ಎಡಿಟೋರಿಯಲ್

ವೀರಪ್ಪನ್ ಅಟ್ಟಹಾಸ: ವೀರ ಹುತಾತ್ಮರಿಗೆ ಕಂಬನಿ ಮಿಡಿದ ಮೈಸೂರು –  ಭಾಗ-2

ಗುಂಡೇ ಹರಿಕೃಷ್ಣರ ಬಲಗಣ್ಣಿಗೆ ಬಡಿದಿದೆ, ಇನ್ನೊಂದು ಗುಂಡು ಹಿಂಭಾಗದಲ್ಲಿ ಕುಳಿತಿದ್ದ ಷಕೀಲರ ತಲೆಯನ್ನು ಸೀಳಿದೆ

ಉದ್ಯಮಿಯ ಮಗನನ್ನು ಸೆರೆಯಿಂದ ಬಿಡುಗಡೆಗೊಳಿಸಲು ತಾವು ರೂಪಿಸಿರುವ ಕಾರ್ಯತಂತ್ರವನ್ನು ಹರಿಕೃಷ್ಣ ಮ್ಯಾಪ್ ನೊಂದಿಗೆ ವಿವರಿಸಿದರು.

ಅದೇಕೋ ಗೃಹಮಂತ್ರಿಗಳ ಮಟ್ಟರಿಸಿಕೊಂಡಿದ್ದ ಮುಖ ಅರಳಲೇ ಇಲ್ಲ. ‘ ಪ್ಲ್ಯಾನ್ ಏನೋ ಮಾಡಿದ್ದೀರಿ. ಆದರೆ ಕಿಡ್ನ್ಯಾಪ್ ಆಗಿರುವವನನ್ನು ಜೀವಂತವಾಗಿ ಬಿಡುಗಡೆ ಮಾಡಿಸೋ ಗ್ಯಾರಂಟಿ ಕೊಡ್ತೀರೇನ್ರೀ?’ ಮೂಗೆಳೆದರು ವ್ಯಂಗ್ಯವಾಗಿ.

ಗೃಹಮಂತ್ರಿಗೆ ನೇರವಾಗಿ ಉತ್ತರಿಸುವುದುಂಟೇ? ಹರಿಕೃಷ್ಣ ನಿಂತರು ಮೌನವಾಗಿ. ‘

ಗ್ಯಾರಂಟೀ ದೇತಾ ಹೈ ಕ್ಯಾ?’ ಎಂದು ಮತ್ತೊಮ್ಮೆ ಜಗ್ಗಿಸಿ ಕೇಳಿದರು.

ಯಾರೂ ಉತ್ತರಿಸದ ಹೆಪ್ಪುಗಟ್ಟಿದ ಮೌನ ಅಲ್ಲಿತ್ತು. ಗೃಹಮಂತ್ರಿ ಮತ್ತೊಂದು ಮಾತು ಎಸೆದರು. ‘
ನೀವು ಮಾಡೋ ಆಪರೇಷನ್ ಅಷ್ಟರಲ್ಲೇ ಇದೆ . ನಾವೂ ನೋಡಿದ್ದೀವಲ್ಲಾ? ಆ ಉದ್ಯಮಿ ಅವರ ಪಾಡಿಗೆ ತಮ್ಮ ಮಗನನ್ನು ಹೇಗೋ ಬಿಡಿಸಿಕೊಳ್ಳುತ್ತಾರೆ ಬಿಡಿ. ನೀವು ಸುಮ್ಮನಿದ್ದರೆ ಸಾಕು. ನಿಮ್ಮ ಞಜಿಜಿಟ್ಞ ಅನ್ನು ಈಗಲೇ ಕ್ಲೋಸ್ ಮಾಡಿ’ ಎಂಬ ಆದೇಶವನ್ನೇ ಮಾಡಿದರು.

ಅಲ್ಲೀವರೆಗೆ ಕುದಿಯುತ್ತಾ ನಿಂತಿದ್ದ ಹರಿಕೃಷ್ಣ ತಮ್ಮ ಮಿಲಿಟರಿ ಕ್ಯಾಪ್ ತೆಗೆದು, ಗೃಹ ಸಚಿವರತ್ತ ಜೋರಾಗಿ ಒಗೆದರು. ಅದು ಅವರ ಕಾಲ ಬಳಿ ಬಿತ್ತು. ಕೋಪ ತಡೆಯದ ಹರಿಕೃಷ್ಣ ಭರಬರ ನಡೆದು , ಬಾಗಿಲು ಜೋರಾಗಿ ಎಳೆದುಕೊಂಡು ಹೊರ ನಡೆದೇಬಿಟ್ಟರು.

ಅದು ಅವರ ಸ್ಪಿರಿಟ್. ಅದು ಹುಂಬ ಧೈರ್ಯವಲ್ಲ. ಕೆಲಸದಲ್ಲಿ ಅವರಿಗಿದ್ದ ನಿಷ್ಠೆ ಮತ್ತು ಛಾತಿ.

ಅಧಿಕಾರಿಯೊಬ್ಬರು ನಂತರ ಬಂದು ಹರಿಕೃಷ್ಣ ಅವರಿಗೆ ಸಾಂತ್ವನ ಹೇಳಿ, ಗೃಹಮಂತ್ರಿಗಳು ಕರೆದುಕೊಂಡು ಬರಲು ಹೇಳಿದ್ದಾರೆ, ಬನ್ನಿ ಎಂದು ಕರೆದರು.

‘ಅವನತ್ರ ಚಿಛಿಜ ಮಾಡೋ ದರ್ದು ನನಗೇನಿಲ್ಲ ಕಣ್ರೀ. ಕರೆದಾಗ ಹೋಗಿದ್ದಕ್ಕೆ ಮಂಗಳಾರತಿ ಆಯ್ತಲ್ಲಾ? ಬರೋದಿಲ್ಲ ’ಎಂದು ಹೊರಟೇ ಬಿಟ್ಟರು.

‘ಬಡತನದಲ್ಲಿದ್ದ ನಾನು ಸ್ವಂತ ಶಕ್ತಿಯ ಮೇಲೆ ಕೆಲಸ ಸಂಪಾದಿಸಿದ್ದೇನೆ. ಯಾವನಿಗೂ ಡೊಗ್ಗು ಸಲಾಮು ಹೊಡೆಯೋ ಅಗತ್ಯವಿಲ್ಲ’ ಅಂತ ಹೇಳ್ತಿರ್ತಾರೆ . . . . ಎಂದು ಷಕೀಲ್ ಹೇಳ್ತಿದ್ದ ಮಾತುಗಳು ನೆನಪಾದವು .
ಉದ್ಯಮಿಯ ಹಾದಿ ಸುಲಭವಾಯಿತು.
ವೀರಪ್ಪನ್ ಆಗ ಡಿಮ್ಯಾಂಡ್ ಮಾಡಿದ್ದು ಎರಡು ಕೋಟಿಯಾದರೂ ಪಡೆದದ್ದುದು ಹತ್ತೇ ಲಕ್ಷ ಎಂಬುದೂ ನೆನಪಾಯ್ತು!

* * *

ಷಕೀಲರ ತಂದೆ ಶ್ರೀ ಕರೀಮ್ ಅವರು ನಿವೃತ್ತ ಡಿವೈಎಸ್ಪಿ. ಮೈಸೂರಿನ ಪೊಲೀಸ್ ಅಧಿಕಾರಿಗಳಾಗಿದ್ದ ನಾವೆಲ್ಲಾ ಪರಸ್ಪರ ಒಡನಾಟದಲ್ಲಿರುವ ಸ್ನೇಹಿತರೆಂದು ಅವರಿಗೆ ಗೊತ್ತಿತ್ತು. ಸಿಕ್ಕಾಗಲೆಲ್ಲಾ, ‘
ನಿಮ್ಮ ಫ್ರೆಂಡಿಗೆ ಬೇಗ ಮದುವೆಯಾಗೋದಿಕ್ಕೆ ಹೇಳಿ. ನಮ್ಮ ಮಾತು ಅಂದ್ರೆ ಅವನಿಗೆ ಕಸ. ಸರ್ವೀಸಾಗಿ ಹತ್ತು ವರ್ಷವಾಗಿದೆ ಇನ್ನು ತಡ ಮಾಡೋದು ಬೇಡ. ಸ್ವಲ್ಪ ಜ್ಚಿಛಿ ಮಾಡ್ರಪ್ಪಾ ’ಎನ್ನುತ್ತಿದ್ದರು.

ನಾವೆಲ್ಲಾರೂ ‘ಹೇಳಿದ್ದೇವೆ ಸಾಹೇಬರೇ. ವೀರಪ್ಪನ್ ಕತೆ ಮುಗಿಸಿದ ಮೇಲೇ ನನ್ನ ಮದುವೆ ಅಂತ ಹಠ ಹಿಡಿದಿದ್ದಾನೆ’ ಎಂದೆ. ‘

ಡ್ಯೂಟಿ ಪಾಡಿಗೆ ಡ್ಯೂಟಿ ನಡೆಯಲಿ. ನಾನೇನು ಬೇಡಾ ಅನ್ನೋದಿಲ್ಲ. ಯಾವ್ಯಾವ ವಯಸ್ಸಿಗೆ ಮದುವೆ , ಮಕ್ಕಳು ಅಗಬೇಕೋ ಆಗಲೇ ಆದರೆ ಸರಿ. ಯಾವಾಗ್ಲೋ ಆಗ್ತೀವಿ ಅಂದ್ರೆ ಸರಿ ಹೋಗೊಲ್ಲ. ಮದುವೆಯಾದ್ರೂ ಸುಖವಿರೋಲ್ಲ !’ ಎಂದು ಅಲವತ್ತುಗೊಳ್ಳುತ್ತಿದ್ದರು.
ತನ್ನ ಜೀವನದ ಪರಮ ಉದ್ದೇಶವೇ ವೀರಪ್ಪನ್ ಹನನ ಎಂಬುದು ಷಕೀಲ್ ಧೃಡ ನಿಶ್ಚಯವಾಗಿತ್ತು. ಅದೇ ಹರಿಕೃಷ್ಣರದ್ದೂ ಆಗಿತ್ತು.

* * * *

ಹರಿಕೃಷ್ಣರ ಮನೆಗೆ ಹೋದಾಗ ಶವವನ್ನು ಮಲಗಿಸಿದ್ದರು. ಅವರ ಬಲಗಣ್ಣಿಗೆ ಗುಂಡೇಟು ಬಿದ್ದಿತ್ತು. ಮುಖ ಪ್ರಶಾಂತವಾಗಿತ್ತು. ಮೊನ್ನೆ ಮೊನ್ನೆ ಪೆರೇಡ್ ರಿಹರ್ಸಲ್ಲಿನಲ್ಲಿ ನಗುತ್ತಾ ಮಾತಾಡಿದವರು ಇವರೇ ಅಲ್ಲವೇ? ನೆನೆದು ಕಣ್ಣೀರಾದೆ. ಅವರ ಮನೆಯ ಮುಂದೆ ಸಾವಿರಾರು ಜನ. ತಮ್ಮ ಒಡ ಹುಟ್ಟಿದವನನ್ನು ಕಳೆದುಕೊಂಡಿದ್ದೇವೇನೋ ಎಂಬಂತೆ ರೋಧಿಸುತ್ತಿದ್ದ ಜನಗಳನ್ನು ನೋಡಿ ನನಗೂ ದುಃಖ ಉಕ್ಕಿಬಂತು. ಏನೂ ಮಾತಾಡಲಾಗದೆ ಮನೆ ಕೈದೋಟದ ಕಟ್ಟೆಯ ಮೇಲೆ ಕುಳಿತೆ ಮೌನವಾಗಿ . ಸುತ್ತಲಿದ್ದ ಪೊಲೀಸ್ ಅಧಿಕಾರಿಗಳು ಮಾತಾಡುತ್ತಿದ್ದರು.

 

ವೀರಪ್ಪನ್‌ನನ್ನು ಹಿಡಿಯಲು ಷಕೀಲ್ ಕಾರ್ಯತಂತ್ರ ರೂಪಿಸಿದ್ದರಂತೆ. ಅದರಂತೆ ಅಂದು (೧೪-೦೮-೧೯೯೨) ಮಧ್ಯಾಹ್ನ ಮೀಣ್ಯಂ ರಸ್ತೆಯಲ್ಲಿ ಬಿಳಿ ಕಾರಿನಲ್ಲಿ ಹೋಗುತ್ತಿದ್ದಾಗ, ಹಾದಿಗೆ ಅಡ್ಡಗಲ್ಲುಗಳನ್ನಿಟ್ಟಿದ್ದು ಅದೇ ಬೆಳಿಗ್ಗೆ ತಾನೇ ಅರಿಶಿನ ಕುಂಕುಮ ಹಾಕಿ ಪೂಜೆ ಮಾಡಿರುವುದು ಕಾಣಿಸಿದೆ.

ಅದೇನೆಂದು ನೋಡಲೇ ಬೇಕು. ಕೆಳಗಿಳಿಯದೆ ಗತ್ಯಂತರವಿಲ್ಲ.
ನಾನು ನೋಡ್ತೀನಿ ಸಾಮಿ ಎಂದು ಬಾತ್ಮೀದಾರ ಕಮ್ಲಾನಾಯ್ಕ ಕೆಳಗಿಳಿದವನೇ, ಕಾರಿನ ಹಿಂಭಾಗಕ್ಕೆ ಹೋಗಿದ್ದಾನೆ. ‘

ಮುಂದೆ ನೋಡು ಅಂದ್ರೆ ಹಿಂದೆ ಏನು ನೋಡ್ತಿದ್ದೀಯಾ?’ ಎನ್ನುತ್ತಾ, ಡ್ರೈವಿಂಗ್ ಸೀಟಿನಿಂದ ಎಸ್ಪಿ ಹರಿಕೃಷ್ಣ ಕೆಳಗಿಳಿದರು.

ಬೆಟ್ಟದ ಇಳಿಜಾರಿನ ಕಡೆಯಿಂದ ಒಂದೇ ಸಮನೆ ಗುಂಡುಗಳು ಹಾರತೊಡಗಿದವು. ಮೊದಲ ಗುಂಡೇ ಹರಿಕೃಷ್ಣರ ಬಲಗಣ್ಣಿಗೆ ಬಡಿದಿದೆ. ಇನ್ನೊಂದು ಗುಂಡು ಹಿಂಭಾಗದಲ್ಲಿ ಕುಳಿತಿದ್ದ ಷಕೀಲರ ತಲೆಯನ್ನು ಸೀಳಿದೆ. ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ.
ಕಾರಿನಲ್ಲಿದ್ದ ಏಳೂ ಜನರಿಗೂ ತೀವ್ರ ಗಾಯಗಳಾಗಿದ್ದು ಯಾರೂ ಉಳಿಯುವ ಸ್ಥಿತಿಯಲ್ಲಿರಲಿಲ್ಲ. ಷಫಿ ಉಲ್ಲಾ ಎಂಬ ಕಾನ್ಸ್‌ಟೇಬಲ್ ಒಬ್ಬ ಉಳಿದಿದ್ದಾನೆ. ಉಳಿದ ಏಳೂ ಜನ ಪೊಲೀಸರೂ ತೀರಿಕೊಂಡಿದ್ದಾರೆ ಎಂದು ತಿಳಿಯಿತು.
ಹರಿಕೃಷ್ಣರ ಕಾರಿನ ಹಿಂದೆಯೇ ಒಂದು ಕಿಮೀ ಅಂತರ ಕಾದುಕೊಂಡು ಬೆಂಗಾವಲಾಗಿ ಹಿಂಭಾಲಿಸುತ್ತಿದ್ದ ಡಿವೈಎಸ್ಪಿ ಮಂದಪ್ಪನವರ ಲಾರಿಯೂ ನಂತರ ಸ್ಥಳಕ್ಕೆ ಆಗಮಿಸಿದೆ.
ಬೆಟ್ಟದ ಇಳಿಜಾರಿನಲ್ಲಿ ಅವಿತಿದ್ದ ವೀರಪ್ಪನ್ ತಂಡ ಆ ಲಾರಿಯ ಮೇಲೂ ಗುಂಡಿನ ಮಳೆಗರೆದಿದೆ. ಮಂದಪ್ಪನವರೂ ಸೇರಿದಂತೆ ಎಲ್ಲರಿಗೂ ಏಟಾಗಿದೆ. ಅವರ ಲಾರಿಯಲ್ಲಿದ್ದ ಮೂವರು ಪೊಲೀಸರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿತು.

ಹರಿಕೃಷ್ಣರ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಬಾತ್ಮೀದಾರ ಕಮ್ಲಾನಾಯ್ಕನನ್ನೂ ಪೊಲೀಸರೇ ನಂತರ ಕೊಂದರಂತೆ?
ಆಶ್ಚರ್ಯವಾಯಿತು.

informant ಆಗಿದ್ದ ಅವನನ್ನೇಕೆ ಕೊಂದರೋ? ಮಾಹಿತಿದಾರನನ್ನು ಪೊಲೀಸರೇಕೆ ಕೊಲ್ಲುತ್ತಾರೆ?. ಅವನು ನಮಗೆ ಸಹಾಯ ಮಾಡಲು ಬಂದಿರುವವನಲ್ಲವೇ? ಅವನನ್ನು ರಕ್ಷಿಸುವುದು ಪೊಲೀಸರ ಪರಮ ಕರ್ತವ್ಯವಲ್ಲವೇ?

ಯಾರೋ ಅಂದರು: ಕಾರಿನ ಮೇಲೆ ಗುಂಡುಗರೆತವಾದಾಗ ಮೊದಲು ಓಡಿದವನೇ ಕಮ್ಲಾನಾಯ್ಕಂತೆ. ಅದರಲ್ಲೇನಿದೆ ತಪ್ಪು? ಯಾರಾದರೂ ಜೀವ ಉಳಿಸಿಕೊಳ್ಳಲೇ ಬೇಕಲ್ಲವೇ?

ಮೊಟ್ಟಮೊದಲು ಇಳಿದ ಕಮ್ಲಾನಾಯ್ಕ ಕೆಂಪು ಷರಟು ತೊಟ್ಟಿದ್ದ. ಕಾರಿನ ಹಿಂಭಾಗದ ಕಡೆಗೆ ಸರ್ರನೇ ಓಡಿದ. ಅದೇ ವೀರಪ್ಪನ್ ತಂಡಕ್ಕೆ ಸಿಗ್ನಲ್!

ಆಮೇಲೆ ಗುಂಡಿನ ಮಳೆಗರೆತವಾಗಿದೆ. ಎಲ್ಲರಿಗೂ ಗಾಯಗಳಾಗಿವೆ. ಕಮ್ಲಾನಾಯ್ಕನಿಗೆ ಏನೇನೂ ಆಗಿಲ್ಲ. ಅವನು ನಮ್ಮ ಬಾತ್ಮೀದಾರನಾಗಿರಲಿಲ್ಲ. ವೀರಪ್ಪನ್ ಡಿ’ಕಾಯ್ ಛ್ಚಟ ಮಾಡಿ ಕಳಿಸಿದ್ದವನು. ಅವನು ವೀರಪ್ಪನ್ ಕಡೆಯ ಗೂಢಚಾರ ಎಂಬುದು ನಂತರ ಬಂದ ಪೊಲೀಸರಿಗೆ ಗೊತ್ತಾಗಿದೆ. ಅಲ್ಲೇ ಸಿಗಿದು ಹಾಕಿದ್ದಾರೆ! ಆದರೆ ಯಾವ ಮಾತೂ ಖಚಿತವಿಲ್ಲ. ಎಲ್ಲವೂ ಆವತ್ತಿನ ಅಂತೆ ಕಂತೆಗಳೇ. ಸತ್ತವರ ದೇಹಗಳು ಮಾತ್ರ ಅಂತಿಮ ಸತ್ಯ ಹೇಳುತ್ತಿದ್ದವು.

ಭಾರತದ ಹೆಮ್ಮೆಯ ೪೫ನೇ ಸ್ವಾತಂತ್ರಯ ದಿನಾಚರಣೆ ಆ ದಿನ ಮೈಸೂರಿನಲ್ಲಿ ತಂತಾನೇ ರದ್ದಾಯಿತು. ಹತ್ಯೆಯಾಗಿದ್ದ ಏಳು ಜನ ಪೊಲೀಸರ ಶವಗಳನ್ನೂ ತರಲಾಗಿತ್ತು. ಜನ, ಜನ. ಎಲ್ಲೆಲ್ಲೂ ಜನವೋ ಜನ. ಮೃತರ ಮನೆಗಳ ಮುಂದೆ ಶೋಕತಪ್ತ ಜನಗಸಾಗರವೇ ನೆರೆದಿತ್ತು. ಆ ಸಾವುಗಳಿಗೆ ಕಣ್ಣೀರಿಡದವರೇ ಇರಲಿಲ್ಲ. ಅಸು ನೀಗಿದ್ದವರೆಲ್ಲ ಮೈಸೂರಿನಲ್ಲಿ ಕೆಲಸ ಮಾಡಿದ್ದ ಪರಿಚಿತ ಜನಪ್ರಿಯರೇ. ಇದು ಭರಿಸಲಾಗದ ನೋವು ತಂದಿತ್ತು.
ಶವಗಳನ್ನು ಎತ್ತುವ ತನಕ ಎಲ್ಲ ಪೊಲೀಸ್ ಅಧಿಕಾರಿಗಳೆಲ್ಲ ಅಲ್ಲೇ ಉಳಿದೆವು. ಹರಿಕೃಷ್ಣ, ಷಕೀಲರ ಒಳ್ಳೆಯತನ, ಕರ್ತವ್ಯನಿಷ್ಠೆಯನ್ನು ನೆನೆದೆವು. ಯಾವ ದೃಷ್ಟಿಯಿಂದ ನೋಡಿದರೂ ಸಾವಿಗೆ ಎದೆಯೊಡ್ಡಿ ಸರಿಯಾದ ಪ್ಲ್ಯಾನ್ ಮಾಡಿಕೊಂಡು ವೀರಪ್ಪನ್ ನನ್ನು ಹಿಡಿಯಲು ಹೋಗಿದ್ದವರು ಅವರು. ಬೇರೇನೋ ಕೆಲಸಕ್ಕೆ ಹೋಗಿ ದುರಂತಕ್ಕೆ ಈಡಾದವರಲ್ಲ. ಅದೊಂದು ನಿಸ್ಪೃಹವಾದ ತ್ಯಾಗ ಮತ್ತು ಬಲಿದಾನ.

ಹತ್ಯೆ ನಡೆದು ತಿಂಗಳಾದರೂ ಆ ಸಾವುಗಳ ಬಗ್ಗೆಯೇ ಎಲ್ಲೆಲ್ಲೂ ಮಾತು. ಘೋರ ಹತ್ಯೆಗಳಿಂದ ಮೈಸೂರಿಗೆ ಮೈಸೂರೇ ಮಂಕಾಗಿತ್ತು. ಆ ತಿಂಗಳು ನಡೆಯಲಿದ್ದ ಎಲ್ಲ ಕಾರ್ಯಕ್ರಮಗಳೂ ತಂತಾನೇ ಮುಂದೂಡಲ್ಪಟ್ಟವು. ಕರ್ತವ್ಯ ನಿಷ್ಠ , ನಿಸ್ಪೃಹ ಪೊಲೀಸರನ್ನು ಜನ ಎಷ್ಟು ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಎಂಬುದಕ್ಕೆ ಈ ಸಾವುಗಳು ಸಾಕ್ಷಿಯಾದವು.
(ಮುಂದುವರೆದಿದೆ..)

andolana

Recent Posts

ಉದ್ಯಮಿಯ ಪರಿಶ್ರಮದಿಂದ ಕಾಯಕಲ್ಪ ಪಡೆದ ಉದ್ಯಾನ

ತಿ.ನರಸೀಪುರ: ಪಟ್ಟಣದ ಕಪಿಲಾ ನದಿ ದಂಡೆಯ ಶ್ರೀ ಬಳ್ಳೇಶ್ವರ ಸ್ವಾಮಿ ದೇವಸ್ಥಾನದ ಬಳಿಯ ಪಾರ್ಕ್ ಹೋಟೆಲ್ ಉದ್ಯಮಿಯೊಬ್ಬರ ಪರಿಶ್ರಮದಿಂದ ಕಾಯಕಲ್ಪ…

10 mins ago

ಶತಮಾನದ ದೇವರಾಜ ಶಾಲೆಯ ಶೋಕಗೀತೆ

ವರಹಳ್ಳಿ ಆನಂದ, ಸಂಶೋಧನಾ ವಿದ್ಯಾರ್ಥಿ, ಮೈಸೂರು ವಿಶ್ವವಿದ್ಯಾನಿಲಯ ಮೈಸೂರು: ನಗರದ ದೇವರಾಜ ಮೊಹಲ್ಲಾದಲ್ಲಿರುವ ಶತಮಾನ ತುಂಬಿರುವ ದೇವರಾಜ ಸರ್ಕಾರಿ ಹಿರಿಯ…

14 mins ago

ಅಭದ್ರತೆ ಹಾದಿಯಲಿ ವಿಕಸಿತ ಭಾರತದತ್ತ ‘ಆನಿ (ಆಮೆ) ನಡಿಗೆ’

ರಾಜಾರಾಂ ತಲ್ಲೂರು ಆರ್ಥಿಕ ಶಿಸ್ತಿನ ಚೌಕಟ್ಟಿನ ಒಂದೊಂದೇ ಅಂಶಗಳನ್ನು ಮುಂದಿಟ್ಟುಕೊಂಡು - ‘ನೋಡಿ, ನಾವು ಆರ್ಥಿಕವಾಗಿ ಸ್ಥಿರವಾಗಿದ್ದು, ವಿಕಸಿತ ಭಾರತದತ್ತ…

37 mins ago

2030ರ ವೇಳೆಗೆ 2 ಮಿಲಿಯನ್‌ ಉದ್ಯೋಗ ಸೃಷ್ಟಿ, ಅಭಿವೃದ್ಧಿ ಪರ ಆಯವ್ಯಯ : ಸಂಸದ ಯದುವೀರ್‌

ಮೈಸೂರು : ಯುವ ಸಮುದಾಯಕ್ಕೆ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡುವ ಮೂಲಕ ವಿಕಸಿತ…

9 hours ago

ಜನರನ್ನು ದಿಕ್ಕು ತಪ್ಪಿಸುತ್ತಿರುವ ಎನ್‌ಸಿಬಿ : ಎಂ.ಲಕ್ಷ್ಮಣ್‌ ಆರೋಪ

ಮೈಸೂರು : ನಗರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎನ್ನಲಾದ ವಸ್ತುಗಳಿಗೆ ಸಂಬಂಸಿದಂತೆ ಎನ್‌ಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರವೇ ಬೇರೆ.…

9 hours ago