ಬೆಂಗಳೂರು : ನಟ ನಾಗಭೂಷಣ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಮಹಿಳೆ ಪ್ರೇಮಾರ ಕುಟುಂಬದವರು ಮೃತಳ ಕಣ್ಣುಗಳನ್ನು ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಪ್ರೇಮಾ ಅವರ ಪಾರ್ಥಿವ ಶರೀರವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಮೃತದೇಹವನ್ನು ಪ್ರೇಮಾ ಅವರ ಮೈದುನ ಜಯರಾಮ್ ಅವರ ಗಾಯತ್ರಿ ನಗರದ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಕುಟುಂಬಸ್ಥರ ಅಂತಿಮ ದರ್ಶನದ ಬಳಿಕ ಸಂಜೆ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ತಿಳಿದುಬಂದಿದೆ.
ತಾಯಿಯನ್ನು ಕಳೆದುಕೊಂಡಿರುವ ಮಕ್ಕಳಿಬ್ಬರು ಅಮ್ಮನಿಗಾಗಿ ಕಣ್ಣೀರು ಇಡುತ್ತಿದ್ದಾರೆ. ಮಾತ್ರವಲ್ಲದೆ ಅಪಘಾತಕ್ಕೆ ಕಾರಣವಾಗಿರುವ ನಟ ನಾಗಭೂಷಣ್ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ನಾಗಭೂಷಣ್ ವಿರುದ್ದ ಐಪಿಸಿ 279(ನಿರ್ಲಕ್ಷತೆ, ರ್ಯಾಷ್ ಡ್ರೈವಿಂಗ್, ಪುಟ್ ಬಾತ್ ಮೇಲೆ ವಾಹನ ಚಲಾವಣೆ), 337(ಜೀವ ಹಾನಿ) ಹಾಗೂ 304A (ಅಪಘಾತ ಪ್ರಕರಣ) ಅಡಿಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.