ಎಡಿಟೋರಿಯಲ್

ವಾರೆ ನೋಟ : ತೇಲುವ ರೆಸ್ಟೋರೆಂಟಿನಲ್ಲಿ ಮಹಾಮಳೆ – ಮಸಾಲೆದೋಸೆ ಮುಖಾಮುಖಿ!

ತೇಲುವ ರೆಸ್ಟೋರೆಂಟಿನಲ್ಲಿ ಮಹಾಮಳೆ- ಮಸಾಲೆದೋಸೆ ಮುಖಾಮುಖಿ!

ಸಿಲಿಕಾನ್ ಸಿಟಿಯಲ್ಲಿ ಸೃಷ್ಟಿಯಾಗಿದ್ದ ಆರ್ಟಿಫಿಷಿಯಲ್ ಲೇಕ್‌ನಲ್ಲಿ ಹೊಸದಾಗಿ ಪ್ರಾರಂಭವಾಗಿದ್ದ ತೇಲುವ ರೆಸ್ಟೋರೆಂಟಿನಲ್ಲಿ ಅಚಾನಕ್ಕಾಗಿ ಮಹಾಮಳೆ ಮತ್ತು ಮಸಾಲೆದೋಸೆ ಮುಖಾಮುಖಿಯಾದರು! ಇಬ್ಬರಿಗೂ ಖುಷಿಯೋ ಖುಷಿ!!
‘ಏನಪ್ಪಾ ಮಳೆರಾಯ ನೀನು ಪ್ರೌಢಾವಸ್ಥೆಗೆ ಬಂದಿದ್ದೀಯಾ ಅನಿಸುತ್ತೆ.. ನಿನ್ ಹೆಸ್ರೂ ಕೂಡ ಮಹಾಮಳೆ ಅಂತಾ ಬದಲಾಗಿದೆ. ನೀನ್ ಸುರಿಯೋ ವರಸೆ ನೋಡಿದ್ರೆ ಪ್ರಳಯಾಂತಕ ಆಗಿಬಿಟ್ಟಿದ್ದೀಯಾ ಅನಿಸುತ್ತೆ ಈಗ ಎಲ್ಲೆಲ್ಲೂ ನಿಂದೇ ಹವಾ..’ ನಗುನಗುತ್ತಲೇ ಮಸಾಲೆದೋಸೆ ಕೇಳಿತು.
‘ಲೇ ಮಸಾಲೆದೋಸೆ, ನೀನೇನ್ ಕಮ್ಮೀನಾ? ನಿನ್ ಹವಾ ಏನ್ ಕಮ್ಮೀನಾ? ಎಲ್ಲೆಲ್ಲೂ ನೀನೇ.. ಎಲ್ರಿಗೂ ನೀನೇ ಬೇಕು, ನೀನಿಲ್ಲದೇ ಹೋದರೆ ಜಗತ್ತೇ ಮುಳುಗಿ ಹೋಗುತ್ತೆ’ ಮಳೆರಾಯನೂ ಹೊಗಳಿದ.
‘ಬಾ ಕೂತ್ಕೊಂಡು ಕಾಫಿ ಕುಡಿಯುಮಾ.. ಇವತ್ತುಂದಿನಾ ಈ ಚಳಿ, ಈ ಫ್ಲೋಟಿಂಗ್ ರೆಸ್ಟೋರೆಂಟು, ಈ ಮಳೆ, ಈ ಗಾಳಿ, ಈ ಜನ… ಎಲ್ಲಾ ನೋಡ್ತಾ ಇದ್ರೆ ನನ್ನುನ್ನೇ ನಾನು ತಿನ್ಕೊಬಿಡಾಣ ಅನಿಸ್ತಾ ಇದೆ’ ಅಂತಾ ಮಸಾಲೆದೋಸೆ ಹೇಳಿತು.
‘ಲೇ, ಗುರು ನಿನ್ನುನ್ನಾ ನೀನೇ ತಿನ್ಕೊಂಡ್ರೆ ನಿನ್ನುನ್ನಾ ನೀನೇ ಕೊಂದುಕೊಂಡಂಗಾಗುತ್ತೆ, ನೀನು ಇದ್ರೆನೇ ಈ ಜಗತ್ತಿಗೆ ಒಂದು ಗತ್ತು, ನೀನು ಇದ್ರೆನೇ ಜನರಿಗೆ ಒಂದು ರುಚಿ! ಬೇಕಾದ್ರೆ ಹೇಳು ಮದ್ದೂರ್ ವಡೆ ತಿನ್ನುಮಾ..’ ಅಂತಾ ಮಹಾಮಳೆ ಹೇಳಿದ. ಮಸಾಲೆದೋಸೆಗೆ ಖುಷಿಯಾಯ್ತು. ‘ಟೀವಿಗೀವಿ ನೋಡ್ತೀಯೋ ಅಥ್ವಾ ಬರೀ ಸೋಷಿಯಲ್ ಮಿಡಿಯಾದಲ್ಲೇ ಇರ್ತಿಯೋ?’ ಮಸಾಲೆದೋಸೆ ಕೇಳಿತು.
‘ಅಯ್ಯೋ ಟೀವಿ ನೋಡ್ತಾ ಇದ್ದೆ ಮಾರಾಯ ಆದ್ರೆ ಕಳೆದ ಮೂರ್ನಾಲ್ಕು ದಿನಗಳಿಂದ ಟೀವಿ ನೋಡೋಕೆ ಆಗ್ತಾ ಇಲ್ಲಾ ಟೀವಿ ಸವಾಸನೇ ಬೇಡ ಅನಿಸ್ಬಿಟ್ಟಿದೆ’ ಶಾನೆ ಬೇಜಾರಿನಲ್ಲಿ ಮಳೆರಾಯ ಹೇಳಿದ.
‘ಅಯ್ಯೋ ಅಂತಾದ್ದೇನಾಯ್ತಪ್ಪಾ.. ಇವತ್ತುಂದಿನಾ ಟ್ವೆಂಟಿಫೋರ್ ಇಂಟು ಸೆವೆನ್ ನಿನ್ ಸುದ್ದಿನೇ ಹಾಕೊಂಡು ಉಜ್ಜುತ್ತಾ ಇದ್ದಾರೆ ಖುಷಿ ಪಡೋ ವಿಷ್ಯಾ ಅಲ್ವಾ?’ ಮಸಾಲೆದೋಸೆ ಮಳೆರಾಯನಿಗೆ ಸಮಾಧಾನ ಮಾಡುವ ದನಿಯಲ್ಲಿ ಕೇಳಿತು. ‘ಏನ್ ಟಾರ್ಚರ್ ಗುರೂ ಈ ಟೀವಿಯವರದ್ದು.. ಗಂಟೆಗೊಂದು ಬಾರಿ ನನ್ನ ಹೆಸರು ಬದಲಾಯಿಸ್ತಾರೆ. ನಾನು ಸ್ತ್ರೀಲಿಂಗಾನಾ ಪುಲ್ಲಿಂಗಾನಾ ಅಥವಾ ತಟಸ್ಥ ಲಿಂಗಾನಾ ಅನ್ನೋದು ನಂಗೇ ಡೌಟು ಬರೋಕೆ ಶುರುವಾಗಿದೆ.. ರಣಚಂಡಿ ಮಳೆ ಅಂತಾರೆ.. ವರುಣಾಘಾತ ಅಂತಾರೆ.. ಪ್ರಳಯಸದೃಶ ಮಳೆ ಅಂತಾರೆ.. ಬದುಕು ಕಿತ್ತುಕೊಂಡ ಭಯಾನಕಮಳೆ ಅಂತಾರೆ.. ಯಮಸದೃಶ ಮಳೆಗೆ ಬದುಕು ಹೈರಾಣಾಯ್ತು ಅಂತಾರೆ… ಅಲ್ಲಾ ಗುರೂ ಇದೆಲ್ಲಾನೂ ತಡ್ಕೊಬಹುದು.. ಆದ್ರೆ, ಮಹಾಮಳೆ ಅವಾಂತರ ಅಂತಾನೂ ಹೇಳ್ತಾರೆ. ನೀನೇ ಹೇಳಪ್ಪಾ , ಅವಾಂತರ ಮಾಡಿರೋದು ನಾನಾ? ಅಥವಾ ಅವಾಂತರ ಮಾಡ್ಕೊಂಡಿರೋದು ಜನರು ಮತ್ತು ಸರ್ಕಾರಾನಾ?’ ಕೋಪ ಮತ್ತು ನೋವು ಎರಡೂ ಸೇರಿದ ಆಕ್ರೋಶದ ದನಿಯಲ್ಲಿ ಮಹಾಮಳೆ ಪ್ರಶ್ನಿಸಿದ.. ಮಸಾಲೆದೋಸೆಗೆ ಮಹಾಮಳೆ ಬಗ್ಗೆ ಕನಿಕರ ಮೂಡಿತು. ಇವತ್ತುಂದಿನಾ ಇಡೀ ರಾಜ್ಯಾನೇ ಅಲ್ಲಾಡುಸುತ್ತಿರುವ ಮಹಾಮಳೆಗೂ ಇಷ್ಟೆಲ್ಲಾ ಬೇಜಾರಾಗುತ್ತಾ ಅಂತಾ ಅಚ್ಚರಿ ಆಯ್ತು.
‘ಹೌದು ಬಿಡು ಮಾರಾಯಾ ಈ ಟೀವಿಯವರದ್ದು ಇದೇನು ಹೊಸಾದಾ? ಅವರೆಲ್ಲ ಸೆನ್‌ಸೆಷನ್ನಿಗೆ ಅಡಿಕ್ಟ್ ಆಗಿದ್ದಾರೆ.. ಏನೂ ಸೆನ್‌ಸೆಷನ್ ಸಿಗಲಿಲ್ಲ ಅಂದ್ರೆ, ಸಿಕ್ಕಿದ್ದನ್ನೆಲ್ಲಾ ಸೆನ್‌ಸೆಷನ್ ಮಾಡಿ ದಿನವಿಡೀ ಉಜ್ಜುತ್ತಾರೆ.. ನೀನು ಬೇಜಾರಾಗಬೇಡ ಬಿಡು.. ಯಾವುದಾದ್ರೂ ಸೆಕ್ಸ್ ಸ್ಕ್ಯಾಂಡಲ್ಲೋ, ಕರಪ್ಶನ್ ಸ್ಕಾಂಡಲ್ ವಿಡಿಯೋ ಹೊರಗೆ ಬಂದ್ರೆ ನೀನು ಯಾರು ಅಂತಾನು ಮೂಸಿ ನೋಡಲ್ಲಾ.’ ಅಂತಾ ಮಸಾಲೆ ದೋಸೆ ಸಮಾಧಾನ ಮಾಡಿತು.
ಮಸಾಲೆದೋಸೆ ಮಾತು ಕೇಳಿದ ಮೇಲೆ ಮಹಾಮಳೆಯ ಕೋಪವು ಇಳಿಯಿತು. ‘ನೀನ್ ಹೇಳೋದು ನಿಜಾ.. ಅದುಕ್ಕೆ ನಾನ್ ಟೀವಿನೇ ನೋಡಲ್ಲಾ, ಇನ್‌ಫರ್ಮೇಶನ್ನಿಗಾಗಿ ಸ್ವಲ್ಪ ಟ್ವಿಟ್ಟರ್, ಎಂಟರ್‌ಟೈನ್‌ಮೆಂಟಿಗಾಗಿ ಇನ್‌ಸ್ಟಾಗ್ರಾಮ್ ನೋಡ್ತೀನಿ.. ಅಷ್ಟೆಯಾ.. ಇರಲಿ ಬಿಡು.. ನಂಗೆ ನಿನ್ನುನ್ನ ನೋಡಿ ಖುಷಿಯಾಯ್ತು. ನಿನ್ನ ಹಿರಿಮೆ ಗರಿಮೆ ಯದ್ವಾತದ್ವಾ ಏರಿಬಿಟ್ಟಿದೆ.. ಇವತ್ತುಂದಿನಾ ಬರೀ ಸಾಮಾನ್ಯ ಜನರಷ್ಟೇ ಅಲ್ಲ ಸೂರ್ಯನಂತಹ ತೇಜಸ್ಸು ಇರುವ ಮಹಾವ್ಯಕ್ತಿಗಳೂ ನಿನ್ನುನ್ನಾ ಬಯಸ್ತಾರೆ. ನಾನು ಜನರಿಗೆ ಕೊಟ್ಟ ಕಷ್ಟವನ್ನು ಬದಿಗೊತ್ತಿ ನಿನಗಾಗಿ ಬರುತ್ತಾರೆ.. ನಿನಗೆ ಪ್ರಚಾರ ಕೊಡುತ್ತಾರೆ ನಂಗೆ ನೆಗೆಟಿವ್ ಪ್ರಚಾರ ಸಿಕ್ಕರೆ ನಿಂಗೆ ಒಳ್ಳೆ ಪ್ರಚಾರ ಸಿಗ್ತಾ ಇದೆ. ನಿಂದೇ ಎಲ್ಲಾ ಕಡೆ ವೈರಲ್ಲಾಗ್ತಾ ಇದೆ. ಅದೇನು ಗರಿ ಗರಿಯಾಗಿ ಕಾಣಿಸಿಕೊಂಡಿದ್ದೀಯಪ್ಪಾ ನಂಗಂತ್ತು ಖುಷಿಯಾಯ್ತು’ ಅಂತಾ ಮಳೆರಾಯ ಹೇಳಿದ. ‘ಮಳೆರಾಯ ಆದ್ರೂ ಒಂದ್ಮಾತು ಹೇಳ್ತಿನಿ.. ಕೇಳು.. ಮನೇಲಿ ಮಕ್ಳುಮರೀಗೆ ಉಷಾರಿಲ್ಲದಿದ್ದಾಗ, ಕಷ್ಟದಲ್ಲಿದ್ದಾಗ ಮನೆ ಯಜಮಾನ ಅನ್ನಿಸಿಕೊಂಡೋನು ನನ್ನುನ್ನ ಬಯಸುದ್ರೆ ನಂಗೆ ಖುಷಿಯಾಗಲ್ಲ.. ಬೇಜಾರಾಗುತ್ತೆ… ಇವತ್ತುಂದಿನಾ ನಾನು ಮಸಾಲೆದೋಸೆನೇ ಇರಬಹುದು. ಆದ್ರೆ ನಂಗೂ ಒಂಚೂರು ಮಾನವೀಯತೆ ಅನ್ನೋದು ಇದೆ. ಹಂಗಾಗಿ ಜನರ ಸಂಕಷ್ಟದ ಸಂದರ್ಭದಲ್ಲಿ ನನ್ನುನ್ನಾ ತಿಂದವರು ನಂಗೆ ಪ್ರಚಾರ ಕೊಟ್ರೆ ಇಷ್ಟಾ ಆಗಲ್ಲ. ಅದರಿಂದ ನೆಗೆಟಿವ್ ಪ್ರಚಾರವೇ ಹೆಚ್ಚಾಗುತ್ತೆ..’ ಅಂತಾ ಮಸಾಲೆದೋಸೆ ವಿವರಿಸಿತು. ‘ನಿಜಾ ಮಸಾಲೆದೋಸೆ.. ಇವತ್ತುಂದಿನಾ ಪ್ರಚಾರಕ್ಕಿಂತಾ ಮಾನವೀಯತೇನೇ ದೊಡ್ಡದು ಅನ್ನೋದುನ್ನಾ ಕಲಿಸಿದ್ದೀಯಾ ಥ್ಯಾಂಕ್ಯೂ .. ನಾನೂ ಇನ್ಮೇಲೆ ಸುರಿಯುವಾಗ ಸ್ವಲ್ಪ ಕಡಿಮೇನೇ ಸುರೀತಿನಿ.. ಜನಾ ಕಷ್ಟ ಪಡೋದು ನಂಗೂ ನೋಡೋಕಾಗಲ್ಲ.. ಜನಾ ಕಷ್ಟದಲ್ಲಿದ್ದಾಗಲೂ ನಿನ್ನುನ್ನ ಯಾರೂ ಚಪ್ಪರಿಸಿ ತಿನ್ನೋದನ್ನೂ ನೋಡೋಕಾಗಲ್ಲ’ ಎಂದ ಮಳೆರಾಯ. ‘ಮುುಳುಗು’ನಗೆ ಚೆಲ್ಲಿದ ಮಸಾಲೆದೋಸೆ ಕಾಫಿ ಹೀರತೊಡಗಿತು!! -‘ಅಷ್ಟಾವಕ್ರಾ’

andolanait

Recent Posts

ಮಹಿಳೆ ಮೇಲೆ ಹಲ್ಲೆ, ದೌರ್ಜನ್ಯ : ಆರೋಪಿ ಬಂಧನಕ್ಕೆ ದಸಂಸ ಆಗ್ರಹ

ಮಂಡ್ಯ : ತಾಲ್ಲೂಕಿನ ಕಚ್ಚಿಗೆರೆ ಗ್ರಾಮದ ದಲಿತ ಮಹಿಳೆ ರಜನಿ ಎಂಬವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಆರೋಪಿಗಳನ್ನು…

13 mins ago

ಉತ್ತಮ ಕೃಷಿಗೆ ಜೈವಿಕ ಗೊಬ್ಬರ ಬಳಸಿ : ತೋಟಗಾರಿಕೆ ವಿ.ವಿ ಕುಲಪತಿ ವಿಷ್ಣವರ್ಧನ ಸಲಹೆ

ಮೈಸೂರು : ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ ಹಸಿರೆಲೆ ಹಾಗೂ ಜೈವಿಕ ಗೊಬ್ಬರಗಳನ್ನು ಸರಿಯಾದ ರೀತಿಯಲ್ಲಿ…

19 mins ago

ರಂಗಭೂಮಿ ಧರ್ಮಾತೀತ,ಜಾತ್ಯತೀತವಾದದ್ದು : ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಬಣ್ಣನೆ

ಮೈಸೂರು : ರಂಗಭೂಮಿ ಎಂಬುದು ಧರ್ಮಾತೀತ, ಜಾತ್ಯತೀತ ಅಲ್ಲದೇ ದೇಶಾತೀತ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಬಣ್ಣಿಸಿದರು. ನಗರದ ಜೆಎಲ್‌ಬಿ…

50 mins ago

ಚಲನಚಿತ್ರ ವಾರ್ಷಿಕ ಸಾಹಿತ್ಯ ಪ್ರಶಸ್ತಿ : ರಘುನಾಥ್‌ ಚ.ಹ, ಪ್ರಕಾಶ್‌ರಾಜ್‌ ಕೃತಿ ಆಯ್ಕೆ

ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2020 ಹಾಗೂ 2021ನೇ ಸಾಲಿನ ರಾಜ್ಯ ಚಲನಚಿತ್ರ ವಾರ್ಷಿಕ ಸಾಹಿತ್ಯ…

2 hours ago

ಕೊಲೆ ಪ್ರಕರಣ | ಪವಿತ್ರಾ ಗೌಡಗೆ ಕೊನೆಗೂ ಸಿಕ್ತು ಗುಡ್‌ ನ್ಯೂಸ್‌

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡಗೆ ಮನೆಯಿಂದ ಊಟ ತರಿಸಿಕೊಳ್ಳಲು ಅಂತಿಮವಾಗಿ…

2 hours ago

ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ : ತಂದೆ ನೆನೆದು ಸಚಿವ ಖಂಡ್ರೆ ಭಾವುಕ

ಬೀದರ್:‌ ನಮ್ಮ ತಂದೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಸತತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ…

3 hours ago