‘ಬೇಟಿ ಪಡಾವೋ ಬೇಟಿ ಬಚಾವೋ’ ಎಂಬ ಕೇಂದ್ರ ಸರ್ಕಾರದ ಘೋಷಣೆ ಅಥವಾ ಯೋಜನೆ ಎಲ್ಲರಿಗೂ ಪರಿಚಿತ. ಆದರೆ, ‘ಸಬ್ ಪಡೇಂ ಸಬ್ ಬಡೇಂ (ಎಲ್ಲರೂ ಕಲಿಯಿರಿ ಎಲ್ಲರೂ ಬೆಳೆಯಿರಿ)’ ಎಂಬುದು ಹೆಚ್ಚಿನವರಿಗೆ ಪರಿಚಿತವಲ್ಲದ ಒಂದು ಘೋಷಣೆ. ಇದು ಯಾವುದೇ ಸರ್ಕಾರದ ಘೋಷಣೆ ಅಥವಾ ಯೋಜನೆ ಅಲ್ಲ. ಇದು ಹರ್ಯಾಣದ ನೋಯ್ಡಾ ಪೊಲೀಸರು ಕಳೆದ ಮೂರು ವರ್ಷಗಳಿಂದ ನಡೆಸುತ್ತಿರುವ ಒಂದು ಶೈಕ್ಷಣಿಕ ಕಾರ್ಯಕ್ರಮ. ಈ ಕಾರ್ಯಕ್ರಮದಡಿ ನೋಯ್ಡಾ ಪೊಲೀಸರು ಭಿಕ್ಷಾಟನೆ ಮಾಡುವ ಹಾಗೂ ಶಿಕ್ಷಣ ವಂಚಿತರಾದ ಕೊಳೆಗೇರಿಯ ಬಡ ಮಕ್ಕಳನ್ನು ವಿದ್ಯಾವಂತರನ್ನಾಗಿಸಲು ಸ್ವಯಂಪ್ರೇರಣೆಯಿಂದ ಶ್ರಮಪಡುತ್ತಿದ್ದಾರೆ.
ನೋಯ್ಡಾದ ‘ಆಂಟಿ ಹ್ಯೂಮನ್ ಟ್ರಾಫಿಕಿಂಗ್ ಯೂನಿಟ್’ನ ಪೊಲೀಸರು ಸರ್ವೇಗಳನ್ನು ನಡೆಸಿ, ರಸ್ತೆಗಳಲ್ಲಿ ಭಿಕ್ಷೆ ಬೇಡುತ್ತಲೋ, ಶಾಲೆಗೆ ಹೋಗದೆ ಸ್ಲಮ್ಮುಗಳಲ್ಲಿ ಪೋಲಿ ಅಲೆಯುತ್ತಲೋ ಅಥವಾ ಅಪರಾಧ ಕೃತ್ಯಗಳಲ್ಲಿ ತೊಡಗಿಯೋ ತಮ್ಮ ಸಮಯ ಮತ್ತು ಬದುಕು ಎರಡನ್ನೂ ವ್ಯರ್ಥಗೊಳಿಸುವ ಮಕ್ಕಳನ್ನು ಗುರುತಿಸಿ, ಅವರನ್ನು ‘ಸಬ್ ಪಡೇಂ ಸಬ್ ಬಡೇಂ’ ಕಾರ್ಯಕ್ರಮದಡಿ ತಂದು, ಅವರ ಭವಿಷ್ಯಕ್ಕೆ ಭದ್ರ ತಳಹದಿ ಹಾಕಲು ತಮ್ಮಿಂದಾದುದನ್ನೆಲ್ಲ ಮಾಡುತ್ತಿದ್ದಾರೆ. ಡೆಪ್ಯುಟಿ ಪೊಲೀಸ್ ಕಮಿಷನರ್ ವೃಂದಾ ಶುಕ್ಲಾ ಸ್ವತಃ ‘ಸಬ್ ಪಡೇಂ ಸಬ್ ಬಡೇಂ’ ಕಾರ್ಯಕ್ರಮದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಕಾರ್ಯಕ್ರಮ ಸುಸೂತ್ರವಾಗಿ ನಡೆಯಲು ‘ಜೆನ್ –ಕ್ಟ್’ ಎಂಬ ಒಂದು ಕಂಪೆನಿ ಮತ್ತು ಹರ್ಯಾಣ ಶಿಕ್ಷಣ ಇಲಾಖೆಯನ್ನು ತಮ್ಮ ಬೆಂಬಲಕ್ಕೆ ಇರಿಸಿಕೊಂಡಿದ್ದಾರೆ. ಜೆನ್ ಫ್ಯಾಕ್ಟ್ ಕಂಪೆನಿಯು ಟೆಂಟು, ಕುರ್ಚಿ, ಲ್ಯಾಪ್ಟಾಪ್, ಆಹಾರ ಮತ್ತಿತರ ಸೌಲಭ್ಯಗಳಿಗಾಗಿ ಹಣಕಾಸಿನ ನೆರವು ನೀಡುತ್ತದೆ.
ಐದರಿಂದ ಹನ್ನೆರಡು ವರ್ಷ ಪ್ರಾಯದ ಎಂದೂ ಶಾಲೆಗೆ ಹೋಗದ ಮಕ್ಕಳನ್ನು ಒಟ್ಟುಗೂಡಿಸಿ, ಅವರಿಗೆ ಅನೌಪಚಾರಿಕವಾದ ಶಿಕ್ಷಣ ನೀಡಿ, ಮುಂದೆ ಅವರು ಸಾಮಾನ್ಯ ಶಾಲೆಗಳಿಗೆ ಹೋಗುವಂತೆ ತಯಾರು ಮಾಡುವುದು ‘ಸಬ್ ಪಡೇಂ ಸಬ್ ಬಡೇಂ’ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಕಾರ್ಯಕ್ರಮದಡಿ ನೋಯ್ಡಾ ಪೊಲೀಸರು ಈವರೆಗೆ ಸ್ಲಮ್ ಪ್ರದೇಶಗಳಲ್ಲಿ ಆರು ಶಾಲೆಗಳನ್ನು ತೆರೆದಿದ್ದಾರೆ. ಪ್ರತೀ ಶಾಲೆಯಲ್ಲಿ ಐದಾರು ಜನ ಶಿಕ್ಷಕರನ್ನು ನೇಮಿಸಿದ್ದಾರೆ. ಆ ಶಿಕ್ಷಕರು ಆಟ, ಕತೆ ಹೇಳುವುದು, ಶೈಕ್ಷಣಿಕ ವಿಡಿಯೋ ಮೊದಲಾದವುಗಳ ಮೂಲಕ ಮಕ್ಕಳಿಗೆ ಶಾಲಾ ಕಲಿಕೆಯಲ್ಲಿ ಆಸಕ್ತಿ ಹುಟ್ಟುವಂತೆ ಪ್ರಯತ್ನಿಸುತ್ತಾರೆ. ಅಷ್ಟೇ ಅಲ್ಲದೆ, ಪೊಲೀಸರು ‘ಫೆಷಿಯಲ್ ಟ್ರ್ಯಾಕಿಂಗ್’ ತಂತ್ರಜ್ಞಾನದ ಮೂಲಕ ಆ ಮಕ್ಕಳ ಮೇಲೆ ನಿಗಾ ಇಟ್ಟು, ಅವರು ತಮ್ಮ ಶಾಲಾ ಶಿಕ್ಷಣವನ್ನು ವ್ಯವಸ್ಥಿತವಾಗಿ ನಡೆಸುವುದನ್ನು ಖಾತರಿ ಮಾಡಿಕೊಳ್ಳುತ್ತಾರೆ. ನೋಯ್ಡಾ ಪೊಲೀಸರು ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯ ಶಾಲೆಗಳನ್ನು ತೆರೆಯುವ ಪ್ರಯತ್ನದಲ್ಲಿದ್ದಾರೆ.
ಈ ಶಾಲೆಗಳು ಈ ಮಕ್ಕಳ ತಂದೆ ತಾಯಂದಿರು ದಿನಗೂಲಿ ಕೆಲಸ ಮಾಡುವ ಸ್ಥಳಗಳಿಗೆ ಹತ್ತಿರದಲ್ಲಿರುವಂತೆ ನೋಡಿಕೊಂಡಿರುವುದು ನೋಯ್ಡಾ ಪೊಲೀಸರ ಅರ್ಪಣಾ ಮನೋಭಾವಕ್ಕೆ ಸಾಕ್ಷಿ. ಮಕ್ಕಳ ಹೆತ್ತವರ ಜೊತೆ ಸದಾ ಸಂಪರ್ಕದಲ್ಲಿದ್ದು, ಅವರು ತಮ್ಮ ಮಕ್ಕಳನ್ನು ಪುನಃ ಭಿಕ್ಷೆ ಬೇಡಲು ಕಳುಹಿಸದಂತೆ ಅಥವಾ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸದಂತೆ ಎಚ್ಚರಿಕೆ ವಹಿಸುತ್ತಾರೆ. ಹೆತ್ತವರೂ ಕೂಡ ತಮ್ಮ ಮಕ್ಕಳು ಪೊಲೀಸರ ಹೃದಯವಂತಿಕೆಯಿಂದಾಗಿ ದಾರಿ ತಪ್ಪುವುದರಿಂದ ಬಚಾವಾಗಿ ಉತ್ತಮ ಭವಿಷ್ಯದತ್ತ ನಡೆಯುವುದನ್ನು ನೋಡಿ ಸಮಾಧಾನಗೊಳ್ಳುತ್ತಾರೆ.
ನೋಯ್ಡಾ ಪೊಲೀಸರ ಮಾದರಿಯಲ್ಲೇ ಪಶ್ಚಿಮ ಬಂಗಾಳದ ರಾಯ್ಗಂಜ್ ರೈಲ್ವೆ ನಿಲ್ದಾಣದ ಹತ್ತಿರದ ‘ರೈಲ್ವೆ ಪೊಲೀಸ್ ಇನ್ವೆಸ್ಟಿಗೇಷನ್ ಕೇಂದ್ರ’ದ ಪೊಲೀಸರೂ ಸ್ಲಮ್ ಪ್ರದೇಶದ ಬಡ ಮಕ್ಕಳಿಗೆ ಟ್ಯೂಷನ್ ನೀಡುತ್ತಿದ್ದಾರೆ. ಅವರು ‘ವಿನ್ನರ್ಸ್ ಎಜುಕೇಷನ್ ಕ್ಲಾಸಸ್’ ಎಂಬ ಹೆಸರಲ್ಲಿ ಒಂದು ಟ್ಯೂಷನ್ ಕ್ಲಾಸನ್ನು ಹುಟ್ಟು ಹಾಕಿ, ಅದರ ಮೂಲಕ ಪ್ರತಿ ಶನಿವಾರ ಮತ್ತು ಭಾನುವಾರ ಅಕ್ಕಪಕ್ಕದ ಸ್ಲಮ್ಮಿನ 30-35 ಬಡ ಶಾಲಾ ಮಕ್ಕಳಿಗೆ ವಿವಿಧ ವಿಷಯಗಳಲ್ಲಿ ಟ್ಯೂಷನ್ ನೀಡುತ್ತಿದ್ದಾರೆ. ಆ ಮಕ್ಕಳು ಹತ್ತಿರದ ಸರ್ಕಾರಿ ಶಾಲೆಗಳಿಗೆ ಹೋಗುತ್ತಾರಾದರೂ ಅವರ ತಂದೆ ತಾಯಿಗಳ ಬಡ ಶೈಕ್ಷಣಿಕ ಹಿನ್ನೆಲೆಯ ಕಾರಣ ಗುಣಮಟ್ಟದ ಕಲಿಕೆ ಅವರಿಂದ ಸಾಧ್ಯವಾಗದು ಮತ್ತು ಅವರಿಗೆ ಖಾಸಗಿ ಟ್ಯೂಷನ್ ಪಡೆಯಲು ಬೇಕಾದ ಆರ್ಥಿಕ ಅನುಕೂಲತೆಯೂ ಇಲ್ಲ. ‘ರೈಲ್ವೆ ಪೊಲೀಸ್ ಇನ್ವೆಸ್ಟಿಗೇಷನ್ ಕೇಂದ್ರ’ದ ಪೊಲೀಸರು ಮಕ್ಕಳಿಗೆ ಆ ಕೊರತೆಯನ್ನು ತುಂಬುತ್ತಿದ್ದಾರೆ.
ಟ್ಯೂಷನ್ ಕ್ಲಾಸ್ ನಡೆಸಲು ಮತ್ತು ಮಕ್ಕಳಿಗೆ ಆಹಾರ, ಪೆನ್ಸಿಲ್, ಪೆನ್, ಪುಸ್ತಕ, ಬಟ್ಟೆ ಮುಂತಾದವುಗಳನ್ನು ನೀಡಲು ಬೇಕಾಗುವ ಹಣವನ್ನು ಪೊಲೀಸರು ತಮ್ಮ ಕಿಸೆಯಿಂದಲೇ ಭರಿಸುತ್ತಾರೆ. ಚಳಿಗಾಲದಲ್ಲಿ ಮಕ್ಕಳಿಗೆ ಉಣ್ಣೆಯ ಬಟ್ಟೆ ನೀಡುತ್ತಾರೆ. ಮಕ್ಕಳಿಗೆ ಪಾಠ ಹೇಳುವುದಲ್ಲದೆ ಕತೆಗಳ ಮೂಲಕ ಮಕ್ಕಳಿಗೆ ಸಚ್ಚಾರಿತ್ರ್ಯವನ್ನು ತಿಳಿಸಿಕೊಡುತ್ತಾರೆ. ದಿನನಿತ್ಯದ ಜೀವನದಲ್ಲಿ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಹೇಗೆಂಬುದನ್ನು ಕಲಿಸುತ್ತಾರೆ. ಮಕ್ಕಳಿಗೂ ಪೊಲೀಸರು ನಡೆಸುವ ವೀಕೆಂಡ್ ಕ್ಲಾಸ್ಗಳೆಂದರೆ ಅಚ್ಚುಮೆಚ್ಚು. ಎಷ್ಟೆಂದರೆ, ಶಾಲೆಗೆ ಹೋಗುವುದಕ್ಕಿಂತ ಪೊಲೀಸರ ಈ ಟ್ಯೂಷನ್ ಕ್ಲಾಸಿಗೆ ಬರುವುದು ಹೆಚ್ಚು ಖುಷಿ ಅವರಿಗೆ. ಪೊಲೀಸರೂ ಈ ಮಕ್ಕಳನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಾರೆಂದರೆ, ಹೆಚ್ಚಿನ ಮಕ್ಕಳು ರೈಲ್ವೆ ಹಳಿಗಳ ಅಕ್ಕಪಕ್ಕದ ಗುಡಿಸಲುಗಳಲ್ಲಿ ವಾಸಿಸುವವರಾದುದರಿಂದ ಕ್ಲಾಸಿಗೆ ಬರಲು ರೈಲ್ವೆ ಹಳಿಗಳನ್ನು ದಾಟಿ ಬರಬೇಕಾಗುತ್ತದೆ. ಆಗ ಇಬ್ಬರು ಪೊಲೀಸರು ಮಕ್ಕಳು ರೈಲ್ವೆ ಹಳಿಯನ್ನು ದಾಟುವ ಜಾಗಕ್ಕೆ ಬಂದು, ಅವರನ್ನೆಲ್ಲ ಕರೆದುಕೊಂಡು, ರೈಲ್ವೆ ಸೇತುವೆಯ ಮೂಲಕ ಈಚೆಗೆ ಕರೆತರುತ್ತಾರೆ ಮತ್ತು ಕ್ಲಾಸ್ ಮುಗಿದ ನಂತರ ಅದೇ ರೈಲ್ವೆ ಸೇತುವೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ, ರೈಲ್ವೆ ಹಳಿಯ ಆಚೆ ಮಗ್ಗುಲಿಗೆ ಸುರಕ್ಷಿತವಾಗಿ ಬಿಟ್ಟು ಬರುತ್ತಾರೆ.
ಡೆಹ್ರಾಡೂನ್ ಮೂಲದ ‘ಆಸರ ಟ್ರಸ್ಟ್’ ಎಂಬ ಸರ್ಕಾರೇತರ ಸಂಸ್ಥೆಯು ಚಕ್ರಾತ ರಸ್ತೆಯ ಪಕ್ಕದ ಪೊಲೀಸ್ ಠಾಣೆಯ ಎದುರು ಭಾಗದಲ್ಲಿರುವ ಫುಟ್ಪಾತಿನಲ್ಲಿ ಹತ್ತಿರದ ಸ್ಲಮ್ಮಿನ ಮಕ್ಕಳಿಗಾಗಿ ಕ್ಲಾಸುಗಳನ್ನು ನಡೆಸುತ್ತಿತ್ತು. ನಾಲ್ಕರಿಂದ ಹನ್ನೆರಡು ವರ್ಷದೊಳಗಿನ ಹತ್ತು ಮಕ್ಕಳು ಅಲ್ಲಿ ಕಲಿಯುತ್ತಿದ್ದರು. ಬೆಳಿಗ್ಗೆ 9.30ಕ್ಕೆ ಶುರುವಾಗುವ ಕ್ಲಾಸು ಮಧ್ಯಾಹ್ನ 3.30ರ ತನಕ ನಡೆಯುತ್ತಿತ್ತು. ಫುಟ್ಪಾತ್ ಆದುದರಿಂದ ಚಿಕ್ಕ ಮಕ್ಕಳಿಗೆ ರಸ್ತೆಯಲ್ಲಿ ಸಾಗುವ ವಾಹನಗಳಿಂದ ಅಪಾಯಗಳಾಗುವ ಸಾಧ್ಯತೆ ಇತ್ತು. ಅದನ್ನು ಮನಗಂಡು ಪೊಲೀಸ್ ಠಾಣೆಯ ಸ್ಟೇಷನ್ ಆಫೀಸರ್ ಮುಕೇಶ್ ತ್ಯಾಗಿ, ಪೊಲೀಸ್ ಠಾಣೆಯ ಒಳಭಾಗದ ಒಂದು ಮೂಲೆಯಲ್ಲಿ ಸುರಕ್ಷಿತವಾಗಿ ಕ್ಲಾಸುಗಳನ್ನು ನಡೆಸಲು ವ್ಯವಸ್ಥೆ ಮಾಡಿಕೊಟ್ಟರು.
ಫುಟ್ಪಾತ್ನಲ್ಲಿ ಕ್ಲಾಸುಗಳು ನಡೆಯುತ್ತಿದ್ದಾಗ ಮಕ್ಕಳನ್ನು ಕಲಿಸಲು ಹಿಂಜರಿಯುತ್ತಿದ್ದ ಹೆತ್ತವರು ಸ್ಟೇಷನ್ ಒಳಗೆ ಕ್ಲಾಸುಗಳು ನಡೆಯುವುದನ್ನು ನೋಡಿ ತಮ್ಮ ಮಕ್ಕಳನ್ನೂ ಕಳುಹಿಸತೊಡಗಿದರು. ಹಾಗಾಗಿ ಮಕ್ಕಳ ಸಂಖ್ಯೆ 50 ಮೀರಿತು. ಮಕ್ಕಳ ಸಂಖ್ಯೆ ಏರಿದರಿಂದಾಗಿ ಆಸರ ಟ್ರಸ್ಟ್ ಕ್ಲಾಸುಗಳನ್ನು ತಲಾ ಎರಡು ಗಂಟೆಗಳ ಮೂರು ವಿಭಾಗಗಳನ್ನಾಗಿ ಮಾಡಬೇಕಾಗಿ ಬಂತು. ಯಾರೋ ಒಬ್ಬರು ದಾನಿಗಳು ಮಕ್ಕಳನ್ನು ಅವರ ಮನೆಗಳಿಂದ ಶಾಲೆಗೆ ಕರೆತರಲು ಮತ್ತು ವಾಪಸ್ ಮನೆಗೆ ಬಿಟ್ಟು ಬರಲು ಒಂದು ಸ್ಕೂಲ್ ವ್ಯಾನಿನ ವ್ಯವಸ್ಥೆ ಮಾಡಿಕೊಟ್ಟರು. ಬೇರೊಬ್ಬರು ಮಕ್ಕಳಿಗೆ ಸ್ಕೂಲ್ ಬ್ಯಾಗ್ಗಳನ್ನು ಕೊಡಿಸಿದರು. ಅದರ ಜೊತೆಯಲ್ಲಿ, ಸ್ಟೇಷನ್ನಿನ 50 ಜನ ಪೊಲೀಸ್ ಸಿಬ್ಬಂದಿ ತಮ್ಮ ಖರ್ಚಿನಲ್ಲಿ ಮಕ್ಕಳಿಗೆ ಪ್ರತಿದಿನ ಊಟ ತಿಂಡಿ ಕೊಡಿಸುತ್ತಾರೆ. ಅಷ್ಟೇ ಅಲ್ಲದೆ, 10 ಜನ ಮಹಿಳಾ ಪೊಲೀಸರು ಬಿಡುವಿನ ಸಮಯದಲ್ಲಿ ಟೀಚರುಗಳಾಗಿ ಆ ಮಕ್ಕಳಿಗೆ ಕಲಿಸುತ್ತಾರೆ.
ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಅವರ ಕಾರು ಚಾಲಕನ…
ಮೈಸೂರು : ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ಮೂರು ರಾಜ್ಯಗಳಲ್ಲಿ ಗೆಲುವು ಲಭಿಸಿದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಜೆಪಿ…
ಚೆನ್ನೈ : ನಟಿ ತ್ರಿಶಾ ಕೃಷ್ಣನ್ ತಮ್ಮ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಬೆಳಿಗ್ಗೆ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.…
ಚೆನ್ನೈ: ತಮಿಳುನಾಡಿನ ಹಾಲಿ ಸಿಎಂ ಎಂ.ಕೆ.ಸ್ಟಾಲಿನ್ ಸ್ವ ಕ್ಷೇತ್ರದಲ್ಲೇ ಸೋಲು ಅನುಭವಿಸಿದ್ದಾರೆ. ಈ ಮೂಲಕ ಸತತ 2ನೇ ಬಾರಿಗೆ ಸರ್ಕಾರ…
ದಾವಣಗೆರೆ: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎರಡೂ ಕ್ಷೇತ್ರದಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಿದೆ.…
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ವಿಕಸಿತ ಭಾರತದ ಮೇಲೆ ಜನರು ಹೊಂದಿರುವ ನಂಬಿಕೆಯಿಂದಾಗಿ ಎನ್ಡಿಎ…