ಕ್ರೀಡೆ

ಮತ್ತೆ ಮುಗ್ಗರಿಸಿದ ಪಾಕ್‌, ಜಿಂಬಾಬ್ವೆ ವಿರುದ್ಧವೂ ಸೋಲು

ಪರ್ತ್: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ 1 ರನ್ ನ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಐಸಿಸಿ ಟಿ20 ವಿಶ್ವಕಪ್ ನ ಸೂಪರ್ 12 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಸತತ ಎರಡು ಸೋಲುಗಳನ್ನು ಕಂಡಿದೆ.

ಆಸ್ಟ್ರೇಲಿಯಾದ ಪರ್ತ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ 1 ರನ್ ರೋಚಕ ಗೆಲುವು ಸಾಧಿಸಿದೆ. ಐಸಿಸಿ ಟಿ20 ವಿಶ್ವಕಪ್ ನ ಸೂಪರ್ 12 ಹಂತದ ಪಂದ್ಯದಲ್ಲಿ ಪಾಕಿಸ್ತಾನ ಈಗಾಗಲೇ ಭಾರತ ವಿರುದ್ಧ ಸೋತಿದ್ದು ಸತತ ಎರಡು ಸೋಲುಗಳನ್ನು ಕಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಾಕ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಕಳೆದು ಕೊಂಡು 129 ರನ್ ಅಷ್ಟೇ ಗಳಿಸಲು ಸಾಧ್ಯವಾಯಿತು.
ಟಿ20 ವಿಶ್ವಕಪ್ನಲ್ಲಿ ಜಿಂಬಾಬ್ವೆ ತಂಡವು ಪಾಕ್ ಪಡೆಗೆ ಸೋಲುಣಿಸಿರುವುದು ಇದೇ ಮೊದಲು. ಟಾಸ್ ಗೆದ್ದ ಜಿಂಬಾಬ್ವೆ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಮಧುವರೆ ಹಾಗೂ ನಾಯಕ ಕ್ರೇಗ್ ಇರ್ವಿನ್ ಮೊದಲ ವಿಕೆಟ್ಗೆ 42 ರನ್ಗಳ ಜೊತೆಯಾಟವಾಡಿದರು. ಆದರೆ ಈ ವೇಳೆ ಕ್ರೇಗ್ (19) ಔಟಾದರೆ, ಇದರ ಬೆನ್ನಲ್ಲೇ ಮಧುವರೆ (17) ವಿಕೆಟ್ ಒಪ್ಪಿಸಿದರು.
ಆ ಬಳಿಕ ನಾಟಕೀಯ ಕುಸಿತಕ್ಕೆ ಒಳಗಾಗಿದ್ದ ಜಿಂಬಾಬ್ವೆ ತಂಡಕ್ಕೆ ಸೀನ್ ವಿಲಿಯಮ್ಸ್ ಆಸರೆಯಾದರು. 31 ರನ್ ಬಾರಿಸುವ ಮೂಲಕ ಮಧ್ಯಮ ಕ್ರಮಾಂಕದಲ್ಲಿ ತಂಡವನ್ನು ದಿಢೀರ್ ಕುಸಿತದಿಂದ ಪಾರು ಮಾಡಿದರು. ಆದರೆ ಮತ್ತೊಮ್ಮೆ ಕುಸಿತಕ್ಕೊಳಗಾದ ಜಿಂಬಾಬ್ವೆ ತಂಡವು 100 ರನ್ಗಳ ಒಳಗೆ ಆಲೌಟ್ ಆಗುವ ಭೀತಿ ಎದುರಿಸಿತ್ತು.
ಆದರೆ ಅಂತಿಮ ಹಂತದಲ್ಲಿ ಬ್ರಾಡ್ ಇವನ್ಸ್ 15 ಎಸೆತಗಳಲ್ಲಿ 19 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ನೂರರ ಗಡಿದಾಟಿಸಿದರು. ಅದರಂತೆ ನಿಗದಿತ 20 ಓವರ್ಗಳಲ್ಲಿ ಜಿಂಬಾಬ್ವೆ ತಂಡವು 8 ವಿಕೆಟ್ ನಷ್ಟಕ್ಕೆ 130 ರನ್ ಕಲೆಹಾಕಿತು. ಪಾಕ್ ಪರ ಮೊಹಮ್ಮದ್ ವಾಸಿಂ ಜೂನಿಯರ್ 4 ಓವರ್ಗಳಲ್ಲಿ 24 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು 131 ರನ್ಗಳ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡದ ಆರಂಭಿಕರನ್ನು ಕಾಡುವಲ್ಲಿ ಜಿಂಬಾಬ್ವೆ ವೇಗಿಗಳು ಯಶಸ್ವಿಯಾದರು. ಅದರಂತೆ ಪವರ್ಪ್ಲೇನಲ್ಲಿ ಬಾಬರ್ ಆಜಂ (4) ವಿಕೆಟ್ ಪಡೆಯುವ ಮೂಲಕ ಬ್ರಾಡ್ ಇವನ್ಸ್ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಮೊಹಮ್ಮದ್ ರಿಜ್ವಾನ್ (14) ಕೂಡ ವಿಕೆಟ್ ಒಪ್ಪಿಸಿದರು. ಮೊದಲ 6 ಓವರ್ಗಳಲ್ಲಿ ನೀಡಿದ್ದು ಕೇವಲ 28 ರನ್ಗಳು ಮಾತ್ರ ಬಿಟ್ಟುಕೊಟ್ಟ ಜಿಂಬಾಬ್ವೆ ಬೌಲರ್ ಗಳು ಉತ್ತಮ ಪ್ರದರ್ಶನ ತೋರಿದರು.
ಆ ಬಳಿಕ ಬಂದ ಇಫ್ತಿಕರ್ ಕೇವಲ 5 ರನ್ಗಳಿಗೆ ಇನಿಂಗ್ಸ್ ಅಂತ್ಯಗೊಳಿಸಿದರು. ಈ ಹಂತದಲ್ಲಿ ಜೊತೆಯಾದ ಶಾನ್ ಮಸೂದ್ ಹಾಗೂ ಶಾದಾಬ್ ಖಾನ್ ಉತ್ತಮ ಜೊತೆಯಾಟವಾಡಿದರು. ಆದರೆ ಈ ವೇಳೆ ದಾಳಿಗಿಳಿದ ಸಿಕಂದರ್ ರಾಝ ಶಾದಾಬ್ (17) ವಿಕೆಟ್ ಪಡೆಯುವ ಮೂಲಕ ಮಹತ್ವದ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಹೈದರ್ ಅಲಿಯನ್ನೂ ಕೂಡ ಎಲ್ಬಿ ಬಲೆಗೆ ಬೀಳಿಸಿದ ಸಿಕಂದರ್ ರಾಝ ಜಿಂಬಾಬ್ವೆ ಆಟಗಾರರಿಗೆ ಗೆಲ್ಲುವ ಹುಮ್ಮಸ್ಸು ಮೂಡಿಸಿದರು.
15 ಓವರ್ಗಳಲ್ಲಿ 90 ರ ಗಡಿದಾಟಿದ್ದ ಪಾಕ್ ತಂಡಕ್ಕೆ ಅಲ್ಲಿವರೆಗೂ ಗೆಲ್ಲುವ ವಿಶ್ವಾಸವಿತ್ತು. ಈ ವೇಳೆ ಮತ್ತೆ ದಾಳಿಗಿಳಿದ ಸಿಕಂದರ್ ರಾಝ ಶಾನ್ ಮಸೂದ್ (44) ಅವರ ಮಹತ್ವದ ವಿಕೆಟ್ ಪಡೆದು ಪಂದ್ಯದ ಚಿತ್ರಣ ಬದಲಿಸಿದರು. ಕೊನೆಯ 2 ಓವರ್ಗಳಲ್ಲಿ ಪಾಕಿಸ್ತಾನ್ ತಂಡಕ್ಕೆ 22 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಮೊಹಮ್ಮದ್ ನವಾಜ್ ನಗ್ವಾರ ಎಸೆತದಲ್ಲಿ ಭರ್ಜರಿ ಸಿಕ್ಸ್ ಸಿಡಿಸಿ 19ನೇ ಓವರ್ನಲ್ಲಿ 11 ರನ್ ಕಲೆಹಾಕಿದರು.
ಅಂತಿಮ ಓವರಿನಲ್ಲಿ 11 ರನ್ಗಳ ಅವಶ್ಯಕತೆಯಿತ್ತು. ಬ್ರಾಡ್ ಇವನ್ಸ್ ಎಸೆದ ಈ ಓವರ್ನ ಮೊದಲ ಎಸೆತದಲ್ಲಿ ನವಾಜ್ ಭರ್ಜರಿ ಹೊಡೆತ ಬಾರಿಸಿದರು. ಆದರೆ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಜಿಂಬಾಬ್ವೆ ಫೀಲ್ಡರ್ ಫೋರ್ ತಡೆದರು. ಇದಾಗ್ಯೂ 3 ರನ್ ಓಡಿದರು. 2ನೇ ಎಸೆತದಲ್ಲಿ ವಾಸಿಂ ಫೋರ್ ಬಾರಿಸುವ ಮೂಲಕ ಗೆಲ್ಲುವ ಭರವಸೆ ಹೆಚ್ಚಿಸಿದರು. ಅದರಂತೆ ಕೊನೆಯ 3 ಎಸೆತಗಳಲ್ಲಿ 4 ರನ್ ಬೇಕಿತ್ತು. ಈ ವೇಳೆ ವಾಸಿಂ 1 ರನ್ ಕಲೆಹಾಕಿದರು. ಇನ್ನು 4ನೇ ಎಸೆತದಲ್ಲಿ ನವಾಜ್ ಯಾವುದೇ ರನ್ ತೆಗೆಯಲು ಸಾಧ್ಯವಾಗಲಿಲ್ಲ. 5ನೇ ಎಸೆತದಲ್ಲಿ ಕ್ಯಾಚ್ ನೀಡುವ ಮೂಲಕ ನವಾಜ್ ಹೊರನಡೆದರು.
ಅದರಂತೆ ಅಂತಿಮ ಎಸೆತದಲ್ಲಿ ಪಾಕಿಸ್ತಾನ್ ತಂಡಕ್ಕೆ 3 ರನ್ ಬೇಕಿತ್ತು. ಈ ವೇಳೆ ಬೌಂಡರಿ ಲೈನ್ನತ್ತ ಬಾರಿಸಿದ ಶಾಹೀನ್ ಅಫ್ರಿದಿ 2 ರನ್ ಓಡುವ ಯತ್ನ ಮಾಡಿದರೂ, ವಿಕೆಟ್ ಕೀಪರ್ ಕಡೆಯಿಂದ ರನೌಟ್ ಆದರು. ಅದರಂತೆ ಜಿಂಬಾಬ್ವೆ ತಂಡವು 1 ರನ್ಗಳ ರೋಚಕ ಜಯ ಸಾಧಿಸಿ ಹೊಸ ಇತಿಹಾಸ ಬರೆಯಿತು.
ಜಿಂಬಾಬ್ವೆ ಪರ 4 ಓವರ್ಗಳಲ್ಲಿ ಕೇವಲ 25 ರನ್ ನೀಡಿ ಮಹತ್ವದ 3 ವಿಕೆಟ್ ಕಬಳಿಸಿದ ಸಿಕಂದರ್ ರಾಝ ಗೆಲುವಿನ ರೂವಾರಿಯಾದರು. ಅಲ್ಲದೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಕೂಡ ಅವರಿಗೆ ಒಲಿಯಿತು.

andolanait

Recent Posts

ಮುಡಾ ಡೈವರ್ಟ್‌ ಮಾಡಲು ದರ್ಶನ್‌ ಪೋಟೋ ವೈರಲ್: ಜೋಶಿ ಆರೋಪಕ್ಕೆ ಡಿ.ಕೆ ಶಿವಕುಮಾರ್ ಕೌಂಟರ್‌ ತಿರುಗೇಟು

ಬೆಂಗಳೂರು: ಮುಡಾ ಹಾಗೂ ವಾಲ್ಮೀಕಿ ಹಗರಣವನ್ನು ಮುಚ್ಚುಹಾಕೋಕೆ ಕಾಂಗ್ರೆಸ್‌ ಸರ್ಕಾರ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯದ ಫೋಟೋ ಹರಬಿಟ್ಟಿದ್ದೆ ಎಂಬ ಕೇಂದ್ರ…

7 hours ago

ಐಎಎಸ್‌ ಸೇವೆಯಿಂದಲೇ ಪೂಜಾ ಖೇಡ್ಕರ್‌ ವಜಾ: ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳ ಆರೋಪ ಹೊತ್ತಿದ್ದ ಮಾಜಿ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ಅವರನ್ನು ತಕ್ಷಣದಿಂದಲೇ…

8 hours ago

‘ಕೋಣ’ದ ಕಥೆಯೊಂದಿಗೆ ಬಂದ ಕೋಮಲ್

ಕೋಮಲ್‍ ಈಗಾಗಲೇ ‘ಕಾಲಾಯ ನಮಃ’, ‘ರೋಲೆಕ್ಸ್’, ‘ಎಲಾ ಕುನ್ನಿ’ ಮುಂತಾದ ಚಿತ್ರಗಳಲ್ಲಿ ನಟಿಸುತ್ತಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಗಡೆ ಆಗಬೇಕಿದೆ.…

8 hours ago

ಮೈಸೂರು: ಬೆಳವಾಡಿ ರಾಯಲ್‌ ಬ್ರದರ್ಸ್‌ ವತಿಯಿಂದ 13ಅಡಿ ಗಣಪ ಪ್ರತಿಷ್ಠಾಪನೆ

ಮೈಸೂರು: ನಗರದಲ್ಲಿ ವಿನಾಯಕ ಚೌತಿ ಹಬ್ಬದ ಆಚರಣೆ ಚೋರಾಗಿಯೇ ನಡೆಯುತ್ತಿದೆ. ನಗರದ ಬೆಳವಾಡಿಯ ರಾಯಲ್‌ ಬ್ರದರ್ಸ್‌ ವತಿಯಿಂದ ಸತತ ಎಂಟು…

14 hours ago

ಸೆಟ್ಟೇರಿತು ರಮೇಶ್ ಅರವಿಂದ್, ಗಣೇಶ್ ಹೊಸ ಸಿನಿಮಾ …

ರಮೇಶ್‍ ಅರವಿಂದ್ ಮತ್ತು ಗಣೇಶ್‍ ಒಟ್ಟಿಗೆ ನಟಿಸುತ್ತಾರೆ ಎಂಬುದು ಕಳೆದ ವರ್ಷದ ಸುದ್ದಿ. ‘ಇನ್‍ಸ್ಪೆಕ್ಟರ್‍ ವಿಕ್ರಂ’, ‘ಮಾನ್ಸೂನ್‍ ರಾಗ’, ‘ರಂಗನಾಯಕ’…

14 hours ago

ಮಡಿಕೇರಿ: ಪೊನ್ನಂಪೇಟೆಯಲ್ಲಿ ವೈಭವ ಪೂರಿತ ಗಣೇಶ ಹಬ್ಬ

ಸಂಪೂರ್ಣ ಹೂವಿನಿಂದ ಶೃಂಗಾರಗೊಂಡ ಬಸವೇಶ್ವರ ದೇವಾಲಯ..... ಮಡಿಕೇರಿ: ಪೊನ್ನಂಪೇಟೆಯಲ್ಲಿ ಇಂದು(ಸೆ.7) ಬೆಳಿಗ್ಗೆ ಗಣೇಶನನ್ನು ಪುರದ ಬಸವೇಶ್ವರ ದೇವಸ್ಥಾನಕ್ಕೆ ಗೌರಿ ಕೆರೆಯಿಂದ…

14 hours ago