ಎಡಿಟೋರಿಯಲ್

ಮಳೆಹಾನಿ ನಿಭಾಯಿಸಲು ಸಜ್ಜಾದ ಜಿಲ್ಲಾಡಳಿತ ಭವನದ ಬುಡದಲ್ಲಿಯೇ ಸಮಸ್ಯೆ!

ಮಡಿಕೇರಿಯಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಭಾರೀ ತಡೆಗೋಡೆ, ಒಂದೆರಡು ವರ್ಷಗಳಲ್ಲೇ ಕುಸಿಯುವ ಭೀತಿ ಎದುರಾಗಿದೆ. ಅತ್ಯಾಧುನಿಕ ತಂತ್ರಜ್ಞಾನ, ಜರ್ಮನ್ ಟೆಕ್ನಾಲಜಿ ಎಲ್ಲವೂ ಪ್ರಕೃತಿ ಮುಂದೆ ಕೈಚೆಲ್ಲಿವೆ. ಎಲ್ಲರ ಊಹೆ, ಆತ್ಮವಿಶ್ವಾಸಗಳೂ ತಲೆಕೆಳಗಾಗುವಂತಾಗಿದೆ. ತಡೆಗೋಡೆಗೆ ಕಂಟಕ ಎಂಬ ಸುದ್ದಿ ಬರುತ್ತಿದ್ದಂತೆಯೇ, ಕಾಮಗಾರಿ ಅವೈಜ್ಞಾನಿಕ ಎಂಬ ಮನದಾಳದ ಜನಧ್ವನಿ ಹೊರಬರುತ್ತಿದೆ.

ಜಿಲ್ಲಾಡಳಿತ ಭವನಕ್ಕೆ ಸೂಕ್ತ ಜಾಗ ಇದಲ್ಲ ಎಂಬ ಸ್ಪಷ್ಟ ಅಭಿಪ್ರಾಯಗಳು ಹಿಂದೆ ವ್ಯಕ್ತವಾಗಿದ್ದವು. ಆದರೆ, ನಗರದೊಳಗೆ ಎಲ್ಲೂ ಸರ್ಕಾರಿ ಜಾಗ ಇಲ್ಲ ಎಂಬ ಕಾರಣದಿಂದ ಮತ್ತು ಐತಿಹಾಸಿಕ ಕೋಟೆಯೊಳಗಿಂದ ಸರ್ಕಾರಿ ಕಚೇರಿಗಳನ್ನು ಖಾಲಿ ಮಾಡಲೇಬೇಕೆಂಬ ಪ್ರಮೇಯ ಬಂದ ಹಿನ್ನೆಲೆಯಲ್ಲಿ, ಅದಾಗಲೇ ಕೊನೆಯುಸಿರು ಎಳೆಯುತ್ತಿದ್ದ ಸೆಂಟ್ರಲ್ ವರ್ಕ್‌ಶಾಪ್‌ಅನ್ನು ಶಾಶ್ವತವಾಗಿ ಮುಚ್ಚಿ, ಅಲ್ಲಿನ ೨.೨೫ ಎಕರೆ ಜಾಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಲಾಯಿತು.

ಇದಕ್ಕೂ ಮುನ್ನ ಸುಮಾರು ೪೪ ವರ್ಷಗಳಿಗೆ ಜಾಗವನ್ನು ಸೆಂಟ್ರಲ್ ವರ್ಕ್ ಶಾಪ್‌ಗೆ ನೀಡಲಾಗಿತ್ತು. ನಗರದ ಹೊರವಲಯದ ಕರವಾಲೆ ಬಾಡಗದಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸುವುದೆಂದು ನಿರ್ಧಾರವಾಗಿ, ಸರ್ಕಾರದಿಂದ ೩ ಕೋಟಿ ರೂ. ಮಂಜೂರಾಗಿದ್ದರೂ, ನಗರದೊಳಗೆ ಸುಲಭವಾಗಿ ಸಿಕ್ಕ ವರ್ಕ್‌ಶಾಪ್ ಜಾಗವನ್ನೇ ಫೈನಲ್ ಮಾಡಲಾಯಿತು. ಜಿಲ್ಲಾಡಳಿತ ಭವನ ದೂರದಿಂದ ನಯನ ಮನೋಹರವಾಗಿ ಕಂಡರೂ, ವಾಸ್ತವದಲ್ಲಿ ಭಯ ಹುಟ್ಟಿಸುತ್ತಿದೆ. ಕಾರಣ, ಈ ಭವ್ಯ ಕಟ್ಟಡ ಸಮುಚ್ಚಯ ನಿಂತಿರುವುದು ಭಯಾನಕ ದಿಬ್ಬದ ತುದಿಯಲ್ಲಿ.

ಹಲವು ಕೋಟಿ ರೂ.ಗಳನ್ನು ಖರ್ಚು ಮಾಡಿದ ಭವನದ ಭದ್ರತೆಗೆ, ಇನ್ನಷ್ಟು ಕೋಟಿ ಸುರಿದು ಹೆದ್ದಾರಿಗೂ ಭದ್ರತೆಯಿರಲೆಂದು ತಡೆಗೋಡೆ ನಿರ್ಮಿಸಲಾಯಿತು. ಜರ್ಮನ್ ಟೆಕ್ನಾಲಜಿ ಎಂಬ ಹಣೆಪಟ್ಟಿ ಹೊತ್ತು ಎದ್ದು ನಿಂತ ತಡೆಗೋಡೆ ಇಂದು ಜನರನ್ನೇ ಅಣಕಿಸಿ ನಗುತ್ತಿದೆ.

ಹೌದು. ಜಿಲ್ಲೆಯ ಮಳೆಹಾನಿಯನ್ನು ನಿಭಾಯಿಸಲು ಸಜ್ಜಾಗಿರುವ ಜಿಲ್ಲಾಡಳಿತ ಭವನದ ಬುಡದಲ್ಲಿಯೇ ಸಮಸ್ಯೆ ಎದುರಾಗಿದೆ.

೨೦೧೮ ರಲ್ಲಿ ಸಣ್ಣ ಪ್ರಮಾಣದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಕುಸಿತವಾಗಿತ್ತು. ಅದು ಮತ್ತಷ್ಟು ಕುಸಿಯದಂತೆ ಕೋಟ್ಯಂತರ ರೂಪಾಯಿ ವ್ಯಯಿಸಿ ತಡೆಗೋಡೆ ಮಾಡಲಾಗುತ್ತಿತ್ತು. ಆದರೆ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಇಲ್ಲಿ ತಡೆಗೋಡೆ ಕುಸಿದು ಬೀಳುವ ಸ್ಥಿತಿ ಎದುರಾಗಿದೆ. ತಡೆಗೋಡೆಗೆ ಅಳವಡಿಸಿದ್ದ ಸ್ಲ್ಯಾಬ್‌ಗಳು ಸಂಪೂರ್ಣ ಹೊರಕ್ಕೆ ಭಾಗಿದ್ದು ಯಾವುದೇ ಕ್ಷಣದಲ್ಲಾದರೂ ಹೆದ್ದಾರಿ ೨೭೫ಕ್ಕೆ ಅಡ್ಡಲಾಗಿ ತಡೆಗೋಡೆ ಕುಸಿದು ಬೀಳುವ ಸಾಧ್ಯತೆ ನಿಚ್ಚಳವಾಗಿದೆ.

ಕೋಟಿ ಕೋಟಿ ರೂ.ವ್ಯಯಿಸಿ ಮಾಡುತ್ತಿದ್ದ ತಡೆಗೋಡೆ ಕುಸಿದು ಬಿದ್ದಿದ್ದೇ ಆದಲ್ಲಿ ಹೆದ್ದಾರಿಯ ಕೆಳಭಾಗದಲ್ಲೇ ಇರುವ ಐದಾರು ಮನೆಗಳು ಸಾವಿರಾರು ಲೋಡ್ ಮಣ್ಣಿನಲ್ಲಿ ಸಮಾಧಿಯಾಗಿ ಬಿಡುವ ಆತಂಕವಿದೆ. ಆಗಸ್ಟ್ ೨೦೨೦ರಲ್ಲಿ, ಕೊಡಗು ಜಿಲ್ಲಾಡಳಿತ, ಡಿಸಿ ಕಚೇರಿ ಸ್ಥಳದಲ್ಲಿ ಸಣ್ಣ ಭೂಕುಸಿತ ವರದಿಯಾಗಿತ್ತು.

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕಚೇರಿ ಪ್ರದೇಶದ ಹಿಂಭಾಗದಲ್ಲಿ ಭೂಮಿ ಕುಸಿದಿದ್ದು, ಇದನ್ನು ಟಾರ್ಪಾಲಿನ್ ಹೊದಿಕೆಗಳನ್ನು ಬಳಸಿ ರಕ್ಷಿಸುವವರೆಗೂ ಡಿಸಿ ಕಚೇರಿಯನ್ನು ಸ್ಥಳಾಂತರಿಸಲಾಗಿತ್ತು. ಇದಲ್ಲದೆ, ಡಿಸಿ ಅನ್ನೀಸ್ ಕಣ್ಮಣಿ ಜಾಯ್ ಅವರ ಅವಧಿಯಲ್ಲಿ ಕಚೇರಿ ಕಟ್ಟಡವನ್ನು ರಕ್ಷಿಸಲು ರೂ. ೭ ಕೋಟಿ ರಿಟೈನಿಂಗ್ ವಾಲ್ ಯೋಜನೆಯನ್ನು ಮಂಜೂರು ಮಾಡಲಾಗಿತ್ತು. ಈ ಯೋಜನೆಯು ಜನವರಿ ೨೦೨೨ ರೊಳಗೆ ಪೂರ್ಣಗೊಳ್ಳುವ ಭರವಸೆ ನೀಡಿದ್ದರೂ, ಈ ಕಾಮಗಾರಿ ಇನ್ನೂ ನಡೆಯುತ್ತಿದೆ. ಅದಾಗಲೇ ಮತ್ತೆ ಮಳೆಯಿಂದಾಗಿ ಈ ಗೋಡೆ ಕುಸಿಯುವ ಭೀತಿ ಎದುರಾಗಿದೆ.

೪೦ ಅಡಿ ಎತ್ತರ ೧೪೦ ಮೀಟರ್ ಉದ್ದದ ತಡೆಗೋಡೆಯ ಸ್ಲ್ಯಾಬ್‌ಗಳು ಉಬ್ಬುತ್ತಿದ್ದು, ಕುಸಿಯುವ ಅಪಾಯವಿದೆ. ಕಾಮಗಾರಿ ಅಪೂರ್ಣವಾದ ಗೋಡೆಯ ಮೇಲೆ ಟಾರ್ಪಾಲಿನ್‌ಗಳನ್ನು ಹೊದಿಸಲಾಗಿದ್ದು, ಗೋಡೆಯೊಳಗೆ ನೀರು ಸೋರಿಕೆಯಾಗಿ ಗೋಡೆ ಸಡಿಲಗೊಂಡಿದೆ ಎನ್ನಲಾಗಿದೆ.

ಮುಂಜಾಗ್ರತಾ ಕ್ರಮವಾಗಿ ನಗರದ ತಿಮ್ಮಯ್ಯ ವೃತ್ತದಿಂದ ಮಡಿಕೇರಿ-ಮಂಗಳೂರು ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಡಿಕೇರಿ-ಮಂಗಳೂರು ಎನ್‌ಎಚ್ ೨೭೫ ತಲುಪಲು ಪ್ರಯಾಣಿಕರು ಈಗ ಮೇಕೇರಿ ರಸ್ತೆಯ ಮೂಲಕ ತಾಳತ್ಮನೆ ಕಡೆಗೆ ಹೋಗಬೇಕಾದ ಅನಿವಾರ್ಯತೆ ಇದೆ.

ಇದೆಲ್ಲದರ ನಡುವೆ ತಾತ್ಕಾಲಿಕ ಪರಿಹಾರವಾಗಿ ಸ್ಥಳದಲ್ಲಿ ಮರಳು ಚೀಲಗಳಿಂದ ತಡೆಗೋಡೆಗೆ ಭದ್ರತೆ ಒದಗಿಸುವ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ತಡೆಗೋಡೆಗೆ ಮರಳು ಚೀಲದ ಭದ್ರತೆಯೇ ಎಂದು ಜನರು ನಗುವಂತಾಗಿದೆ.

ಇಂತಹ ಹಲವು ಉದಾಹರಣೆಗಳು ಕೊಡಗು ಜಿಲ್ಲೆಯಲ್ಲಿವೆ. ಹಳೇ ಖಾಸಗಿ ಬಸ್ ನಿಲ್ದಾಣದ ತಡೆಗೋಡೆ, ನೂತನ ಖಾಸಗಿ ಬಸ್ ನಿಲ್ದಾಣ, ಹೈಟೆಕ್ ಮಾರುಕಟ್ಟೆ ಮತ್ತಿತರ ಎಲ್ಲ ಕಾಮಗಾರಿಗಳಲ್ಲೂ ಅವೈಜ್ಞಾನಿಕತೆ ಎದ್ದು ಕಾಣುತ್ತಿದೆ. ಇನ್ನಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಕೋಟ್ಯಂತರ ರೂ. ಜನರ ತೆರಿಗೆ ಹಣದಲ್ಲಿ ನಡೆಸುವ ಕಾಮಗಾರಿಗಳನ್ನು ಸಮರ್ಪಕವಾಗಿ ಮಾಡಬೇಕಿದೆ.

andolana

Recent Posts

ಗೂಡ್ಸ್ ಆಟೋ ಉರುಳಿ ಬಿದ್ದು ಮಹಿಳೆ ಸಾವು: ಹಲವರಿಗೆ ಗಾಯ

ಮಂಡ್ಯ : ಚಾಲಕನ ನಿಯಂತ್ರಣ ತಪ್ಪಿದ ಗೂಡ್ಸ್ ಆಟೋ (ಟಾಟಾ ಏಸ್) ರಸ್ತೆ ಬದಿಗೆ ಉರುಳಿಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟು,…

4 hours ago

ಹಾಸನ: ಆಟೋ ಪಲ್ಟಿಯಾಗಿ ತಾಯಿ-ಮಗ ಸಾವು

ಹಾಸನ: ಮಗನನ್ನು ಶಾಲೆಗೆ ಸೇರಿಸಲಯ ಪತ್ರಕ್ಕಾಗಿ ಆಟೋದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಚಾಲಕನ ಅತಿಬೇಗ ಮತ್ತು ನಿರ್ಲಕ್ಷ್ಯದಿಂದ ಪಲ್ಟಿಯಾದ ಪರಿಣಾಮ ಅಮ್ಮ…

8 hours ago

ಚಾಮುಂಡಿಬೆಟ್ಟಕ್ಕೆ ಬಾಲಿವುಡ್ ನಟ ರಣವೀರ್ ಸಿಂಗ್ ಭೇಟಿ ವಿಚಾರ: ಅರ್ಚಕ ಸುನೀಲ್ ದೀಕ್ಷಿತ್ ಪ್ರತಿಕ್ರಿಯೆ

ಮೈಸೂರು: ನಾಡ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಭೇಟಿ ನೀಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಚಾಮುಂಡಿಬೆಟ್ಟದ…

8 hours ago

ರೈತರ ಆದಾಯ ಹೆಚ್ಚಿಸುವುದೇ ನಮ್ಮ ಸರ್ಕಾರದ ಗುರಿ: ಎನ್.ಚಲುವರಾಯಸ್ವಾಮಿ.

ಬೆಂಗಳೂರು: ಇಂದು ಕೃಷಿ ಕ್ಷೇತ್ರ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚದ ಏರಿಕೆ, ಮಾರುಕಟ್ಟೆ ಅಸ್ಥಿರತೆ ಮತ್ತು…

9 hours ago

ಸಿಎಂ ಬದಲಾದರೆ ಪರಮೇಶ್ವರ್‌ ಸಿಎಂ ಆಗಲಿ: ಮಾಜಿ ಸಚಿವ ಕೆ.ಎನ್.ರಾಜಣ್ಣ

ಬೆಂಗಳೂರು: ಸಿಎಂ ಬದಲಾವಣೆ ಆದರೆ ಪರಮೇಶ್ವರ್‌ ಮುಖ್ಯಮಂತ್ರಿಯಾಗಲಿ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಇಂದು…

10 hours ago

ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ ವಿರೋಧಿಸಿ ಪ್ರತಿಭಟನೆ

ಮೈಸೂರು: ರಸಗೊಬ್ಬರ ಖರೀದಿಗೆ ಎಫ್‌ಐಡಿ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ರೈತ ಮುಖಂಡರು ಪ್ರತಿಭಟನೆ ನಡೆಸಿದರು. ಮೈಸೂರಿನ ಕಾಡಾ ಕಛೇರಿ ಆವರಣದಲ್ಲಿರುವ…

11 hours ago