ಎಡಿಟೋರಿಯಲ್

ನಿನ್ನೆ ಮೊನ್ನೆ ನಮ್ಮ ಜನ : ಗೇಲಿ ಮಾಡದೆ ಯಾರೊಬ್ಬರನ್ನೂ ಬಿಡದ ಚಂಪಾ

ಆಟೋಗ್ರಾಫ್ ಕೇಳಿದರೆ ಬರೆಯುತ್ತಿದ್ದುದು ‘ಸಂಕ್ರಮಣಕ್ಕೆ ಚಂದಾದಾರರಾಗಿ!’

-ಜೆ.ಬಿ.ರಂಗಸ್ವಾಮಿ, ವಿಶ್ರಾಂತ ಪೊಲೀಸ್ ಅಧಿಕಾರಿ, ಮೈಸೂರು

‘ಯಾವುದನ್ನೇ ಆಗಲಿ ನಾನು ಪ್ರೀತಿಯಿಂದಲೇ ಮಾಡುತ್ತೇನೆ. – ದ್ವೇಷಿಸುವುದನ್ನೂ ಕೂಡಾ!’ ಎಂದು ಸಾರಿದ ಕವಿ ಚಂದ್ರಶೇಖರ ಪಾಟೀಲ (ಚಂಪಾ) ಯಾರೊಂದಿಗೂ ಜಗಳಾಡದೆ, ಟೀಕಿಸದೆ ಬಿಟ್ಟವರಲ್ಲ. ಆದರದು ವೈಯೂಕ್ತಿಕವಲ್ಲ. ವೈಚಾರಿಕ. ಆದ್ದರಿಂದಲೇ ಎಲ್ಲರ ಜೊತೆಗೂ ಗೆಳೆತನ ಉಳಿಸಿಕೊಂಡವರು. ಅವರು ಇಲ್ಲವಾಗಿ ವರ್ಷವಾಗುತ್ತಾ ಬಂತು (೧೦-೦ -೨೦೨೨).
ಜೀವನವಿಡೀ ಹೋರಾಟದ ಬದುಕು ಅವರದು. ಜೆಪಿ ಸಂಪೂರ್ಣ ಕ್ರಾಂತಿ, ಗೋಕಾಕ್, ಬಂಡಾಯ… ಹೀಗೆ ನಾನಾ ಚಳವಳಿಗಳಲ್ಲಿ ತೊಡಗಿಸಿಕೊಂಡೇ ಬಂದರು. ತಾವು ನಂಬಿದ ಸಮಾಜವಾದಿ ಧೋರಣೆಯನ್ನು ಬದುಕಿನುದ್ದಕ್ಕೂ ಅಳವಡಿಸಿಕೊಂಡು ಬದುಕಿದವರು ಅವರು.
ಚಂಪಾರ ವ್ಯಕ್ತಿತ್ವಕ್ಕೆ ಅನೇಕ ಆಯಾಮಗಳಿವೆ. ಕವಿ, ನಟ, ನಾಟಕಕಾರ, ವಿಮರ್ಶಕ, ಅಧ್ಯಾಪಕ, ಸಂಪಾದಕ, ಸಂಘಟಕ, ಚಳವಳಿಗಾರ… ಹೀಗೆ ಎಲ್ಲದರಲ್ಲೂ ಬೆಸೆದುಕೊಂಡವರು. ನವ್ಯ, ದಲಿತ, ಬಂಡಾಯ, ಒಕ್ಕೂಟ… ಹೀಗೆ ಅನೇಕ ಪಂಥಗಳ ಮುಂಚೂಣಿಯಲ್ಲಿ ನಿಂತವರು. ಕನ್ನಡ ನಾಡು-ನುಡಿಯ ಹೋರಾಟದಲ್ಲಿ ಗೋಕಾಕ್ ಚಳವಳಿ, ಕನ್ನಡ ಪ್ರಾಧಿಕಾರ, ಪರಿಷತ್ತು… ಹೀಗೆ ಹಲವು ಹತ್ತು ನೆಲೆಗಳಲ್ಲಿ ದುಡಿದವರು. ಇವುಗಳೊಂದಿಗೆ ಬದುಕಿನೆಡೆಗೂ ಅಪಾರ ಪ್ರೀತಿ ಇಟ್ಟುಕೊಂಡು ವೈಚಾರಿಕ ಸಾಹಿತ್ಯ, ಮೂಢನಂಬಿಕೆ, ಮತ ಮೌಢ್ಯ ವಿರುದ್ಧದ ಹೋರಾಟ ಮಾಡಿದವರು. ಜೊತೆಗೆ ಒಲವಿನ ಮದುವೆಗಳಿಗೂ ಒತ್ತಾಸೆಯಾಗಿ ನಿಂತವರು.
ಓರ್ವ ಸಾಹಿತಿಯಾಗಿ, ಸಂಘಟಕರಾಗಿ ಬರವಣಿಗೆ, ಭಾಷಣಗಳ ಮೂಲಕವೇ ಅವರದು ನಿಲ್ಲದ ಚಳವಳಿ. ಚಳವಳಿಗಳ ಮೂಲಕವೇ ತಮ್ಮ ಮಾತು, ಅಕ್ಷರ ಕ್ರಿಯೆ ಎಲ್ಲವೂ ರೂಪಿತವಾದವು ಎಂಬ ನಂಬಿಕೆ. ನಾಸ್ತಿಕರಾಗಿದ್ದ ಅವರು ಡಾ.ಕೊವೂರ್, ಪೆರಿಯಾರ್‌ ಆಂದೋಲನಗಳಲ್ಲೂ ಸಕ್ರಿಯರಾಗಿದ್ದರು.
‘ನನ್ನ ಹಣೆ ಬರಹಕ್ಕೆ ನಾನೇ ಹೊಣೆಯಾಗಿರಲು
ನಿನ್ನ ಒಣ ಆಸರವು ನನಗೆ ಬೇಡ’ ಇದವರ ನಿಲುವು.
ಮೊದಲೆಲ್ಲಾ ಅಕಾಡೆಮಿ, ಪರಿಷತ್ತು ಇತ್ಯಾದಿಗಳನ್ನು ಕಟುವಾಗಿ ಟೀಕಿಸುತ್ತಿದ್ದವರು ಕೊನೆಗೆ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತರು. ‘ನಿಮ್ಮ ಸೋಲಿಗೆ ಕಾರಣ? ‘ಪತ್ರಕರ್ತರ ಪ್ರಶ್ನೆಗೆ ಅವರಿತ್ತ ಉತ್ತರ: ‘ಪುನರೂರರ ಗೆಲುವೇ ನನ್ನ ಸೋಲಿಗೆ ಕಾರಣ!‘
ಓರ್ವ ವ್ಯಕ್ತಿ ಇಷ್ಟೆಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವೇ? ಪದೇ ಪದೆ ಜೈಲು, ಲಾಕಪ್ಪು, ಲಾಠಿ ಕಂಡರೂ ಹೋರಾಟ ಮುಂದುವರಿಸಿಕೊಂಡು ಹೋಗಲು ಸಾಧ್ಯವೇ? ಎಂದು ಯಾರಾದರೂ ಬೆರಗಾಗಿ ಬಿಡಬೇಕು. ಚಂಪಾರೇ ಹಾಗೆ. ಸದಾ ಚಟಪಟ ಚಟುವಟಿಕೆ. ಎಂದೂ ಕೈಚೆಲ್ಲಿ ಸುಮ್ಮನೆ ಕೂತವರಲ್ಲ. ಹಿಡಿದ ಕೆಲಸ ಬಿಡದೆ ಸಾಧಿಸಿ ತೋರಿಸಿದವರು. ಸಂಕ್ರಮಣ ಸಾಹಿತ್ಯಿಕ ಪತ್ರಿಕೆಯನ್ನು 52 ವರ್ಷಗಳ ಕಾಲ ಏಕಾಂಗಿಯಾಗಿ ನಿರಂತರ ನಡೆಸಿಕೊಂಡು ಬಂದದ್ದು ಅವರ ಛಲಕ್ಕೆ ಸಾಕ್ಷಿ. ಆರ್ಥಿಕ ಬಲವಿಲ್ಲದ ಸಂಕ್ರಮಣಕ್ಕೆ ಓದುಗರೇ ಶಕ್ತಿ. ಅದಕ್ಕೆ ಚಂದಾ ವಸೂಲಿ ಕೂಡ ಸ್ವತಃ ಚಂಪಾರದ್ದೇ. ‘ಚಂದಾ ಪಾಟೀಲ’ ಎಂದು ತಮ್ಮನ್ನೇ ಗೇಲಿ ಮಾಡಿಕೊಂಡರು. ಯಾರಾದರೂ ಆಟೋಗ್ರಾಫ್ ಕೇಳಿದರೆ ಬರೆಯುತ್ತಿದ್ದ ಮಾತು: ಸಂಕ್ರಮಣಕ್ಕೆ ಚಂದಾದಾರರಾಗಿ!
ಇಷ್ಟೆಲ್ಲಾ ಹೋರಾಟಗಳಲ್ಲಿದ್ದರೂ ವೈಯೂಕ್ತಿಕವಾಗಿ ತುಂಬ ಸರಸಿ. ಕುರತೇಟು ಹೊಡೆದಂತಿದ್ದ ಅವರ ready wit ಮಾತುಗಳಲ್ಲಿದ್ದ ಹೊಳಹು flashes ಜಾಜ್ವಲತೆ ಚಂಪಾಗೆ ಮಾತ್ರವೇ ಸಾಧ್ಯ.
ಮೊದಲು ಲಕ್ಷ್ಮಣ ಗೆರೆ ಹೊಡೆದ. ಅದರ ಮೇಲೆ ನಿಂತ ರಾವಣ line ಹೊಡೆದ
ಆಕೆ ಓಕೆ. ಈಕೆ? ಜೋಕೆ!
ಟಿಂಗರ ಬುಡ್ಡಣ್ಣ ನಾಟಕದಲ್ಲಿ ಪ್ರೊಫೆಸರ್ ಕೊಟ್ಟ ಶಿಫಾರಸು ಪತ್ರ:
‘ಇಂವಗೆ ರಾಷ್ಟ್ರಪತಿ ಕೆಲಸದಿಂದ ಫ್ಯೂನನ ಕೆಲಸದವರೆಗೆ ಏನು ಬೇಕಾದ್ರೂ ಧಾರಾಳವಾಗಿ ಕೊಡಬಹುದು!’ ಎಂದು ಬರೆದುಕೊಟ್ಟು
ಆಮೇಲೆ ಅಂದರು: ‘ರಾಷ್ಟ್ರಪತಿಯಾದ್ರ ಮರೆಯಾದೆ ಏರ್ ಟಿಕೆಟ್ ಕಳಿಸು. ನಿನ್ನ ನೋಡೋದಿಕ್ಕೆ ಡೆಲ್ಲಿಗೆ ನಾವೇ ಬರ್ತೀವಿ. ಪ್ಯೂನ ಗೀನ ಆದ್ರೆ ನೀನಾ ಬಂದು ನೋಡು!’.
ಉಪ್ಪು ತಿಂದವ ನೀರು ಕುಡಿಯಲೇಬೇಕು ಅಂದರೆ ಅದು ಒಳ್ಳೆಯ ಗಾದೆ ಮಾತು.
ನೀರು ಕುಡದಾಂವ … ಹುಯ್ಯ ಬೇಕು ಅಂದ್ರೆ ಅದೆಂಗೆ ಪೋಲಿ ಮಾತು? ಕೇಳ್ತಾರೆ ಚಂಪಾ.
ಜೆಪಿ ಚಳವಳಿ ವೇಳೆ, ಸಾವಿರದ ಒಂಬೈನೂರ ಎಪ್ಪತ್ತರ ದಶಕದಲ್ಲಿ ನಮ್ಮ ಯುವಕರ ಮಾತುಗಳಲ್ಲಿ ಅತಿ ಹೆಚ್ಚು ಪ್ರಸ್ತಾಪವಾಗುತ್ತಿದ್ದ ಹೆಸರೆಂದರೆ ಚಂಪಾ. ನಾವೆಲ್ಲಾ ಅವರ ಬರಹಕ್ಕಿಂತ ಮಾತಿನ ಮೋಡಿಗೆ ಮರುಳಾದದ್ದೇ ಹೆಚ್ಚು. ಗಂಭೀರ ಗೋಷ್ಠಿಗಳಲ್ಲಿ ಮಾತಾಡಿದರೂ ಅಲ್ಲೊಂದು ನಗೆ ಚಿಮ್ಮಿಸುವ ಜಾಣ್ಮೆ ಅವರಿಗಿತ್ತು. ರಣ ಗಂಭೀರ ಪ್ರೊ.ಎಂಡಿಎನ್ ಕೂಡ ಹಲ್ಲು ಬಿಟ್ಟಿದ್ದುಂಟು. ಅವರು ಆಡಿಕೊಳ್ಳದ, ಲೇವಡಿ ಮಾಡದ ವ್ಯಕ್ತಿ, ವಸ್ತುಗಳೇ ಇರಲಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಅಡ್ಡೆಸರು ಇಡುತ್ತಿದ್ದ ಮಹಾನ್ ಜೋಯಿಸರು ಅವರು.

ಓರ್ವ ವ್ಯಕ್ತಿ ಇಷ್ಟೆಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವೇ? ಪದೇ ಪದೆ ಜೈಲು, ಲಾಕಪ್ಪು, ಲಾಠಿ ಕಂಡರೂ ಹೋರಾಟ ಮುಂದುವರಿಸಿಕೊಂಡು ಹೋಗಲು ಸಾಧ್ಯವೇ? ಎಂದು ಯಾರಾದರೂ ಬೆರಗಾಗಿ ಬಿಡಬೇಕು. ಚಂಪಾರೇ ಹಾಗೆ. ಸದಾ ಚಟಪಟ ಚಟುವಟಿಕೆ. ಎಂದೂ ಕೈಚೆಲ್ಲಿ ಸುಮ್ಮನೆ ಕೂತವರಲ್ಲ. ಹಿಡಿದ ಕೆಲಸ ಬಿಡದೆ ಸಾಧಿಸಿ ತೋರಿಸಿದವರು.

(ಮುಂದುವರಿಯುವುದು)

 

andolanait

Recent Posts

ಗ್ರಾಮೀಣ ಕುಡಿಯುವ ನೀರಿಗೆ ಪ್ರಥಮ ಆದ್ಯತೆ:ಈಶ್ವರ ಖಂಡ್ರೆ

ಬೆಂಗಳೂರು : ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವುದು ತಮ್ಮ ಪ್ರಥಮ ಆದ್ಯತೆಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು…

10 hours ago

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ : ಮತ್ತೊಮ್ಮೆ ಶೇ.50 ರಿಯಾಯಿತಿ

ಬೆಂಗಳೂರು: ರಾಜ್ಯದಲ್ಲಿ ನೂತನವಾಗಿ ರಚನೆಯಾಗಿರುವ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ. ಈ ಹಿಂದೆ ಜಾರಿಯಲ್ಲಿದ್ದ ಶೇ.50ರಷ್ಟು…

16 hours ago

ಬಿಜೆಪಿಗೆ ರಾಜೀನಾಮೆ ಬೆನ್ನಲ್ಲೆ ಹೊಸ ರಾಜಕೀಯ ಚಳುವಳಿ ಪ್ರಾರಂಭಿಸುವುದಾಗಿ ಫೋಷಿಸಿದ ಅಣ್ಣಾಮಲೈ

ಚೆನ್ನೈ : ತಮಿಳುನಾಡು ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಮಾಜಿ ಐಪಿಎಸ್ ಅಧಿಕಾರಿ ಹಾಗೂ ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ…

16 hours ago

ರಾಜ್ಯಸಭೆ ಚುನಾವಣೆ : ನಾಮಪತ್ರ ಸಲ್ಲಿಸಿದ ಮಲ್ಲಿಕಾರ್ಜುನ್‌ ಖರ್ಗೆ

ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಎರಡನೇ ಬಾರಿಗೆ ರಾಜ್ಯಸಭೆ ಸದಸ್ಯರಾಗಲು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಲೋಕಸಭೆಯ ವಿರೋಧ…

17 hours ago

ರಾಮಲಿಂಗರೆಡ್ಡಿ ಬೆನ್ನಲ್ಲೇ ಅಸಮಾಧಾನ ಹೊರ ಹಾಕಿದ ಮುನಿಯಪ್ಪ : ಬೇರೆ ಖಾತೆಗೆ ಬೇಡಿಕೆ

ಬೆಂಗಳೂರು : ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರ ಹಠಾತ್ ರಾಜೀನಾಮೆ ಬೆನ್ನಲ್ಲೇ, ಮತ್ತೊಬ್ಬ ಹಿರಿಯ ನಾಯಕ ಹಾಗೂ ಆಹಾರ ಸಚಿವ…

19 hours ago

ಬಿಜೆಪಿಗೆ ಅಣ್ಣಾಮಲೈ ಗುಡ್‌ಬೈ ಕೊನೆಗೂ ರಾಜೀನಾಮೆ ಅಂಗೀಕಾರ

ಚೆನ್ನೈ : ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ.…

20 hours ago