ಎಡಿಟೋರಿಯಲ್

ವೀರಪ್ಪನ್ ಅಟ್ಟಹಾಸ: ಸಾವಿನ ದವಡೆಗೆ ಸಿಕ್ಕ ಷಕೀಲ್

ಹರಿಕೃಷ್ಣರ ಅತ್ಯುತ್ಸಾಹದ ದುಡುಕು ಪ್ಲಾನನ್ನೇ ಉಲ್ಟಾ ಮಾಡಿ ಗುರುನಾಥನ ಕೈಗೆ ಬೇಡಿ ಬಿಗಿದಿತ್ತು!

ನಿಗದಿತ ದಿನ ಮೂವರೂ ಕಾಡಿಗೆ ಹೋಗಿ ಗುರುನಾಥನನ್ನು ಕಂಡು ಮಾತಾಡಿದ್ದರು. ವೀರಪ್ಪನ್ ನ ಬಲಗೈ ಭಂಟನಾಗಿದ್ದ ಗುರುನಾಥ ಎತ್ತರದ ಆಳು. ಆನೆ ದಂತ, ಶ್ರೀಗಂಧದ ವ್ಯಾಪಾರ ಮತ್ತು ಆಹಾರ ಸಾಮಗ್ರಿಗಳ ಖರೀದಿ ಇತ್ಯಾದಿಗಳನ್ನು ಮಾಡುತ್ತಿದ್ದವನು ಅವನೇ. ಈ ಗುರುನಾಥನ ತಲೆಗೆ ಸರ್ಕಾರ ಹತ್ತು ಲಕ್ಷ ರೂಪಾಯಿ ಘೋಷಿಸಿತ್ತು. ವೀರಪ್ಪನ್ ಮತ್ತು ಗುರುನಾಥನನ್ನು ಒಟ್ಟಿಗೆ ಹಿಡಿದುಕೊಟ್ಟರೆ ಮೂವತ್ತು ಲಕ್ಷ ರೂಪಾಯಿ ಸಿಗುತ್ತದೆ ಎಂಬ ಆಮಿಷವನ್ನು ಷಕೀಲ್ ರಸವತ್ತಾಗಿ ಒಡ್ಡಿದ್ದರು.

ನಟ್ರಾಜ, ನಾಗ್ರಾಜ ಇಬ್ಬರೂ ಹಸಿದ ತೋಳಗಳಂತೆ ನಾಲಿಗೆ ಚಾಚಿ ಕಾಯುತ್ತಿದ್ದರು.

ಬಾಂಬೆಯ ಬಂದೂಕು ವ್ಯಾಪಾರಿಯ ಏಜೆಂಟ್ ಎಂಬಂತೆ ಸೋಗು ಹಾಕಿದ್ದ ಷಕೀಲರನ್ನು ಗುರುನಾಥನಿಗೆ ನಾಗ್ರಾಜ ಪರಿಚಯಿಸಿದ. ಇಬ್ಬರ ನಡುವೆ ಮಾತುಕತೆ ಹಿಂದಿ ತಮಿಳಿನಲ್ಲಿ ನಡೆಯಿತು. ನಟ್ರಾಜನೇ ಅವಾಂತರದ ಭಾಷಾಂತರಕಾರಿ!

ಷಕೀಲ್ ೩೦೩ ರೈಫಲ್ ಗುಂಡುಗಳು ಮತ್ತು ಮ್ಯಾಗಜೀನನ್ನು(ಗುಂಡು ತುಂಬುವ ಕುಪ್ಪಿ) ತೋರಿಸಿ ಅದರೊಳಗೆ ಲೋಡ್ ಮಾಡಿದ್ದ ಮೂವತ್ತು ಸಜೀವ ಗುಂಡುಗಳನ್ನು ನೋಡಲು ಕೊಟ್ಟರು. ಅವುಗಳನ್ನು ನೋಡಿದೊಡನೆ ಗುರುನಾಥನ ಕಣ್ಣುಗಳು ಫಕ್ಕನೆ ಮಿನುಗಿದವು.

‘ತಲೈವರ್ ವೀರಪ್ಪನ್ ಎಕೆ -೪೭ ಬಂದೂಕಿಗಾಗಿ ಹಾತೊರೆಯುತ್ತಿದ್ದಾರೆ. ಒಂದು ಬಾರಿ ಟ್ರಿಗರ್ ಒತ್ತಿದರೆ ಸಾಕು. ನೂರು ಗುಂಡುಗಳು ಫಡ ಫಡಾ ಹಾರಬೇಕು. ಪೊಲೀಸ್ನೋರ ಮೈಯನ್ನು ತೂತು ತೂತಾಗಿಸಿ ಹೋಗಬೇಕು. ಅಂಥಾ ಡಂಬೂಕ ಸಿಗುತ್ತಾ ?’ ಕೇಳಿದ ಗುರುನಾಥ.

‘ಮುಂದಿನ ಬಾರಿ ಬರುವಾಗ ತರುತ್ತೇನೆ. ಈಗ ವ್ಯಾಪಾರ ಪಕ್ಕಾ ಆದರೆ ಬಾಂಬೆಯಿಂದ ಬಾಸೂ ಬರುತ್ತಾರೆ. ಒಂದೊಂದು ರೈಫಲ್‌ಗೆ ಮೂರೂವರೆ ಲಕ್ಷ ಆಗುತ್ತೆ’ ಅಂದರು ಷಕೀಲ್.

‘ಮೂರೂವರೆ ಅಂದ್ರೆ ಅದರ ಬೆಲೆ ಮೂರೇ ಬಿಡಿ!. ದುಡ್ಡಿನ ಬಗ್ಗೆ ಯೋಚ್ನೆ ಮಾಡಬೇಡಿ. ಬದಲಿಗೆ ಕೊಡಲು ನಮ್ಮಲ್ಲಿ ಒಳ್ಳೆ ಆನೆ ದಂತಗಳಿವೆ. ಕೊಡ್ತೀವಿ. ಡಬ್ಬಲ್ ರೇಟಿಗೆ ನೀವು ಮಾರಿಕೊಳ್ಳಬಹುದು. ನನ್ನತ್ರ ಇರೋ ಎಕ್ಸ್‌ಪ್ರೆಸ್ ೫೦೦ ರೈಫಲ್ಲಿಗೂ ಗುಂಡು ಬೇಕು. ಅದನ್ನೂ ತನ್ನಿ’ ಎಂದು ಅದರ ಖಾಲಿ ಕವಚವನ್ನೂ (್ಚಚ್ಟಠ್ಟಿಜಿಜಛಿ ್ಚಛಿ ) ನೀಡಿದ.

ಅದನ್ನು ಜೇಬಿಗಿಳಿಸಿದ ಷಕೀಲ್, ‘೧೫ ದಿನಗಳಲ್ಲಿ ಬಾಸ್‌ನೊಂದಿಗೆ ಮಾಲನ್ನೂ ತರುತ್ತೇನೆ. ನೀವ್ ನೀವು ರೇಟು ಮಾತಾಡಿಕೊಳ್ಳಿ. ದಂತ ರೆಡಿ ಮಾಡ್ಕಳ್ಳಿ. ರೈಫಲ್ ರೇಟು ಮಾತ್ರ ಮೂರೂವರೆ ಲಕ್ಷಾನೆ ಪಕ್ಕಾ!’ ಎಂದು ಹೇಳಿ ಹೊರಡಲನುವಾದರು.

‘ಒದ್ಮಾತು ತಡೀರಿ’ ಎಂದ ಗುರುನಾಥ ತನ್ನ ಜೇಬಿಂದ ಹಿಡಿ ಜುಂಗನ್ನು ತೆಗೆದುಕೊಟ್ಟ. ‘ಆನೆ ಬಾಲದ ಕೂದಲು. ಇದರ ತಾಯತ ಕಟ್ಕೊಂಡರೆ ಒಳ್ಳೇದಾಗುತ್ತೆ . ಐದಾರು ಚೀಲ ಇದೆ. ತಗೋತೀರಾ ನೋಡಿ. ಒಳ್ಳೆ ಯಾಪಾರ ಆಗುತ್ತೆ.’

‘ಕೊಡಿ ಬಾಸತ್ರ ಮಾತಾಡ್ತೀನಿ’ ಎಂದ ಷಕೀಲ್ ಬೀಳ್ಕೊಂಡರು.

ಷಕೀಲ್ ಸಾವಿನ ಬಾಯಿ ಹೊಕ್ಕಿದ್ದರೂ ಅವರಲ್ಲೊಂದು ಪೊಲೀಸ್ ಹಿಕ್ಮತ್ತು ಅಡಗಿತ್ತು. ಮದ್ದು ಗುಂಡು ಪಿಸ್ತೂಲ್ ಎಲ್ಲವನ್ನೂ ತೆಗೆದುಕೊಂಡೇನೋ ಹೋಗಿದ್ದರು.

ಆದರೆ ಗುಂಡು ತುಂಬಿ ಯಾವುದನ್ನೂ ಉಡಾಯಿಸಲಾಗುತ್ತಿರಲಿಲ್ಲ. ಬಂದೂಕೇ ಬೇರೆ. ಗುಂಡುಗಳೇ ಬೇರೆ ಬೇರೆ!

ಗುರುನಾಥ ತನ್ನ ಬಂದೂಕಿನಿಂದ ಕೊಲ್ಲಬಹುದಿತ್ತೇ ಹೊರತು, ಷಕೀಲ್ ಕೊಂಡೊಯ್ದಿದ್ದ ಗುಂಡುಗಳಿಂದ ಅಲ್ಲ. ಆದರೆ ಗುರುನಾಥನ ಗುಂಡುಗಳು ಯಾವ ಕ್ಷಣದಲ್ಲಾದರೂ ಹಾರಬಹುದಿತ್ತು. ಅವಕ್ಕೆ ತಲೆಯೊಡ್ಡಿಯೇ ಹೋಗಿ ಬರುವ ರಿಸ್ಕ್ ತೆಗೆದುಕೊಂಡು ಸಫಲರಾಗಿದ್ದರು.

ಗುರುನಾಥನಿಗೂ ಷಕೀಲರ ಆಕಾರ, ಮಾತುಕತೆ ನೋಡಿ ನಂಬಿಕೆ ಬಂದಿತ್ತು. ಬಾಂಬೆ ಕಡೆಯ ಅಸಲಿ ರೈಫಲ್ ವ್ಯಾಪಾರಿ ಎಂದೇ ನಂಬಿದ್ದ.

*

ಇದಾದ ಹದಿನೈದು ದಿನಕ್ಕೆ ಈ ನಾಟಕದ ಎರಡನೇ ಅಂಕಕ್ಕೆ ಎಸ್ಪಿ ಹರಿಕೃಷ್ಣರ ಎಂಟ್ರಿಯಾಯಿತು.

ಬಾಂಬೆಯ ಬಂದೂಕು ವ್ಯಾಪಾರದ ಬಾಸ್ ಅವರೇ .

*

ನಿಗದಿತ ದಿನ ಮಾಹಿತಿದಾರರಾದ ನಟ್ರಾಜ, ನಾಗ್ರಾಜ ಸ್ಕೂಟರಿನಲ್ಲಿ ಮುಂದೆ ಮುಂದೆ ದಿನ್ನಳ್ಳಿ ಕಾಡಿನೊಳಕ್ಕೆ ಹೊರಟರು. ಅವರನ್ನು ಹರಿಕೃಷ್ಣ, ಷಕೀಲ್ ಮತ್ತು ರಾಮಾಪುರ ಠಾಣೆಯ ಎಸ್‌ಐ ರಾಚಯ್ಯ ಇದ್ದ ಕಾರು ಹಿಂಬಾಲಿಸಿತು. ಅಲ್ಲೊಂದೆಡೆ ಸ್ಕೂಟರ್ ನಿಲ್ಲಿಸಿ ನಾಗ್ರಾಜ ಜಿಂಕೆಯಂತೆ ಕೂಗು ಹಾಕಿದ. ಮೊದಲೇ ಹೇಳಿದ್ದರಿಂದ ಗುರುನಾಥನ ಪ್ರೇಯಸಿ ಚಾಂದಿನಿ ಕಾಣಿಸಿಕೊಂಡಳು. ಅವಳ ಬಳಿಯೂ ಬಂದೂಕು! ವ್ಯಾಪಾರಿಗಳು ಎಂದು ಖಾತ್ರಿಯಾದೊಡನೆ ಗುರುನಾಥನೂ ತಕ್ಷಣ ಬಂದ. ಷಕೀಲ್ ನ್ಯೂಸ್ ಪೇಪರಿನಲ್ಲಿ ಸುತ್ತಿದ್ದ ಸ್ಟೆನ್‌ಗನ್ನನ್ನು ಗುರುನಾಥನಿಗೆ ಕೊಟ್ಟರು. ಖುಷಿಯಿಂದ ಗುರುನಾಥ ಉಬ್ಬಿಹೋದ.

‘ಎಕೆ -೪೭ ಎಲ್ಲಿ?’ ಕೇಳಿದ.

‘ಅವೆಲ್ಲವೂ ಇಲ್ಲೇ ನಮ್ಮ ಬಾಸ್ ಬಳಿ ಕಾರಲ್ಲಿವೆ. ಅವರಿಗೆ ಕಾಡೊಳಗೆ ಬರಲು ಹೆದರಿಕೆ. ಕಾರಲ್ಲೇ ಕೂತಿದ್ದಾರೆ ’ ಎಂದು ನಂಬಿಸಿದ ಷಕೀಲ್ ಕಾರಿನ ಬಳಿಗೆ ಗುರುನಾಥನನ್ನು ಕರೆದೊಯ್ದು ಹರಿಕೃಷ್ಣರಿಗೆ ಪರಿಚಯಿಸಿದರು.

ಹಿಂಭಾಗದ ಸೀಟಿನಲ್ಲಿದ್ದ ಹರಿಕೃಷ್ಣರ ಜೊತೆಗೆ ಗುರುನಾಥ ಕುಳಿತ. ಕಾರಿನ ಮುಂಭಾಗದ ಸೀಟಿನಲ್ಲಿ ಷಕೀಲ್ ಕುಳಿತರು. ಹೊರಗೆ ಗುರುನಾಥನ ಪ್ರೇಯಸಿ ಚಾಂದಿನಿ ಜೊತೆ ನಾಗ್ರಾಜ, ನಟ್ರಾಜ ಮಾತಾಡುತ್ತಾ ನಿಂತರು.

ಮಾತುಕತೆ ಶುರುವಾಯಿತು. ತಮ್ಮಲ್ಲಿದ್ದ ಆಯುಧಗಳನ್ನು ತೋರಿಸಿದರು ಹರಿಕೃಷ್ಣ . ಒಂದೊಂದನ್ನೇ ಬೆರಗಿನಿಂದ ತಲ್ಲೀನನಾಗಿ ಸವರಿ ನೋಡುತ್ತಿದ್ದ ಗುರುನಾಥ. ಅವನ ಕೈಲಿದ್ದ ಬಂದೂಕನ್ನು ನೋಡುವವರಂತೆ ನಟಿಸುತ್ತ ತಮ್ಮ ಕೈಗೆ ತೆಗೆದುಕೊಂಡರು ಹರಿಕೃಷ್ಣ.

ಅವನನ್ನು ನಿಶ್ಶಸ್ತ್ರಗೊಳಿಸುವ ಅವರ ಯತ್ನ ಯಶಸ್ವಿಯಾಯಿತು.

ಮರುಕ್ಷಣವೇ ತಮ್ಮ ಕಾಲ ಬಳಿ ಇರಿಸಿಕೊಂಡಿದ್ದ ಕೈಕೋಳವನ್ನು ಗುರುನಾಥನ ಕೈಗೆ ಲಬಕ್ಕೆಂದು ಲಾಕ್ ಮಾಡಿ, ಅವನ ಹಣೆಗೆ ಪಿಸ್ತೂಲಿನಿಂದ ಗುರಿ ಇಟ್ಟೇ ಬಿಟ್ಟರು. ಅನಿರೀಕ್ಷಿತ ಆಘಾತದಿಂದ ಗುರುನಾಥ ಕುಸಿದು ಕುಳಿತ. ಎಸ್‌ಐ ರಾಚಯ್ಯ ಓಡಿಹೋಗಿ, ಚಾಂದಿನಿ ಬಳಿಯಿದ್ದ ಬಂದೂಕನ್ನು ಕಿತ್ತು ಕೊಂಡರು.

ಗುರುನಾಥನಿಗಿಂತ ದೊಡ್ಡ ಆಘಾತವಾಗಿದ್ದು ಷಕೀಲರಿಗೆ.

‘ಇದೇನ್ ಸಾರ್ ಅರೆಸ್ಟ್ ಮಾಡಿಬಿಟ್ರೀ? ನನ್ನ ಎಲ್ಲಾ ಪ್ಲ್ಯಾನನ್ನೂ ಉಲ್ಟಾ ಮಾಡಿಬಿಟ್ರಲ್ಲಾ ಸಾರ್?’ ಎಂದು ಹರಿಕೃಷ್ಣರ ಎದುರು ಅಲವತ್ತುಗೊಂಡರು.

ಏಕೆಂದರೆ ವೀರಪ್ಪನ್‌ನನ್ನು ಈ ಮೂಲಕ ಹಿಡಿಯುವುದೇ ಷಕೀಲರ ಮುಖ್ಯ ಗುರಿಯಾಗಿತ್ತು.

ಇದೊಂದು ಬಾರಿ ಮಾತ್ರ ಎಕೆ -೪೭ ರೈಫಲ್ ಮತ್ತು ಒಂದಷ್ಟು ಗುಂಡುಗಳನ್ನು ಕೊಟ್ಟು ಅವನಿಂದ ಆನೆದಂತ ಪಡೆದು ಬರುವುದಾಗಿತ್ತು. ಮತ್ತಷ್ಟು ಗನ್ನು ಮದ್ದು ಗುಂಡುಗಳನ್ನು ಮತ್ತೆ ತರುವುದಾಗಿ ಹೇಳಿ ನಂಬಿಸಿ, ವೀರಪನ್‌ನನ್ನು ಪರಿಚಯಿಸುವಂತೆ ಮನವೊಲಿಸುವುದಾಗಿತ್ತು. ಇದನ್ನೆಲ್ಲಾ ಹರಿಕೃಷ್ಣರ ಬಳಿ ಹೇಳಿದ್ದರು ಕೂಡ. ಮುಂದಿನ ಬಾರಿ ಕಾರಿನ ಡಿಕ್ಕಿಯಲ್ಲಿ ಸಶಸ್ತ್ರ ಪೊಲೀಸರನ್ನು ಕೂರಿಸಿಕೊಂಡು ಹೋಗಿ ವೀರಪ್ಪನ್ ತಂಡವನ್ನು ಮುಗಿಸುವುದು ಅವರ ಮಾಸ್ಟರ್ ಪ್ಲಾನ್ ಆಗಿತ್ತು. ಯಾಕೆಂದರೆ ಅತಿ ಮುಖ್ಯ ಬೇಟೆಯೇ ವೀರಪ್ಪನ್! ಬೇಟೆಗಾರನ ಹೊಂಚುವಿಕೆಯ ತಾಳ್ಮೆ ಅದರಲ್ಲಿತ್ತು.

ಹರಿಕೃಷ್ಣರ ಅತ್ಯುತ್ಸಾಹದ ದುಡುಕು ಪ್ಲಾನನ್ನೇ ಉಲ್ಟಾ ಮಾಡಿ ಗುರುನಾಥನ ಕೈಗೆ ಬೇಡಿ ಬಿಗಿದಿತ್ತು. ತಕ್ಷಣವೇ ಎಸ್‌ಟಿಎಫ್ ತುಕಡಿಯನ್ನು ಸ್ಥಳಕ್ಕೆ ಕರೆಸಿ ವೀರಪ್ಪನ್‌ಗಾಗಿ ತಲಾಶ್ ನಡೆಸಿದರು. ತನಗೇನೂ ಮಾಡಬೇಡಿ ಎಂದು ಬೇಡಿಕೊಂಡ ಗುರುನಾಥ ‘ಇನ್ನು ಐದೇ ದಿನಕ್ಕೆ ಮದುವೆ ಆಗ್ತಿದ್ದೀನಿ. ವೀರಪ್ಪನನ್ನು ಇಲ್ಲಿಗೇ ಕರೆಸುತ್ತೇನೆ’ ಎಂದು ಹೇಳಿ ವೀರಪ್ಪನ್ ಬರುವಂತೆ ಸಂಕೇತದ ಕೂಗು ಹಾಕಿದ. ಇವರೂ ಕಾದೇ ಕಾದರು.

ಆದರವನು ಅಪಾಯದ ಕೂಗು ಹಾಕಿ ಪೊಲೀಸರನ್ನೇ ಏಮಾರಿಸಿದ್ದ! ಏನೇ ಚಿತ್ರಹಿಂಸೆ ನೀಡಿದರೂ ಒಂದಿನಿತೂ ಸತ್ಯ ಸಂಗತಿಯನ್ನು ಹೇಳಲೇ ಇಲ್ಲ. ಬರೀ ಸುಳ್ಳುಗಳನ್ನೇ ಹೇಳಿಕೊಂಡು ದಾರಿತಪ್ಪಿಸಿದ. ಕೊನೆಗೆ ಪರಾರಿಯಾಗಲು ಯತ್ನಿಸಿ ಪೊಲೀಸರ ಗುಂಡಿಗೆ ಬಲಿಯಾದ.

ಇದಾಗಿದ್ದೇ ಆಗಿದ್ದು. ವೀರಪ್ಪನ್‌ನನ್ನು ಸಮೀಪಿಸುವ ಎಲ್ಲ ದಾರಿಗಳೂ ಬಂದ್ ಆಗಿಬಿಟ್ಟವು. ಹರಿಕೃಷ್ಣರ ಕ್ಷಣದ ದುಡುಕು ಎಲ್ಲ ಕನಸನ್ನೂ ನುಚ್ಚು ನೂರಾಗಿಸಿತ್ತು. ಹೊಸ ಕಾರ್ಯಾಚರಣೆಯನ್ನು ಈಗ ಮೊದಲಿಂದ ಫ್ರೆಶ್ ಆಗಿ ಶುರು ಮಾಡಬೇಕಿತ್ತು.

ಪೊಲೀಸರ ಮೇಲೆ ಇತ್ತ ವೀರಪ್ಪನ್ ಕುದಿ ಕುದಿಯುತ್ತಿದ್ದ. ತನ್ನನ್ನೇ ಏಮಾರಿಸಿ ತನ್ನ ಬಲಗೈ ಭಂಟನನ್ನೇ ಕೊಂದುಬಿಟ್ಟರಲ್ಲಾ ಎಂಬ ಕಡುಸೇಡಿನಲ್ಲಿದ್ದ.

(ಮುಂದುವರಿಯುತ್ತದೆ)

andolana

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

7 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

7 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

8 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

8 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

10 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

10 hours ago