ಮೈಸೂರು : ಯುಪಿಎಸ್ಸಿ ಮತ್ತು ಕೆಪಿಎಸ್ಸಿ ಅಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಕಠಿಣ ಸವಾಲು. ಇದೊಂದು ಸುದೀರ್ಘ ಪಯಣ. ಹೀಗಾಗಿ ಒಂದೇ ವಿಷಯದ ಕಡೆ ಗಮನಹರಿಸದೆ ಸಮಗ್ರ ಓದಿಗೆ ಒತ್ತು ನೀಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರದ ವತಿಯಿಂದ ಸೋಮವಾರ ನಡೆದ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳ ತರಬೇತಿಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ನಿಂದ ಎಲ್ಲ ಮಾಹಿತಿ ಸುಲಭವಾಗಿ ಸಿಗುತ್ತಿದ್ದರೂ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ, ತಾಳ್ಮೆ ಮತ್ತು ನಿರಂತರ ಪ್ರಯತ್ನ ಅಗತ್ಯ. ಎಷ್ಟೇ ಬುದ್ಧಿವಂತಿಕೆ ಇದ್ದರೂ ನಿರಂತರ ಓದು ಇರಬೇಕು. ಯುವಕರು ವಯಸ್ಸಿನಲ್ಲಿ ಪ್ರಯತ್ನ ಮಾಡಿದಾಗ ಎಂತಹದ್ದೆ ಆದರೂ ಪಡೆಯಬಹುದು. ಹೀಗಾಗಿ ನಿಮ್ಮ ಸಮಯವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಂಡು ಯಶಸ್ಸುಗಳಿಸಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಹಿಂದಿನ ದಿನಗಳಿಗೆ ಹೋಲಿಸಿದರೆ ಇಂದು ಸ್ಪರ್ಧೆ ತೀವ್ರವಾಗಿದ್ದು, ಒಂದು ಹುದ್ದೆಗೆ ಅನೇಕ ಅಭ್ಯರ್ಥಿಗಳು ಅರ್ಜಿ ಹಾಕುತ್ತಾರೆ. ಕಳೆದ ಅನೇಕ ವರ್ಷಗಳಿಂದ ರಾಜ್ಯ ಸರ್ಕಾರ ಅನೇಕ ಪರೀಕ್ಷೆಗಳನ್ನು ನಡೆಸದಿದ್ದರೂ, ಇದೀಗ ಎಲ್ಲವನ್ನೂ ಆಯೋಜಿಸಲು ತೀರ್ಮಾನಿಸಿದೆ. ಒಳಮೀಸಲಾತಿ ಗೊಂದಲಗಳು ಬಹುತೇಕ ಪರಿಹಾರವಾಗಿವೆ. ಅಭ್ಯರ್ಥಿಗಳು ಸಾಮಾಜಿಕ ಮಾಧ್ಯಮ ಮತ್ತು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ, ಓದಿಗೆ ಗಮನ ಹರಿಸಬೇಕು. ಶ್ರೀಮಂತರು ಅಥವಾ ದುಡ್ಡು ಇರುವವರಿಗೆ ಮಾತ್ರ ಸರ್ಕಾರಿ ಕೆಲಸ ಸಿಗುತ್ತದೆ ಎಂಬ ನಕಾರಾತ್ಮಕ ಚಿಂತನೆ ಬೇಡ; ಕುರಿ ಕಾಯುವವರು, ಬಡ ಕಾರ್ಮಿಕರೂ ಮತ್ತು ಅವರ ಮಕ್ಕಳು ಸಹ ಯುಪಿಎಸ್ಸಿ ಪಾಸ್ ಮಾಡಿರುವ ಉದಾಹರಣೆಗಳಿವೆ ಎಂದು ಸಕಾರಾತ್ಮಕ ಸಂದೇಶ ನೀಡಿದರು.
ಕಾಲೇಜಿನ ಯುವಕರು ಕ್ಯಾಂಪಸ್ ಗಳಲ್ಲಿ ಇನ್ನೀತರ ಕೆಟ್ಟ ಚಟುವಟಿಕೆಗಳಿಗೆ ಬಲಿಯಾಗದೆ ಓದಿನಕಡೆ ಗಮನ ಹರಿಸಿ. ಸಾಮಾಜಿಕ ಮಾಧ್ಯಮದ ಹಿಂದೆ ಓಡದೆ ನಿಮ್ಮ ಗುರಿ ಹಿಂದೆ ಓಡಿ ಎಂದು ಹೇಳಿದರು.
ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ಸಾಧನಾ ಎ.ಪೋಟರ್ ಅವರು ಮಾತನಾಡಿ, ಯುಪಿಎಸ್ಸಿ ಅಂತಹ ಪರೀಕ್ಷೆಗಳಲ್ಲಿ ಕನ್ನಡದ ಯುವಕ, ಯುವತಿಯರು ಹೆಚ್ಚೆಚ್ಚು ಪಾಲ್ಗೊಂಡು ಕೆಲಸ ಗಿಟ್ಟಿಸಿ, ರಾಜ್ಯದ ಹಿರಿಮೆಯನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯ ಬೇಕು ಎಂದು ಕರೆ ನೀಡಿದರು.
ಸಾರ್ವಜನಿಕ ವಲಯ, ಖಾಸಗಿ ವಲಯ ಮತ್ತು ಸ್ವಯಂ ಉದ್ಯೋಗಗಳು ಯುವಕರನ್ನು ಕೈಬೀಸಿ ಕರೆಯುತ್ತಿವೆ. ಆದರೂ ಸಹ ಮಧ್ಯಮ ವರ್ಗದ ಯುವ ಜನತೆ ಸರ್ಕಾರಿ ಕೆಲಸದ ಕಡೆ ಹೆಚ್ಚು ಮುಖ ಮಾಡುತ್ತಿದೆ. ಇದಕ್ಕೆ ಕಾರಣ ಸರ್ಕಾರಿ ಉದ್ಯೋಗದ ಭದ್ರತೆ, ಖಾಸಗಿ ವಲಯದಂತೆ ಇಲ್ಲಿ ಯಾವಾಗ ಕೆಲಸ ಹೋಗುತ್ತದೆ ಎಂಬ ಭಯವಿರುವುದಿಲ್ಲ. ಸ್ಥಿರ ಸಂಬಳ ಮತ್ತು ಭತ್ಯೆಗಳು, ವೈದ್ಯಕೀಯ ಸೌಲಭ್ಯಗಳು ಸಿಗುತ್ತವೆ, ಪಿಂಚಣಿ ಸೌಲಭ್ಯ, ಜೊತೆಗೆ ಸಾಫ್ಟ್ವೇರ್ ಅಥವಾ ಕಾರ್ಪೊರೇಟ್ ಕಂಪನಿಗಳಿಗೆ ಹೋಲಿಸಿದರೆ ಇಲ್ಲಿ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಉತ್ತಮ ಸಮತೋಲನ ಕಾಯ್ದುಕೊಳ್ಳಬಹುದು ಎಂಬ ದೃಷ್ಟಿಯಿಂದ ಸರ್ಕಾರಿ ಕೆಲಸದ ಕಡೆ ಹೆಚ್ಚು ಗಮನ ಹರಿಸಿದೆ. ಈ ಕಲ್ಪನೆ ತಪ್ಪು. ಇಲ್ಲಿ ಕೇವಲ ಸ್ಪರ್ದಾತ್ಮಕ ಅಷ್ಟೆ. ಆದರೆ ಖಾಸಗಿ ವಲಯದಲ್ಲಿ ಸೃಜನಾತ್ಮಕತೆಗೆ ಹೆಚ್ಚು ಅವಕಾಶವಿದೆ. ಹೀಗಾಗಿ ಖಾಸಗಿ ಕೆಲಸಗಳ ಕಡೆಗೂ ಹೆಚ್ಚು ಗಮನ ಹರಿಸಿ ಎಂದು ಸಲಹೆ ನೀಡಿದರು.
ಆದರೂ ಸ್ಮರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರು ಮುಖ್ಯವಾಗಿ ಶ್ರದ್ಧೆಯಿಂದ ಕಠಿಣವಾಗಿ ನಿರಂತರವಾಗಿ ಅಭ್ಯಸಿಸಿ. ಪಠ್ಯಕ್ರಮದ ಎಲ್ಲ ಅಂಶಗಳನ್ನು ತಿಳಿದಿರಬೇಕು. ಮೊದಲು ಪೂರ್ವಭಾವಿ ಪರೀಕ್ಷೆಗೆ ಒತ್ತು ನೀಡಿ, ಬಳಿಕ ಮುಖ್ಯ ಪರೀಕ್ಷೆಗೆ ಗಮನ ಹರಿಸಿ. ಎನ್ಸಿಆರ್ಟಿ ಪುಸ್ತಕದ 7,8,9ನೇ ತರಗತಿಯ ಪಠ್ಯಕ್ರಮವನ್ನು ಪೂರ್ಣಪಟ್ಟಿಯಾಗಿ ಓದಿಕೊಳ್ಳಿ. ಅದೇ ನಿಮಗೆ ತಳಮಟ್ಟದ ಅಡಿಪಾಯ. ಇದು ನಿಮಗೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಇರು ತಪ್ಪು ಗ್ರಹಿಕೆ ಎಂದರೆ ಓದುವುದಕ್ಕೆ ಅಷ್ಟು ಗಂಟೆ ಬೇಕು, ಇಷ್ಟು ಗಂಟೆ ಬೇಕು ಎನ್ನುವುದು. ಬೇರೆಯವರು ತುಂಬಾ ಸಮಯ ಓದಿದ್ದಾರೆ. ನಾನು ಓದಿಲ್ಲ ಹಾಗೇಲ್ಲ ಏನೂ ಇಲ್ಲ. ಓದುವುದಕ್ಕೆ ನಿಮಗೆ ಎಷ್ಟು ಸಾಮರ್ಥ್ಯ ಇದೆ ಅಷ್ಟು ಮಾತ್ರ ಓದಬೇಕು. ಸ್ಪರ್ಧಾತ್ಮಕ ಪರೀಕ್ಷೆ ಹಾಲ್ನಲ್ಲಿ ಕುಳಿತು ಪರೀಕ್ಷೆ ಬರೆಯುವಾಗ ಮುಖ್ಯವಾಗಿ ಪ್ರಶ್ನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಅಲ್ಲಿ ವಿಶ್ಲೇಷಣೆ, ವಿಮರ್ಶೆ, ಪರೀಕ್ಷಿಸಿ ಹೀಗೆ ಹೇಗೆ ಇರುತ್ತೆ ಹಾಗೆ ಅದಕ್ಕೆ ಪೂರಕವಾಗಿ ಬರೆಯಬೇಕಾಗುತ್ತದೆ. ಆವಾಗ ಮಾತ್ರ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳಿಸಲು ಸಾಧ್ಯವಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಷಾ ವೈವಿಧ್ಯತೆಯನ್ನು ಸಮರ್ಥವಾಗಿ ಬಳಸುವುದು ಅಭ್ಯರ್ಥಿಯ ಯಶಸ್ಸಿಗೆ ಪ್ರಮುಖ ಅಡಿಪಾಯ. ಕರ್ನಾಟಕದಲ್ಲಿ, ಪರೀಕ್ಷೆಗಳು ಕೇವಲ ಜ್ಞಾನವನ್ನಷ್ಟೇ ಅಲ್ಲದೆ, ಅಭ್ಯರ್ಥಿಯ ಭಾಷಾ ಪ್ರಾವೀಣ್ಯತೆಯನ್ನೂ ಒರೆಗೆ ಹಚ್ಚುತ್ತವೆ. ಮೊದಲನೆಯದಾಗಿ, ದ್ವಿಭಾಷಾ ಪ್ರಶ್ನೆಪತ್ರಿಕೆಗಳು (ಕನ್ನಡ ಮತ್ತು ಇಂಗ್ಲಿಷ್) ಇರುವುದರಿಂದ, ಅಭ್ಯರ್ಥಿಯು ಪಾರಿಭಾಷಿಕ ಶಬ್ದಗಳ ಮೇಲೆ ಹಿಡಿತ ಸಾಧಿಸುವುದು ಅವಶ್ಯಕ. ಎರಡನೆಯದಾಗಿ, ಕಡ್ಡಾಯ ಕನ್ನಡ ಪತ್ರಿಕೆಯು ಆಡಳಿತಾತ್ಮಕ ಕೆಲಸಕ್ಕೆ ಅಗತ್ಯವಿರುವ ಭಾಷಾ ಕೌಶಲವನ್ನು ಪರೀಕ್ಷಿಸುತ್ತದೆ. ಪ್ರಾದೇಶಿಕ ಭಾಷೆಗಳ ವೈವಿಧ್ಯತೆಯು ಸಂದರ್ಶನದ ಹಂತದಲ್ಲಿ ಸ್ಥಳೀಯ ಸಮಸ್ಯೆಗಳನ್ನು ವಿವರಿಸಲು ಮತ್ತು ಜನರೊಂದಿಗೆ ಸಂವಹನ ನಡೆಸಲು ಪೂರಕವಾಗಿರುತ್ತದೆ. ಭಾಷಾ ವೈವಿಧ್ಯತೆಯು ವಿವಿಧ ಸಾಹಿತ್ಯಿಕ ಮತ್ತು ಐತಿಹಾಸಿಕ ಹಿನ್ನೆಲೆಗಳನ್ನು ಅರಿಯಲು ಸಹಾಯ ಮಾಡುತ್ತದೆ, ಇದು ಸಾಮಾನ್ಯ ಜ್ಞಾನ ಪತ್ರಿಕೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.
ವಿವಿ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ ಮಾತನಾಡಿ, ನಿಮ್ಮನ್ನು ನೀವು ನಂಬಿ ಓದಿನ ಕಡೆ ಗಮನ ಹರಿಸಿ, ನಾನು ಐಪಿಎಸ್,ಐಎಎಸ್ ಆಗಬೇಕು ಎಂದು ಕನಸು ಇಟ್ಟುಕೊಂಡು ಅದರ ಕಡೆ ಹೆಚ್ಚು ಹೊತ್ತು ಗಮಹ ಹರಿಸಿ. ನೀವು ನಮ್ಮ ವಿವಿಗೆ ಬಂದಿದ್ದೀರಾ ಪರೀಕ್ಷೆಯಲ್ಲಿ ಯಶಸ್ಸುಗಳಿಸಿಕೊಂಡು ಹೋಗಿ ಎಂದರು.
ಕಾರ್ಯಕ್ರಮದಲ್ಲಿ ವಿವಿ ಪರೀಕ್ಷಾಂಗ ಕುಲಸಚಿವ ಆನಂದಕುಮಾರ್, ಹಣಕಾಸು ಅಧಿಕಾರಿ ನಿರಂಜನ್ರಾಜ್, ಅಧ್ಯಯನ ಕೇಂದ್ರದ ಡೀನ್ ಚಂದ್ರೇಗೌಡ, ಸಂಯೋಜನಾಧಿಕಾರಿ ಜೈನಹಳ್ಳಿ ಸತ್ಯನಾರಾಯಣಗೌಡ, ಸಿದ್ದೇಶ್ ಹೊನ್ನೂರು, ಗಣೇಶ್ ಕೆ.ಜಿ.ಕೊಪ್ಪಲ್ ಇದ್ದರು.
ಬೆಂಡರವಾಡಿ ಕೆರೆಗೆ ಹಾರಿ ಮಂಡ್ಯ ಜಿಲ್ಲೆಯ ವ್ಯಕ್ತಿ ಆತ್ಮಹತ್ಯೆ ಚಾಮರಾಜನಗರ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ…
ಹೈದರಾಬಾದ್: ತಮಿಳುನಾಡು ಮಾಜಿ ಸಿಎಂ ಜಯಲಲಿತಾ ಅವರ ಹೈದರಾಬಾದ್ನಲ್ಲಿ ಅವರ ಮನೆಗೆ ಅಧಿಕಾರಿಗಳು ಬೀಗ ಹಾಕಿದ್ದಾರೆ. 2016ರಲ್ಲಿ ನಿಧನರಾದ ಜಯಲಲಿತಾ…
ಬೆಂಗಳೂರು: ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಪಕ್ಕಾ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ…
ಬೆಂಗಳೂರು: ಇಲ್ಲಿನ ಯಲಹಂಕ ಠಾಣೆ ಪೊಲೀಸರು, ಸುಮಾರು 2 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದು, ನೈಜೀರಿಯಾ ಮೂಲದ…
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಭಾರತೀಯ ಟೆನಿಸ್ ಐಕಾನ್ ಲಿಯಾಂಡರ್ ಪೇಸ್ ಇಂದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.…
ಬೆಂಗಳೂರು: ಖಾಸಗಿ ಶಾಲೆಗಳು ಪರೀಕ್ಷೆಗಳು ಮುಗಿಯುತ್ತಿದ್ದಂತೆಯೇ 2026-27ನೇ ಸಾಲಿನ ಶುಲ್ಕವನ್ನು 5-10%, ಮತ್ತೆ ಕೆಲವು 10-15% ವರೆಗೆ ಏರಿಕೆ ಮಾಡಿವೆ.…