ವಾರಾಣಸಿ: ‘ರಾಹುಲ್ ಗಾಂಧಿ ಅವರ ವಿಮಾನವನ್ನು ಇಳಿಸಲು ವಾರಾಣಸಿ ವಿಮಾನ ನಿಲ್ದಾಣದ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ’ ಎನ್ನುವ ಸುಳ್ಳು ಹೇಳಿಕೆ ನೀಡಿದ ಆರೋಪದ ಮೇರೆಗೆ ಕಾಂಗ್ರೆಸ್ ನಾಯಕ ಅಜಯ್ ರೈ ಅವರ ವಿರುದ್ದ ಇಲ್ಲಿನ ಫುಲ್ಪರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
‘ಕಳೆದ ಮಂಗಳವಾರ ರಾಹುಲ್ ಗಾಂಧಿ ಅವರ ವಿಮಾನ ಆಗಮನದ ಬಗ್ಗೆ ಮಾಹಿತಿ ಇತ್ತು. ಆದರೆ, ನಂತರ ಕಿನ್ನೌರ್ನ ಏರ್ ಟ್ರಾಫಿಕ್ ಕಂಟ್ರೋಲರ್ಗೆ ವಿಮಾನವು ಕೇರಳದ ಕಣ್ಣೂರಿನಿಂದ ನೇರವಾಗಿ ದೆಹಲಿಗೆ ಹೋಗಲಿದೆ ಎಂಬ ಸಂದೇಶವನ್ನು ನೀಡಲಾಗಿತ್ತು’ ಎಂದು ಬಬತ್ಪುರ ವಿಮಾನ ನಿಲ್ದಾಣದ ಕಾರ್ಯನಿರ್ವಾಹಕ ನಿರ್ದೇಶಕ ಅಜಯ್ ಪಾಠಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಹೇಳಿಕೆಯನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಅಂದು ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದ ಅಜಯ್ ರೈ ಅವರು, ‘ವಾರಾಣಸಿ ವಿಮಾನನಿಲ್ದಾಣದ ಅಧಿಕಾರಿಗಳು ಕೊನೆಯ ಕ್ಷಣದಲ್ಲಿ ರಾಹುಲ್ ಅವರ ವಿಮಾನಕ್ಕೆ ಇಳಿಯಲು ಅನುಮತಿ ನಿರಾಕರಿಸಿದರು. ಹಾಗಾಗಿ, ವಿಮಾನವು ದೆಹಲಿಗೆ ತೆರಳಿತು’ ಎಂದು ಹೇಳಿಕೆ ನೀಡಿದ್ದರು.
‘ಬಿಜೆಪಿ ಸರ್ಕಾರದ ಆಡಳಿತದ ಒತ್ತಡದಿಂದ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದೂ ಅವರು ಆರೋಪಿಸಿದ್ದಾರೆ.