ಸರ್ಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರಬೇಕು: ಜಿಟಿಡಿ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸರ್ಕಾರಿ, ಖಾಸಗಿ ಶಾಲೆಗಳು ಎನ್ನುವ ತಾರತಮ್ಯ ಇಲ್ಲದೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದ ಜಾಗವನ್ನು ಅಳತೆ ಮಾಡಿಸಿ ಖಾತೆ ಮಾಡಿಸಿಕೊಂಡು ಹದ್ದುಬಸ್ತಿನಲ್ಲಿಡಬೇಕು ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದ ಹೂಟಗಳ್ಳಿ ಸರಸ್ವತಿ ಕನ್ವೆನ್ಷನ್ಹಾಲ್ನಲ್ಲಿ ಗುರುವಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳು ಉತ್ತಮ ಫಲಿತಾಂಶ ತರಬೇಕು. ಖಾಸಗಿ ಶಾಲೆಗಳಲ್ಲೂ ಕೂಡ ಮಕ್ಕಳು ಓದುತ್ತಿದ್ದಾರೆ. ದಿನದಿಂದ ದಿನಕ್ಕೆ ಭೂಮಿಯ ಬೆಲೆ ಹೆಚ್ಚಾಗುತ್ತಿರುವ ಪರಿಣಾಮ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕು. ಶಾಲೆಗಳ ಸುತ್ತಮುತ್ತಲ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿಸಬೇಕು. ಅದಕ್ಕೆ ತಕ್ಕಂತೆ ಸ್ಕೆಚ್, ಖಾತೆ ಮಾಡಿಸಬೇಕು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು ಜಂಟಿಯಾಗಿ ಸೇರಿ ಆಯಾಯ ಶಾಲೆಗಳ ಮುಖ್ಯೋಪಾಧ್ಯಾಯರೊಂದಿಗೆ ಕುಳಿತು ಬೇಗನೆ ಮುಗಿಸಬೇಕು ಎಂದು ಹೇಳಿದರು.
ಬಡವರು, ಶ್ರೀಮಂತರ ಮಕ್ಕಳು ಎನ್ನುವುದನ್ನು ನೋಡದೆ ಎಲ್ಲರನ್ನು ಸಮಾನವಾಗಿ ಕಾಣುವ ಶಿಕ್ಷಕರು ಜ್ಞಾನಿಗಳು, ಸಮಾಜದ ಆಗು-ಹೋಗುಗಳು ಸೇರಿದಂತೆ ಎಲ್ಲವನ್ನು ತಿಳಿದುಕೊಂಡಿದ್ದಾರೆ. ವಿಶೇಷವಾಗಿ ಶಿಕ್ಷಕರನ್ನು ಗೌರವದಿಂದ ಕಾಣುವ ದಿನವಾಗಿದೆ. ಶಿಕ್ಷಕರೆಲ್ಲರೂ ಸೇರಿ ಹಿರಿಯ ಶಿಕ್ಷಕರನ್ನು,ನುರಿತ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸುವುದು ಮುಖ್ಯವಾಗಿದೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರಕ್ಕೆ ಹಿರಿಯ ಶಿಕ್ಷಕರ ಮಾರ್ಗದರ್ಶನ ಬೇಕಾಗಿದೆ. ಇಂದು ಅನುಭವಿ ಶಿಕ್ಷಕರ ಕೊರತೆ ಎದುರಿಸುವಂತಹ ವಾತಾವರಣ ನಿರ್ಮಾಣವಾಗಿದೆ. ಶಿಕ್ಷಕರು ಹೇಗಿರಬೇಕೆಂದು ಎಂಬದನ್ನು ದೇಶಕ್ಕೆ ತೋರಿಸಿಕೊಂಡ ಡಾ. ರಾಧಾಕೃಷ್ಣನ್ ಇಂದಿಗೂ ಆದರ್ಶರು. ಶಿಕ್ಷಕರಾಗಿ ಮಾಡಿದ ಸಾಧನೆ ಮತ್ತು ದೇಶಕ್ಕೆ ನೀಡಿದ ಅನುಪಮ ಕಾಣಿಕೆಯಿಂದಾಗಿ ಭಾರತದ ಉಪ ರಾಷ್ಟ್ರಪತಿ,ರಾಷ್ಟ್ರಪತಿ ಆಗಿ ಕೆಲಸ ಮಾಡಿದರು. ವಿದ್ಯಾರ್ಥಿಗಳ ಬಗ್ಗೆ,ಶಿಕ್ಷಕರ, ತಂದೆ ತಾಯಿಯರು ಮಕ್ಕಳು ಯಾವ ರೀತಿ ನೋಡಿಕೊಳ್ಳಬೇಕು ಎನ್ನುವುದನ್ನು ಹೇಳಿದ್ದರು. ಶಿಕ್ಷಣದ ಜತೆಗೆ ಸದ್ಗುಣ ಸಂಪನ್ನರಾಗುವಂತೆ ಮಾಡಲು ಪ್ರೇರೇಪಣೆ ಮಾಡಿದರು ಎಂದು ಬಣ್ಣಿಸಿದರು.
ಶಿಕ್ಷಕರೇ ಮಕ್ಕಳಿಗೆ ದೇವರು. ಮನೆಯಲ್ಲಿ ಪೋಷಕರು ಇದ್ದರೂ ಅಕ್ಷರ ಕಲಿಸುವ, ಬದುಕು ಕಲಿಸುವ ಶಿಕ್ಷಕರೇ ಮುಖ್ಯ ಆಗಿದ್ದಾರೆ. ಈ ಹಿಂದೆ ಇದ್ದ ಶಿಕ್ಷಕರು ಮಕ್ಕಳಿಗೆ ನೈತಿಕ ಮೌಲ್ಯವನ್ನು ತಿಳಿಸುವ ಕೆಲಸ ಮಾಡುತ್ತಿದ್ದರು. ಆದರೆ, ಇಂದು ವಿದ್ಯಾರ್ಥಿಗಳಿಗೆ ಮೆರಿಟ್ ತಂದು ಕೊಟ್ಟರೆ ಸಾಕು ಎನ್ನುವ ಆಲೋಚನೆ ಮಾಡುತ್ತಿರುವ ಪರಿಣಾಮ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ಮೆರಿಟ್ ಮುಖ್ಯವಾದರೂ ಸಂಸ್ಕಾರಯುತ ಪ್ರಜೆಗಳನ್ನಾಗಿ ತಯಾರಿಸುವ ಕುರಿತು ಶಿಕ್ಷಕರು ಯೋಚನೆ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಶಿಕ್ಷಕರ ಸ್ಥಾನಮಾನ ಬೇರೆ ಯಾರಿಗೂ ಸಿಗುವುದಿಲ್ಲ, ಅಂತಹ ಹುದ್ದೆ ಯಾರಿಗೂ ದೊರೆಯಲ್ಲ. ಶ್ರೇಷ್ಠ ಹುದ್ದೆಯಾಗಿದೆ. ಕಷ್ಟಸುಖ ಸಹಜ. ಆದರೆ, ಸಮಾಜಕ್ಕೆ ಎಷ್ಟು ನಾಯಕತ್ವವನ್ನು ರೂಪಿಸಿ ಕಳುಹಿಸುತ್ತೇವೋ ಎನ್ನುವುದು ಮುಖ್ಯ. ಶಿಕ್ಷಕರು ಮಕ್ಕಳಿಗೆ ಪಾಠ-ಪ್ರವಚನ ಮಾಡುವ ಜತೆಗೆ ಕನ್ನಡ ನಾಡಿನ ಕಲೆ,ಸಾಹಿತ್ಯ,ಸಂಸ್ಕೃತಿ ಉಳಿಸುವುದು ಮುಖ್ಯ. ತಾಲ್ಲೂಕಿನ ಯೋಗ ಶಿಕ್ಷಕರೊಬ್ಬರು ಸ್ವಂತ ಖರ್ಚಿನಲ್ಲಿ ಯೋಗ ಶಿಕ್ಷಣವನ್ನು ಕಲಿಸುತ್ತಾರೆ. ಸಮವಸ್ತ್ರ, ಯಂತ್ರೋಪಕರಣಗಳನ್ನು ಒದಗಿಸಿದ್ದಾರೆ. ಸಾಧನೆಯನ್ನುಮಾಡುವ ಜತೆಗೆ ಬೇರೆಯವರಿಗೂ ಧಾರೆ ಎರೆಯಬೇಕು. ಕಾಯಕ ಮಾಡಿ ದಾಸೋಹ ಮಾಡು ಎನ್ನುವ ಬಸವಣ್ಣನವರ ನುಡಿಯಂತೆ ಸಮಾಜಕ್ಕೆ ಕೊಡುಗೆಗಳನ್ನು ನೀಡಬೇಕು ಎಂದರು.
ಶಿಕ್ಷಕರಿಗೆ ಮೊದಲಿನಿಂದಲೂ ಗೌರವ ಕೊಡುವ ಮನುಷ್ಯ. ಜಿಪಂ ಅಧ್ಯಕ್ಷರಾಗಿದ್ದ ಕಾಲದಿಂದಲೂ ಗೌರವ ಇಟ್ಟಿದ್ದೇನೆ. ಯಾವ ಪಕ್ಷ ,ಜಾತಿ ಎನ್ನದೇ ಎಲ್ಲರೂ ಒಂದೇ ಎನ್ನುವಂತೆ ನನ್ನ ಶಾಲೆ,ನನ್ನ ಮಕ್ಕಳು ಎನ್ನುವಂತ ಕೆಲಸ ಮಾಡಿದ್ದೇನೆ. ಸರ್ಕಾರಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರು ನಮ್ಮವರೇ ಆಗಿದ್ದಾರೆ. ಶಿಕ್ಷಕರು ಮುಕ್ತವಾಗಿ ಕೆಲಸ ಮಾಡಲು ಸ್ವಾತಂತ್ರ್ಯವಿದೆ. ಬೇರೆ ಕ್ಷೇತ್ರಗಳಲ್ಲಿ ಗುಂಪುಗಾರಿಕೆ ಇದೆ. ಮೊದಲು ಹನೂರು ಕ್ಷೇತ್ರದಲ್ಲಿ ರಾಜೂಗೌಡ-ಎಚ್.ನಾಗಪ್ಪ, ಕೆ.ಆರ್.ನಗರ ಕ್ಷೇತ್ರದಲ್ಲಿ ಎಸ್.ನಂಜಪ್ಪ-ಎ.ಎಚ್.ವಿಶ್ವನಾಥ್ ನಡುವೆ ಗುಂಪಿತ್ತು. ಆದರೆ, ನಮ್ಮ ಕ್ಷೇತ್ರದಲ್ಲಿ ಅಂತಹ ವಾತಾವರಣವಿಲ್ಲ. ಮುಕ್ತವಾಗಿ ಕೆಲಸ ಮಾಡಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬರಬೇಕು ಎಂದರು.
ಮೈಸೂರು ನಗರದ ಸುತ್ತಮುತ್ತಲ ಬಡಾವಣೆಗಳಲ್ಲಿ ಮೂಲ ಸೌಕರ್ಯ ಕೊರತೆ ಎದುರಿಸುತ್ತಿರುವುದನ್ನು ಸರಿಪಡಿಸಲು ಗಮನಹರಿಸಲಾಗಿದೆ. ನಗರಪಾಲಿಕೆ, ಮುಡಾ ವ್ಯಾಪ್ತಿಯಲ್ಲಿರುವುದನ್ನು ಸೇರಿಸಿಕೊಂಡು ಬೃಹತ್ ನಗರಪಾಲಿಕೆಯನ್ನಾಗಿ ಮಾಡಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ಈ ಕೆಲಸ ಆಗುವ ತನಕ ಹೋರಾಟ ಮಾಡುವೆ ಎಂದು ಹೇಳಿದರು. ಜಮೀನಿನ ಬೆಲೆ ಕಡಿಮೆ ಇದ್ದಾಗ ಅನೇಕರು ಮಾರಾಟ ಮಾಡಿಕೊಂಡರು.ಈಗ ಭೂಮಿಗೆ ಚಿನ್ನದ ಬೆಲೆ ಇದೆ. ಈಗ ಒಂದೊಂದು ನಿವೇಶನಕ್ಕೂ ಪರದಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭೂಮಿ ಮಾರಾಟ ಮಾಡದೆ ಉಳಿಸಿಕೊಳ್ಳಬೇಕಿದೆ ಎಂದರು. ಸಮಾರಂಭದಲ್ಲಿ ನಿವೃತ್ತ ಮತ್ತು ಸಾಧಕ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಜಿಪಂ ಮಾಜಿ ಸದಸ್ಯೆ ಚಂದ್ರಿಕಾ ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ವಿವೇಕಾನಂದ, ಶಿಕ್ಷಕರ ಸಂಘದ ಕಾರ್ಯದರ್ಶಿ ಮಾಲೇಗೌಡ, ಗೌರವಾಧ್ಯಕ್ಷ ಸತೀಶ್, ಕಾರ್ಯಾಧ್ಯಕ್ಷ ಎಸ್.ರಘು, ಉಪಾಧ್ಯಕ್ಷರಾದ ಶಿವಪ್ಪ, ಸುಮತಿ, ಖಜಾಂಚಿ ಅಶೋಕ್, ಸಹ ಕಾರ್ಯದರ್ಶಿ ಅನಿಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಸುರೇಶ್, ಸಹ ಕಾರ್ಯದರ್ಶಿ ಶ್ಯಾಮಲಾ, ರೇಣುಕಾ ಹಾಜರಿದ್ದರು.
ಅಭಿಮಾನಿಗಳು, ನಿರ್ಮಾಪಕರ ಸಂಘದ ಆಕ್ರೋಶ ಬೆಂಗಳೂರು : ಪದ್ಮಭೂಷಣ ಡಾ.ರಾಜ್ಕುಮಾರ್ ಅವರ ಸ್ಮಾರಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಹೇಳಿಕೆ…
ಮಡಿಕೇರಿ : ಶಿಕ್ಷಕಿಯೊಬ್ಬರು ಬಂದೂಕಿನಿಂದ ಗುಂಡು ಹೊಡೆದುಕೊಂಡು ಸಾವಿಗೆ ಶರಣಾದ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಚೇರಂಬಾಣೆಯಲ್ಲಿ ನಡೆದಿದೆ.…
ನವದೆಹಲಿ : ಆಮ್ ಆದ್ಮಿ ಪಕ್ಷದಲ್ಲಿ ಭಾರೀ ರಾಜಕೀಯ ಬೆಳವಣಿಗೆ ನಡೆದಿದ್ದು, ಪಕ್ಷ ತೊರೆದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ)…
ಬೆಂಗಳೂರು : ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಪ್ರತಿದಿನ ದಿನಪತ್ರಿಕೆ ಓದಿಸುವುದನ್ನು ಕಡ್ಡಾಯಗೊಳಿಸಲು ಶಿಕ್ಷಣ…
ನವದೆಹಲಿ : ದೇಶದಾದ್ಯಂತ ನಡೆಯುತ್ತಿರುವ ಜನಗಣತಿ ಕಾರ್ಯವು ಕೇವಲ ಸರ್ಕಾರದ ಕೆಲಸವಲ್ಲ, ಬದಲಾಗಿ ಪ್ರತಿ ನಾಗರಿಕರ ಜವಾಬ್ದಾರಿಯಾಗಿದೆ. ಇದರಲ್ಲಿ ಎಲ್ಲರ…
ಮೈಸೂರು : ನಗರದ ಇಟ್ಟಿಗೆಗೂಡಿನ ಶ್ರೀ ರೇಣುಕಾದೇವಿ ಕರಗ ದೇವಸ್ಥಾನ ಟ್ರಸ್ಟ್, ಶ್ರೀ ಚಾಮುಂಡೇಶ್ವರಿ ಮತ್ತು ಮಾರಿಯಮ್ಮನವರ ೧೦೨ನೇ ಕರಗಮಹೋತ್ಸವ…