ಹೊಸದಿಲ್ಲಿ : ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಕಂಡುಬಂದಿದೆ ಎಂದು ಹೇಳಲಾಗಿರುವ ಶಿವಲಿಂಗದ ರಕ್ಷಣಾ ಮಿತಿಯನ್ನು ಹೆಚ್ಚಿಸುವ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದ್ದು, ಈ ಕುರಿತಾದ ಪ್ರಕರಣ ಹಲವು ಜಿಲ್ಲಾ ಕೋರ್ಟ್ ಹಾಗೂ ಹೈಕೋರ್ಟ್ಗಳಲ್ಲಿ ನಡೆಯುತ್ತಿದೆ. ಇದರಿಂದಾಗಿ ಮೇ.17 ರಂದು ಶಿವಲಿಂಗದ ಪ್ರದೇಶವನ್ನು ರಕ್ಷಣೆ ಮಾಡಿ ಎಂದು ಹೇಳಿರುವ ಆದೇಶ ಮುಂದಿನ ಆದೇಶ ಬರುವವರೆಗೂ ಚಾಲ್ತಿಯಲ್ಲಿರಲಿದೆ ಎಂದು ಹೇಳಿದೆ.
‘ಶಿವಲಿಂಗವನ್ನು ಮುಂದಿನ ಆದೇಶದವರೆಗೂ ಸಂರಕ್ಷಣೆ ಮಾಡಬೇಕು. ಹಲವು ಪ್ರಕರಣಗಳು ಜಿಲ್ಲಾ ನ್ಯಾಯಾಲಯದಲ್ಲಿವೆ. ಹಾಗಾಗಿ ಮುಂದಿನ ಆದೇಶದವರೆಗೂ ಶಿವಲಿಂಗ ಇರುವ ಪ್ರದೇಶವನ್ನು ಸಂರಕ್ಷಣೆ ಮಾಡಬೇಕು’ ಎಂದು ಶುಕ್ರವಾರ ನಡೆದ ಮಹತ್ವದ ವಿಚಾರಣೆಯಲ್ಲಿ ಹೇಳಿದೆ. ಅದೇ ರೀತಿಯ ಅಲಹಾಬಾದ್ ಹೈಕೋರ್ಟ್ನಲ್ಲಿ ಎಎಸ್ಐ ಸರ್ವೇ ಕುರಿತಾದ ವಿಚಾರಣೆಯನ್ನು ಕೋರ್ಟ್ ನ.28ಕ್ಕೆ ಮುಂದೂಡಿದ್ದರೆ, ವಾರಣಾಸಿ ಜಿಲ್ಲಾ ಕೋರ್ಟ್ನಲ್ಲಿ ಜ್ಞಾನವಾಪಿ ಪ್ರಕರಣದ ಎರಡು ಕೇಸ್ಗಳನ್ನು ಡಿಸೆಂಬರ್ 5ಕ್ಕೆ ಮುಂದೂಡಿಕೆ ಮಾಡಲಾಗಿದೆ. ಇದೇ ವೇಳೆ ಪ್ರಕರಣದ ಮೊಕದ್ದಮೆಯನ್ನು ಕ್ರೋಢೀಕರಿಸಲು ವಾರಣಾಸಿ ಜಿಲ್ಲಾ ನ್ಯಾಯಾಧೀಶರ ಮುಂದೆ ಅರ್ಜಿ ಸಲ್ಲಿಸಲು ಹಿಂದೂ ಪಕ್ಷಗಳಿಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಸುಪ್ರೀಂ ಕೋರ್ಟ್ ಮೇ 17 ರಂದು ಶಿವಲಿಂಗವನ್ನು ಸಂರಕ್ಷಣೆ ಮಾಡುವಂತೆ ನೀಡಿದ್ದ ಆದೇಶ ನವೆಂಬರ್ 12 ರಂದು ಅಂತ್ಯವಾಗುವುದರಲ್ಲಿತ್ತು. ಈ ಕುರಿತಾಗಿ ಹಿಂದು ಪರ ಅರ್ಜಿದಾರರು ಕೋರ್ಟ್ಗೆ ಮನವಿ ಮಾಡಿದ್ದರಿಂದ, ಈ ಕುರಿತಾಗಿ ಮುಂದಿನ ಆದೇಶ ಬರುವವರೆಗೂ ಶಿವಲಿಂಗ ಕಂಡುಬಂದಿರುವ ಪ್ರದೇಶವನ್ನು ಸಂರಕ್ಷಣೆ ಮಾಡಬೇಕು ಎಂದು ಹೇಳಿದೆ. ಇದರೊಂದಿಗೆ ಜ್ಞಾನವಾಪಿ ಪ್ರಕರಣ ಇತ್ಯರ್ಥವಾಗುವವರೆಗೂ ಶಿವಲಿಂಗ ಪ್ರದೇಶ ಸಂರಕ್ಷಿತ ಪ್ರದೇಶವಾಗಿ ಇರಲಿದೆ.
ಹಿಂದೂ ಮಹಿಳೆಯರು ಸಲ್ಲಿಸಿದ ಮೊಕದ್ದಮೆಯ ನಿರ್ವಹಣೆಯನ್ನು ಪ್ರಶ್ನಿಸಿ ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ಮನವಿಯನ್ನು ವಾರಣಾಸಿ ಜಿಲ್ಲಾ ನ್ಯಾಯಾಲಯವು ಸೆಪ್ಟೆಂಬರ್ನಲ್ಲಿ ವಜಾ ಮಾಡಿತ್ತು.
ಜ್ಞಾನವಾಪಿ ಮಸೀದಿಯ ಸರ್ವೇಗೆ ಎಎಸ್ಐ ನೇತೃತ್ವದಲ್ಲಿ ಸರ್ವೇ ಕಮೀಷನರ್ ನೇಮಕ ಮಾಡುವ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಸ್ಲಿಂ ಕಡೆಯವರು ಅರ್ಜಿ ಸಲ್ಲಿಸಿದ್ದಾರೆ. ಅವರು ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿ ಅರ್ಜಿ ಸಲ್ಲಿಕೆ ಮಾಡಲು ಮೂರು ವಾರಗಳ ಕಾಲಾವಕಾಶ ನೀಡಲಾಗಿದೆ. ವಾರಣಾಸಿ ಕೋರ್ಟ್ ಎಎಸ್ಐ ಸರ್ವೇಗೆ ಆದೇಶಿಸಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಮಸೀದಿ ಕಮಿಟಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಇದರ ವಿಚಾರಣೆ ಮಾಡಿದ್ದ ಅಲಹಾಬಾದ್ ಕೋರ್ಟ್ ನವೆಂಬರ್ 30ರವರೆಗೆ ಸರ್ವೇಗೆ ತಡೆ ನೀಡಿದೆ. ಇನ್ನೊಂದೆಡೆ ಈ ಪ್ರಕರಣದ ವಿಚಾರಣೆಯನ್ನು ನ.28 ರಂದು ನಡೆಸುವುದಾಗಿ ಅಲಹಾಬಾದ್ ಹೈ ಕೋರ್ಟ್ ಶುಕ್ರವಾರ ನಡೆದ ವಿಚಾರಣೆಯಲ್ಲಿ ತಿಳಿಸಿದೆ.
ಇನ್ನು ಜ್ಞಾನವಾಪಿ ಮಂದಿರದ ಹೊರ ಆವರಣದಲ್ಲಿರುವ ಗೋಡೆಗಳ ಮೇಲೆ ಇರುವ ಹಿಂದು ದೇವತೆಗಳ ನಿತ್ಯ ಪೂಜೆಗಾಗಿ ಎಎಸ್ಐ ಸರ್ವೇಯನ್ನು ಮುಂದುವರಿಸಲು ಹಿಂದು ಕಡೆಯವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಿದ ವಾರಣಾಸಿ ಜಿಲ್ಲಾ ಕೋರ್ಟ್ ಇದರ ವಿಚಾರಣೆಯನ್ನು ಡಿಸೆಂಬ್ 5ಕ್ಕೆ ಮುಂದೂಡಿಕೆ ಮಾಡಿದೆ. ಇನ್ನೊಂದೆಡೆ ಸುಪ್ರೀಂ ಕೋರ್ಟ್ ಜ್ಞಾನವಾಪಿಯ ಕುರಿತಾದ ಎಲ್ಲಾ ಅರ್ಜಿಗಳನ್ನು ಕ್ರೋಢೀಕರಣ ಮಾಡವ ಬಗ್ಗೆಯೂ ಯೋಚನೆ ಮಾಡುವಂತೆ ಹಿಂದು ಪರ ಅರ್ಜಿದಾರರಿಗೆ ತಿಳಿಸಿದ್ದು, ಹಾಗೇನಾದರೂ ಆದಲ್ಲಿ ಒಂದೇ ಕೋರ್ಟ್ನಲ್ಲಿ ಇಡೀ ಪ್ರಕರಣದ ವಿಚಾರಣೆ ನಡೆಯಲಿದೆ.