ಕ್ರೀಡೆ

ಏಷ್ಯಾ ಗೇಮ್ಸ್‌ ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವುದೇ ಗುರಿ: ಋತುರಾಜ್

ನವದೆಹಲಿ: ಚೀನಾದ ಆತಿಥ್ಯದಲ್ಲಿ ನಡೆಯಲಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್ ನಲ್ಲಿ ಟೀಮ್ ಇಂಡಿಯಾವನ್ನು ಸಿಎಸ್‌ಕೆಯ ಆರಂಭಿಕ ಆಟಗಾರ ಋತುರಾಜ್ ಗಾಯಕ್ವಾಡ್ ಮುನ್ನಡೆಸುತ್ತಿದ್ದು, ಮಹಾ ಕ್ರೀಡಾಕೂಟದಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದು ಕೊಡುವುದೇ ನನ್ನ ಮಹತ್ತರ ಕನಸಾಗಿದೆ ಎಂದು ತಮ್ಮ ಹೆಬ್ಬಯಕೆ ವ್ಯಕ್ತಪಡಿಸಿದ್ದಾರೆ.

ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಎಂ.ಎಸ್ ಧೋನಿ ಪಡೆ 5ನೇ ಬಾರಿ ಟ್ರೋಫಿ ಗೆಲ್ಲಲು ನೆರವಾಗಿದ್ದ ಋತುರಾಜ್ ಗಾಯಕ್ವಾಡ್ 590 ರನ್ ಗಳಿಸಿ ಗಮನ ಸೆಳೆದಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯ ದೃಷ್ಟಿಯಿಂದ ಅನುಭವಿ ಆಟಗಾರರಿಗೆ ಏಷ್ಯನ್ ಗೇಮ್ಸ್ ನಿಂದ ವಿಶ್ರಾಂತಿ ನೀಡಿದ್ದು, ರೋಹಿತ್ ಶರ್ಮಾ ಬದಲಿಗೆ ಋತುರಾಜ್ ಗಾಯಕ್ವಾಡ್‌ಗೆ ನಾಯಕನ ಜವಾಬ್ದಾರಿಯನ್ನು ಬಿಸಿಸಿಐ ಸೆಲೆಕ್ಟರ್ಸ್ ವಹಿಸಿದ್ದಾರೆ.

ಚೀನಾದ ಹಾಂಗ್‌ಝೌನಲ್ಲಿ ಸೆಪ್ಟಂಬರ್‌ 28 ರಿಂದ ಅಕ್ಟೋಬರ್‌ 8ರವರೆಗೆ ನಡೆಯಲಿರುವ ಏಷ್ಯಾ ಕ್ರೀಡಾಕೂಟದ ಬಗ್ಗೆ ಬಿಸಿಸಿಐ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಋತುರಾಜ್ ಗಾಯಕ್ವಾಡ್ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ.

ಚಿನ್ನದ ಪದಕ ಗೆಲ್ಲುವುದೇ ಗುರಿ
“ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಡುವುದು ನನ್ನ ಕನಸಾಗಿದೆ. ಇಂತಹ ಮಹಾ ಕ್ರೀಡಾಕೂಟದ ವೇದಿಕೆ ಮೇಲೆ ನಿಂತು ರಾಷ್ಟ್ರಗೀತೆ ಆಡುವುದು ನಿಜಕ್ಕೂ ಹೆಮ್ಮೆಯ ಸಂಗತಿ. ಇಂತಹ ಸದಾವಕಾಶ ಕಲ್ಪಿಸಿಕೊಟ್ಟ ಬಿಸಿಸಿಐ ಮ್ಯಾನೇಜ್ ಮೆಂಟ್ ಹಾಗೂ ಸೆಲೆಕ್ಟರ್ಸ್ ಗಳಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಇಂತಹ ಮಹಾ ಟೂರ್ನಿಯಲ್ಲಿ ನಾಯಕತ್ವ ವಹಿಸಿರುವುದು ನಿಜಕ್ಕೂ ಗೌರವದ ಸಂಗತಿಯಾಗಿದ್ದು, ನನ್ನೊಂದಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ಅವಕಾಶವಾಗಿದೆ,” ಎಂದು ಋತುರಾಜ್ ಗಾಯಕ್ವಾಡ್ ಸಂತಸ ವ್ಯಕ್ತಪಡಿಸಿದ್ದಾರೆ.

ಯುವ ಆಟಗಾರರಿಗೆ ಉತ್ತಮ ಅವಕಾಶ
ಏಷ್ಯನ್ ಗೇಮ್ಸ್ ನಲ್ಲಿ ಸ್ಥಾನ ಪಡೆದಿರುವ ಬಹುತೇಕ ಆಟಗಾರರು ಯುವಕರಾಗಿದ್ದು, ಐಪಿಎಲ್ ಟೂರ್ನಿಯಲ್ಲಿ ಕಳೆದೆರಡು ವರ್ಷಗಳಿಂದ ಅವರೊಂದಿಗೆ ಗುರುತಿಸಿಕೊಂಡಿದ್ದು ಪಯಣ ಮಜಾವಾಗಿರುತ್ತದೆ ಎಂದು ಗಾಯಕ್ವಾಡ್ ಹೇಳಿದ್ದಾರೆ.

“ಏಷ್ಯನ್ ಗೇಮ್ಸ್ ಪಯಣ ನಿಜಕ್ಕೂ ಆಹ್ಲಾದಕರ ಆಗಿರುತ್ತದೆ ಎಂದು ನಾನು ನಿಸ್ಸಂದೇಹವಾಗಿ ಹೇಳಬಲ್ಲೆ. ತಂಡಕ್ಕೆ ಬಹುತೇಕ ಯುವ ಆಟಗಾರರೇ ಆಯ್ಕೆಯಾಗಿದ್ದು, ಕಳೆದೆರಡು ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಅವರೊಂದಿಗೆ ಗುರುತಿಸಿಕೊಂಡಿದ್ದೇನೆ. ಅಲ್ಲದೆ ಕೆಲವು ಆಟಗಾರರೊಂದಿಗೆ ಭಾರತ ಹಾಗೂ ಭಾರತ ಎ ತಂಡದಲ್ಲೂ ಆಡಿದ ಅನುಭವ ಇದೆ. ಆದ್ದರಿಂದ ನಾನು ಸೇರಿದಂತೆ ಇತರ ಆಟಗಾರರಿಗೆ ಇದೊಂದು ಸುಂದರ ಪಯಣವಾಗಿರುತ್ತದೆ,” ಎಂದು ಋತುರಾಜ್ ಗಾಯಕ್ವಾಡ್ ಹೇಳಿದ್ದಾರೆ.

ಯಶಸ್ವಿ ಜೈಸ್ವಾಲ್ ಗೆ ಚಾನ್ಸ್
ಹದಿನಾರನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರನ್ ಹೊಳೆ ಹರಿಸಿದ್ದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದರ್ಪಣೆ ಮಾಡಿ ಚೊಚ್ಚಲ ಪಂದ್ಯದಲ್ಲೇ ಶತಕ (171 ರನ್) ಸಂಭ್ರಮ ಕಂಡಿದ್ದು, ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಹೊರಟಿದ್ದಾರೆ. ಏಷ್ಯನ್ ಗೇಮ್ಸ್ ಜೈಸ್ವಾಲ್ ಗೆ ಮತ್ತೊಂದು ದೊಡ್ಡ ವೇದಿಕೆಯಾಗಲಿದೆ. ಐಪಿಎಲ್ ತಾರೆಗಳಾದ ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದು, ಉತ್ತಮ ಪ್ರದರ್ಶನ ತೋರುವ ಮೂಲಕ ಟೀಮ್ ಇಂಡಿಯಾದಲ್ಲಿ ಗುರುತಿಸಿಕೊಳ್ಳಲು ಸುವರ್ಣ ಅವಕಾಶ ಪಡೆದಿದ್ದಾರೆ.

2023ರ ಏಷ್ಯನ್‌ ಗೇಮ್ಸ್‌ಗೆ ಭಾರತ ಪುರುಷರ ಟಿ20 ತಂಡ
ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ರಾಹುಲ್ ತ್ರಿಪಾಠಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್‌ಕೀಪರ್‌), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್, ಶಿವಂ ಮಾವಿ, ಶಿವಂ ದುಬೇ, ಪ್ರಭಸಿಮ್ರನ್ ಸಿಂಗ್ (ವಿಕೆಟ್‌ಕೀಪರ್‌).

ಸ್ಟ್ಯಾಂಡ್‌ಬೈ ಆಟಗಾರರು: ಯಶ್ ಠಾಕೂರ್, ಸಾಯ್ ಕಿಶೋರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡ, ಸಾಯ್ ಸುದರ್ಶನ್.

andolanait

Recent Posts

ಪ್ರಧಾನಿ ಮೋದಿ ಸ್ವಾಗತಕ್ಕೆ ಸಜ್ಜಾದ ಆದಿಚುಂಚನಗಿರಿ : ಬಿಗಿ ಪೊಲೀಸ್‌ ಭದ್ರತೆ

ಮಂಡ್ಯ : ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಏಪ್ರಿಲ್ 15) ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಶ್ರೀಕ್ಷೇತ್ರಕ್ಕೆ ಮೊದಲ…

6 hours ago

ಶಾಂತಿ ಒಪ್ಪಂದ ಜೀವಂತ | ಅಮೆರಿಕ-ಇರಾನ್ ಮಾತುಕತೆಗೆ ಸಿದ್ಧತೆ

ವಾಷಿಂಗ್ಟನ್ : ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆದ ಅಮೆರಿಕ-ಇರಾನ್ ಮಾತುಕತೆ ವಿಫಲವಾದ ನಂತರ, ಎರಡು ವಾರಗಳ ಕದನ ವಿರಾಮ ಕೊನೆಗೊಳ್ಳುವ ಮೊದಲು,…

8 hours ago

ಐವರು ಸಾಧಕರಿಗೆ ಅಂಬೇಡ್ಕರ್‌ ಪ್ರಶಸ್ತಿ ; ಪ್ರಶಸ್ತಿ ವಿತರಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಅಸ್ಪೃಶ್ಯತೆ ಆಚರಣೆ, ಅಸಮಾನತೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು, ಸಮ ಸಮಾಜ ನಿರ್ಮಾಣದ ಹಾದಿಯಲ್ಲಿ ಛಾಪು ಮೂಡಿಸಿದ ಐವರು…

9 hours ago

ಹಾರ್ಮುಜ್ ಜಲಸಂಧಿ ದಾಟಿದ ಹಡಗುಗಳು ; ಅಮೆರಿಕದ ದಿಗ್ಬಂಧನಕ್ಕೆ ಇರಾನ್ ಸವಾಲು

ಟೆಹ್ರಾನ್‌ : ಅಮೆರಿಕ ಸರ್ಕಾರ ಹೇರಿದ ನೌಕಾ ದಿಗ್ಬಂಧನ ಎದುರಿಸಿ ಇರಾನ್‌ನ ಹಡಗುಗಳು ಹಾರ್ಮುಜ್ ಜಲಸಂಧಿ ದಾಟುವುದನ್ನು ಮುಂದುವರಿಸಿವೆ. ಕನಿಷ್ಠ…

9 hours ago

ಅಂಬೇಡ್ಕರ್‌ ಚಿಂತನೆಗಳ ಬಗ್ಗೆ ಜಾಗೃತಿ ಮೂಡಿಸಿ : ಶಾಸಕ ತನ್ವೀರ್‌ ಸೇಠ್‌

ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…

10 hours ago

ಚಾ.ನಗರ | ಹೊಸೂರು ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪ್ರಾರ್ಥನೆ

ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…

10 hours ago