ಚೆನ್ನೈ: ಭಾರತೀಯ ಸಂಗೀತ ಲೋಕದ ಹೆಸರಾಂತ ಗಾಯಕಿ ವಾಣಿ ಜಯರಾಂ ಅವರದ್ದು ಸಹಜ ಸಾವಾಗಿದ್ದು, ಯಾವುದೇ ಅನುಮಾನಗಳಿಲ್ಲ ಎಂದು ಮರಣೋತ್ತರ ಪರೀಕ್ಷಾ ವರದಿಯಿಂದ ದೃಢಪಟ್ಟಿದೆ.
ಗಾಯಕಿ ವಾಣಿ ಜಯರಾಂ ಶನಿವಾರ (ಫೆ.4) ಸಾವನ್ನಪ್ಪಿದ್ದರು. ಒಂಟಿಯಾಗಿಯೇ ವಾಸವಿದ್ದ ಗಾಯಕಿಯ ಸಾವಿನ ಬಗ್ಗೆ ಅನುಮಾನಗಳು ಮೂಡಿದ್ದವು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು.
ಗಾಯಕಿ ವಾಣಿ ಜಯರಾಂ ಸಾವಿನ ಬಗ್ಗೆ ಅನುಮಾನ ಮೂಡಲು ಹಲವು ಕಾರಣಗಳಿದ್ದವು.
ವಾಣಿ ಜಯರಾಂ ತಲೆಗೆ ಪೆಟ್ಟಾಗಿತ್ತು. ಅಲ್ಲದೆ ಅವರು ಬಿದ್ದಿದ್ದ ಸ್ಥಳದಲ್ಲಿ ರಕ್ತದ ಕಲೆಗಳು ಬಿದ್ದಿದ್ದವು. ಹೀಗಾಗಿ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು
ಈ ಹಿನ್ನೆಲೆಯಲ್ಲಿ ಗಾಯಕಿ ವಾಣಿ ಜಯರಾಂ ಅವರ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಭಾನುವಾರ ಮರಣೋತ್ತರ ವರದಿ ಬಂದಿದ್ದು, ಇದರಲ್ಲಿ ಗಾಯಕಿ ಸಾವಿನ ಬಗ್ಗೆ ಯಾವುದೇ ರೀತಿಯ ಅನುಮಾನಗಳು ಇಲ್ಲ ಎಂದು ಹೇಳಲಾಗಿದೆ.
ಪೊಲೀಸರಿಗೆ ಅನುಮಾನ
ಇನ್ನೊಂದು ಕಡೆ ಅಕ್ಕ ಪಕ್ಕದ ಮನೆಯ ಸಿಸಿಟಿವಿ ದೃಶ್ಯಾವಳಿಗಳನ್ನೂ ಪೊಲೀಸರು ಪರಿಶೀಲನೆ ಮಾಡಿದ್ದರು. ಅದರಲ್ಲೂ ಕೂಡ ಯಾರೂ ವಾಣಿ ಜಯರಾಂ ಅವರ ಮನೆಗೆ ಹೋಗಿದ್ದಾಗಲಿ ಅಥವಾ ಅವರ ಮನೆಯಿಂದ ಬಂದಿದ್ದಾಗಲಿ ಕಂಡು ಬಂದಿಲ್ಲ. ಹೀಗಾಗಿ ವರದ್ದು ಸಹಜ ಸಾವು ಎಂಬ ತೀರ್ಮಾನಕ್ಕೆ ಪೊಲೀಸ್ ಅಧಿಕಾರಿಗಳು ಬಂದಿದ್ದಾರೆ.
ಸಾವು ಸಂಭವಿಸಿದ್ದು ಹೇಗೆ?
ವಾಣಿ ಜಯರಾಂ ಅವರು ಮಲಗಿದ್ದ ಮಂಚದ ಪಕ್ಕದಲ್ಲಿ ಮರದ ಟೇಬಲ್ ಇತ್ತು. ಈ ಟೇಬಲ್ ಮೇಲೆ ವಾಣಿ ಜಯರಾಂ ಬಿದ್ದಿದ್ದ ಪರಿಣಾಮ ತಲೆಗೆ ಬಲವಾದ ಏಟಾಗಿದೆ. ಕೂಡಲೇ ಅವರಿಗೆ ರಕ್ತಸ್ರಾವವಾಗಿದೆ. ಗಾಯಕಿಯ ಸಾವು ಹೃದಯಾಘಾತದಿಂದ ಆಗಿದ್ದು, ಬೇರೆ ಯಾವುದೇ ಅನುಮಾನವಿಲ್ಲ ಎಂದು ಈ ಸಂಬಂಧ ಎದ್ದಿದ್ದ ಅನುಮಾನಗಳನ್ನು ಪೊಲೀಸರು ಬಗೆಹರಿಸಿದ್ದಾರೆ.