ಮನರಂಜನೆ

ಪುನೀತ್: ೫೦ ಅಪ್ಪು ನೆನಪಲ್ಲಿ ಇನ್ನಷ್ಟು, ಮತ್ತಷ್ಟು..

ಪುನೀರ್ ರಾಜಕುಮಾರ್ ನಮ್ಮನ್ನಗಲಿ ಮೂರೂವರೆವರ್ಷಗಳಾಗಿವೆ. ಜನ ಈಗಲೂ ಅವರನ್ನು ಅದೆಷ್ಟು ಪ್ರೀತಿಸುತ್ತಾರೆ, ಜನರ ಮನಸ್ಸಿನಲ್ಲಿ ಪುನೀತ್ ಇನ್ನೂ ಎಷ್ಟು ಹಸಿರಾಗಿದ್ದಾರೆ ಎಂಬುದಕ್ಕೆ ಒಂದು ಉದಾಹರಣೆ, ಇತ್ತೀಚೆಗೆ ನಡೆದ ಪುನೀತ್ ಅವರ ಹುಟ್ಟುಹಬ್ಬ. ಪುನೀತ್ ಇದ್ದಿದ್ದರೆ ೫೦ ಮುಗಿಸಿ, ೫೧ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಅವರ ಅಭಿಮಾನಿಗಳು ಪುನೀತ್ ಹುಟ್ಟುಹಬ್ಬ ಆಚರಿಸಿದ ರೀತಿ ಅವಿಸ್ಮರಣೀಯ.

ಪುನೀತ್ ಹುಟ್ಟುಹಬ್ಬ ಮತ್ತು ಪುಣ್ಯತಿಥಿ ದಿನಗಳಂದು ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಅವರ ಸ್ಮಾರಕಕ್ಕೆ ಭೇಟಿ ನೀಡುವುದು, ಕಳೆದ ಮೂರು ವರ್ಷಗಳಿಂದ ನಡೆದುಬಂದಿದೆ. ಈ ಬಾರಿಯೂ ಅದು ಮುಂದುವರಿದಿದ್ದು, ೫೦ನೇ ಹುಟ್ಟುಹಬ್ಬವಾದ್ದರಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಅಭಿಮಾನಿಗಳು ಪುನೀತ್ ಪುಣ್ಯಭೂಮಿಗೆ ಭೇಟಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕುಟುಂಬದವರೂ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಬಂದಿದ್ದಾರೆ. ಕಳೆದ ವರ್ಷ ಪುನೀತ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಜಾಕಿ’ ಚಿತ್ರವನ್ನು ಮರುಬಿಡುಗಡೆ ಮಾಡಲಾಗಿತ್ತು. ಆಗಲೇ ಕೆಲವು ಅಭಿಮಾನಿಗಳು  ಮುಂದಿನ ಹುಟ್ಟುಹಬ್ಬಕ್ಕೆ ‘ಅಪ್ಪು’ ಚಿತ್ರ ಮರುಬಿಡುಗಡೆ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು. ಅದನ್ನು ಪೂರೈಸಿರುವ ಅಶ್ವಿನಿ ಪುನೀತ್ ರಾಜ ಕುಮಾರ್, ಮಾರ್ಚ್.೧೪ರಂದು ‘ಅಪ್ಪು’ ಚಿತ್ರವನ್ನು ಮರುಬಿಡುಗಡೆ ಮಾಡಿದ್ದಾರೆ.

ಈ ವರ್ಷ ಬಿಡುಗಡೆಯಾದ ಯಾವೊಂದು ಚಿತ್ರಕ್ಕೂ ಸಿಗದ ಪ್ರತಿಕ್ರಿಯೆ ಈ ಚಿತ್ರಕ್ಕೆ ಸಿಕ್ಕಿದ್ದು ನೋಡಿದರೆ, ಪುನೀತ್ ಅವರನ್ನು ಜನ ಈಗಲೂ ಎಷ್ಟು ಪ್ರೀತಿಸುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ನಟಿಯರಾದ ರಮ್ಯಾ, ಶರ್ಮಿಳಾ ಮಾಂಡ್ರೆ, ನಿರ್ದೇಶಕ ಸಂತೋಷ್ ಆನಂದರಾಮ ಮುಂತಾದವರು ಪ್ರೇಕ್ಷಕರೊಂದಿಗೆ ಚಿತ್ರವನ್ನು ನೋಡಿದರು.

ಡಾ.ರಾಜಕುಮಾರ್ ನಿಧನರಾದ ಸಂದರ್ಭದಲ್ಲಿ ಪುನೀತ್ ರಾಜಕುಮಾರ್, ಪ್ರಕೃತಿ ಬನವಾಸಿ ಜೊತೆಗೆ ಸೇರಿ ‘ಡಾ. ರಾಜಕುಮಾರ್: ವ್ಯಕ್ತಿತ್ವದ ಹಿಂದಿನ ವ್ಯಕ್ತಿ’ ಎಂಬ ಪುಸ್ತಕವನ್ನು ಬರೆದಿದ್ದರು. ಈ ಪುಸ್ತಕವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಿದ್ದರು. ಈಗ ಪುನೀತ್ ರಾಜ ಕುಮಾರ್ ನೆನಪಲ್ಲಿ ಹೊಸದೊಂದು ಪುಸ್ತಕ ಬರೆಸುತ್ತಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.

ಇತ್ತೀಚೆಗೆ, ಪುನೀತ್ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಅಪ್ಪು’ ಎಂಬ ಪುಸ್ತಕದ ಮುಖಪುಟ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ಪುಸ್ತಕ ಬಿಡುಗಡೆಯಾಗಲಿದೆ. ಇದೊಂದು ಆತ್ಮಚರಿತ್ರೆಯಾಗಿದ್ದು, ಪುನೀತ್ ನಡೆದುಬಂದ ಹಾದಿಯ ಬಗ್ಗೆ ಮಾಹಿತಿಯ ಜೊತೆಗೆ ಹಲವು ಫೋಟೊಗಳಿರಲಿವೆ.

ಪುನೀತ್ ನಿಧನರಾದ ನಂತರದ ಈ ಮೂರೂವರೆ ವರ್ಷಗಳಲ್ಲಿ ಸುಮಾರು ೫೦೦ ಚಿತ್ರ ತಂಡಗಳು ಪುನೀತ್ ಅವರಿಗೆ ತಮ್ಮ ಚಿತ್ರಗಳನ್ನು ಅರ್ಪಿಸುವುದರ ಜೊತೆಗೆ ಚಿತ್ರಗಳ ಆರಂಭದಲ್ಲಿ ಪುನೀತ್ ಅವರ ಸಾಧನೆ, ಕೊಡುಗೆ, ನಗುವನ್ನು ನೆನಪಿಸಿಕೊಂಡಿವೆ ಮತ್ತು ನೆನಪಿಸಿಕೊಳ್ಳುತ್ತಿವೆ. ಅದರಲ್ಲೂ ಪುನೀತ್ ನಿಧನರಾದ ನಂತರ ಬಿಡುಗಡೆಯಾದ ಮೊದಲ ಎರಡು ವರ್ಷಗಳ ಕಾಲ ಪ್ರತಿಯೊಂದು ಚಿತ್ರವನ್ನು ಪುನೀತ್ ಅವರಿಗೆ ಅರ್ಪಿಸಲಾಗಿತ್ತು. ಪುನೀತ್ ನಿಧನಕ್ಕೂ ಮೊದಲು ಸೆನ್ಸಾರ್ ಮಾಡಿಸಿದ್ದ ಚಿತ್ರ ತಂಡಗಳು ಸಹ ಪುನೀತ್ ಅವರ ಹೆಸರನ್ನು ಸೇರಿಸುವುದಕ್ಕೆ ಮನವಿ ಮಾಡಿದ್ದವು ಎಂದು ಹೇಳಲಾಗುತ್ತದೆ. ಬರೀ ಕನ್ನಡ ಚಿತ್ರಗಳಷ್ಟೇ ಅಲ್ಲ, ಕನ್ನಡದಿಂದ ಬೇರೆ ಭಾಷೆಗಳಿಗೆ ಡಬ್ ಆದ ‘೭೭೭ ಚಾರ್ಲಿ’, ‘ಕೆಜಿಎಫ್ ೨’ ಮುಂತಾದ ಚಿತ್ರಗಳನ್ನು ಪುನೀತ್ ಅವರಿಗೆ ಅರ್ಪಣೆ ಮಾಡಲಾಗಿತ್ತು ಎನ್ನುವುದು, ಚಿತ್ರರಂಗದವರು ಅವರ ಮೇಲೆ ಇಟ್ಟ ಪ್ರೀತಿಯನ್ನು ತೋರಿಸುತ್ತದೆ

ಪುನೀತ್ ನೆನಪಲ್ಲಿ ಚಿತ್ರಗಳು: 

ಕಳೆದ ವರ್ಷ ಬಿಡುಗಡೆಯಾದ ‘ರತ್ನ’ ಚಿತ್ರವು ಪುನೀತ್ ಅಭಿಮಾನಿಯ ಕಥೆಯಾಗಿತ್ತು. ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದ ಬಸವರಾಜ ಬಳ್ಳಾರಿ ಸಹ ಪುನೀತ್ ಅವರ ಅಭಿಮಾನಿ. ಈ ನಿಟ್ಟಿನಲ್ಲಿ ಅವರು ‘ರತ್ನ’ ಎಂಬ ಚಿತ್ರ ನಿರ್ದೇಶಿಸಿ, ಅಭಿಮಾನವನ್ನು ಮೆರೆದಿದ್ದರು. ಪುನೀತ್ ಅವರನ್ನು ದೇವರಂತೆ ಆರಾಧಿಸುವ ಅವರ ಅಭಿಮಾನಿಯ ಕುರಿತಾದ ಚಿತ್ರವಿದು. ಚಿತ್ರದ ನಾಯಕಿ ಪಾತ್ರದ ಹೆಸರು ರತ್ನ. ಪುನೀತ್ ರಾಜಕುಮಾರ್ ಅವರನ್ನು ಭೇಟಿ ಆಗಬೇಕೆಂಬ ಹಂಬಲದಿಂದ ಏನೆಲ್ಲಾ ಮಾಡುತ್ತಾರೆ ಎನ್ನುವುದು ಚಿತ್ರದ ಕಥೆ.

ಈ ಹಿಂದೆ ‘ರಾಮಾಚಾರಿ ೨.೦’ ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಅದರಲ್ಲಿ ನಟಿಸಿದ್ದ ತೇಜ್, ಈಗ ‘ಡ್ಯೂಡ್’ಎಂಬ ತಮ್ಮ ಹೊಸ ಚಿತ್ರವನ್ನು ಪುನೀತ್‌ಗೆ ಅರ್ಪಿಸಿದ್ದಾರೆ. ಪುನೀತ್ ಅವರಿಗೆಫುಟ್‌ಬಾಲ್ ಎಂದರೆ ಬಹಳ ಇಷ್ಟ. ಜೊತೆಗೆ ಪುನೀತ್ ಅವರಿಗೆ ಹೆಣ್ಮಕ್ಕಳ ಬಗ್ಗೆ ವಿಶೇಷ ಗೌರವ ಇತ್ತು. ಈ ಎರಡು ವಿಷಯ ಇಟ್ಟುಕೊಂಡು ತೇಜ್, ‘ಡ್ಯೂಡ್’ ಚಿತ್ರ ಮಾಡಿದ್ದಾರೆ. ಇಲ್ಲಿ ರಾಘವೇಂದ್ರ ರಾಜಕುಮಾರ್ ತಮ್ಮ ನಿಜಜೀವನದ ಪಾತ್ರವನ್ನೇ ಮಾಡುತ್ತಿದ್ದಾರೆ. ಪುನೀತ್ ಹೆಸರಿನಲ್ಲಿ ಒಂದು ಫುಟ್‌ಬಾಲ್ ಟೂರ್ನಿ ಆಯೋಜಿಸಿರುತ್ತಾರೆ. ಕರ್ನಾಟಕದ ಬೇರೆ ಬೇರೆ ಪ್ರದೇಶದ ಫುಟ್‌ಬಾಲ್ ಗೊತ್ತಿಲ್ಲದ ಹೆಣ್ಮಕ್ಕಳು ಒಂದು ತಂಡವಾಗಿ ಹೇಗೆ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುತ್ತಾರೆ ಎನ್ನುವುದೇ ಚಿತ್ರದ ಕಥೆ.

ಇತ್ತೀಚೆಗಷ್ಟೇ ರವಿಕಿರಣ್ ಅಭಿನಯದ ‘ಅಪ್ಪು ಅಭಿಮಾನಿ’ ಚಿತ್ರ ತಂಡದವರು ನರ್ತಕಿ ಚಿತ್ರಮಂದಿರದಲ್ಲಿ ಪುನೀತ್ ಅವರ ೫೦ ಅಡಿ ಕಟೌಟ್ ನಿಲ್ಲಿಸಿದ್ದಾರೆ. ಹೆಸರೇ ಹೇಳುವಂತೆ ಇದು ಪುನೀತ್ ಅವರ ಅಭಿಮಾನಿಯ ಕಥೆಯಾಗಿದ್ದು, ಚಿತ್ರದಲ್ಲಿ ನಾಯಕ ರವಿಕಿರಣ್, ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುತ್ತಾರಂತೆ. ಅಕ್ಷಯ ಮೂವಿ ಫ್ಯಾಕ್ಟರಿ ಸಂಸ್ಥೆ ನಿರ್ಮಿಸಿರುವ ಈ ಚಿತ್ರವನ್ನು ಡಾ. ರೆಡ್ಡಿ ನಿರ್ದೇಶಿಸಿದ್ದಾರೆ.

ಪುನೀತ್ ಹುಟ್ಟುಹಬ್ಬದಂದು ‘ಅಪ್ಪು ಟ್ಯಾಕ್ಸಿ’ ಎಂಬ ಹೊಸ ಚಿತ್ರವನ್ನು ಘೋಷಿಸಲಾಗಿದೆ. ಪುನೀತ್ ಮಾಡಿದ ಸಹಾಯದಿಂದ ಒಬ್ಬ ಟ್ಯಾಕ್ಸಿ ಡ್ರೈವರ್ ತನ್ನ ಜೀವನ ರೂಪಿಸಿಕೊಂಡ ಸತ್ಯಘಟನೆಯನ್ನು ಆಧರಿಸಿ ಚಿತ್ರಕಥೆ ಸಾಗುವಂತಹ ಸಿನಿಮಾ ಇದಾಗಿದೆ. ಈ ಚಿತ್ರವನ್ನು ಜಗ್ಗು ಶಿರಸಿ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ಸಾಲ ಬಾಧೆ ; ದಂಪತಿ ಆತ್ಮಹತ್ಯೆ

ಮಂಡ್ಯ : ಸಾಲ ಬಾಧೆಯಿಂದ ದಂಪತಿಗಳಿಬ್ಬರು ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಬಿ.ಹಟ್ಟಣ ಗ್ರಾಮದಲ್ಲಿ…

3 hours ago

ಓದುಗರ ಪತ್ರ: ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನವಾಗಲಿ

ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ೨೦೧೪ರ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಕರ್ನಾಟಕವು ಮೇಕೆದಾಟು ಜಲಾಶಯ ನಿರ್ಮಿಸಲು ತಮಿಳುನಾಡು ಸೇರಿದಂತೆ ಯಾವುದೇ…

16 hours ago

ಓದುಗರ ಪತ್ರ: ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳ್ಳಲಿ

ಮೈಸೂರು ನಗರದಲ್ಲಿ ಅನೇಕ ಕಡೆ ಪಾದಚಾರಿಗಳಿಗೆ ಅಡಚಣೆಯಾಗಿದ್ದ ಫುಟ್‌ಪಾತ್ ವ್ಯಾಪಾರಿಗಳ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಬಹುತೇಕ ಕಡೆ…

16 hours ago

ಓದುಗರ ಪತ್ರ: ಕೂಡ್ಲಾಪುರ ಗ್ರಾಮಕ್ಕೆ ಕಬಿನಿ ನೀರು ಕೊಡಿ

ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರ ಪರಿಸ್ಥಿತಿಯಿಂದಾಗಿ ಕೆರೆಗಳು ಬತ್ತಿಹೋಗಿದ್ದು, ಕುಡಿಯುವ ನೀರು ಸಿಗದೆ ತೊಂದರೆಯಾಗಿದೆ. ನಂಜನಗೂಡು…

16 hours ago

ಗಾಮೀಣ ಜನರ ಏಳಿಗೆಗೆ IHDUA ಪಣ

ಪ್ರಸನ್ನ ಎಂ.ಕೆ. ಖ್ಯಾತ ಕ್ಯಾನ್ಸರ್ ರೋಗ ತಜ್ಞರು, ಭಾರತ್ ಕ್ಯಾನ್ಸರ್ ಹಾಸ್ಪಿಟಲ್ ಹಾಗೂ ಎಚ್‌ಸಿಜಿ ಆಸ್ಪತ್ರೆ ಛೇರ್ಮನ್ ಮತ್ತು ಸಂಸ್ಥಾಪಕರು,…

16 hours ago

ಸತ್ಯಮಂಗಲ-ಮೀಣ್ಯಂ ರಸ್ತೆಯಲ್ಲಿ ಸಂಚಾರ ದುಸ್ತರ

ಮಾದೇಶ್ ಗೌಡ ಹದಗೆಟ್ಟ ರಸ್ತೆ ಅಭಿವೃದ್ಧಿಗೆ ಸವಾರರ ಆಗ್ರಹ; ಅಭಿವೃದ್ಧಿಯಾಗದಿದ್ದರೆ ಪ್ರತಿಭಟನೆ ಎಚ್ಚರಿಕೆ ಹನೂರು: ತಾಲ್ಲೂಕಿನ ಮೀಣ್ಯಂ ಗ್ರಾಪಂ ವ್ಯಾಪ್ತಿಯ…

16 hours ago