dhoora theera yaana
ಕಳೆದ ವರ್ಷ ಪ್ರಾರಂಭವಾಗಿದ್ದ ಮಂಸೋರೆ ನಿರ್ದೇಶನದ ‘ದೂರ ತೀರ ಯಾನ’ ಚಿತ್ರದ ಕೆಲಸಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಇದೀಗ ಚಿತ್ರ ಬಿಡುಗಡೆಯಾಗುವುದಕ್ಕೆ ಸಜ್ಜಾಗುತ್ತಿದೆ. ಜುಲೈ.11ರಂದು ಚಿತ್ರ ಬಿಡುಗಡೆ ಆಗುತ್ತಿದೆ. ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವುದರ ಜೊತೆಗೆ ಚಿತ್ರದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರ ಶುರು ಮಾಡಿದೆ ಚಿತ್ರತಂಡ.
ಸಂಗೀತ ನಿರ್ದೇಶಕ ಬಕ್ಕೇಶ್ ಮತ್ತು ಈಶ ಸುಚಿ ಹಾಡಿರುವ ‘ದೂರ ತೀರ ಯಾನ…’ ಎಂಬ ಹಾಡನ್ನು MRT ಮ್ಯೂಸಿಕ್ ಚಾನಲ್ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಮಾರಂಭದಲ್ಲಿ ಹಿರಿಯ ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ನಟ ನವೀನ್ ಶಂಕರ್ ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಚಿತ್ರದ ಕುರಿತು ಮಾತನಾಡುವ ಮಂಸೋರೆ, ‘ನಾನು ಕುಸಿದಿದ್ದಾಗ ನಿರ್ಮಾಪಕರು ಬಂದು, ‘ಇಲ್ಲಿಗೆ ಎಲ್ಲವೂ ಮುಗಿಯುವುದಿಲ್ಲ. ನಾವು ಮುಂದುವರೆಯುತ್ತಿರಬೇಕು’ ಎಂದರು. ಅಲ್ಲಿಂದ ಈ ಪ್ರಯಾಣ ಶುರುವಾಯಿತು. ಪ್ರಯಾಣ ಮಾಡುವಾಗ ನಾವು ಹಲವು ಹಾಡುಗಳನ್ನು ಕೇಳುತ್ತಿರುತ್ತೇವೆ. ಪ್ರಯಾಣಕ್ಕೆಂದೇ ಒಂದು ಹಾಡು ಬೇಕಿತ್ತು. ಇದು ನನಗಾಗಿ ಮಾಡಿಕೊಂಡ ಹಾಡು. ನನಗೆ ಖುಷಿ ಕೊಟ್ಟರೆ, ಜನರಿಗೂ ಖುಷಿ ಕೊಡುತ್ತದೆ ಎಂದು ನಂಬಿದವನು ನಾನು. ಈ ಹಾಡು ವೈಯಕ್ತಿಕವಾಗಿ ಬಹಳ ಖುಷಿಕೊಟ್ಟಿದೆ. ಸಾಮಾನ್ಯವಾಗಿ ಪ್ರೀ-ಕ್ಲೈಮ್ಯಾಕ್ಸ್ ಡ್ರಾಮಾ ಅಥವಾ ಫೈಟ್ ಇರುತ್ತದೆ. ನಮ್ಮ ಚಿತ್ರದಲ್ಲಿ ಈ ಹಾಡು ಬರುತ್ತದೆ’ ಎಂದರು.
ಈ ಚಿತ್ರದ ಮೂಲಕ ನಮ್ಮ ಗುರುತನ್ನು ಹುಡುಕುವ ಪ್ರಯತ್ನ ಮಾಡಲಾಗಿದೆ ಎನ್ನುವ ಮಂಸೋರೆ, ‘ಕನ್ನಡ ಚಿತ್ರರಂಗಕ್ಕೂ ಒಂದು ಬದಲಾವಣೆಯ ಅವಶ್ಯಕತೆ ಇದೆ. ಕನ್ನಡ ಚಿತ್ರರಂಗ ಬೇರೆ ರೀತಿಯಲ್ಲಿ ಪುನಃ ತನ್ನ ಗುರುತನ್ನು ಸ್ಥಾಪಿಸಬೇಕು, ತನ್ನ ಸೊಗಡನ್ನು ತೋರಿಸಬೇಕು. ಆ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ನಮ್ಮ ಚಿತ್ರದ ಹಾಡುಗಳಲ್ಲಿ ಒಂದೇ ಒಂದು ಇಂಗ್ಲಿಷ್ ಪದ ಬಳಸದೇ ಹಾಡುಗಳನ್ನು ಮಾಡಿದ್ದೇವೆ’ ಎಂದರು.
ಸಂಗೀತ ಸಂಯೋಜಿಸಿರುವ ಮತ್ತು ಶೀರ್ಷಿಕೆ ಹಾಡನ್ನು ಹಾಡಿರುವ ಬಕ್ಕೇಶ್ ಮಾತನಾಡಿ, ‘ಚಿತ್ರದಲ್ಲಿ ಅಚ್ಚ ಹಾಗೂ ಸ್ವಚ್ಛ ಕನ್ನಡದ ಹಾಡುಗಳಿವೆ. ಒಟ್ಟು ಆರು ಹಾಡುಗಳು ಮತ್ತು ಎರಡು ಬಿಟ್ಗಳಿವೆ. ಮಂಸೋರೆ ಇದೇ ತರಹ ಬೇಕು ಎಂದು ಹೇಳಿ ಹಾಡುಗಳನ್ನು ಮಡಿಸಿಕೊಂಡಿದ್ದಾರೆ. ಅರ್ಜುನ್ ಕೊಳಲು, ನಾರಾಯಣ್ ಶರ್ಮ ಪಿಟೀಲು ಮತ್ತು ರಿತ್ವಿಕ್ ಭಟ್ಟಾಚಾರ್ಯ ಗಿಟಾರ್ ನುಡಿಸಿದ್ದಾರೆ. ಚಿತ್ರಕ್ಕೆ ಅತ್ಯುತ್ತಮ ಸಂಗೀತಗಾರರು ಕೆಲಸ ಮಾಡಿದ್ದು, ಲೈವ್ ವಾದ್ಯಗಳನ್ನು ಬಳಸಿದ್ದೇವೆ’ ಎಂದು ಹೇಳಿದರು. ಕಿರಣ್ ಕಾವೇರಪ್ಪ ಈ ಹಾಡು ಬರೆದಿದ್ದಾರೆ.
ಚಿತ್ರದಲ್ಲಿ ವಿಜಯ್ ಕೃಷ್ಣ ಮತ್ತು ಮೈಸೂರಿನ ಪ್ರಿಯಾಂಕಾ ಕುಮಾರ್ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣವಿದೆ.
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಕಮಾಲ್ ಮಾಡಿದೆ. ಈಗಿನ…
ಬಾಗಲಕೋಟೆ : ಬಾಗಲಕೋಟೆ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಫಲಿತಾಂಶ ಪ್ರಗತಿಯಲ್ಲಿದ್ದು ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಇಲ್ಲಿನ ನವನಗರದ ತೋಟಗಾರಿಕೆ ವಿವಿಯಲ್ಲಿ…
ಅಮರಾವತಿ: ಇಂದು ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ. ಇದೇ ಹೊತ್ತಿನಲ್ಲಿ ನಟಿ…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಪಂಚರಾಜ್ಯ ಚುನಾವಣೆ, ಉಪಚುನಾವಣೆ ಫಲಿತಾಂಶದ ನಂತರ ಸಿಎಂ ಪಟ್ಟಕ್ಕಾಗಿ ಡಿಕೆಶಿ ತಂತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು…
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಡಿಎಂಕೆಗೆ ಟಿವಿಕೆ ಟಾಂಗ್ ಕೊಟ್ಟಿದೆ. ತಮಿಳುನಾಡಿನಲ್ಲಿ ಟಿವಿಕೆ 58ಕ್ಕೂ ಹೆಚ್ಚು…
ಕೃಷ್ಣ ಸಿದ್ದಾಪುರ ಸ್ವಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ: ಮಹಿಳೆಯರಿಂದ ಉತ್ಕೃಷ್ಟ ದರ್ಜೆಯ ಜೇನು ಸಂಗ್ರಹ ಸಿದ್ದಾಪುರ: ಪ್ರಧಾನ ಮಂತ್ರಿ…