವಿಸುವುದು ನಮ್ಮ ಕರ್ತವ್ಯ.
ಕರ್ನಾಟಕಕ್ಕೆ ಇಂದು ಮೊದಲ ಬಾರಿಗೆ ಮೇಡ್ ಇನ್ ಇಂಡಿಯಾ ವಂದೇ ಭಾರತ್ ರೈಲು ಸಿಕ್ಕಿದೆ. ದೇಶದ ಸ್ಟಾರ್ಟ್ ಅಪ್ ಕ್ಯಾಪಿಟಲ್ ಬೆಂಗಳೂರನ್ನು ಚೆನ್ನೈ ಹಾಗೂ ಮೈಸೂರಿನೊಂದಿಗೆ ಜೋಡಿಸುತ್ತದೆ ಎಂದು ಹೇಳಿದರು.
ನಾವು ಕರ್ನಾಟಕಕ್ಕೆ ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಕೆಂಪೇಗೌಡರ ಚಿಂತನೆಗಳು ಭವಿಷ್ಯದ ಕರ್ನಾಟಕ, ಭಾರತ ಹೇಗಿರಬೇಕು ಎಂಬ ಬಗ್ಗೆ ಪ್ರೇರಣೆ ನೀಡುತ್ತದೆ. ಭಾರತದ ಭವಿಷ್ಯಕ್ಕೆ ಸ್ಟಾರ್ಟ್ಅಪ್ ಮುಖ್ಯ. ಅದಕ್ಕೆ ಬೆಂಗಳೂರು ಬಹುದೊಡ್ಡ ಕೊಡುಗೆ ನೀಡುತ್ತದೆ.
ಬೆಂಗಳೂರು ನಗರವನ್ನು ನಾಡಪ್ರಭು ಕೆಂಪೇಗೌಡರ ಪರಿಕಲ್ಪನೆಯಂತೆಯೇ ಅಭಿವೃದ್ಧಿಪಡಿಸುತ್ತೇವೆ. ಕೆಂಪೇಗೌಡರು ಬೆಂಗಳೂರನ್ನು ಆರ್ಥಿಕವಾಗಿ ಮಾತ್ರವಲ್ಲ ಸಾಂಸ್ಕೃತಿವಕಾಗಿಯೂ ಸದೃಢಗೊಳಿಸಬೇಕು ಎಂದು ಚಿಂತಿಸಿದ್ದರು. ಬೆಂಗಳೂರು ಇಂದು ಜಾಗತಿಕ ನಗರವಾಗಿ ಬೆಳೆದಿದೆ. ಬೆಂಗಳೂರಿನ ಪರಂಪರೆ ಸಂರಕ್ಷಿಸುವ ಜೊತೆಗೆ ಆಧುನಿಕ ಸೌಲಭ್ಯಗಳನ್ನೂ ಒದಗಿಸಬೇಕು. ಈ ಕಾರ್ಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ
ವಂದೇ ಭಾರತ್ ಎಕ್ಸ್ಪ್ರೆಸ್ ಕೇವಲ ಒಂದು ರೈಲು ಮಾತ್ರವೇ ಅಲ್ಲ. ಅದು ಹೊಸ ಭಾರತದ ಹೊಸ ಮೈಲಿಗಲ್ಲು. ಮುಂದಿನ ದಿನಗಳಲ್ಲಿ ಭಾರತದ ರೈಲುಗಲು ಹೇಗಿರಲಿವೆ ಎಂಬುದರ ಒಂದು ಝಲಕ್ ಅಷ್ಟೇ ಎಂದರು.
ಭಾರತ ಇನ್ನು ಕುಂಟುವುದಿಲ್ಲ, ಅಭಿವೃದ್ಧಿ ಪಥದಲ್ಲಿ ವೇಗವಾಗಿ ಹೆಜ್ಜೆ ಹಾಕುತ್ತದೆ ಭಾರತ ಇನ್ನು ಕುಂಟುವುದಿಲ್ಲ. ಅತ್ಯಂತ ವೇಗವಾಗಿ ಓಡುತ್ತದೆ ಎಂದರು.
ಭಾರತದಾದ್ಯಂತ ವಂದೇ ಭಾರತ್ ರೈಲು, ವಿಸ್ಟರ್ಡೊಮ್ ಬೋಗಿಗಳು ಇರುತ್ತವೆ. ಸಾರಿಗೆಯನ್ನು ನಾವು ಸುಧಾರಿಸುತ್ತೇವೆ. ಸಮಯ ಉಳಿಸುತ್ತೇವೆ. ಬ್ರಾಡ್ಗೇಜ್ ಪರಿವರ್ತನೆಗೆ ವೇಗ ಕೊಟ್ಟಿದ್ದೇವೆ. ಹಲವು ಹೊಸ ಪ್ರದೇಶಗಳಿಗೆ ರೈಲು ಸಂಪರ್ಕ ಸಿಕ್ಕಿದೆ. ನಮ್ಮ ರೈಲು ನಿಲ್ದಾನಗಳು ಆಧುನೀಕರಣಗೊಂಡಿವೆ.
ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣ ಬೇರೆಯೇ ಅನುಭವ ಕೊಡುತ್ತದೆ. ದೇಶದ ಇತರ ರೈಲು ನಿಲ್ದಾಣಗಳನ್ನು ಇದೇ ರೀತಿ ಆಧುನೀಕರಣ ಮಾಡುತ್ತೇವೆ. ಬೆಂಗಳೂರು ನಗರ, ಯಶವಂತಪುರ ನಿಲ್ದಾನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ ಎಂದರು.
ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಳ ಹಿಂದೆ ಭಾರತದಲ್ಲಿ ಬೆರಳೆಣಿಕೆಯಷ್ಟು ವಿಮಾನ ನಿಲ್ದಾಣಗಳಿದ್ದವು. ಆದರೆ ಇಂದು ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಾಗಿದೆ. ವಿಮಾನ ನಿಲ್ದಾಣಗಳು ದೇಶದ ಪ್ರಗತಿಯ ದ್ಯೋತಕ.
ಕರ್ನಾಟಕದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಾಗುತ್ತಿದೆ. ಈಗ ಕರ್ನಾಟಕದಲ್ಲಿ ಕೇವಲ ಐಟಿ ಮಾತ್ರವೇ ಅಲ್ಲ, ಜೈವಿಕ ತಂತ್ರಜ್ಞಾನ, ರಕ್ಷಣಾ ಉತ್ಪಾದನಾ ಘಟಕಗಳಲ್ಲಿ ಹೂಡಿಕೆ ಹೆಚ್ಚುತ್ತಿದೆ. ವೈಮಾನಿಕ ಕ್ಷೇತ್ರದಲ್ಲಿ ಕರ್ನಾಟಕ ದೊಡ್ಡ ಸಾಧನೆ ಮಾಡಿದೆ. ಸೇನೆಗೆ ಪೂರೈಕೆಯಾಗುತ್ತಿರುವ ವಿಮಾನಗಳಲ್ಲಿ ಕರ್ನಾಟಕ ಸಿಂಹಪಾಲು ಪಡೆದಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿಯೂ ಕರ್ನಾಟಕ ಮುಂದಿದೆ. ಫಾರ್ಚೂನ್ 400 ಪಟ್ಟಿಯಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡುತ್ತಿದೆ.
10 ವರ್ಷಗಳ ಹಿಂದೆ ಯೋಚಿಸಲು ಆಗದಂಥ ಹಲವು ಬೆಳವಣಿಗೆಗಳು ಈಗ ದೇಶದಲ್ಲಿ ನಡೆದಿವೆ. ಹಿಂದಿನ ಭಾರತದಲ್ಲಿ ಕಲ್ಪಿಸುವುದೂ ಕಷ್ಟ ಎನ್ನುವಂಥ ಸಂಗತಿಗಳು ಈಗ ಕಾರ್ಯಸಾಧುವಾಗಿದೆ. ಇದಕ್ಕೆ ಸರ್ಕಾರಗಳ ಆಲೋಚನೆಗಳೂ ಮುಖ್ಯವಾಗುತ್ತವೆ. ಹಿಂದೆ ಸ್ಪೀಡ್ ಎನ್ನುವುದು ಐಷಾರಾಮಿ ಎನಿಸಿತ್ತು. ಧಾರಣ ಸಾಮರ್ಥ್ಯವು ದುಬಾರಿಯಾಗಿತ್ತು. ನಾವು ಈ ಯೋಚನೆ ಬದಲಿಸಿದೆವು. ವೇಗ ಮತ್ತು ಧಾರಣ ಸಾಮರ್ಥ್ಯವನ್ನು ದೇಶದ ಪ್ರಗತಿಗೆ ಅತ್ಯಗತ್ಯ ಅಂಶಗಳಾಗಿಸಿದೆವು. ದೇಶದ ಮೂಲ ಸೌಕರ್ಯ ವ್ಯವಸ್ಥೆ ಸುಧಾರಿಸಲು ಅಗತ್ಯ ಕ್ರಮ ತೆಗೆದುಕೊಂಡೆವು.
ವಿವಿಧ ಬಗೆಯ ಸಾರಿಗೆ ವ್ಯವಸ್ಥೆಯನ್ನು ನಾವು ಒಗ್ಗೂಡಿಸಿದ್ದೇವೆ. ಸಾರಿಗೆ ಖರ್ಚು ಕಡಿಮೆ ಮಾಡಲೆಂದು ವಿಶೇಷ ಸಾರಿಗೆ ನೀತಿ ರೂಪಿಸಿದ್ದೇವೆ. ದೇಶದ ಸಾಮಾಜಿಕ ಮೂಲ ಸೌಕರ್ಯಗಳನ್ನೂ ಉತ್ತಮಪಡಿಸುತ್ತಿದ್ದೇವೆ. ದೇಶದಲ್ಲಿ ಕೋಟ್ಯಂತರ ಹೊಸ ಮನೆ ನಿರ್ಮಿಸಿ ಹಂಚಿದ್ದೇವೆ. ಕರ್ನಾಟಕಕ್ಕೂ ಸಾಕಷ್ಟು ಸೌಕರ್ಯ ಸಿಕ್ಕಿದೆ. ಹಲವು ಮನೆಗಳಿಗೆ ಮೊದಲ ಬಾರಿಗೆ ನಲ್ಲಿಯಲ್ಲಿ ನೀರು ಬಂದಿದೆ. ಸಮಗ್ರ ಅಭಿವೃದ್ಧಿಗೆ ನಾವು ಗಮನ ಹರಿಸುತ್ತಿದ್ದೇವೆ. ಸಣ್ಣ ರೈತರ ಅನುಕೂಲಕ್ಕೆ ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಆಹಾರ ಧಾನ್ಯಗಳು ಸಕಾಲಕ್ಕೆ ಮಾರುಕಟ್ಟೆ ತಲುಪಲು ಅನುಕೂಲ ಕಲ್ಪಿಸಿದ್ದೇವೆ. ಎಲ್ಲರೂ ಜೊತೆಗೂಡಿದರೆ ದೇಶ ಸದೃಢವಾಗುತ್ತದೆ. ಹೀಗಾಗಿ ದೇಶದ ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕಲು ಎಲ್ಲರನ್ನೂ ಭಾಗಿದಾರರಾಗಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಕನಕದಾಸರು ಒಂದು ಕಡೆಯಿಂದ ಕೃಷ್ಣನ ಭಕ್ತಿಯ ಮಾರ್ಗ ತೋರಿದರು. ಮತ್ತೊಂದೆಡೆ ‘ಕುಲಕುಲವೆಂದು ಹೊಡೆದಾಡದಿರಿ’ ಎಂದು ಕಿವಿಮಾತು ಹೇಳಿದರು. ಇಂದು ಜಗತ್ತಿನಲ್ಲಿ ಕಿರುಧಾನ್ಯದ ಬಗ್ಗೆ ಮಾತು ಕೇಳಿಬರುತ್ತಿದೆ. ‘ರಾಮಧಾನ್ಯ ಚರಿತ್ರೆ’ ಮೂಲಕ ಕಿರುಧಾನ್ಯವಾದ ರಾಗಿಯ ಉದಾಹರಣೆ ನೀಡಿ ಸಾಮಾಜಿಕ ಸಮಾನತೆಯ ಸಂದೇಶ ನೀಡಿದರು.