ಉತ್ತರ ಪ್ರದೇಶ : ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರಕ್ಕೆ ಅಲ್ಲಿನ ಮೊರದಾಬಾದ್ ಮೂಲದ ವೈದ್ಯರೊಬ್ಬರು ತಮ್ಮ ಆಸ್ತಿಯನ್ನೇ ದಾನ ಮಾಡಿದ್ದಾರೆ. ಬಡವರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರ್ಕಾರಕ್ಕೆ ತಮ್ಮ ಹೆಸರಿನಲ್ಲಿದ್ದ ಸಂಪೂರ್ಣ ಆಸ್ತಿಯನ್ನೇ ದಾನ ಮಾಡಿದ್ದಾರೆ ಎಂದು ವರದಿಯಾಗಿದೆ.
ನೂರಾರು ಕೋಟಿ ರೂಪಾಯಿಗಳ ಮೌಲ್ಯದ ಆಸ್ತಿಯನ್ನು ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಅವರು ದಾನ ಮಾಡಿರುವ ಆಸ್ತಿಯ ಮೌಲ್ಯ ಬರೋಬ್ಬರಿ 600 ಕೋಟಿ ರೂ. ಗೆ ಹತ್ತಿರ ಎಂದು ತಿಳಿದುಬಂದಿದೆ. ಮೊರಾದಾಬಾದ್ನ ಅರವಿಂದ್ ಗೋಯಲ್ ಎಂಬ ಈ ವೈದ್ಯರು ಕಳೆದ ಐದು ದಶಕಗಳಿಂದ ಅಂದರೆ ಬರೋಬ್ಬರಿ 50 ವರ್ಷಗಳಿಂದ ವೈದ್ಯ ವೃತ್ತಿಯಲ್ಲಿದ್ದರು ಎಂದೂ ಹೇಳಲಾಗಿದ್ದು, ಸಾಕಷ್ಟು ಖ್ಯಾತಿಯನ್ನೂ ಗಳಿಸಿದ್ದಾರೆ.
ತಮ್ಮ ಸಂಪೂರ್ಣ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡುವ ಅವರ ಈ ನಿರ್ಧಾರ 25 ವರ್ಷಗಳ ಹಿಂದಿನದ್ದಂತೆ. ಅಲ್ಲದೆ, ಈ ಹಿಂದೆಯೂ ಅವರು ಜನರಿಗೆ ಸಾಕಷ್ಟು ಸಹಾಯ ಮಾಡಿದ್ದು, ಪ್ರಖ್ಯಾತರೆನಿಸಿಕೊಂಡಿದ್ದಾರೆ. ಈಗಿನ ರಾಷ್ಟ್ರಪತಿ ಸೇರಿ ಈ ಹಿಂದಿನ ಮೂವರು ರಾಷ್ಟ್ರಪತಿಗಳಿಂದ ಸನ್ಮಾನವನ್ನೂ ಮಾಡಿಸಿಕೊಂಡಿದ್ದಾರೆ ಅರವಿಂದ್ ಗೋಯಲ್.
ಅಲ್ಲದೆ, ಕೋವಿಡ್ -19 ಲಾಕ್ಡೌನ್ ವೇಳೆ ಉತ್ತರ ಪ್ರದೇಶದ ಮೊರಾದಾಬಾದ್ ಬಳಿಯ 50 ಗ್ರಾಮಗಳನ್ನು ದತ್ತು ತೆಗೆದುಕೊಂಡಿದ್ದ ಅರವಿಂದ್ ಗೋಯಲ್ ಜನರಿಗೆ ಉಚಿತ ಸೌಲಭ್ಯಗಳನ್ನು ಒದಗಿಸುತ್ತಿದ್ದರಂತೆ. ಹಾಗೂ, ಯುಪಿಯ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಉಚಿತ ಚಿಕಿತ್ಸೆಯನ್ನೂ ನೀಡಿದ್ದರಂತೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಡಾಕ್ಟರ್ ದಾನ ಮಾಡಿರುವ ತಮ್ಮ ಸಂಪೂರ್ಣ ಆಸ್ತಿಯ ಮೌಲ್ಯ ಬರೋಬ್ಬರಿ 600 ಕೋಟಿ ಎಂದು ಹೇಳಲಾಗಿದೆ. ಆದರೂ, ಐವರು ಸದಸ್ಯರನ್ನು ಒಳಗೊಂಡ ಸಮಿತಿಯೊಂದು ಈ ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಲೆಕ್ಕ ಹಾಕಲಿದೆ ಎಂದೂ ವರದಿಯಾಗಿದೆ. ಈ ಸಮಿತಿಯನ್ನು ಇನ್ನಷ್ಟೇ ರಚಿಸಬೇಕಿದೆ ಎಂದೂ ತಿಳಿದುಬಂದಿದೆ.
ಆದರೂ, ಬಡವರಿಗೆ ನೆರವಾಗಲೆಂದು ಈ ರೀತಿ ಸರ್ಕಾರಕ್ಕೆ ತಮ್ಮ ಸಂಪೂರ್ಣ ಆಸ್ತಿಯನ್ನೇ ದಾನ ಮಾಡಿರುವುದು ನಿಜಕ್ಕೂ ಅಚ್ಚರಿದಾಯಕವಲ್ಲವೇ. ಈ ಹಿಂದೆಯೂ ಸಾಕಷ್ಟು ಬಡವರಿಗೆ ಸಹಾಯ ಮಾಡಿರುವ ಡಾಕ್ಟರ್ ಅರವಿಂದ್ ಗೋಯಲ್ ಈಗ ಸರ್ಕಾರಕ್ಕೆ ಸುಮಾರು 600 ಕೋಟಿ ರೂ. ಮೌಲ್ಯದ ಆಸ್ತಿಯನ್ನು ದಾನವಾಗಿ ನೀಡುತ್ತಿದ್ದಾರೆ. ಈ ಹಿನ್ನೆಲೆ ಅವರ ಈ ಸಮಾಜ ಸೇವಾ ಕಾರ್ಯಕ್ಕೆ ಸಾಕಷ್ಟು ಪ್ರಶಸ್ತಿಗಳೂ ಸಂದಿವೆ.