ಪಂಜು ಗಂಗೊಳ್ಳಿ

ಬಾಲ್ಯವಿವಾಹ ತಡೆಯುವ ತತ್ವಶೀಲ್‌ ಕಾಂಬ್ಳೆ-ಅಶೋಕ್‌ ತಾಂಗ್ಡೆ ಜೋಡಿ

ಪಂಚು ಗಂಗೊಳ್ಳಿ

ಪ್ರತಿವರ್ಷ ಅಕ್ಟೋಬರ್ ತಿಂಗಳು ಬಂತೆಂದರೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸಾವಿರಾರು ಜನ ರೈತರು ಸಕ್ಕರೆ ಕಾರ್ಖಾನೆಗಳಿಗಾಗಿ ಕಬ್ಬು ಕತ್ತರಿಸುವ ಕೆಲಸಕ್ಕಾಗಿ ಮಹಾರಾಷ್ಟ್ರದ ಪಶ್ಚಿಮ ಜಿಲ್ಲೆಗಳು ಮತ್ತು ಕರ್ನಾಟಕಕ್ಕೆ ವಲಸೆ ಹೋಗುತ್ತಾರೆ. ಬೀಡ್ ಜಿಲ್ಲೆ ಬರಗಾಲದಿಂದ ನರಳುವ ಪ್ರದೇಶವಾದುದರಿಂದ ಬಡತನ ಇಲ್ಲಿ ಸಾರ್ವತ್ರಿಕವಾಗಿದೆ. ಕುಟುಂಬಗಳ ಹಿರಿಯ ಪುರುಷರು ಹಾಗೂ ಮಹಿಳೆಯರು ಹೀಗೆ ಕಬ್ಬು ಕತ್ತರಿಸುವ ಕೆಲಸಕ್ಕೆ ತಿಂಗಳುಗಳ ಕಾಲ ದೂರದೂರುಗಳಿಗೆ ಹೋಗುವಾಗ ಮನೆಯಲ್ಲಿ ಚಿಕ್ಕ ಹೆಣ್ಣು ಮಕ್ಕಳಿದ್ದರೆ ಅವರಿಗೆ ಸಂದಿಗ್ಧ ಪರಿಸ್ಥಿತಿ ಎದುರಾಗುತ್ತದೆ. ರಕ್ಷಣೆಯ ಕಾರಣ ಆ ಹೆಣ್ಣು ಮಕ್ಕಳನ್ನು ಮನೆಯಲ್ಲಿ ಒಂಟಿಯಾಗಿ ಬಿಟ್ಟು ಹೋಗುವಂತಿಲ್ಲ. ಹಾಗೆಯೇ, ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವಂತೆಯೂ ಇಲ್ಲ. ಏಕೆಂದರೆ, ಹಾಗೆ ಜೊತೆಯಲ್ಲಿ ಕರೆದುಕೊಂಡು ಹೋದರೆ ಅವರ ಕೆಲಸಕ್ಕೆ ತೊಂದರೆಯಾಗುತ್ತದೆ. ಆ ಪರಿಸ್ಥಿತಿಯಿಂದ ಪಾರಾಗಲು ಅವರು ಕಂಡುಕೊಂಡ ದಾರಿಯೆಂದರೆ ತಮ್ಮ ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡಿ ಬೇರೆ ಮನೆಗಳಿಗೆ ಕಳಿಸಿ ಕೊಡುವುದು!

ಬೀಡ್ ಇಡೀ ಮಹಾರಾಷ್ಟ್ರದಲ್ಲಿ ಅತ್ಯಂತ ಹೆಚ್ಚು ಬಾಲ್ಯ ವಿವಾಹ ನಡೆಯುವ ಜಿಲ್ಲೆ ಎಂಬ ಕುಖ್ಯಾತಿ ಪಡೆದಿದೆ. ಇಲ್ಲಿ ಬಾಲ್ಯ ವಿವಾಹಕ್ಕೆ ಇನ್ನೂ ಒಂದು ಕಾರಣವಿದೆ. ಗಂಡ-ಹೆಂಡತಿ ಇಬ್ಬರೂ ಕಬ್ಬು ಕತ್ತರಿಸುವ ಕೆಲಸಕ್ಕೆ ಹೋದರೆ ಅವರಿಗೆ ಹೆಚ್ಚಿನ ಮಜೂರಿ ಸಿಗುತ್ತದೆ. ಬಾಲ್ಯ ವಿವಾಹ ಮಾಡಿಕೊಂಡ ಗಂಡ ಹೆಂಡತಿಯನ್ನೂ ತನ್ನೊಂದಿಗೆ ಕಬ್ಬು ಕತ್ತರಿಸುವ ಕೆಲಸಕ್ಕೆ ಕರೆದುಕೊಂಡು ಹೋದರೆ ಹೆಚ್ಚಿನ ಸಂಪಾದನೆಯಾಗುತ್ತದೆ. ಇತ್ತ ಬದುಕಿನ ಜಂಜಾಟಗಳು ಬಾಲ್ಯ ವಿವಾಹಕ್ಕೆ ಕಾರಣವಾದರೆ, ಅತ್ತ ಬಾಲ್ಯ ವಿವಾಹಗಳು ಅಪ್ರಾಪ್ತ ಹೆಣ್ಣು ಮಕ್ಕಳ ಬದುಕನ್ನೇ ಅಪಹರಿಸುತ್ತವೆ.

ನಲವತ್ತು ವರ್ಷ ಪ್ರಾಯದ ತತ್ವಶೀಲ್ ಕಾಂಬ್ಳೆ ಒಬ್ಬ ಸಾಮಾಜಿಕ ಕಾರ್ಯಕರ್ತ. ೨೦೦೮ರ ಒಂದು ದಿನ ಅವರು ರಕ್ತದಾನ ಮಾಡುವ ಸಲುವಾಗಿ ಬೀಡ್‌ನ ಸರ್ಕಾರಿ ಆಸ್ಪತ್ರೆಗೆ ಹೋದಾಗ ಅಲ್ಲಿ ಒಂದೆಡೆ ಜನರ ಗುಂಪು ಸೇರಿದ್ದು ಕಾಣಿಸಿತು. ಹತ್ತಿರ ಹೋಗಿ ನೋಡಿದಾಗ ಸುಮಾರು ೧೭ ವರ್ಷ ಪ್ರಾಯದ ಹುಡುಗಿ ಸತ್ತಿರುವುದು ತಿಳಿಯಿತು. ಆಸ್ಪತ್ರೆಯ ವೈದ್ಯರನ್ನು ವಿಚಾರಿಸಿದಾಗ ಅವರು ಹೇಳಿದ ಸಂಗತಿಗಳು ತತ್ವಶೀಲ್‌ರನ್ನು ದಂಗು ಬಡಿಸಿದವು! ಆ ಹುಡುಗಿ ಕಳೆದ ಮೂರು ವರ್ಷಗಳಿಂದ ಗರ್ಭಧಾರಣೆಗೆ ಸಂಬಂಽಸಿದಂತೆ ಹಲವು ಬಾರಿ ಆಸ್ಪತ್ರೆಗೆ ಬಂದಿದ್ದಳು. ಅಂದರೆ, ಅವಳಿಗೆ ಹದಿನಾಲ್ಕು ವರ್ಷ ಪ್ರಾಯದಲ್ಲಿ ಮದುವೆಯಾಗಿತ್ತು. ಅದೇ ವೈದ್ಯರು, ಹೀಗೆ ಆಸ್ಪತ್ರೆಗೆ ಬರುವ ಅಪ್ರಾಪ್ತ ಬಸುರಿಯರಲ್ಲಿ ಆ ಹುಡುಗಿ ಒಬ್ಬಳಷ್ಟೆ ಅಂದಾಗ ತತ್ವಶೀಲ್‌ಗೆ ಪರಿಸ್ಥಿತಿಯ ಗಂಭೀರತೆ ಮನದಟ್ಟಾಯಿತು. ಇಂತಹ ಪ್ರರಣಗಳು ಸಾಮಾನ್ಯವಾಗಿ ‘ಹೆರಿಗೆ ಸಾವು’ ಎಂದು ದಾಖಲಿಸಲ್ಪಡುತ್ತವೆ. ಆದರೆ, ಇಂತಹ ಬಹುತೇಕ ಪ್ರಕರಣಗಳಲ್ಲಿ ಮಹಿಳೆಯ ಸಾವಿಗೆ ನಿಜವಾದ ಕಾರಣ ಬಾಲ್ಯ ವಿವಾಹ ಎಂಬುದು ಮುನ್ನೆಲೆಗೆ ಬರುವುದಿಲ್ಲ. ಬಾಲ್ಯ ವಿವಾಹ ತಡೆಗಟ್ಟಲು ಏನಾದರೂ ಮಾಡಬೇಕೆಂದು ಅಲ್ಲಿಯೇ ನಿಶ್ಚಯಿಸಿದ ತತ್ವಶೀಲ್ ಕಾಂಬ್ಳೆ ಮುಂದೆ, ಅಶೊಕ್ ತಾಂಗ್ಡೆ ಎಂಬವರನ್ನು ಜೊತೆಯಾಗಿರಿಸಿಕೊಂಡು ಕಾರ್ಯಶೀಲರಾದರು.

ಯೂನಿಸೆಫ್‌ನ ಒಂದು ವರದಿಯ ಪ್ರಕಾರ ಪ್ರಪಂಚದ ಪ್ರತಿ ಮೂರು ಬಾಲ್ಯ ವಧುಗಳಲ್ಲಿ ಒಂದು ವಧು ಭಾರತದ್ದು. ಅದೇ ವರದಿಯ ಪ್ರಕಾರ ಭಾರತದಲ್ಲಿರುವ ಒಟ್ಟು ಬಾಲ ವಧುಗಳ ಸಂಖ್ಯೆ ೨೨೩ ಮಿಲಿಯನ್. ಆದರೆ, ತತ್ವಶೀಲ್ ಕಾಂಬ್ಳೆ ಈ ಅಂಕಿಅಂಶವನ್ನು ಒಪ್ಪುವುದಿಲ್ಲ. ಅವರ ಪ್ರಕಾರ ಭಾರತದಲ್ಲಿರುವ ಬಾಲ ವಧುಗಳ ಸಂಖ್ಯೆ ಇದಕ್ಕೂ ಬಹಳ ಹೆಚ್ಚು. ‘ನೇಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆ- ಗರ್ಲ್ ಚೈಲ್ಡ್’ ಪ್ರಕಾರ ಹೆರಿಗೆ ಸಾವು ಸಣ್ಣ ಪ್ರಾಯದ ಹೆಣ್ಣು ಮಕ್ಕಳಲ್ಲಿ ಅಧಿಕ.

೨೦೧೧ರ ಜನಗಣತಿಯ ಅಂಕಿ ಅಂಶಗಳ ಪ್ರಕಾರ ೨೦-೨೪ರ ವಯೋಮಿತಿಯ ಹೆಣ್ಣುಗಳಿಗಿಂತ ೧೦-೧೪ರ ವಯೋಮಿತಿಯ ಹೆಣ್ಣುಗಳಲ್ಲಿ ಹೆರಿಗೆ ಸಾವು ಸಂಭವಿಸುವ ಪ್ರಮಾಣ ಐದು ಪಟ್ಟು ಅಽಕ. ತತ್ವಶೀಲ್ ಕಾಂಬ್ಳೆ ಮತ್ತು ಅಶೋಕ್ ತಾಂಗ್ಡೆ ಮೊದಲ ಕೆಲವು ವರ್ಷ ಜಿಲ್ಲಾಧಿಕಾರಿ, ಪೊಲೀಸ್ ಅಽಕ್ಷಕರು ಮತ್ತು ಗ್ರಾಮ ಸೇವಕರೊಂದಿಗೆ ಕೆಲಸ ಮಾಡಿ ಚಿಕ್ಕ ಪ್ರಾಯದ ಹೆಣ್ಣು ಮಕ್ಕಳನ್ನು ಹೆಚ್ಚು ಪ್ರಾಯದ ವಯಸ್ಕರಿಗೆ ಕೊಟ್ಟು ಮದುವೆ ನಡೆಸುವುದರ ವಿರುದ್ಧ ಜನಜಾಗೃತಿ ಹುಟ್ಟಿಸಲು ಪ್ರಯತ್ನಿಸಿದರು. ಹಾಗೆಯೇ, ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಒಂದು ಕಾರ್ಯವಿಧಾನವನ್ನು ರೂಪಿಸಿದರು.

ಹಿಂದೆ ತತ್ವಶೀಲ್ ಕಾಂಬ್ಳೆ ತನ್ನ ಹಳ್ಳಿಯ ಸ್ನೇಹಿತರನ್ನು ಒಗ್ಗೂಡಿಸಿಕೊಂಡು ರಕ್ತದಾನ ಶಿಬಿರಗಳನ್ನು ನಡೆಸುತ್ತಿದ್ದರು. ರಕ್ತದಾನದ ಬಗ್ಗೆ ತಪ್ಪು ತಿಳಿವಳಿಕೆಯನ್ನು ಹೊಂದಿದ್ದ ಕೆಲವು ಸ್ನೇಹಿತರ ಹೆತ್ತವರು ರಕ್ತದಾನ ಮಾಡುವುದರಿಂದ ತಮ್ಮ ಮಕ್ಕಳು ಶಾರೀರಿಕವಾಗಿ ದುರ್ಬಲಗೊಳ್ಳುತ್ತಾರೆ ಎಂದು ತಿಳಿದು ತತ್ವಶೀಲ್ ರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದರೆ, ನಿಧಾನಕ್ಕೆ ಅವರಿಗೆ ಅರಿವು ಮೂಡಿದ ನಂತರ ತತ್ವಶೀಲ್‌ರ ರಕ್ತದಾನ ಶಿಬಿರಗಳು ಸಾಂಗವಾಗಿ ನಡೆಯತೊಡಗಿದವು. ಆಗ ರಕ್ತದಾನ ಶಿಬಿರಗಳ ಮೂಲಕ ಸಂಪರ್ಕಕ್ಕೆ ಬಂದ ವೈದ್ಯರು, ಸರ್ಕಾರಿ ಅಽಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಗ್ರಾಮೀಣ ಆರೋಗ್ಯ ಕಾರ್ಯಕರ್ತರು ಮೊದಲಾದವರನ್ನು ಸೇರಿಸಿಕೊಂಡು ತತ್ವ ಶೀಲ್ ಕಾಂಬ್ಳೆ ತನ್ನದೇ ಒಂದು ವಿಶಾಲವಾದ ಸಂಪರ್ಕ ಜಾಲವನ್ನು ಕಟ್ಟಿದರು. ಈ ಸಂಪರ್ಕ ಜಾಲದಲ್ಲಿರುವ ಯಾರಿಗಾದರೂ ತಮ್ಮ ಸುತ್ತಮುತ್ತ ಬಾಲ್ಯ ವಿವಾಹ ನಡೆಯುವ ಮಾಹಿತಿ ದೊರೆತರೆ ಅವರು ತತ್ವಶೀಲ್ ಹಾಗೂ ಅಶೋಕ್ ತಾಂಗ್ಡೆಗೆ ತಿಳಿಸುತ್ತಾರೆ. ತತ್ವಶೀಲ್ ಮತ್ತು ಅಶೋಕ್ ಮಾಧ್ಯಮದವರು, ಪೊಲೀಸ್ ಮತ್ತು ಸಂಬಂಽತ ಸರ್ಕಾರಿ ಇಲಾಖೆಯ ಅಽಕಾರಿಗಳನ್ನು ಕರೆದುಕೊಂಡು ತಕ್ಷಣವೇ ಬಾಲ್ಯ ವಿವಾಹ ನಡೆಯುವ ಮನೆಗೆ ಹೋಗುತ್ತಾರೆ. ಬಾಲ್ಯ ವಿವಾಹ ಕಾನೂನು ಬಾಹಿರ ಎಂಬುದನ್ನು ಮೊದಲು ಅವರಿಗೆ ತಿಳಿಸಿ, ಮುಂದೆ ಅದು ಅಪ್ರಾಪ್ತ ಹೆಣ್ಣಿನ ಆರೋಗ್ಯದ ಮೇಲೆ ಏನು ದುಷ್ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಿ ಹೇಳಿ ಆ ಬಾಲ್ಯವಿವಾಹವನ್ನು ನಿಲ್ಲಿಸುತ್ತಾರೆ.

ಆದರೆ, ಬಾಲ್ಯವಿವಾಹವನ್ನು ತಡೆಗಟ್ಟುವುದು ಹೀಗೆ ಹೇಳಿದಷ್ಟು ಸುಲಭದ ಕೆಲಸವಲ್ಲ. ಎಷ್ಟೋ ಬಾರಿ ಹೆಣ್ಣಿನ ಮನೆಯವರು ತತ್ವಶೀಲ್‌ರ ಮಾತಿಗೆ ಒಪ್ಪಿದಂತೆ ಮಾಡಿ, ನಂತರ ಬೇರೊಂದು ಹಳ್ಳಿಯಲ್ಲಿ ಮದುವೆ ನೆರವೇರಿಸುತ್ತಾರೆ. ಒಂದು ಉದಾಹರಣೆಯಲ್ಲಿ, ತತ್ವಶೀಲ್ ಮತ್ತು ಅಶೋಕ್ ಬಾಲ್ಯ ವಿವಾಹ ನಡೆಯುವ ಮಾಹಿತಿ ಪಡೆದು ಆ ಮನೆಗೆ ಹೋದಾಗ ಪ್ರಾರಂಭದಲ್ಲಿ ಮನೆಯವರು ತಮ್ಮ ಮನೆಯಲ್ಲಿ ಬಾಲ್ಯ ವಿವಾಹ ಅಲ್ಲ, ಬೇರಾವುದೋ ಕಾರ್ಯಕ್ರಮ ನಡೆಯುತ್ತಿದೆ ಎಂದು ಹೇಳಿ ತಮ್ಮ ಮನೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿದೆ ಎಂಬ ಸಂಗತಿಯನ್ನೇ ನಿರಾಕರಿಸಿದರು. ನಂತರ ಪೊಲೀಸರು ಸತ್ಯಾಂಶ ಹೊರ ಹಾಕಿಸುವಲ್ಲಿ ಯಶಸ್ವಿಯಾದಾಗ ಹೆಣ್ಣಿನ ತಾಯಿ ತನ್ನ ಮಗಳ ಮದುವೆ ನಡೆಯದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದಳು. ಆಗ ತತ್ವಶೀಲ್ ತಮ್ಮ ಚಾಕಚಕ್ಯತೆಯನ್ನು ಬಳಸಿ ಪರಿಸ್ಥಿತಿಯನ್ನು ಸುಧಾರಿಸಲು ಬಹಳಷ್ಟು ಹೆಣಗಬೇಕಾಯಿತು. ಕೊನೆಗೂ ಅವರು ಆ ಬಾಲ್ಯ ವಿಬಾಹವನ್ನು ನಿಲ್ಲಿಸುವಲ್ಲಿ ಸಫಲರಾದರು.

ಹೀಗೆ, ೨೦೧೧ರಿಂದ ಈವರೆಗೆ ತತ್ವಶೀಲ್ ಕಾಂಬ್ಳೆ ಮತ್ತು ಅಶೋಕ್ ತಾಂಗ್ಡೆ ಕನಿಷ್ಟವೆಂದರೂ ಮೂರು ಸಾವಿರಕ್ಕೂ ಹೆಚ್ಚು ಬಾಲ್ಯ ವಿವಾಹಗಳನ್ನು ತಡೆಗಟ್ಟಿದ್ದಾರೆ. ಎಷ್ಟೋ ಹೆಣ್ಣು ಮಕ್ಕಳನ್ನು ಬಾಲ್ಯ ವಿವಾಹದ ಕುಣಿಕೆಯಿಂದ ಬಿಡಿಸಿ, ಶಾಲೆಗೆ ಸೇರಿಸಿ ಅವರಿಗೆ ಹೊಸ ಬಾಳನ್ನು ಕೊಟ್ಟಿದ್ದಾರೆ. ಲೈಂಗಿಕ ಶೋಷಣೆಗೆ ಒಳಗಾದ ನೂರಾರು ಹೆಣ್ಣು ಮಕ್ಕಳಿಗೆ ಆಶ್ರಯ ಕೊಡಿಸಿದ್ದಾರೆ. ಹಲವು ವರ್ಷಗಳ ಹಿಂದೆ ಅವರು ಒಂದು ಹುಡುಗಿಯನ್ನು ಬಾಲ್ಯ ವಿವಾಹಕ್ಕೊಳಗಾಗುವುದನ್ನು ತಪ್ಪಿಸಿ, ಅವಳನ್ನು ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಕೆಲವು ವರ್ಷಗಳ ನಂತರ ಆ ಹುಡುಗಿಯ ತಂದೆ ತತ್ವಶೀಲ್ ಮತ್ತು ಅಶೋಕ್‌ರ ಬಳಿ ಬಂದು, ತನ್ನ ಮಗಳು ಬಿಎಚ್‌ಎಮ್‌ಎಸ್ ಮಾಡಿ ಈಗ ಡಾಕ್ಟರಾಗಿದ್ದಾಳೆ ಎಂದು ಹೇಳಿ ಅವರಿಗೆ ಪೇಡಾ ತಿನ್ನಿಸಿದ ಪ್ರಸಂಗ ತಮ್ಮ ಪ್ರಯತ್ನಕ್ಕೆ ಸಂದ ಬಹು ದೊಡ್ಡ ಉಡುಗೊರೆ ಎಂದು ಅವರು ಹೇಳುತ್ತಾರೆ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ನಾಲ್ವರು ಯೋಧರು ಹುತಾತ್ಮ ; ನಕ್ಸಲರಿಟ್ಟಿದ್ದ ನೆಲಬಾಂಬ್ ನಿಷ್ಕ್ರಿಯಗೊಳಿಸುವಾಗ ದುರ್ಘಟನೆ

ಛತ್ತೀಸಗಢ : ನಾರಾಯಣಪುರ ಗಡಿ ಪ್ರದೇಶದಲ್ಲಿ ನೆಲಬಾಂಬ್ ತೆಗೆಯುವ ಕಾರ್ಯಾಚರಣೆಯ ಸಮಯದಲ್ಲಿ ಐಇಡಿ ಸ್ಛೋಟಗೊಂಡಿದ್ದು ನಾಲ್ವರು ಡಿಆರ್‌ಜಿ ಯೋಧರು ಹುತಾತ್ಮರಾಗಿದ್ದಾರೆ.…

48 mins ago

ಮಂಡ್ಯ | ನೀರಿನ ಕೊಳದಲ್ಲಿ ಗೃಹಿಣಿಯ ಶವ ಪತ್ತೆ ; ಕೊಲೆ ಶಂಕೆ

ಮಂಡ್ಯ : ತಾಲ್ಲೂಕಿನ ಜವನಹಳ್ಳಿ ಗ್ರಾಮದಲ್ಲಿ ನೀರಿನ ಕೊಳದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಗೃಹಿಣಿಯ ಮೃತ ದೇಹ ಪತ್ತೆಯಾಗಿದ್ದು, ಕೊಲೆ ಶಂಕೆ…

53 mins ago

ಮಂಡ್ಯ ನಗರದಲ್ಲಿ ಮರಗಳ ಸಮೀಕ್ಷೆಗೆ ಅರಣ್ಯ ಸಚಿವರ ಆದೇಶ

ಮದ್ದೂರು : ಜಾಗತಿಕ ತಾಪಮಾನ ಏರಿಕೆಗೆ ವೃಕ್ಷ ಸಂವರ್ಧನೆ, ಸಂರಕ್ಷಣೆಯೇ ಮಾರ್ಗವಾಗಿದ್ದು, ಹಸಿರು ಹೊದಿಕೆ ಹೆಚ್ಚಿಸುವಂತೆ ಮತ್ತು ಮಂಡ್ಯ ನಗರದ…

57 mins ago

ಬಜೆಟ್ ಘೋಷಣೆ ಕಡತದಲ್ಲೇ ಉಳಿಯಬಾರದು ; ಕಾರ್ಯದರ್ಶಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ

ಬೆಂಗಳೂರು : ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳು ಘೋಷಣೆಯಾಗಿಯೇ ಉಳಿಯಬಾರದು. ಅನುಷ್ಠಾನದಲ್ಲಿ ವಿಳಂಬವಾದರೆ ಸಂಬಂಧಪಟ್ಟ ಕಾರ್ಯದರ್ಶಿಗಳೇ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…

2 hours ago

ಟೆಂಪೋ-ಬೈಕ್‌ ಡಿಕ್ಕಿ : ಬೈಕ್‌ ಸವಾರ ಸಾವು ; ಓರ್ವ ಗಂಭೀರ

ಹನೂರು : ಮಲೆ ಮಹದೇಶ್ವರ ಬೆಟ್ಟದಿಂದ ತಮಿಳುನಾಡಿನ ಮೆಟ್ಟೂರಿಗೆ ತೆರಳುತ್ತಿದ್ದ ದ್ವಿಚಕ್ರ ವಾಹನ ಸವಾರನಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ…

2 hours ago

NEET UG Exam | ನಾಳೆ ನೀಟ್ ಪರೀಕ್ಷೆ ; ʼಜೀರೋ ಲೀಕ್‌ʼ ಪಾಲಿಸಿ ಜಾರಿ

ಬೆಂಗಳೂರು : ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ನೀಟ್ ಯುಜಿ ಭಾನುವಾರ…

3 hours ago