ಎಡಿಟೋರಿಯಲ್

ವೈಡ್ ಆಂಗಲ್ : ನದವ್ ಲಿಪಿದ್ ಮಾತಿಗೆ ಗಟ್ಟಿಯಾಗುತ್ತಿರುವ ಪರ-ವಿರೋಧ

ಚಿತ್ರೋತ್ಸವದಲ್ಲಿ ‘ಕಾಶ್ಮೀರ್ ಫೈಲ್ಸ್’ ಕುರಿತು ವಿವಾದಾತ್ಮಕ ಹೇಳಿಕೆ

೫೩ನೇ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ತೆರೆಬಿದ್ದಿದೆ. ಆದರೆ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತೀರ್ಪುಗಾರರ ಸಮಿತಿಯ ಅಧ್ಯಕ್ಷ, ಇಸ್ರೇಲಿ ಚಿತ್ರ ನಿರ್ದೇಶಕ ನದವ್ ಲಿಪಿದ್ ಸ್ಪರ್ಧೆಯಲ್ಲಿದ್ದ ೧೫ ಚಿತ್ರಗಳಲ್ಲಿ ‘ಕಾಶ್ಮೀರ್ ಫೈಲ್ಸ್’ ಬಗ್ಗೆ ಆಡಿರುವ ಮಾತುಗಳು ವಿವಾದದ ಅಲೆಗಳನ್ನೆಬ್ಬಿಸಿದೆ. ‘ಅದೊಂದು ಪ್ರಚಾರದ ಉದ್ದೇಶದ ಅಸಭ್ಯ ಚಿತ್ರ. ಇಂತಹ ಪ್ರತಿಷ್ಠಿತ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಅದು ಸೇರ್ಪಡೆ ಆದದ್ದು ಅಚ್ಚರಿ ಮೂಡಿಸಿತು’ ಎಂದದ್ದಲ್ಲದೆ, ‘ಇದು ತಮ್ಮೊಬ್ಬರ ಅಭಿಪ್ರಾಯವಲ್ಲ, ಇಡೀ ತೀರ್ಪುಗಾರರ ಅಭಿಪ್ರಾಯ’ ಎಂದಿದ್ದರು. ಮಾತ್ರವಲ್ಲ, ಈ ವಿಷಯವನ್ನು ಸಾರ್ವಜನಿಕವಾಗಿ ಹೇಳುವುದು ತಮಗೆ ಸಮಾಧಾನ ತರುವ ವಿಷಯ ಎನ್ನುವ ಮಾತನ್ನೂ ಆಡಿದ್ದರು.
೧೯೯೦ರ ದಶಕದಲ್ಲಿ ಕಾಶ್ಮೀರದಲ್ಲಿ ನಡೆದ ನರಮೇಧದ ಕಥಾನಕ ‘ಕಾಶ್ಮೀರ್ ಫೈಲ್ಸ್/ ಈ ವರ್ಷ ಗಲ್ಲಾಪೆಟ್ಟಿಗೆಯಲ್ಲಿ ಅತ್ಯಂತ ಹೆಚ್ಚುಗಳಿಕೆ ಮಾಡಿದ ಚಿತ್ರಗಳಲ್ಲಿ ಒಂದು, ಈ ಚಿತ್ರಕ್ಕೆ ಕೇಂದ್ರ ಮಾತ್ರವಲ್ಲ, ರಾಜ್ಯ ಸರ್ಕಾರವೂ ತೆರಿಗೆ ವಿನಾಯಿತಿಯನ್ನು ಘೋಷಿಸಿತ್ತು.
ನದವ್ ಲಿಪಿದ್ ಅವರ ಮಾತುಗಳು ಸಹಜವಾಗಿಯೇ ವಿವಾದದ ಕಿಡಿಯನ್ನು ಹಚ್ಚಿತ್ತು. ಇಂತಹ ಮಾತುಗಳು ಮಾಧ್ಯಮಗಳಿಗೆ , ಸಾಮಾಜಿಕ ತಾಣಗಳಿಗೆ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತದೆ. ಪರ, ವಿರೋಧ ಅಭಿಪ್ರಾಯಗಳು ಗಟ್ಟಿಯಾಗಿಯೇ ಎಲ್ಲ ಕಡೆ ಕೇಳತೊಡಗಿವೆ.
ತೀರ್ಪುಗಾರರ ತಂಡದಲ್ಲಿದ್ದ ಇತರ ಸದಸ್ಯರು, ವಿವಾದ ಹೆಚ್ಚುತ್ತಿದ್ದಂತೆೆಯೇ, ‘ಇದು ಅವರ ವೈಯೂಕ್ತಿಕ ಅಭಿಪ್ರಾಯ ಸದಸ್ಯರೆಲ್ಲರ ಜಂಟಿ ಅಭಿಪ್ರಾಯ ಅಲ್ಲ’ ಎಂದು ಅದರಿಂದ ಅಂತರ ಕಾಯ್ದುಕೊಂಡಿದ್ದಾರೆ. . ‘ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ, ನಾವೆಲ್ಲ ಜೊತೆಯಾಗಿ ಕೈಗೊಂಡ ತೀರ್ಮಾನ ಇದು, ಅವರು ಇದರಿಂದ ದೂರವಾಗಲು ಅವರದೇ ಆದ ಕಾರಣ ಇರಬಹುದು’ ಎಂದು ಈ ಕುರಿತಂತೆ ಕೇಳಲು ತಮ್ಮನ್ನು ಸಂಪರ್ಕಿಸಿದ ಮಾಧ್ಯಮಗಳಿಗೆ ಲಿಪಿದ್ ಹೇಳಿದ್ದಾರೆ.
ಸಾಮಾನ್ಯವಾಗಿ ಯಾವುದೇ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸುವ ವೇಳೆ, ತಮ್ಮ ಆಯ್ಕೆಯು ಕುರಿತಂತೆ ತೀರ್ಪುಗಾರರ ಪರವಾಗಿ ಅಧ್ಯಕ್ಷರು ಇಲ್ಲವೇ ಸಂಬಂಧಪಟ್ಟವರು ವಿವರಿಸುವುದು ವಾಡಿಕೆ. ಆಯ್ಕೆ ಮಾಡಿದ ಚಿತ್ರ ಅಥವಾ ಚಿತ್ರಗಳು ಯಾವ ಕಾರಣಕ್ಕಾಗಿ ಆಯ್ಕೆಯಾಯಿತು ಎನ್ನುವುದನ್ನು ಹೇಳಲಾಗುತ್ತದೆ. ಆದರೆ ಅಲ್ಲಿ ಹಾಗಾಗಲಿಲ್ಲ. ಅಂತಾರಾಷ್ಟ್ರೀಯ  ಸ್ಪರ್ಧಾವಿಭಾಗದಲ್ಲಿ ಹದಿನೈದು ಚಿತ್ರಗಳಿದ್ದವು.
ಅತ್ಯುತ್ತಮ ಚಿತ್ರಕ್ಕಿರುವ ಸ್ವರ್ಣಮಯೂರ ಪ್ರಶಸ್ತಿ (ನಲವತ್ತು ಲಕ್ಷ ರೂ. ನಗದು ಸಹಿತ)ಯನ್ನು ವ್ಯಾಲೆಂಟಿನಾ ಮೌರೆಲ್ ನಿರ್ದೇಶಿಸಿದ ಸ್ಪ್ಯಾನಿಷ್ ಚಲನಚಿತ್ರ ‘ಐ ಹ್ಯಾವ್ ಎಲೆಕ್ಟ್ರಿಕ್ ಡ್ರೀಮ್ಸ್’ ಪಡೆಯಿತು. ಇರಾನ್ ಚಿತ್ರ ‘ನೋ ಎಂಡ್’ನ ನಿರ್ದೇಶಕ ನಾಡರ್ ಸಾಯಿವರ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ತಂದಿತು. ಹದಿನೈದು ಲಕ್ಷ ನಗದಿನೊಂದಿಗೆ ರಜತ ಮಯೂರ ಪ್ರಶಸ್ತಿ ಇದು.
ಅತ್ಯುತ್ತಮ ನಟನಾಗಿ ‘ನೋ ಎಂಡ್’ನ ವಾಹಿದ್ ಮೊಬಸ್ಸೆರಿ, ಅತ್ಯುತ್ತಮ ನಟಿಯಾಗಿ ‘ಐ ಹ್ಯಾವ್ ಎಲೆಕ್ಟ್ರಿಕ್ ಡ್ರೀಮ್ಸ್’ ನ ಡೇನಿಯಲಾ ಮರಿನ್ ನವಾರೊ ಪ್ರಶಸ್ತಿ ಪಡೆದರೆ, ತೀರ್ಪಗಾರರ ವಿಶೇಷ ಪ್ರಶಸ್ತಿಯನ್ನು ಲಾವ್ ಡಾಂಜ್ ತಮ್ಮ ‘ವೆನ್ ದಿ ವೇವ್ಸ್ ಆರ್ ಗಾನ್’ ಚಿತ್ರಕ್ಕಾಗಿ ಪಡೆದರು. ನಿರ್ದೇಶಕರ ಮೊದಲ ಅತ್ಯುತ್ತಮ ಚಿತ್ರಕ್ಕಿರುವ ಪ್ರಶಸ್ತಿ ಅಸಿಮಿನಾ ಪ್ರೋಡ್ರೂ ಅವರ ‘ಬಿಹೈಂಡ್ ದಿ ಹೇ ಸ್ಟಾಕ್ಸ್’ಗೆ ಸಂದಿದೆ. ‘ಸಿನಿಮಾ ಬಂಡಿ’ ಚಿತ್ರದ ಪ್ರವೀಣ್ ಕಂಡ್ರೇಗುಲ ಅವರಿಗೆ ವಿಶೇಷ ಉಲ್ಲೇಖ ಸಂದಿದೆ. ಕನ್ನಡದ ‘ನಾನು ಕನಸು’ ಕೂಡ ಸ್ಪರ್ಧೆಯಲ್ಲಿದ್ದ ಐಸಿಎಫ್‌ಟಿ-ಯುನೆಸ್ಕೊ ಗಾಂಧಿ ಪದಕವನ್ನು ಸ್ಪರ್ಧೆಯಲ್ಲಿ ಇರಾನಿ ಚಿತ್ರ ‘ನರ್ಗೇಸಿ’ ಪಡೆಯಿತು.
ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಚಿತ್ರಗಳ ಕುರಿತಂತೆ ಯಾವುದೇ ಪ್ರಸ್ತಾಪ ಮಾಡದೆ, ಲಿಪಿದ್, ಕೇವಲ ‘ದ ಕಾಶ್ಮೀರ್ ಫೈಲ್ಸ್’ ಕುರಿತಂತೆ ಮಾತ್ರ ಪ್ರಸ್ತಾಪಿಸಿರುವುದು, ವೈಯೂಕ್ತಿಕ ಅಭಿಪ್ರಾಯವಾದರೂ, ಅದನ್ನು ಸಾರ್ವಜನಿಕ ಸಮಾರಂಭದಲ್ಲಿ ಪ್ರಸ್ತಾಪಿಸಿರುವುದು ಸರಿಯಲ್ಲ ಎನ್ನುವ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸುತ್ತಾರೆ. ಒಂದು ವೇಳೆ ಈ ಚಿತ್ರ ಕುರಿತು ಮಾತನಾಡುವುದೇ ಆಗಿದ್ದರೆ, ತೀರ್ಪುಗಾರರ ಪತ್ರಿಕಾಗೋಷ್ಠಿಯಲ್ಲಿ ಮಾತಾಡಬಹುದಿತ್ತು. ವೇದಿಕೆಯ ಮೇಲೆ ಹೇಳಿದ್ದು ಸರಿಯಲ್ಲ ಎನ್ನುವುದು ಅವರ ಮಾತು.
ತೀರ್ಪುಗಾರರ ಸಮಿತಿಯ ಸದಸ್ಯರ ಒಟ್ಟು ಅಭಿಪ್ರಾಯ ಇದು ಎಂದು ಪುನರುಚ್ಚರಿಸಿರುವ ಲಿಪಿದ್, ಇದಕ್ಕೆ ಪೂರಕವಾಗಿ ತಮ್ಮ ಬಳಿ ಇ-ಮೇಲ್ ಮತ್ತು ಎಸ್‌ಎಮ್‌ಎಸ್‌ಗಳಿರುವುದಾಗಿ ವಾಧ್ಯಮವೊಂದರ ಸಂದರ್ಶನದಲ್ಲಿ ಹೇಳಿದ್ದಾರೆ. ಈ ನಡುವೆ ಗೋವಾದಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ. ಭಾರತದಲ್ಲಿರುವ ಇಸ್ರೇಲ್ ರಾಯಭಾರಿ, ಲಿಪಿಡ್ ಅವರನ್ನು ತರಾಟೆಗೆ ತಗೆದುಕೊಂಡಿದ್ದಾರೆ. ಮಾತ್ರವಲ್ಲ, ಅವರನ್ನೂ ಕ್ಷಮೆ ಕೋರುವಂತೆ ಕೇಳಿದ್ದಾರೆ. ತಮಗೆ ಯಾರನ್ನೂ ನೋಯಿಸುವ ಉದ್ದೇಶ ಇರಲಿಲ್ಲ, ತಾವು ಕೇವಲ ಚಿತ್ರದ ಕುರಿತಂತೆ ಮಾತ್ರ ಮಾತನಾಡಿದ್ದೇ ಹೊರತು ಬೇರೇನೂ ಅಲ್ಲ. ಅದನ್ನು ಬೇರೊಂದು ರೀತಿಯಲ್ಲಿ ತಿಳಿದು ಯಾರಿಗಾದರೂ ನೋವಾಗಿದ್ದಲ್ಲಿ ನಾನು ಅವರ ಕ್ಷಮೆಯಾಚಿಸುತ್ತೇನೆ ಎಂದು ಮಾಧ್ಯಮವೊಂದಕ್ಕೆ ಬುಧವಾರ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
*
ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಸ್ಪರ್ಧಿಸುವ ಚಿತ್ರಗಳ ಆಯ್ಕೆಯ, ತೀರ್ಪುಗಾರರ ಆಯ್ಕೆ , ಆಯ್ಕೆಯ ಪ್ರಕ್ರಿಯೆ ಇವು ಯಾವತ್ತೂ ವಿವಾದಾತೀತ ಆಗಿರಲು ಸಾಧ್ಯವಿಲ್ಲ. ಕೊಲ್ಕೊತ್ತಾ ಅಂತಾರಾಷ್ಟ್ರೀಯ ಚಿತ್ರೋತ್ಸವದ ಅಪರೂಪದ ಭಾಷಾ ಚಿತ್ರಗಳ ವಿಭಾಗದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗುವ  ಚಿತ್ರಗಳು ಇದಕ್ಕೆ ಒಳ್ಳೆಯ ಉದಾಹರಣೆ. ಕಳೆದ ಕೆಲವು ವರ್ಷಗಳಿಂದ, ಕರ್ನಾಟಕದ ಪ್ರಾದೇಶಿಕ ಭಾಷೆಗಳಾದ ತುಳು, ಕೊಡವ, ಬ್ಯಾರಿ, ಬಂಜಾರ, ಕೊಂಕಣಿ ಚಿತ್ರಗಳು ಸೇರಿದಂತೆ, ಈ ವಿಭಾಗಕ್ಕೆ ಚಿತ್ರಗಳ ಆಯ್ಕೆಯಾಗುತ್ತಿದ್ದವು. ಅಲ್ಲಿನ ಮಧ್ಯವರ್ತಿಯೊಬ್ಬರ ಮೂಲಕ ಈ ಆಯ್ಕೆಯು ಆಗುತ್ತಿತ್ತು. ಕೊಲ್ಕತ್ತದ ಉತ್ಸವ ಮಾನ್ಯತೆ ಪಡೆದಿರುವುದರಿಂದ, ಅಲ್ಲಿ ಪ್ರದರ್ಶನ ಕಂಡ ಚಿತ್ರಗಳು ಆಯ್ಕೆ ಸಮಿತಿಯ ಮುಂದೆ ಹೋಗದೆ ನೇರವಾಗಿ ಸಹಾಯಧನ ಪಡೆಯಬಹುದಿತ್ತು. ಬಹಳ ಕಡಿಮೆ ವೆಚ್ಚದಲ್ಲಿ ಈ ಭಾಷೆಗಳಲ್ಲಿ ಸಿನಿಮಾ ನಿರ್ಮಿಸಿ, ಕೊಲ್ಕತ್ತ ಚಿತ್ರೋತ್ಸವದಲ್ಲಿ ಪ್ರದರ್ಶಿಸಿ, ಸಹಾಯಧನ ಪಡೆಯುವ ಹಲವರಿದ್ದಾರೆ. ಆದರೆ ಈಗ ಅದಕ್ಕೆ ಕೊಂಚ ತಡೆ ಆದಂತಿದೆ.
೨೦೧೯ರ ಸಾಲಿನಲ್ಲಿ ಕೊಲ್ಕತ್ತದಲ್ಲಿ ಕನ್ನಡ ಚಿತ್ರಗಳ ವಿಶೇಷ ವಿಭಾಗವಿತ್ತು. ಅಲ್ಲಿ ಪ್ರದರ್ಶನ ಕಂಡ ಹತ್ತು ಚಿತ್ರಗಳಲ್ಲಿ ಎರಡು ಮೂರು ಚಿತ್ರಗಳನ್ನು ಹೊರತುಪಡಿಸಿದರೆ, ಉಳಿದವು ತೀರಾ ಕಳಪೆ ಗುಣಮಟ್ಟದವುಗಳಾಗಿದ್ದರೂ ಆಯ್ಕೆಯಾಗಿ, ಸಹಾಯಧನಕ್ಕೆ ಅರ್ಹವೆನಿಸಿಕೊಂಡವು. ಈ ಬೆಳವಣಿಗೆಯ ನಂತರ ಸರ್ಕಾರ ತನ್ನ ಆದೇಶದಲ್ಲಿ ಪುಟ್ಟದೊಂದು ಬದಲಾವಣೆ ಮಾಡಿ, ಮಾನ್ಯತೆ ಪಡೆದ ಚಿತ್ರೋತ್ಸವಗಳಲ್ಲಿ ಸ್ಪರ್ಧೆಗೆ ಆಯ್ಕೆಯಾದರೆ ಮಾತ್ರ ನೇರ ಸಹಾಯಧನ ಎಂದು ಹೇಳಿತು.
ಕಳೆದ ವರ್ಷದಿಂದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವೂ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದೆ. ಇದರ ಸ್ಪರ್ಧಾವಿಭಾಗಕ್ಕೆ ಆಯ್ಕೆಯಾಗುವ ಕನ್ನಡ ಚಿತ್ರಗಳೂ, ಸರ್ಕಾರದ ನೀತಿಯಲ್ಲಿ ಬದಲಾವಣೆ ಇಲ್ಲದೆ ಇದ್ದರೆ, ವಿಶೇಷ ಸಹಾಯಧನಕ್ಕೆ ಅರ್ಹವಾಗುತ್ತವೆ. ಕಳೆದ ಬಾರಿಯ ಆಯ್ಕೆಯು ಕುರಿತಂತೆ ಅಪಸ್ವರಗಳು, ಆರೋಪಗಳು ಕೇಳಿಬಂದಿವೆ. ಯಾವುದೇ ಚಿತ್ರೋತ್ಸವದ ಪ್ರತಿಷ್ಠೆಗೆ ಸ್ಪರ್ಧೆಯಲ್ಲಿರುವ ಚಿತ್ರಗಳು ಕನ್ನಡಿ ಹಿಡಿಯುತ್ತವೆ. ೧೪ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಪೂರ್ವಸಿದ್ಧತೆ ಆರಂಭವಾಗಿದೆ. ಅಧಿಕೃತ ಪ್ರಕಟಣೆ ಆಗಬೇಕಷ್ಟೆ. ಕಳೆದ ವರ್ಷ ಮುಖ್ಯಮಂತ್ರಿಗಳು, ಮಾರ್ಚ್ ೩, ಕನ್ನಡದ ಮೊದಲ ಚಿತ್ರ ‘ಸತಿ ಸುಲೋಚನಾ’ ತೆರೆಕಂಡ ದಿನವೇ ಪ್ರತಿವರ್ಷ ಚಿತ್ರೋತ್ಸವದ ಉದ್ಘಾಟನೆ ಎಂದಿದ್ದರು. ಅಂದೇ ಆಗುವುದಾದರೆ ಇನ್ನು ಕೇವಲ ೮೮ ದಿನಗಳಲ್ಲಿ ಎಲ್ಲ ಸಿದ್ಧತೆಗಳೂ ಆಗಬೇಕು. ಮುಖ್ಯವಾಗಿ ವಿವಿಧ ವಿಭಾಗಗಳ ಸ್ಪರ್ಧೆಗೆ ಚಿತ್ರಗಳ ಆಹ್ವಾನ ಆಗಬೇಕು. ಆಯ್ಕೆ  ಪ್ರಕ್ರಿಯೆಗೆ ಕಾಲಾವಕಾಶ ಕಡಿಮೆ. ಅಕಾಡೆಮಿಯ ಅಧ್ಯಕ್ಷರಾಗಿರುವ ಅಶೋಕ್ ಕಶ್ಯಪ್ ಮುಂದೆ ಇರುವ ದೊಡ್ಡ ಸವಾಲು ಇದು.

andolanait

Recent Posts

ಓದುಗರ ಪತ್ರ: ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ಪ್ರಶ್ನಾರ್ಹ

ಇತ್ತೀಚೆಗೆ ರಾಜ್ಯಸಭಾ ಸದಸ್ಯ, ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ಉತ್ತರಾಖಂಡ್ ರಾಜ್ಯದ ಹಲ್ ದ್ವಾನಿಯ ರಾಮಲೀಲಾ…

2 hours ago

ಓದುಗರ ಪತ್ರ: ಎನ್‌ಕೌಂಟರ್ ನಿಗೂಢತೆ?

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೂವರು ಮೃತಪಟ್ಟಿರುವ ಪ್ರಕರಣ ಹಲವಾರು…

2 hours ago

ಓದುಗರ ಪತ್ರ: ಜಂಬೂಸವಾರಿಯ ಹೊಸ ಸಾರಥಿ ಯಾರು?

ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿಯಲ್ಲಿ ೭೫೦ ಕೆಜಿ ತೂಕದ ಅಂಬಾರಿ ಹೊತ್ತು ಸಾಗುತ್ತಿದ್ದ ಅಭಿಮನ್ಯು ಆನೆ ಇನ್ನುಮುಂದೆ ಬರುವುದಿಲ್ಲ…

2 hours ago

ಧ್ವನಿಹೀನರಿಗೆ ಧ್ವನಿಯಾಗಿದ್ದ ದೇವರಾಜ ಅರಸು

ಎಚ್.ಹಾಲಪ್ಪ ಇಂದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜಯಂತಿ ದೇಶದಲ್ಲಿ ಜನಪ್ರತಿನಿಧಿಗಳ ಸಂಖ್ಯೆ ಸಾವಿರಾರು. ಆದರೆ, ಕಾಲದ ಪರೀಕ್ಷೆಯಲ್ಲಿ ಮುತ್ಸದ್ದಿ…

2 hours ago

ನೀರಿಲ್ಲದಿದ್ದರೂ ಭರ್ತಿಯಾಗುತ್ತಿದೆ ಕಸುವಿನಹಳ್ಳಿ ಕೆರೆ!

ಎಸ್.ಎಸ್.ಭಟ್ ಸುತ್ತಲಿನ ಕ್ರಷರ್‌ನಿಂದ ತಂದು ಹಾಕುತ್ತಿರುವ ರಾಶಿ ದೂಳಿನಿಂದ ತುಂಬುತ್ತಿದೆ ಕೆರೆ; ಗ್ರಾಮಸ್ಥರ ಆಕ್ರೋಶ ನಂಜನಗೂಡು: ಮಳೆ ಬಂದರೆ ನೀರಿನಿಂದ…

2 hours ago