ಎಡಿಟೋರಿಯಲ್

ಬದುಕುವ ರೀತಿಯೇ ಅಪಾಯಕಾರಿಯಾಗಿದ್ದರೆ?

ಅವನನ್ನು ಕೊಚ್ಚಿದರಂತೆ. ಇವನನ್ನು ಅಮಾನುಷವಾಗಿ ಕಡಿದರಂತೆ. ಈ ಬರ್ಬರ ಕೊಲೆ ಸರಣಿಗೆ ಕೊನೆ ಮೊದಲಿಲ್ಲವೇ? ದಿನವೂ ಲಾಂಗು ಮಚ್ಚುಗಳೇ ವಿಜೃಂಭಿಸಿದರೆ ಜನ ಸಾಮಾನ್ಯರ ಗತಿಯೇನು? ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಪೊಲೀಸರೇಕೆ ನಿಷ್ಕ್ರಿಯರಾಗಿದ್ದಾರೆ?… ನಿತ್ಯವೂ ಇವೇ ಚರ್ಚೆಗಳು. ಕೊನೆ ಮೊದಲಿಲ್ಲದ ಪ್ರಶ್ನೆಗಳು.

ಸರಣಿ ದರೋಡೆ, ಕಳ್ಳತನಗಳೋ, ಗ್ಯಾಂಗ್ ರೇಪ್, ರೌಡಿಸಂ, ಕೋಮು ಗಲಭೆಯೋ ಆದರೆ ಪೊಲೀಸ್ ವೈಫಲ್ಯವೆನ್ನಬಹುದು. ದುಷ್ಟಶಕ್ತಿಗಳನ್ನು ನಿಯಂತ್ರಿಸಿಲ್ಲ ಎನ್ನಬಹುದು. ವ್ಯಕ್ತಿಗತ ಹಗೆತನದ ಹತ್ಯೆಗಳಲ್ಲಿ ಪೊಲೀಸ್ ವೈಫಲ್ಯ ಕಡಿಮೆ. ಅದು ತೀರ ವೈಯಕ್ತಿಕವಾದದ್ದು ಮತ್ತು ಎಂದಾದರೂ, ಯಾವುದಾದರೂ ರೂಪದಲ್ಲಿ ಸಂಭವಿಸಲೇ ಬೇಕಾದದ್ದು. ಇಪ್ಪತ್ತು ದಿನಕ್ಕೂ ಆಗಬಹುದು. ಇಪ್ಪತ್ತು ವರ್ಷಕ್ಕೂ ನಡೆಯಬಹುದು.

ಕಾರಣ : ಕೊಲೆಯಾದವನ ಜೀವನ ವಿಧಾನ, ಸುತ್ತಮುತ್ತಲಿನವರೊಂದಿಗೆ ನಡೆದುಕೊಳ್ಳುವ ರೀತಿ, ಅವನು ಬದುಕಿದ್ದ ಬಗೆಯೇ ಭೀಕರ ಕೊಲೆಯನ್ನು ಆಹ್ವಾನಿಸಿಕೊಳ್ಳುವಂತಿತ್ತು. ಸಿಕ್ಕಿದವರ ಮೇಲೆಲ್ಲಾ ಗೂಂಡಾಗರ್ದಿ ಮಾಡಿಕೊಂಡು, ಅಮಾಯಕರಿಗೆ ಮೋಸ, ವಂಚನೆ, ದಗಾಕೋರತನ ಮಾಡಿ ಸರ್ವನಾಶ ಮಾಡಿದ್ದವರು, ಕಂಡವರ ಸಂಸಾರಗಳನ್ನು ಹಾಳುಮಾಡಿದ್ದ ಕಾಮಪಿ ಪಾಸುಗಳು ಹೇಗೆ ತಾನೇ ಸ್ವಾಭಾವಿಕ ಸಾವು ಕಂಡಾರು? ಬದುಕಿದ್ದಾಗ ಹತ್ತು ಜನಕ್ಕೆ ಅಯ್ಯೋ ಅನ್ನಿಸಿದವನು, ಕೆಲವಾರು ವರ್ಷ ತಾನುಂಟೋ ಮೂಲೋಕ ವುಂಟೋ ಎಂಬಂತೆ ಮೆರೆಯಬಹುದು. ಜನರು ತನ್ನ ದುಷ್ಕತ್ಯಗಳನ್ನು ಮರೆಯಲಿ ಎಂದು ಸಮಾಜ ಸೇವಕನ ವೇಷ ಧರಿಸಬಹುದು. ದೈವಭಕ್ತ ದುರಂಧರನಂತೆ ಧರ್ಮಸೇವಾನಿರತನಂತೆ ಸೋಗು ಹಾಕಬಹುದು. ತಾನೊಬ್ಬ ಸಂಪೂರ್ಣ ಬದಲಾದ ಮನುಷ್ಯ, ಎಲ್ಲವನ್ನೂ ಬಿಟ್ಟು ಈಗ ಸಮಾಜಸೇವೆಯಲ್ಲಿ ತೊಡಗಿದ್ದೇನೆ ಎಂದು ಬೋಂಕಬಹುದು.

ಜನಗಳಿಗೆ ಜ್ಞಾಪಕಶಕ್ತಿ ಕಡಿಮೆ ಎನ್ನುತ್ತಾರೆ. ಅವರು ಹಿಂದಿನದೆಲ್ಲವನ್ನೂ ಸುಲಭವಾಗಿ ಮರೆತುಬಿಡುತ್ತಾರೆ ಎನ್ನುವುದುಂಟು. ಅದು ನಿಜವೂ ಇರಬಹುದು. ತುಳಿದಿದ್ದ ಕತ್ತೆ ಮರೆತು ಮುನ್ನಡೆಯಬಹುದೇನೋ. ತುಳಿಸಿಕೊಂಡ ನಾಗರಹಾವು? ಅದೇಕೆ ಮರೆತೀತು? ನಾಗರಕ್ಕೆ ಸೇಡು ಹದಿನಾಲ್ಕು ವರ್ಷ. ನರನಿಗೆ ನಲವತ್ತನಾಲ್ಕು ವರುಷ!

ವ್ಯಕ್ತಿಗತವಾದ ಅವನ ನೋವಿನ ನೆನಪುಗಳು ಮರೆಯುವುದಿಲ್ಲವಲ್ಲ? ರೌಡಿ ಮಾಡಿರುವ ಮೋಸ, ವಂಚನೆಯ ನೀಚ ಕೆಲಸಗಳು ವರ್ಷ ಉರುಳಿದರೂ ಹಸಿರಾಗಿರುತ್ತವೆ. ಅವನಿಂದಾಗಿ ತಮ್ಮ ಕುಟುಂಬವೇ ಸರ್ವನಾಶವಾಯಿತೆಂಬ ಸೇಡಿನ ಕುದಿತ ಸದಾ ಜೀವಂತವಿರುತ್ತದೆ. ಪ್ರತೀಕಾರ ತೀರಿಸಲು ಆತ ತಡಮಾಡಬಹುದೇನೋ. ಹಾಳಾಗಿ ಹೋಗಲಿ ಎಂದು ಮರೆತಂತೆ ಸುಮ್ಮನಾಗಿರಲೂಬಹುದು. ಆದರೆ ನೋವಿನ ದಳ್ಳುರಿ, ತನ್ನ ಕುಟುಂಬಸ್ಥರು ಅಯ್ಯೋ ಎಂದು ನರಳಿ ಹಾಕಿದ್ದ ಕಣ್ಣೀರನ್ನು ಅವನ ಒಳಮನಸ್ಸು ಮರೆವುದೆಂತು? ಸೇಡು ತೀರಿಸುವ ಸಂದರ್ಭ ಬಂದರೆ ಅವನೆಂದಿಗೂ ಬಿಡಲಾರ. ತನ್ನಿಂದಾಗದಿದ್ದರೆ ಬೇರೆಯವರಿಂದಲಾದರೂ ಮಾಡಿಸದಿರಲಾರ. ಸೇಡು ತೀರಿದ ಮೇಲೆಯೇ ಅವನ ಒಡಲ ದಳ್ಳುರಿ ಶಮನವಾಗಲು ಸಾಧ್ಯ. ನಾಜಿ ಸೈನಿಕರಿಂದ ನಾಶವಾಗಿದ್ದ ಯೆಹೂದ್ಯರ ಮಕ್ಕಳು ಮೊಮ್ಮಕ್ಕಳು ಹುಡುಕಿ ಹುಡುಕಿ ಸೇಡು ತೀರಿಸಿಕೊಂಡದ್ದನ್ನು ಹೇಗೆ ಮರೆಯಲಾದೀತು? ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಎಲ್ಲೋ ಅಜ್ಞಾತವಾಗಿದ್ದ ಐಕ್ ಮನ್ ಥರದವರನ್ನು ಹುಡುಕಿ ಹಿಡಿದದ್ದು ಕ್ಲಾಸಿಕ್ ಉದಾಹರಣೆ.

ಜನರಿಗೆ ಬೀಭತ್ಸವಾಗಿ ಕೊಲೆಯಾದವನ ದಾರುಣ ಚಿತ್ರ ಮಾತ್ರವೇ ಕಾಣುತ್ತದೆ. ಸತ್ತವನಿಗಾಗಿ ಮಮ್ಮಲ ಮರುಗುತ್ತಾರೆ. ಕೊಲೆಯಾದವನ ಹೀನತನಗಳು ಅವರಿಗೆ ಗೊತ್ತಿಲ್ಲವೆಂದಲ್ಲ. ಅದೊಂದು ಕೆಟ್ಟಕಾಲ. ಆಗ ಹಾಗೆ ಹಾರಾಡುತ್ತಿದ್ದ. ಈಗೆಲ್ಲ ತುಂಬ ಒಳ್ಳೆಯವನಾಗಿದ್ದ. ಮುಖ್ಯವಾಹಿನಿಗೆ ಬಂದು, ರಾಜಕೀಯ ಪಕ್ಷ ಸೇರಿ ಮಂತ್ರಿ ಮಹೋದಯರ ಸಖ್ಯ ಬೆಳೆಸಿದ್ದ. ಮಾತುಕತೆ ವ್ಯವಹಾರ ಎಲ್ಲದರಲ್ಲೂ ನಂಬಿಕಸ್ತನಾಗಿ ನಡೆದುಕೊಳ್ಳುತ್ತಿದ್ದ. ಅಂಥವನನ್ನು ಅಷ್ಟು ಭೀಕರವಾಗಿ ಕೊಲ್ಲುವ ಅಗತ್ಯವಿರಲಿಲ್ಲ ಎಂಬ ವ್ಯಾಖ್ಯಾನಗಳು ಬರುತ್ತವೆ. ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದಿತ್ತು ಎನ್ನುತ್ತಾರೆ.

ಅವರಿಗೆ ಅರಿವಾಗದ ಸಂಗತಿ ಎಂದರೆ, ಕೊಲೆಯಾದವನು ಅದಕ್ಕಿಂತ ನಾಲ್ಕು ಪಟ್ಟು ಭೀಕರ ಕೊಲೆಗೆ ಅರ್ಹನಾಗಿದ್ದ ಎಂಬುದು. ಅವನ ಕರ್ಮಕಾಂಡಗಳನ್ನು ಕೇಳಿದರೆ ಅನುಕಂಪ ಕೊಲೆಗಾರನತ್ತ ವಾಲಿದರೂ ಆಶ್ಚರ್ಯವಿಲ್ಲ. ಸರಣಿ ಕೊಲೆ, ಡಕಾಯತಿ, ರೇಪ್‌ಗಳನ್ನು ಮಾಡುತ್ತಿದ್ದ ದಂಡುಪಾಳ್ಯ ಗ್ಯಾಂಗಿನವರಿಗೆ ಅಂತಹುದೇ ಕೃತ್ಯಗಳಲ್ಲಿದ್ದ ಉಮೇಶ್ ರೆಡ್ಡಿ, ದೆಹಲಿಯ ನಿರ್ಭಯಾ ರೇಪಿಸ್ಟರಿಗೆ ಯಾವ ಕರುಣೆ ತೋರಲಾದೀತು? ಸುಲಿಗೆ, ರೌಡಿಸಂ, ಮಾಫಿಯ ದಂಧೆಗಳಲ್ಲಿದ್ದ ರೌಡಿ ಜಯರಾಜ, ಕೊತ್ವಾಲ, ಬೆಕ್ಕಿನಕಣ್ಣು ಮುಂತಾದವರ ಅಂತ್ಯ ಹೇಗಾಗಬೇಕೆಂದು ಬಯಸುತ್ತೀರಿ? ಚೀಟಿ ನಡೆಸುತ್ತೇನೆ, ಸೈಟು ಮನೆ ಕೊಡಿಸುತ್ತೇನೆ, ಕೆಲಸದ ಆರ್ಡರನ್ನೇ ಮನೆ ಬಾಗಿಲಿಗೆ ತಂದುಕೊಡುತ್ತೇನೆ ಎಂದು ಉಂಡೆ ನಾಮ ತಿಕ್ಕಿದವರನ್ನು ಜನ ಸುಮ್ಮನೆ ಬಿಟ್ಟಾರೆಂದು ಭಾವಿಸುತ್ತೀರಾ?

ಮೋಸ ಹೋದವರು, ಅನ್ಯಾಯಕ್ಕೆ ತುತ್ತಾದವರು, ಶೋಷಣೆಗೆ ಬಲಿಯಾದವರು, ಅಮಾಯಕ ದುರ್ಬಲರು ಯಾವುದೇ ಬಗೆಯ ಬೆಂಬಲವಿಲ್ಲದ ಅಸಹಾಯಕರಾಗಿದ್ದಾಗ ಪ್ರತೀಕಾರ ತೆಗೆದುಕೊಳ್ಳದೆ ಇರಬಹುದು. ತಮ್ಮ ದುರದೃಷ್ಟವನ್ನೇ ಹಳಿದುಕೊಂಡು ನಿಷ್ಕ್ರಿಯರಾಗಿರಬಹುದು. ಆದರೆ ಸತ್ತವನು ಮಾಡಿದ್ದ ಮೋಸದಿಂದಾಗಿ ಇಡೀ ಸಂಸಾರ ದಿನವೂ ಪರಿತಾಪಪಡುತ್ತಿರುತ್ತದೆ. ಅನೇಕ ಕೋರ್ಟ್ ತಕರಾರುಗಳಿಗೆ, ನಾನಾ ಆರ್ಥಿಕ ಕೋಟಲೆಗಳಿಗೆ, ತೀವ್ರ ಆರೋಗ್ಯದ ಸಮಸ್ಯೆಗಳಿಗೆ ತುತ್ತಾಗಿರುತ್ತದೆ. ಆದರೆ ಇವ್ಯಾವುದನ್ನೂ ಸಹಿಸದ ಒಬ್ಬನಂತೂ ಇರುತ್ತಾನೆ. ಅವನು ಮಾತ್ರ ದ್ರೋಹಿಯನ್ನು ನಡು ರಸ್ತೆಯಲ್ಲಿ ಕೊಚ್ಚಲೂ ಹೇಸಲಾರನು.

ಹಾಗಿದ್ದರೆ ಮೋಸ ವಂಚನೆ, ಅನ್ಯಾಯ ಮಾಡಿದವರೆಲ್ಲರೂ ಕೊಲೆಯಾಗಿಯೇ ಬಿಡುತ್ತಾರಾ? ಮಾಡಬಾರದ ಅನ್ಯಾಯ ಮಾಡಿಕೊಂಡು, ಐಷಾರಾಮಿ ಜೀವನ ಮಾಡ್ತಿರೋರು ನಮ್ಮ ಸುತ್ತಲೂ ಇದ್ದಾರಲ್ಲಾ ಅವರಿಗೆ ಯಾರೇನು ಮಾಡಿದ್ದಾರೆ? ಸುಖವಾಗೇ ಇದ್ದಾರಲ್ಲಾ? ಎಂಬ ಪ್ರಶ್ನೆ ಬರಬಹುದು.

ಅಷ್ಟು ಸುಲಭವಾಗಿ ಅವರನ್ನು ಜನ ಬಿಟ್ಟು ಬಿಡುತ್ತಾರೆಂದು ತಿಳಿಯಲಾಗದು. ವಿಧವೆಯರ, ಅಸಹಾಯಕರ ಆಸ್ತಿಗಳನ್ನು ಲಪಟಾಯಿಸಿರುವವರಿಗೆ ಲೆಕ್ಕವಿಲ್ಲ. ಚಿಲ್ಲರೆ ಮೊತ್ತವನ್ನು ಬೀಸಾಡಿ ದೊಡ್ಡ ಆಸ್ತಿಯನ್ನು ಬರೆಸಿಕೊಂಡು ಬೀಗುತ್ತಿರು ತ್ತಾರೆ. ಆದರೆ ಅವರ ಅಂತ್ಯವೂ ಇದೇ ಬಗೆಯದು. ಅದು ಪ್ರಕೃತಿಯ ನ್ಯಾಯ ನಿರ್ಣಯ! ಬಿಲ್ಡರ್‌ಗಳು, ಗುತ್ತಿಗೆದಾರರು, ಮೀಟರ್ ಬಡ್ಡಿ ವಸೂಲಿಯವರು, ಲೇವಾದೇವಿಯವರು ಏನೇ ಮಿಣ್ಣಗೆ ಬೆಣ್ಣೆ ಮಾತಾಡಿಕೊಂಡಿರಲಿ ಅದೇಕೆ ಅಂಥವರೂ ಗಟಾರದ ಹೆಣವಾಗಿ ಬೀಳುತ್ತಾರೋ?!

ಒಂದಂತೂ ನಿಜ. ಇಂಥವರಲ್ಲಿ ಎಲ್ಲರೂ ಚರಂಡಿ ಹೆಣವಾಗದಿರಬಹುದು. ಆದರೆ ಇವರುಗಳು ಅವನತಿ ಕಾಣುವಲ್ಲಿ ವಿಚಿತ್ರವಾದ ನ್ಯಾಯಸೂತ್ರವೊಂದು ಅವರ ಮೇಲೆ ಅಜ್ಞಾತವಾಗಿ ಸೇಡು ತೀರಿಸಿಕೊಂಡಿರುತ್ತದೆ! ಮನುಷ್ಯ ಮಾಡಿದ ಕಾನೂನಿನಿಂದ ಬಚಾವಾಗಿರಬಹುದು. ಆದರೆ ಪ್ರಕೃತಿಯೇ ಹೆಣೆದಿರುವ ನ್ಯಾಯಸೂತ್ರದಿಂದ ಶಿಕ್ಷಿತರಾದವರ ಸಂಖ್ಯೆಯೇ ದೊಡ್ಡದು.

lokesh

Recent Posts

ದರೋಡೆ ಪ್ರಕರಣ ಭೇದಿಸಲು ವಿಶೇಷ ಕಾರ್ಯಪಡೆ ಸಜ್ಜು

ಸಿದ್ದಾಪುರ :- ನಗರದಲ್ಲಿ ನಡೆದ ದರೋಡೆ ಪ್ರಕರಣ ಭೇದಿಸಲು ಜಿಲ್ಲಾ ಹೆಚ್ಚುವರಿ ಪೋಲೀಸ್ ಅಧೀಕ್ಷರ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿದೆ…

24 mins ago

ಚಿರತೆ ಮರಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು…

38 mins ago

ಹುಣಸೂರಿನಲ್ಲಿ ಹಾಡಹಗಲೇ ಚಿನ್ನಭರಣ ದರೋಡೆ : ಐಜಿಪಿ ಬೋರಲಿಂಗಯ್ಯ ಹೇಳಿದ್ದೇನು?

ಹುಣಸೂರು : ಹುಣಸೂರು ಪಟ್ಟಣದಲ್ಲಿಂದು ಹಾಡಹಗಲೇ ಚಿನ್ನದಂಗಡಿ ದರೋಡೆ ನಡೆದಿದೆ. ಬಸ್ ನಿಲ್ದಾಣದ ಹಿಂಭಾಗದಲ್ಲಿ ಬೈಪಾಸ್‌ ರಸ್ತೆಯಲ್ಲಿರುವ ʻಸ್ಕೈ ಗೋಲ್ಡ್‌…

2 hours ago

ವರುಣಾ ನಾಲೆಯಲ್ಲಿ ಮಹಿಳೆ ಶವ ಪತ್ತೆ : ಚಿನ್ನಕ್ಕಾಗಿ ಕೊಲೆ ಶಂಕೆ?

ಶ್ರೀರಂಗಪಟ್ಟಣ : ತಾಲ್ಲೂಕಿನ ಪಾಲಹಳ್ಳಿಯ ವರುಣಾ ನಾಲೆಯಲ್ಲಿ ಬಟ್ಟೆ ತೊಳೆಯಲು ಬಂದ ಮಹಿಳೆಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮಮತಾ…

2 hours ago

ವಾಯುನೆಲೆ ಮೇಲೆ ಭಾರತದ ದಾಳಿ ಒಪ್ಪಿಕೊಂಡ ಪಾಕಿಸ್ತಾನ

ಕರಾಚಿ : ಕಳೆದ ಮೇ ತಿಂಗಳಲ್ಲಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಂದರ್ಭದಲ್ಲಿ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯ ಮೇಲೆ ಭಾರತ…

2 hours ago

ಸಿನಿ ಪಯಣಕ್ಕೆ ದಳಪತಿ ವಿಜಯ್‌ ವಿದಾಯ : ಭಾವುಕರಾಗಿ ಅಭಿಮಾನಿಗಳಿಗೆ ಹೇಳಿದ್ದೇನು?

ಚೆನ್ನೈ : ದಳಪತಿ ವಿಜಯ್‌ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಡಿಸೆಂಬರ್ 27 ಮಲೇಷ್ಯಾನಲ್ಲಿ ಅದ್ಧೂರಿಯಾಗಿ…

2 hours ago