ಬೆಂಗಳೂರು : ಇಂಡಿಯಾ ಹೆಸರನ್ನು ಭಾರತ್ ಎಂದು ಮರುನಾಮಕರಣ ಮಾಡುವ ಬಗ್ಗೆ ದೇಶಾದ್ಯಂತ ಭಾರೀ ಚರ್ಚೆ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿಯೂ ನಿನ್ನೆಯಿಂದ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಕೇಂದ್ರ ಸರ್ಕಾರದಲ್ಲಿ ಎನ್ ಡಿಎ ಮೈತ್ರಿಕೂಟವನ್ನು ಎದುರಿಸುತ್ತಿರುವ ಇಂಡಿಯಾ ಮೈತ್ರಿಕೂಟ ಸದಸ್ಯರು ಭಾರತ್ ಹೆಸರು ನಾಮಕರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ನಾಯಕರು ಸಿಎಂ ಸಿದ್ದರಾಮಯ್ಯ ಆದಿಯಾಗಿ ಎಲ್ಲರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದು, ಮೋದಿ ಸರ್ಕಾರ ಕೇವಲ ನೇಮ ಚೇಂಜರ್ಸ್ ಆಗಿದೆ. ಸಮರ್ಥರು ಭಾರತದಲ್ಲಿ ಬದಲಾವಣೆ ತರುತ್ತಾರೆಯೇ ಹೊರತು ಭಾರತದ ಹೆಸರಿನ ಬದಲಾವಣೆಯನ್ನಲ್ಲ ಎಂದು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಗೇಮ್ ಚೇಂಜರ್ಸ್” ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕೇವಲ “ನೇಮ್ ಚೇಂಜರ್ಸ್” ಆಗಿದೆ. 2014ರ ಮೊದಲು ಅಮೇರಿಕಾ, ಬ್ರಿಟನ್, ರಷ್ಯಾಗಳಂತಹ ಮುಂದುವರೆದ ದೇಶಗಳೊಂದಿಗೆ ಭಾರತದ ಸ್ಪರ್ಧೆ ಇತ್ತು. ಈಗ ಗುಜರಾತ್ ಮಾಡೆಲ್, ಯುಪಿ ಮಾಡೆಲ್ ಹೆಸರಲ್ಲಿ ಜಾತಿ ಜನಾಂಗಗಳ ನಡುವೆ ದ್ವೇಷ ಬಿತ್ತಿ “ಮಣಿಪುರ್ ಮಾಡೆಲ್” ಸೃಷ್ಟಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಯಕಶ್ಚಿತ್ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳೊಂದಿಗೆ ಭಾರತವನ್ನು ತುಲನೆ ಮಾಡಿಕೊಂಡು ಬೆನ್ನು ತಟ್ಟಿಕೊಳ್ಳುವ ಪರಿಸ್ಥಿತಿಗೆ ತಂದಿಟ್ಟಿರುವ ಬಿಜೆಪಿಯಿಂದ ಹೆಸರುಗಳ ಬದಲಾವಣೆಗಳನ್ನಲ್ಲದೆ ಬೇರೆ ಇನ್ನೇನು ನಿರೀಕ್ಷಿಸಲು ಸಾಧ್ಯ? ಸಮರ್ಥ ಆಡಳಿತಗಾರರು ಭಾರತದಲ್ಲಿ ಬದಲಾವಣೆ ತರುತ್ತಾರೆಯೇ ಹೊರತು ಭಾರತದ ಹೆಸರಿನ ಬದಲಾವಣೆಯನ್ನಲ್ಲ ಎಂದು ಹೇಳಿದ್ದಾರೆ.
ರಿಪಬ್ಲಿಕ್ ಆಫ್ ಇಂಡಿಯಾ ಎಂಬ ಹೆಸರನ್ನು ರಿಪಬ್ಲಿಕ್ ಆಫ್ ಭಾರತ್ ಎಂದು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ಅದಕ್ಕಾಗಿಯೇ ಸೆಪ್ಟೆಂಬರ್ 18ರಿಂದ ವಿಶೇಷ ಅಧಿವೇಶನ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿ ಇದೇ ವಾರ ನಡೆಯುತ್ತಿರುವ ಜಿ20 ಶೃಂಗಸಭೆಗೆ ರಾಷ್ಟ್ರಪತಿಗಳು ಗಣ್ಯರನ್ನು ಆಹ್ವಾನಿಸಿರುವ ವೇಳೆ ಪ್ರೆಸಿಡೆಂಟ್ ಆಫ್ ಭಾರತ್ ಎಂದು ಆಹ್ವಾನ ಪತ್ರಿಕೆಯಲ್ಲಿ ಉಲ್ಲೇಖಿಸಿರುವುದು ವಿವಾದಕ್ಕೆ ಕಾರಣವಾಗಿದೆ.