ಎಡಿಟೋರಿಯಲ್

ಮುಸ್ಲಿಂ ಧಾರ್ಮಿಕ ನೇತಾರರಿಗೆ ಕಗ್ಗಂಟಾಗಿರುವ ಖುಲಾ ಪದ್ಧತಿ

ಕುರಾನ್ ಮತ್ತು ಹಡಿತ್‌ಗಳಲ್ಲಿ ಪುರಾವೆಗಳಿದ್ದರೂ ಉಲೇಮಾಗಳು ಮಹಿಳೆಯರ ಪರ ನಿಲ್ಲುತ್ತಿಲ್ಲ.

ಹೈಕೋರ್ಟ್‌ನ ಈ ತೀರ್ಪು ಸಿಲ್ವಿಯಾ ವಾಟುಕ್ ಅವರ ಲೇಖನವನ್ನೇ ಪ್ರತಿಬಿಂಬಿಸುತ್ತದೆ. ಈ ಲೇಖನದಲ್ಲಿ ಸಿಲ್ವಿಯಾ ವಾಟುಕ್ ಅವರು ಹೀಗೆ ಹೇಳುತ್ತಾರೆ, ‘‘ಕೌಟುಂಬಿಕ ಹಕ್ಕುಗಳನ್ನು ಕುರಿತ ೧೯೧೭ರ ಆಟಮನ್ ಕಾನೂನು ಮೊಟ್ಟಮೊದಲ ಬಾರಿಗೆ ಮಹಿಳೆಗೆ ಕೆಲವು ವಿಶಿಷ್ಟ ಸನ್ನಿವೇಶಗಳಲ್ಲಿ ನ್ಯಾಯದ ಮೂಲಕ ವಿಚ್ಚೇದನ ಪಡೆಯಲು ಅವಕಾಶ ನೀಡಿತ್ತು. ಆಗಿನಿಂದಲೂ ಹನಾಫಿ ಕಾನೂನಿನ ನಿಯಮಗಳನ್ನು ಅನ್ವಯಿಸುವ ಬಹುತೇಕ ದೇಶಗಳು ಈ ಕಾನೂನನ್ನು ಸಡಿಲಗೊಳಿಸಿ, ಮಾರ್ಪಡಿಸುವ ಮೂಲಕ ವಿಚ್ಚೇದನ ಪಡೆಯಲಿಚ್ಚಿಸುವ ಪತ್ನಿಯು ಆಕೆಯ ಪತಿಯ ಅನುಮತಿ ಪಡೆಯಬೇಕೆಂಬ ನಿಯಮವನ್ನು ನಿರಾಕರಿಸುತ್ತಲೇ ಬಂದಿವೆ. ಭಾರತವೂ ಸಹ ಇದನ್ನು ೧೯೩೯ರ ಮುಸ್ಲಿಂ ವಿವಾಹ ರದ್ದತಿಯ ಕಾಯ್ದೆಯ ಮೂಲಕ ಜಾರಿಗೊಳಿಸಿತ್ತು. ಈ ಕಾಯ್ದೆಯ  ಅನ್ವಯ ಮುಸ್ಲಿಂ ಮಹಿಳೆಯು ನ್ಯಾಯಾಲಯದ ಮೂಲಕ ಸಮ್ಮತಿ ಸೂಚಿಸದ ಅಥವಾ ಲಭ್ಯವಿಲ್ಲದ ಪತಿಯಿಂದ ವಿಚ್ಚೇದನ ಪಡೆಯಬಹುದಾಗಿದೆ’’.

ನ್ಯಾಯಾಂಗವು ೧೯೩೭ರ ಮುಸ್ಲಿಂ ವೈಯಕ್ತಿಕ ಕಾನೂನಿನ (ಶರಿಯತ್) ಅನ್ವಯಿಸುವಿಕೆಯ ಕಾಯ್ದೆಯನ್ನು ವ್ಯಾಖ್ಯಾನಿಸುವ ತನ್ನ ವ್ಯಾಪ್ತಿಯನ್ನು ಮೀರಿ ಕೇರಳ ಹೈಕೋರ್ಟ್ ತೀರ್ಪು ನೀಡಿದೆ ಎಂದು ಎಐಎಂಪಿಎಲ್‌ಬಿ ಪ್ರತಿಪಾದಿಸುತ್ತದೆ. ಮಂಡಲಿಯ ಅನುಸಾರ ಪುರುಷನಿಗೆ ತನ್ನ ಪತ್ನಿಯ ಖುಲಾ ಪ್ರಸ್ತಾವನೆಯನ್ನು ಒಪ್ಪುವ ಅಥವಾ ನಿರಾಕರಿಸುವ ಹಕ್ಕು ಇರುತ್ತದೆ. ಅಂದರೆ ಮಹಿಳೆಯು ದೌರ್ಜನ್ಯದಿಂದ ಕೂಡಿದ ಅಥವಾ ಅಸಮಾಧಾನದಿಂದ ಕೂಡಿದ ವೈವಾಹಿಕ ಸಂಬಂಧವನ್ನು, ಆಕೆಯ ಪತಿಯ ಒಪ್ಪಿಗೆ ಇಲ್ಲದೆ, ತೊರೆಯುವಂತಿಲ್ಲ ಎಂದೇ ಪ್ರತಿಪಾದಿಸುತ್ತದೆ. ಈ ತರ್ಕವು ಭಾರತದ ವಾಸ್ತವತೆಗಳಿಗೆ ವ್ಯತಿರಿಕ್ತವಾಗಿದೆ. ಇಲ್ಲಿ ಬಹುಪಾಲು ಖುಲಾ ಪ್ರಕರಣಗಳು ಮುಂಚೂಣಿಗೆ ಬರುವುದು, ಮಹಿಳೆಗೆ ತನ್ನ ವೈವಾಹಿಕ ಕುಟುಂಬವನ್ನು ತೊರೆಯಲು ಒತ್ತಾಯಿಸಿದಾಗ ಅಥವಾ ಮಹಿಳೆಯು ಅಗಲಿರುವ ಪತಿಯ ಕಿರುಕುಳದಿಂದ
ತಪ್ಪಿಸಿಕೊಳ್ಳುವ ಸಲುವಾಗಿ ತನ್ನ ತವರು ಮನೆಯವರೊಂದಿಗೆ ಇರಲು ಇಚ್ಚಿಸಿದಾಗ. ಈ ಎರಡೂ ಪ್ರಸಂಗಗಳಲ್ಲಿ ಮಹಿಳೆಯ ಖುಲಾ ಪ್ರಸ್ತಾವನೆಗೆ ಸಮ್ಮತಿ ಸೂಚಿಸುವುದರಿಂದ ಪತಿಗೆ ಯಾವುದೇ, ಮತ್ತೊಂದು ವಿವಾಹವಾಗುವ ಅವಕಾಶ ಬಿಟ್ಟರೆ, ಮತ್ತಾವ ಅನುಕೂಲತೆಗಳೂ ಲಭಿಸುವುದಿಲ್ಲ. ಖುಲಾ ಮೂಲಕ ಬಿಡುಗಡೆಗೆ ಒಪ್ಪದೆ ಹೋದರೆ ಅಂತಹ ಮಹಿಳೆಯನ್ನು ತ್ಯಜಿಸಿಬಿಡಬಹುದು. ಸ್ಪಷ್ಟ ವಿಚ್ಚೇದನದ ನಿಯಮ

ಅತೃಪ್ತಿಯಿಂದ ಕೂಡಿದ ಅಥವಾ ದೌರ್ಜನ್ಯಯುತ ವಿವಾಹ ಸಂಬಂಧಗಳಿಗೆ ಅಂತ್ಯ ಹಾಡುವ ಉದ್ದೇಶದಿಂದಲೇ ಪವಿತ್ರ ಕುರಾನ್, ಪತಿ ಅಥವಾ ಪತ್ನಿ ಯಾರೇ ಪ್ರಸ್ತಾಪಿಸಿದರೂ ಸಹ, ವಿಚ್ಚೇದನ ನಿಯಮಗಳನ್ನು ಸ್ಪಷ್ಟವಾಗಿ ನಮೂದಿಸುತ್ತದೆ. ಸುರಾಹ್?-ಅಲ್-ಬಕಾರಾಹ್‌ನಲ್ಲಿರುವ ೨೨೯ನೇಯ ಶ್ಲೋಕದಲ್ಲಿ ಪವಿತ್ರ ಕುರಾನ್, ಮಹಿಳೆ ತನ್ನ ಬಿಡುಗಡೆಗೆ ಪ್ರತಿಯಾಗಿ ಏನನ್ನಾದರೂ ನೀಡುವುದಾದರೆ ಆಕೆಗೆ ವಿವಾಹ ಬಂಧವನ್ನು ಕೊನೆಗೊಳಿಸುವ ಹಕ್ಕು ನೀಡುತ್ತದೆ. ಅಂದರೆ, ಆಕೆ ವಿಚ್ಚೇದನ ಪಡೆಯಲು ಖುಲಾ ಪ್ರಸ್ತಾಪಿಸುವ ಮೂಲಕ ತಾನು ಪಡೆದಿರುವ ಮೆಹರ್ ಹಿಂದಿರುಗಿಸಬೇಕಾಗುತ್ತದೆ. ಇಸ್ಲಾಮಿಕ್ ಚರಿತ್ರೆಯಲ್ಲಿ ಸ್ಪಷ್ಟವಾಗಿ ದಾಖಲಾಗಿರುವ ಇಂತಹ ಒಂದು ಪ್ರಕರಣವೂ ಇದೆ.

ತನ್ನ ಪತಿ ಸಾಬಿತ್ ಬಿನ್ ಕೈಸ್‌ನ ಚಹರೆಯನ್ನು ಇಷ್ಟ ಪಡದ ಕಾರಣ ತನ್ನ ನಿಕಾಹ್ ರದ್ದುಪಡಿಸುವ ಸಲುವಾಗಿ ಪ್ರವಾದಿಯ ಸಲಹೆ ಕೇಳುವ ಜಮೀಲಾ ಪ್ರಕರಣವನ್ನು ಉಲ್ಲೇಖಿಸಬಹುದು. ಇದಕ್ಕೆ ಪ್ರತಿಯಾಗಿ ಪತಿಗೆ ಏನನ್ನಾದರೂ ನೀಡುವಂತೆ ಪ್ರವಾದಿ ಸಲಹೆ ನೀಡುತ್ತಾರೆ. ಆಕೆ ತನ್ನ ಉದ್ಯಾನವನವನ್ನು ಬಿಟ್ಟುಕೊಟ್ಟ ನಂತರ ಪ್ರವಾದಿಗಳು ಪತಿಗೆ ಸಮ್ಮತಿ ನೀಡುವಂತೆ ಸೂಚಿಸುತ್ತಾರೆ. ಪ್ರವಾದಿಗಳು ಪುರುಷನ ಅನುಮತಿಯನ್ನೂ ಕೇಳುವುದಿಲ್ಲ ಅಥವಾ ನಿರಾಕರಿಸುವ ಹಕ್ಕನ್ನೂ ಆತನಿಗೆ ನೀಡುವುದಿಲ್ಲ. ಬಹುಮುಖ್ಯವಾಗಿ ತಲಾಕ್ ಪದ್ಧತಿಯಲ್ಲಿ ಮೊದಲನೆಯ ಮತ್ತು ಎರಡನೆಯ ತಲಾಕ್ ಘೋಷಣೆಯ ನಂತರ ಪತಿ ಪತ್ನಿಯರಿಗೆ ಒಟ್ಟಿಗೆ ಜೀವನ ನಡೆಸಲು ಹೇಳಲಾಗುತ್ತದೆ, ತನ್ಮೂಲಕ ರಾಜಿಯಾಗುವ ಸಾಧ್ಯತೆಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ ಖುಲಾ ಪದ್ಧತಿಯಲ್ಲಿ ಮಹಿಳೆಯು ತಕ್ಷಣವೇ ತನ್ನ ಪತಿಯ ಮನೆಯನ್ನು ತೊರೆಯಬೇಕಾಗುತ್ತದೆ.

ಮಹಿಳೆಯ ಜೀವನಸಂಗಾತಿಯಾಗಿ ಉಳಿಯದ ಪುರುಷನಿಂದ ಮಹಿಳೆಯ ಮೇಲೆ ನಡೆಯಬಹುದಾದ ಆಕ್ರಮಣವನ್ನು
ತಪ್ಪಿಸಲು ಈ ನಿಯಮವನ್ನು ರೂಪಿಸಲಾಗಿದೆ. ಎಐಎಮ್‌ಪಿಎಲ್‌ಬಿ ಹೊರತಾಗಿ ಇವಾರತ್ ಶರಿಯಾದ ವಿದ್ವಾಂಸರೂ ಸಹ ಖುಲಾ ನಿಯಮದ ಮೇಲೆ ಪುರುಷರ ನಿರಾಕರಣಾಧಿಕಾರವನ್ನು ಸಮರ್ಥಿಸುತ್ತಾರೆ. ಪುರುಷಾಧಿಪತ್ಯವನ್ನು ಸಮರ್ಥಿಸುವ ಈ ನಿಲುವಿನಿಂದಲೇ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಲಿಯ ಅನೇಕ ಮಹಿಳಾ ಸದಸ್ಯರು ಮಂಡಲಿಯಿಂದ ತಮ್ಮ ಅಂತರವನ್ನು ಕಾಯ್ದುಕೊಂಡಿದ್ದು, ಸಮುದಾಯದ ಉಳಿದ ಮಹಿಳೆಯರನ್ನು ನಡುನೀರಿನಲ್ಲಿ ಕೈಬಿಟ್ಟಿದ್ದಾರೆ. ಪವಿತ್ರ ಗ್ರಂಥ ಅಥವಾ ಹಡಿತ್‌ಗಳು ವಿಭಿನ್ನವಾದ ಸಾಕ್ಷಿ ಪುರಾವೆಗಳನ್ನು ಒದಗಿಸಬಹುದಾದರೂ ಉಲೇವಾಗಳು ವೈವಾಹಿಕ ಬದುಕಿನಲ್ಲಿ ಮತ್ತು ವಿಚ್ಚೇದನದ ಪ್ರಕರಣಗಳಲ್ಲಿ ಮಹಿಳೆಯರು ತಮ್ಮ ಹಕ್ಕು ಚಲಾಯಿಸುವುದಕ್ಕೆ ಅವಕಾಶ ನೀಡಲು ತಯಾರಾಗಿಲ್ಲ. ಖುಲಾ ನಿಯಮವೂ ಸಹ ಮುಸ್ಲಿಂ ಧಾರ್ಮಿಕ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. (ಮುಗಿಯಿತು)

ಮೂಲ : ದ ಹಿಂದೂ ೨೯ ನವಂಬರ್ ೨೦೨೨ ಜಿಯಾ ಉಸ್ ಸಲಾಂ, ಅನುವಾದ : ನಾ ದಿವಾಕರ

 

andolana

Recent Posts

ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನ: ಮುದ್ದಾದ ಮರಿಗೆ ಜನ್ಮ ನೀಡಿದ ನೀರಾನೆ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…

2 hours ago

‘ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್‌ಡಿಕೆ ಘೋಷಣೆ

ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…

2 hours ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…

3 hours ago

ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…

5 hours ago

ಓದುಗರ ಪತ್ರ: ‘ಮನೆಗೊಂದು ಗ್ರಂಥಾಲಯ’ ಯೋಜನೆ ಯಶಸ್ವಿಯಾಗಲಿ

‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…

8 hours ago

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…

8 hours ago