ಬೆಂಗಳೂರು: ಮುಂಬರುವ 2023ರ ವಿಧಾನಸಭೆ ನನ್ನ ಕೊನೆಯ ಚುನಾವಣೆಯಾಗಲಿದೆ. ಮುಂದೆ 2028 ರ ಚುನಾವಣೆಗೆ ನಿಮ್ಮಲ್ಲೇ ಅಭ್ಯರ್ಥಿ ಆಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಚನ್ನಪಟ್ಟಣದಲ್ಲಿ ನಡೆಯುತ್ತಿರುವ ಬಮೂಲ್ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮಲ್ಲೊಬ್ಬ ನಾಯಕ ಹುಟ್ಟಿಕೊಳ್ಳಬೇಕು. ಭಿನ್ನಾಭಿಪ್ರಾಯ ಮರೆತು ಎಲ್ಲರೂ ಒಗ್ಗಟ್ಟಾಗಿರಿ. 2028ಕ್ಕೆ ಓರ್ವ ಅಭ್ಯರ್ಥಿಯನ್ನ ರೆಡಿ ಮಾಡಿ. ರಾಮನಗರದಲ್ಲೂ ಒಬ್ಬನನ್ನು ಬೆಳೆಸಿದ್ದೆ, ಆದರೆ, ಅವರು ಚೂರಿ ಹಾಕಿದ್ರು ಎಂದು ಬೇಸರ ವ್ಯಕ್ತಪಡಿಸಿದರು. ಮಂಡ್ಯದ ಕಾರ್ಯಕರ್ತರು ಕೆ.ಆರ್.ಪೇಟೆಯಲ್ಲಿ ಬಂದು ನಿಲ್ಲಿ, ಚನ್ನಪಟ್ಟಣದಲ್ಲಿ ನಿಮ್ಮನ್ನು ಸೋಲಿಸಲು ಮಸಲತ್ತು ಮಾಡ್ತಿದ್ದಾರೆ ಅಂದರು. ಆದರೆ ನಾನು ಹೆದರಲ್ಲ. ಈ ಕ್ಷೇತ್ರದ ಜನರು ಯಾವತ್ತೂ ನನ್ನನ್ನು ಕೈಬಿಟ್ಟಿಲ್ಲ. ನಾನು ಬೇರೆಯವರ ತರ ಕ್ಷೇತ್ರ ಬದಲಾಯಿಸೋಕೆ ಟೂರಿಂಗ್ ಟಾಕೀಸ್ ಅಲ್ಲ. ಚನ್ನಪಟ್ಟಣ ಬಿಟ್ಟು ನಾನು ಎಲ್ಲೂ ಹೋಗೋ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ಚುನಾವಣೆಯಲ್ಲಿ ನೀವೆಲ್ಲಾ ಬಂದು ಗಲಾಟೆ ಮಾಡಿದ್ದೀರಿ. ನಾನು ಸ್ಥಳೀಯರನ್ನ ನಿಲ್ಲಿಸಿ ಅಂದೆ. ಆದರೆ ನೀವೆಲ್ಲ ಹಠ ಹಿಡಿದು ಎರಡೂ ಕ್ಷೇತ್ರದಲ್ಲಿ ನಿಲ್ಲುವ ಹಾಗೆ ಮಾಡಿದ್ರಿ. ಬಹುಶಃ ಯಾವುದೇ ರಾಜಕಾರಣಿ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ನಿಲ್ಲುವ ಎದೆಗಾರಿಕೆ ಮಾಡಲಿಲ್ಲ. ಆ ಧೈರ್ಯ ಮಾಡಿದ್ದು ನೀವು. ರಾಮನಗರ ಕ್ಷೇತ್ರದ ಜನ ನಾನಿಲ್ಲದಿದ್ದರೂ ಗೆಲ್ಲಿಸಿಕೊಂಡು ಬರ್ತಾರೆ. ನನ್ನನ್ನು ಬೆಳೆಸಿದ್ದೇ ರಾಮನಗರ ಜಿಲ್ಲೆಯ ಜನ. ನಾನು ಹಾಸನ ಜಿಲ್ಲೆಯಲ್ಲಿ ಹುಟ್ಟಿರಬಹುದು. ಆದರೆ ರಾಜಕೀಯವಾಗಿ ಜನ್ಮ ಕೊಟ್ಟಿದ್ದು ರಾಮನಗರ. ನನ್ನ ಬಗ್ಗೆ ಅಪಪ್ರಚಾರ ಮಾಡಲಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಲ್ಲೊಬ್ಬ ಮಹಾನುಭಾವ ಸುಳ್ಳು ಹೇಳಿಕೊಂಡು ತಿರುಗ್ತಿದ್ದಾನೆ. ಪಾಪ ಈಗೇನೋ ಸಿಎಂ ಆಗ್ತಾನಂತೆ. ಚನ್ನಪಟ್ಟಣದ ಹಳ್ಳಿ ಹಳ್ಳಿಗಳಲ್ಲಿ ನಾನು ಮುಖ್ಯಮಂತ್ರಿ ಆಗ್ತಿನಿ ಅಂತ ಹೇಳ್ಕೊಂಡು ಓಡಾಡುತ್ತಿದ್ದಾನೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದ ಖಾಸಗಿ ಬಸ್ ನಿಲ್ದಾಣದ ಕಾಮಗಾರಿ ಸ್ಥಗಿತವಾಗಿರುವುದೇ ಯೋಗೇಶ್ವರ್ ಕೊಡುಗೆ. ಅದು ಅವನ ಕರ್ಮದ ಫಲದಿಂದ ಇವತ್ತೂ ಆಗಿಯೇ ಇದೆ. ಇನ್ನೂ ಆರು ತಿಂಗಳು ನನ್ನ ಸರ್ಕಾರ ಇದ್ದಿದ್ದರೆ ಅದು ಕ್ಲಿಯರ್ ಆಗ್ತಿತ್ತು. ನನ್ನ ಸರ್ಕಾರ ತೆಗೆದು ಅದಕ್ಕೆ ಅಡ್ಡಗಾಲು ಹಾಕಿದ್ದೆ ಅವನು ಎಂದು ಕುಮಾರಸ್ವಾಮಿ ಕಿಡಿಕಾರಿದರು. ರಾಷ್ಟ್ರೀಯ ಪಕ್ಷಗಳು ಬಡವರ ರಕ್ತ ಹೀರುವ ಕೆಲಸ ಮಾಡ್ತಿವೆ. ಈಗ ಎರಡು ವಿಚಾರ ನಡೆಯುತ್ತಿದೆ. ಬಿಜೆಪಿಯವ್ರದ್ದು ಶೇ.40% ಅಂತೆ, ಕಾಂಗ್ರೆಸ್ ಅವ್ರದ್ದು ರಿಡೂ ಅಂತೆ ಎಂದರು.
ಜಯಮುತ್ತು ಸಹಕಾರ ಸಂಘದ ಕಾರ್ಯಕ್ರಮ:
ಇದು ಬೆಂಗಳೂರು ಹಾಲು ಒಕ್ಕೂಟ ಸಹಕಾರ ಸಂಘದ ಕಾರ್ಯಕ್ರಮ ಅಲ್ಲ. ಇದು ಜಯಮುತ್ತು ಸಹಕಾರ ಸಂಘದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಅನುಮತಿ ಕೊಡಲು ಬಮೂಲ್ ನಿರಾಕರಿಸಿದೆ. ಎಲ್ಲಾ ಅಧಿಕಾರಿಗಳು ಯಾವ ರೀತಿ ನಡೆದುಕೊಂಡಿದ್ದಾರೆ ಅನ್ನೊದು ಗೊತ್ತಿದೆ. ಕೇವಲ ಇನ್ನೆರಡು ತಿಂಗಳು ಇದೆ ಅಷ್ಟೇ. ಚನ್ನಪಟ್ಟಣ ತಾಲೂಕಿನ ಹಾಲು ಉತ್ಪಾದಕರ ಸಂಘದ ಎಆರ್, ಡಿಆರ್ ಗಳ ಆಟ ನೋಡಿದ್ದೇನೆ. ಪ್ರತಿನಿತ್ಯ ಲೂಟಿ ಮಾಡುತ್ತಿರುವವ ಬಗ್ಗೆ ಮಾಹಿತಿ ಇದೆ ಎಂದು ಹರಿಹಾಯ್ದರು.
ಅಧಿಕಾರಿಗಳ ಕಳ್ಳಾಟ 2 ತಿಂಗಳು ಅಷ್ಟೇ: ಸಹಕಾರ ಕ್ಷೇತ್ರದಲ್ಲಿ ಕಾನೂನೇ ಇಲ್ಲದಂತಾಗಿದೆ. ಸಹಕಾರಿ ಕ್ಷೇತ್ರದ ಅಧಿಕಾರಿಗಳ ಈ ಕಳ್ಳಾಟ 2 ತಿಂಗಳು ಅಷ್ಟೇ. ದೈವ ಕೃಷೆಯಿಂದ ಹಿಂದೆ ಸಿಎಂ ಆಗಿದ್ದೆ. ನಾನು ಯಾರಿಗೂ ಕಿರುಕುಳ ನೀಡುವ ಕೆಲಸ ಮಾಡಿಲ್ಲ. ಎಲವನ್ನೂ ಗಮನಿಸುತ್ತಿದ್ದೇನೆ. ನಾನು ಜನತೆಗೆ ಗೌರವಕೊಟ್ಟು ಬದುಕಿದ್ದೇನೆ. ನಾನು ಹೆದರುವುದು ಜನತೆಗೆ ಮಾತ್ರ. ಅಧಿಕಾದಲ್ಲಿದ್ದಾಗ ಎಂದೂ ನಾನು ದರ್ಪ ತೋರಿಲ್ಲ. ಕಾನೂನು ಬಾಹಿರ ಚಟುವಟಿಕೆಯನ್ನ ನಾವು ಮಾಡಿಲ್ಲ ಎಂದು ಹೇಳಿದರು.