ಬ್ರೆಝಿಲ್ನ ಖ್ಯಾತ ಫುಟ್ಬಾಲ್ ತಾರೆ ನೇಮರ್ ಜೂನಿಯರ್ ಅಲ್ ಹಿಲಾಲ್ ಕ್ಲಬ್ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಪ್ರಸ್ತುತ ಕ್ಲಬ್ ಪ್ಯಾರಿಸ್ ಸೇಂಟ್-ಜರ್ಮೈನ್ ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಲು ನೇಮರ್ ನಿರ್ಧರಿಸಿದ್ದು, ಇದರ ಬೆನ್ನಲ್ಲೇ ಸ್ಟಾರ್ ಆಟಗಾರನನ್ನು ಟ್ರಾನ್ಸ್ಫರ್ ಮಾಡಲು ಪಿಎಸ್ಜಿ ಮುಂದಾಗಿದೆ. ಅದರಂತೆ ಇದೀಗ ಸೌದಿ ಅರೇಬಿಯಾದ ಖ್ಯಾತ ಕ್ಲಬ್ ಅಲ್ ಹಿಲಾಲ್ ಜೊತೆ ಪಿಎಸ್ಜಿ ವರ್ಗಾವಣೆ ಒಪ್ಪಂದ ಮಾಡಿಕೊಂಡಿದೆ ಎಂದು ವರದಿಯಾಗಿದೆ.
2017 ರಲ್ಲಿ ಸ್ಪೇನ್ನ ಖ್ಯಾತ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ ನೇಮರ್ ಜೂನಿಯರ್ ಅವರನ್ನು ಸಾರ್ವಕಾಲಿಕ ದಾಖಲೆಯ ಮೊತ್ತಕ್ಕೆ ಪ್ಯಾರಿಸ್ ಸೇಂಟ್-ಜರ್ಮೈನ್ ತಂಡಕ್ಕೆ ವರ್ಗಾವಣೆ ಮಾಡಿಕೊಂಡಿತ್ತು. ಅದರಂತೆ 6 ವರ್ಷಗಳ ಕಾಲ ಪಿಎಸ್ಜಿ ಪರ ಕಣಕ್ಕಿಳಿದಿದ್ದ ನೇಮರ್ 173 ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿದ್ದರು.
ಇದೀಗ ಆರು ವರ್ಷಗಳ ಬಳಿಕ ಯುರೋಪ್ ಫುಟ್ಬಾಲ್ ಅಂಗಳವನ್ನು ತೊರೆಯಲು ನೇಮರ್ ನಿರ್ಧರಿಸಿದ್ದಾರೆ. ಈ ನಿರ್ಧಾರದ ಬೆನ್ನಲ್ಲೇ ಸೌದಿ ಅರೇಬಿಯಾ ಕ್ಲಬ್ ಬ್ರೆಝಿಲ್ ಸೂಪರ್ ಸ್ಟಾರ್ನನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಅಲ್ ಹಿಲಾಲ್ ಕ್ಲಬ್ ಹಾಗೂ ನೇಮರ್ ಜೊತೆಗಿನ ಒಪ್ಪಂದ ಮೊತ್ತ ಇನ್ನೂ ಬಹಿರಂಗಪಡಿಸಲಾಗಿಲ್ಲ. ಇದಾಗ್ಯೂ ಫ್ರಾನ್ಸ್ನ ಪ್ರಮುಖ ಕ್ರೀಡಾ ಪತ್ರಿಕೆ L’Equipe , ಅಲ್ ಹಿಲಾಲ್ ನೇಮರ್ಗೆ ಒಟ್ಟು 160 ಮಿಲಿಯನ್ ಯುರೋಗಳನ್ನು ಪಾತಿಸಲಿದೆ ಎಂದು ವರದಿ ಮಾಡಿದೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 1450 ಕೋಟಿ ರೂ.
ಕಳೆದ ಆರು ವರ್ಷಗಳಿಂದ ಫ್ರಾನ್ಸ್ನ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್ ಪರ ಆಡುತ್ತಿರುವ ನೇಮರ್ ಜೂನಿಯರ್ ವಾರ್ಷಿಕವಾಗಿ 71 ಮಿಲಿಯನ್ ಯೂರೋ ವೇತನ ಪಡೆಯುತ್ತಿದ್ದಾರೆ. ಅಂದರೆ ಭಾರತೀಯ ರೂಪಾಯಿ ಮೌಲ್ಯ ಸುಮಾರು 643 ಕೋಟಿ ರೂ. ಇದೀಗ ಇದಕ್ಕಿಂತಲೂ ಹೆಚ್ಚಿನ ಮೊತ್ತವನ್ನು ಪಾವತಿಸಲು ಅಲ್ ಹಿಲಾಲ್ ಕ್ಲಬ್ ಮುಂದಾಗಿದೆ.
ಸೌದಿ ಪ್ರೊ ಲೀಗ್ನಲ್ಲಿ ಅಲ್ ನಾಸ್ರ್ ಪರ ಆಡುತ್ತಿರುವ ಕ್ರಿಸ್ಟಿಯಾನೊ ರೊನಾಲ್ಡೊ ವಾರ್ಷಿಕ ವೇತನವಾಗಿ 1,770 ಕೋಟಿ ರೂ. ಪಡೆಯುತ್ತಿದ್ದಾರೆ. ಇತ್ತ ರೊನಾಲ್ಡೊ ಬೆನ್ನಲ್ಲೇ ಸ್ಯಾಡಿಯೊ ಮಾನೆ, ಕರೀಮ್ ಬೆನ್ಝೆಮಾ ಸೇರಿದಂತೆ ಯುರೋಪ್ ಲೀಗ್ನಲ್ಲಿ ಮಿಂಚಿದ್ದ ಸ್ಟಾರ್ ಆಟಗಾರರು ಸೌದಿ ಅರೇಬಿಯಾ ಕ್ಲಬ್ನತ್ತ ಮುಖ ಮಾಡಿದ್ದರು.
ಇದೀಗ ನೇಮರ್ ಜೂನಿಯರ್ ಕೂಡ ಸೌದಿ ಕ್ಲಬ್ ಪರ ಕಣಕ್ಕಿಳಿಯಲು ಮುಂದಾಗಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ಸೌದಿ ಪ್ರೊ ಲೀಗ್ ಫುಟ್ಬಾಲ್ ಅಂಗಳದ ಹೊಸ ರಣರಂಗವಾಗಿ ಮಾರ್ಪಟ್ಟರೂ ಅಚ್ಚರಿಪಡಬೇಕಿಲ್ಲ.
ಬೆಂಗಳೂರು: ಕೋಗಿಲು ಲೇಔಟ್ನಲ್ಲಿ ಅಕ್ರಮ ಶೆಡ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ಕೊಡುವ ಕುರಿತು ಗೃಹ ಸಚಿವ…
ಡಾಕಾ: ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಇಂದು ಬೆಳಿಗ್ಗೆ ಡಾಕಾದ ಎವರ್ಕೇರ್…
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀವೆಂಟಕರಮಣಸ್ವಾಮಿ ದೇವಾಲಯವು ಇಂದು…
ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ರಾಜ್ಯದ ವಿವಿಧೆಡೆ ಸಾರ್ವಜನಿಕರು ಅಸ್ವಸ್ಥರಾಗುವ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ…
ಬೆಳಗಾವಿ: ನಿಯಮಗಳನ್ನು ಗಾಳಿಗೆ ತೂರಿ ಕೇರಳದ ಅಕ್ರಮ ವಲಸಿಗರಿಗೆ ಮನೆ ಕಲ್ಪಿಸಿಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಸಿಎಂ ಕುರ್ಚಿ ಉಳಿಸಿಕೊಳ್ಳಲು…
ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ಈ ಬಾರಿ ವಾಸ್ತವ್ಯದ…