ಬಡ, ಮಧ್ಯಮ ವರ್ಗದವರಿಗೆ ವಿಶೇಷ ಶಕ್ತಿ ತುಂಬಿದ ಸಿದ್ದರಾಮಯ್ಯ
ಆರ್. ಟಿ. ವಿಠ್ಠಲಮೂರ್ತಿ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದ ೨೦೨೫-೨೦೨೬ನೇ ಸಾಲಿನ ಆಯವ್ಯಯ, ಸಾಮಾಜಿಕ ನ್ಯಾಯಕ್ಕೆ ಹಿಂದೆಂದಿಗಿಂತ ಹೆಚ್ಚು ಒತ್ತು ನೀಡಿ ಇತಿಹಾಸ ಸೃಷ್ಟಿಸಿದೆ.
ಪಂಚ ಗ್ಯಾರಂಟಿಗಳ ಮೂಲಕ ತಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಿದೆ ಎಂಬುದನ್ನು ಈಗಾಗಲೇ ಸಾಬೀತು ಪಡಿಸಿರುವ ಸಿದ್ದರಾಮಯ್ಯ ಅವರು, ಈ ಬಾರಿ ಮತ್ತೊಮ್ಮೆ ಸಮಾಜದ ಎಲ್ಲ ಸ್ತರಗಳ ಬಡ-ಮಧ್ಯಮ ವರ್ಗದವರಿಗೂ ಶಕ್ತಿ ತುಂಬುವ ಪ್ರಯತ್ನ ಮಾಡಿದ್ದಾರೆ.
ಅವರ ಈ ಪ್ರಯತ್ನ ಸಮಾಜದ ಕೆಳಸ್ತರದಲ್ಲಿ ಹಣ ಸಂಚರಿಸುವ ವಿಶಿಷ್ಟ ಶಕ್ತಿಯನ್ನು ಹೊಂದಿದ್ದು, ಆ ಮೂಲಕ ಸಮಾಜದ ಎಲ್ಲರೂ ಮುಖ್ಯವಾಹಿನಿಗೆ ಬರುವಂತಾಗಬೇಕು ಎಂಬ ಆಶಯವನ್ನು ಸಾಬೀತುಪಡಿಸಿದೆ.
ಅಂಗನವಾಡಿ ನೌಕರರು ಸೇರಿದಂತೆ ಸರ್ಕಾರದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಎಲ್ಲರ ವೇತನವನ್ನು ಹೆಚ್ಚಳ ಮಾಡುವ ಕ್ರಮ ಸಹಜವಾಗಿಯೇ ದುಬಾರಿ ಬದುಕಿನ ಓಟದಲ್ಲಿ ದಣಿದವರಿಗೆ ಶಕ್ತಿ ತುಂಬುವ ಪ್ರಯತ್ನ ಎನ್ನಲೇಬೇಕು. ದಶಕಗಳ ಹಿಂದೆ ಪ್ರಚಲಿತವಾದ ರೋಟಿ, ಕಪಡಾ ಔರ್ ಮಕಾನ್ ಎಂಬ ಘೋಷವಾಕ್ಯಕ್ಕೆ ಬಜೆಟ್ ಹೇಗೆ ಬಲ ತುಂಬಿದೆ ಎಂದರೆ, ಸಮಾಜದ ಯಾರೂ ಹಸಿವಿನಿಂದ ನರಳಬಾರದು, ಅಸಹಾಯಕರಾಗಬಾರದು ಎಂಬ ಧೋರಣೆಯನ್ನು ಸುಸ್ಪಷ್ಟಗೊಳಿಸಿದೆ.
ಅಹಿಂದ ವರ್ಗಗಳಿಗೆ ಸೇರಿದ ವಿವಿಧ ನಿಗಮ-ಮಂಡಳಿಗಳಿಗೆ ಶಕ್ತಿ ತುಂಬುವ ಬಜೆಟ್ ಕ್ರಮ ಸಹಜವಾಗಿಯೇ ಈ ವರ್ಗ ಗಳಿಗೆ ಚೈತನ್ಯ ನೀಡುವ ಉದ್ದೇಶವನ್ನು ಹೊಂದಿದೆಯಷ್ಟೇ ಅಲ್ಲ, ಮತ್ತದನ್ನು ಪರಿಣಾಮಕಾರಿಗೊಳಿಸುವ ಸಾಧ್ಯತೆಯನ್ನು ಸ್ಪಷ್ಟಗೊಳಿಸಿದೆ. ಜಗತ್ತಿನ ಖ್ಯಾತ ಅರ್ಥಶಾಸ್ತ್ರಜ್ಞರ ಪ್ರಕಾರ, ವ್ಯವಸ್ಥೆಯ ಬಡ-ಮಧ್ಯಮ ವರ್ಗದವರ ಕೈಯಲ್ಲಿ ದುಡ್ಡು ಹರಿದಾಡತೊಡಗಿತು ಎಂದರೆ ಸಹಜವಾಗಿಯೇ ಅದುಔದ್ಯಮಿಕ ವಲಯಕ್ಕೂ ಪುಷ್ಟಿ ನೀಡುವ ಮೂಲಕ ಒಟ್ಟಾರೆ ವ್ಯವಸ್ಥೆಗೆ ಬಲ ತುಂಬುತ್ತದೆ.
ಸಾಮಾಜಿಕ ನ್ಯಾಯದ ಪರಿಕಲ್ಪನೆ ಇರುವ ಆಡಳಿತಗಾರರು ಮುಖ್ಯವಾಗಿ ಗಮನಿಸಬೇಕಿರುವ ಈ ಅಂಶವನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ವಿಶೇಷವಾಗಿ ಪರಿಗಣಿಸಿರು ವುದು ವಿಶೇಷ. ರೈತರು, ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಸೇರಿದಂತೆ ಎಲ್ಲ ವರ್ಗಗಳು ಸಿದ್ದರಾಮಯ್ಯ ಅವರ ಬಜೆಟ್ನ ಫಲಾನುಭವಿಗಳೇ ಎಂಬುದು ಗಮನಾರ್ಹ. ಅಂದ ಹಾಗೆ ಸಾಮಾಜಿಕ ನ್ಯಾಯಕ್ಕೆ ವಿಶೇಷ ಒತ್ತು ನೀಡಿದ ತಮ್ಮ ಬಜೆಟ್ ಗಾತ್ರವನ್ನು ಸರಿದೂಗಿಸಲು ಸಿದ್ದರಾಮಯ್ಯ ಅವರು ೧. ೧೬ ಲಕ್ಷ ಕೋಟಿ ರೂಪಾಯಿ ಸಾಲ ಮಾಡಲು ನಿರ್ಧರಿಸಿದ್ದಾರಾದರೂ, ಈ ಸಾಲ ಕೂಡ ವಿತ್ತೀಯ ಶಿಸ್ತಿನ ನಿಯಮಕ್ಕೆ ಒಳಪಟ್ಟಿರುವುದು ನಿಜ.
ರಾಜ್ಯದಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಹೆಚ್ಚಿಸುವುದು, ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡುವುದು, ಆ ಮೂಲಕ ಆಯಾ ಭಾಗಗಳಲ್ಲಿ ಆರ್ಥಿಕ ಚಟುವಟಿಕೆಯನ್ನು ಹೆಚ್ಚಳ ಮಾಡುವ ಕ್ರಮವೂ ಕೂಡ ಸಾಮಾಜಿಕ ನ್ಯಾಯದ ಪರಿಧಿಗೇ ಬರುವಂತಹದ್ದು. ಹಿಂದುಳಿದ ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಳವಾದರೆ ಯಥಾ ಪ್ರಕಾರ ಅಲ್ಲೂ ಹಣಕಾಸಿನ ಹರಿವು ಆರಂಭವಾಗಿ, ಬೇರೆ ಬೇರೆ ಮಟ್ಟದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಪುಷ್ಟಿ ಸಿಗುತ್ತದೆ ಎಂಬುದು ಸಿದ್ದರಾಮಯ್ಯನವರ ಯೋಚನೆ.
ಹಾಗಂತ ಅಭಿವೃದ್ಧಿ ಕಾರ್ಯಗಳನ್ನು ಮರೆಯದ ಬಜೆಟ್, ಇಂತಹ ಅಭಿವೃದ್ಧಿಯ ಮೂಲಕವೂ ಸಾಮಾಜಿಕ ನ್ಯಾಯವನ್ನು ಜಾರಿಗೊಳಿಸುವುದು ಹೇಗೆ ಎಂಬುದನ್ನು ಸಾಬೀತುಗೊಳಿಸಿದೆ.
ಈ ಮಧ್ಯೆ ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಶಕ್ತಿ ಸೇರಿದಂತೆ ಸರ್ಕಾರದ ಪಂಚಗ್ಯಾರಂಟಿ ಯೋಜನೆಗಳಿಗೆ ಒಂದು ಮಟ್ಟದಲ್ಲಿ ಕಡಿತ ಮಾಡಬೇಕು ಎನ್ನುವ ಕೂಗು ಇತ್ತಾದರೂ, ಅದನ್ನು ಲೆಕ್ಕಿಸದ ಸಿದ್ದರಾಮಯ್ಯ ಮುಂದಿನ ಸಾಲಿನಲ್ಲಿ ಈ ಪಂಚ ಗ್ಯಾರಂಟಿ ಯೋಜನೆಗಳು ಸಾಂಗೋಪಾಂಗವಾಗಿ ನಡೆಯಲಿ ಎಂಬ ಕಾರಣಕ್ಕಾಗಿ ೫,೧೦೦೦ ಕೋಟಿ ರೂಪಾಯಿಗಳನ್ನು ನೀಡಿ ದ್ದಾರೆ. ಅ ಮೂಲಕ ಪಂಚ ಗ್ಯಾರಂಟಿ ಯೋಜನೆಗಳು ಯಾವ ಕಾರಣಕ್ಕೂ ನಿಲ್ಲುವುದಿಲ್ಲ ಎಂಬ ಸಂದೇಶ ರವಾನಿಸುವಲ್ಲಿ ಸಿದ್ದರಾಮಯ್ಯ ಅವರ ಬಜೆಟ್ ಯಶಸ್ವಿ ಆಗಿದೆ.
ಕಠ್ಮಂಡು: ಮಹಾ ಪ್ರವಾಹಕ್ಕೆ ನೇಪಾಳ ತತ್ತರಿಸಿದೆ. ಪ್ರವಾಹ ಹಾಗೂ ಭೂಕುಸಿತದಿಂದ ನಾಪತ್ತೆಯಾದವರ ಸಂಖ್ಯೆ 6,100ಕ್ಕೆ ಏರಿಕೆಯಾಗಿದೆ. ಇದೀಗ ಹೈಡ್ರೋ ಪವರ್…
ತಿ.ನರಸೀಪುರ ಪಟ್ಟಣದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಇನ್ಸ್ ಪೆಕ್ಟರ್ ಧನಂಜಯ ಅವರು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ…
ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ದಿನಗಣನೆ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಸಕಲ ಸಿದ್ಧತೆಗಳನ್ನೂ ಮಾಡುತ್ತಿದೆ. ದಸರಾ ಆನೆಗಳು ಅರಮನೆ…
ರಾಜ್ಯದ ನಗರ ಪ್ರದೇಶಗಳಲ್ಲಿ ದಿನಂಪ್ರತಿ ಶೇ.೭೦ ಕ್ಕೂ ಹೆಚ್ಚು ಹಸಿ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ತ್ಯಾಜ್ಯವನ್ನು ಸುಮ್ಮನೆ ಸುರಿಯುವ ಬದಲು…
ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾ ಯೋಜನೆಯಡಿ ಯುಪಿಐ ಪಾವತಿ ವ್ಯವಸ್ಥೆಯು ಭಾರತೀಯರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ಜೇಬಿನಲ್ಲಿ ಹಣವಿಲ್ಲದಿದ್ದರೂ…
ನರೇಂದ್ರ ಮೋದಿ ಅವರು ೨೦೦೧ರಲ್ಲಿ ಮೊದಲ ಬಾರಿಗೆ ಗುಜರಾತ್ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಸತತ ೧೫ ವರ್ಷಗಳು ಅಲ್ಲಿ…