ಬೆಂಗಳೂರು : ನಿನ್ನೆಯಷ್ಟೇ ತಮಿಳಿನ ರಾಜಕಾರಣಿ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಾರೆ. ಸನಾತನ ಧರ್ಮವನ್ನು ಅವರು ಮಲೇರಿಯಾ, ಡೆಂಗ್ಯೂಗೆ ಹೋಲಿಸಿ, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದರು. ಈ ಮಾತು ಸಾಕಷ್ಟು ಸಂಚಲನ ಮೂಡಿಸಿತ್ತು. ವಿವಾದಕ್ಕೂ ಕಾರಣವಾಗಿತ್ತು. ಹಿಂದೂ ಪರ ಸಂಘಟನೆಗಳು ಉದಯನಿಧಿ ವಿರುದ್ಧ ಕಿಡಿಕಾರಿದ್ದರು. ಈ ವಿವಾದದ ಕಿಡಿ ಇನ್ನೂ ಉರಿಯುತ್ತಲೇ ಇದೆ. ಇದರ ಮಧ್ಯ ಪ್ರಕಾಶ್ ರಾಜ್ ಕೂಡ ಸನಾತನ ಧರ್ಮದ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಚಂದ್ರಯಾನ 3 ಕುರಿತಂತೆ ಈ ಹಿಂದೆ ಲೇವಡಿ ಮಾಡಿದ್ದ ಪ್ರಕಾಶ್ ರಾಜ್ , ಆಗಲೂ ನೆಟ್ಟಿಗರ ಕೆಂಗೆಣ್ಣಿಗೆ ಗುರಿಯಾಗಿದ್ದರು. ಇದೀಗ ಸನಾತನ ಧರ್ಮದ ಬಗ್ಗೆ ಟ್ವೀಟ್ ಮಾಡಿ, ಉರಿವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಅಂಬೇಡ್ಕರ್ ಮತ್ತು ಪೆರಿಯಾರ್ ಫೋಟೋಗಳನ್ನು ಶೇರ್ ಮಾಡುವುದರ ಜೊತೆಗೆ ಹಿಂದೂಗಳು ತನಾತನಿಸ್ ಅಲ್ಲ, ತನಾತನಿಸ್ ಮಾನವ ವಿರೋಧಿಗಳು ಎಂದು ಬರೆದುಕೊಂಡಿದ್ದಾರೆ. ಸನಾತನಿಗಳನ್ನು ಗೇಲಿ ಮಾಡಲು ತನಾತನಿಸ್ ಎಂಬ ಪದ ಬಳಕೆ ಮಾಡಿದ್ದಾರೆ.
ಜಸ್ಟ್ ಆಸ್ಕಿಂಗ್ ಹೆಸರಿನಲ್ಲಿ ಸಾಕಷ್ಟು ಟ್ವೀಟ್ ಮಾಡುವ ಪ್ರಕಾಶ್ ರೈ, ಮೊದ ಮೊದಲ ಜಸ್ಟ್ ಆಸ್ಕಿಂಗ್ ಅನ್ನು ಪ್ರಧಾನಿಯನ್ನು ಪ್ರಶ್ನೆ ಕೇಳಲು ಬಳಸುತ್ತಿದ್ದರು. ನಂತರ ಕೇಂದ್ರ ಸರಕಾರವನ್ನು ಟೀಕಿಸುವುದಕ್ಕೆ ಬಳಸಲಾಯಿತು. ನಂತರ ಸಾಕಷ್ಟು ಸಮಸ್ಯೆಗಳನ್ನು ಅವರು ಕೇಳಿದ್ದಾರೆ. ಇತ್ತೀಚೆಗೆ ಬಂದ ಟ್ವೀಟ್ ಗಳು ನಾನಾ ಕಾರಣಗಳಿಂದಾಗಿ ವಿವಾದಕ್ಕೀಡಾಗುತ್ತಿವೆ.