ಮೊನ್ನೆ ಸೋಮವಾರ ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ಪ್ರತಿಭಾವಂತ, ಹಾಸ್ಯಚಕ್ರವರ್ತಿ ಎಂದೇ ಹೆಸರಾದ ನರಸಿಂಹರಾಜು ಅವರ ಜನ್ಮದಿನ, ಶತಮಾನೋತ್ಸವ ಆಚರಣೆಯ ಆರಂಭ. ಅಕ್ಷರಾಭ್ಯಾಸ ಮಾಡುವುದಕ್ಕೆ ಮೊದಲೇ ಬಣ್ಣ ಹಚ್ಚಿದ ನರಸಿಂಹರಾಜು ಅವರಿಗೆ ಅವರೇ ಸಾಟಿ. ಅವರನ್ನು ಇನ್ನೊಬ್ಬ ನಟನ ಜೊತೆ ಹೋಲಿಸುವುದೂ ಅಸಾಧ್ಯ.
ತಮ್ಮ ನಾಲ್ಕನೇ ವರ್ಷಕ್ಕೆ ಬಾಲನಟನಾಗಿ ರಂಗಪ್ರವೇಶ ಮಾಡಿದ್ದ ನರಸಿಂಹರಾಜು ಅವರು ಬೆಳ್ಳಿತೆರೆ ಪ್ರವೇಶ ಮಾಡಿದ್ದು ರಾಜಕುಮಾರ್ ಅವರ ಜೊತೆಯಲ್ಲಿ, ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ. ಆ ನಾಟಕ ರಂಗಭೂಮಿಯಲ್ಲಿ ಪ್ರದರ್ಶನ ಕಂಡಾಗ ನಿರ್ವಹಿಸುತ್ತಿದ್ದ ಕಾಶಿ ಪಾತ್ರವನ್ನೇ ಅವರು ಬೆಳ್ಳಿತೆರೆಯಲ್ಲಿಯೂ ನಿರ್ವಹಿಸಿದರು. ಅಲ್ಲಿಂದಾಚೆ ಅವರು ತಿರುಗಿ ನೋಡಲಿಲ್ಲ. ಅವರ ಬೇಡಿಕೆ ಎಷ್ಟಿತ್ತೆಂದರೆ, ಮುಖ್ಯಪಾತ್ರಧಾರಿಗಳ ಕಾಲ್ಶೀಟ್ ತೆಗೆದುಕೊಳ್ಳುವ ಮೊದಲು ಅವರ ಕಾಲ್ಶೀಟ್ ಪಡೆದುಕೊಳ್ಳಬೇಕಾಗಿತ್ತು. ಅವರ ಬೇಡಿಕೆ ಮತ್ತು ಅನಿವಾರ್ಯತೆ ಚಿತ್ರರಂಗದಲ್ಲಿ ಅಷ್ಟಿತ್ತು.
ಐವತ್ತರ ದಶಕದಲ್ಲಿ ತಯಾರಾಗುತ್ತಿದ್ದ ಕನ್ನಡ ಚಿತ್ರಗಳ ಸಂಖ್ಯೆ ತೀರಾ ಕಡಿಮೆ. ಕನ್ನಡ ಚಿತ್ರರಂಗ ಮದರಾಸಿನಲ್ಲಿ ನೆಲೆಯಾಗಿತ್ತು. ಅಲ್ಲಿ ನೆಲೆಸಿದ ಕನ್ನಡ ಕಲಾವಿದರಲ್ಲಿ ಸಾಕಷ್ಟು ಮಂದಿ ಕೆಲಸವಿಲ್ಲದೆ ಒಪ್ಪೊತ್ತಿಗೂ ಪರದಾಡುತ್ತಿದ್ದ ದಿನಗಳವು. ಆಗಲೇ ಕನ್ನಡ ಕಲಾವಿದರ ಸಂಘವನ್ನು ರಾಜಕುಮಾರ್, ಜಿ.ವಿ.ಅಯ್ಯರ್, ಬಾಲಣ್ಣ ಮತ್ತು ನರಸಿಂಹ ರಾಜು ಅವರು ಸ್ಥಾಪಿಸಿ, ಅದರ ಮೂಲಕ ನಾಟಕಗಳ ಪ್ರದರ್ಶನ ಮಾಡಿದರು.
ಚಲನಚಿತ್ರ ತಾರೆಯರು ಅಭಿನಯಿಸುತ್ತಿರುವ ನಾಟಕ ಆದ್ದರಿಂದ ಅದಕ್ಕೆ ಸಾಕಷ್ಟು ಗಳಿಕೆಯೂ ಆಗಿ ಮುಂದೆ ‘ರಣಧೀರ ಕಂಠೀರವ’ ಚಿತ್ರವನ್ನೂ ಈ ಸಂಸ್ಥೆ ನಿರ್ಮಿಸುತ್ತದೆ. ಈ ನಾಲ್ವರ ಹೆಸರನ್ನು ಸೇರಿಸಿ, ‘ಬಾಲನರಸಿಂಹರಾಜ ಅಯ್ಯರ್’ ಎಂದು ಕರೆಯುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ, ಅವರ ಜೊತೆಗಾರರಾಗಿದ್ದ ಹಿರಿಯ ನಟ, ನಿರ್ದೇಶಕ ಬೆಂಗಳೂರು ನಾಗೇಶ್.
250ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನರಸಿಂಹರಾಜು ಅವರು ನಿರ್ಮಾಪಕರಾಗಿ ‘ಪ್ರೊ.ಹುಚ್ಚೂರಾಯ’ ಚಿತ್ರ ನಿರ್ಮಿಸಿ ಮುಖ್ಯಭೂಮಿಕೆ ಯಲ್ಲಿ ಕಾಣಿಸಿಕೊಂಡರು. ಮಗ ಶ್ರೀಕಾಂತ್ ಅಕಾಲ ಮೃತ್ಯು, ಪುತ್ರಶೋಕ ಅವರನ್ನು ನಿಸ್ತೇಜರನ್ನಾಗಿಸಿತ್ತು. ತಮ್ಮ ಐವತ್ತಾರನೆಯ ವಯಸ್ಸಲ್ಲಿ ಅವರು ಇನ್ನಿಲ್ಲವಾದರು.ಕನ್ನಡ ಚಿತ್ರೋದ್ಯಮ ಅವರ ಶತಮಾನೋತ್ಸವ ಆಚರಣೆಯ ಈ ಸಂದರ್ಭದಲ್ಲಿ ತೋರುತ್ತಿರುವ ಉದಾಸೀನ ಭಾವ, ಅದು ಸಾಗುತ್ತಿರುವ ಪ್ರಸ್ತುತ ಹಾದಿಗೆ ಕನ್ನಡಿ ಹಿಡಿಯುತ್ತಿದೆ. ಸುದ್ದಿಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಿಗೂ ಇಲ್ಲಿನ ಬೆಳವಣಿಗೆಗೂ ಒಂದಕ್ಕೊಂದು ಸಂಬಂಧವೇ ಇಲ್ಲವೇನೋ ಎನ್ನುವಂತಿದೆ ಇಲ್ಲಿನ ವರ್ತನೆ. ನರಸಿಂಹರಾಜು ಮೊಮ್ಮಕ್ಕಳು ತಾತನ ಶತಮಾ ನೋತ್ಸವವನ್ನು ಅದ್ಧೂರಿಯಾಗಿ ಅರ್ಥಪೂರ್ಣವಾಗಿ ವರ್ಷಪೂರ್ತಿ ಆಚರಿ ಸಲು ಉದ್ಯಮದ ಸಹಯೋಗ ಕೇಳಿದಾಗ ಅವರಿಗೆ ಸಿಕ್ಕದ್ದು ನಕಾರಾತ್ಮಕ ಉತ್ತರ. ಉದ್ಯಮದ ಮಾತು ಒತ್ತಟ್ಟಿಗಿರಲಿ, ಕಲಾವಿದರ ಸಂಘ ಈ ನಿಟ್ಟಿನಲ್ಲಿ ಹೆಜ್ಜೆ ಮುಂದಿಟ್ಟು, ಉಳಿದ ಸಂಘಟನೆಗಳ ನೆರವು ಕೇಳಬಹುದಿತ್ತು. ಅದೂ ಆಗಲಿಲ್ಲ.
ಮಾರ್ಚ್ನಲ್ಲಿ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಶತಮಾನೋತ್ಸವ ನೆನಪು’ ವಿಭಾಗದಲ್ಲಿ ಛಾಯಾಗ್ರಾಹಕ ವಿ.ಕೆ.ಮೂರ್ತಿ ಅವರಿಗೆ ಗೌರವ ಸಲ್ಲಿಸಲಾಯಿತು. ಇಡೀ ಚಿತ್ರೋತ್ಸವವನ್ನು ಅವರಿಗೆ ಸಮರ್ಪಿಸಲಾಯಿತು. ಉಳಿದ ಮೂವರ ಕುರಿತು ಮಾತುಗಳು ಮಾತ್ರ. ನರಸಿಂಹರಾಜು, ಎಂ.ವಿ.ಕೃಷ್ಣಸ್ವಾಮಿ ಅವರೆಲ್ಲ ಚಿತ್ರರಂಗಕ್ಕೆ ಏನು ಕೊಡುಗೆ ನೀಡಿದ್ದಾರೆ ಎಂದು ಕೇಳುವವರೂ ಚಿತ್ರೋತ್ಸವ ಸಂಘಟನಾ ಸಮಿತಿಯಲ್ಲಿ ಇದ್ದರು ಎನ್ನಲಾಗಿದೆ. ಇರಲಿ, ವಾಣಿಜ್ಯ ಮಂಡಳಿಯ ಕಚೇರಿಯ ಸ್ವಾಗತ ಕಕ್ಷೆಯಲ್ಲಿ ರಾಜಕುಮಾರ್ ಅವರ ದೊಡ್ಡ ಭಾವಚಿತ್ರವೊಂದಿದೆ.
ನಂತರ ಅಭಿಮಾನಿಗಳ ಒತ್ತಡಕ್ಕೆ ಇರಬೇಕು, ವಿಷ್ಣುವರ್ಧನ್ ಅವರ ಭಾವಚಿತ್ರ ಅಲ್ಲಿಗೆ ಬಂತು. ಅದಾದ ನಂತರದ ಸರದಿ ಅಂಬರೀಶ್ ಭಾವಚಿತ್ರದ್ದು, ಪುನೀತ್ ರಾಜಕುಮಾರ್ ಭಾವಚಿತ್ರ ಇತ್ತೀಚಿನದು. ಇವರ ಭಾವಚಿತ್ರಗಳು ಅಲ್ಲಿರುವುದಕ್ಕೆ ವಿರೋಧವಿಲ್ಲ. ಆದರೆ ಕನ್ನಡ ಚಿತ್ರೋದ್ಯಮ ವನ್ನು ಮದರಾಸಿನಿಂದ ಬೆಂಗಳೂರಿಗೆ ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ವಾಣಿಜ್ಯ ಮಂಡಳಿಯ ಕಟ್ಟಡದಲ್ಲೇ ಸಂಕೇತ್ ಧ್ವನಿಮುದ್ರಣ ಕೇಂದ್ರ ಸ್ಥಾಪಿಸಿದ, ಅಭಿಮಾನಿಗಳ ಸಂಘ ಇಲ್ಲದೇ ಇದ್ದರೂ ಸಾಕಷ್ಟು ಜನಪ್ರಿಯರಾಗಿರುವ ಶಂಕರನಾಗ್ ಅವರ ಭಾವಚಿತ್ರವನ್ನು ಅಲ್ಲಿ ಇಡಬೇಕು ಎನ್ನುವ ಯೋಚನೆ ಸಂಬಂಧಪಟ್ಟವರಿಗೆ ಬಂದಂತಿಲ್ಲ.
ಸರ್ಕಾರವಾಗಲೀ, ಉದ್ಯಮವಾಗಲೀ ಚಿತ್ರೋದ್ಯಮದ ಸಾಧಕರ, ಕಟ್ಟಿಬೆಳೆಸಿದವರ ಕುರಿತಂತೆ ಪ್ರಸ್ತಾಪ ಮಾಡುವಾಗ ‘ಬೇಡರ ಕಣ್ಣಪ್ಪ’ ಚಿತ್ರದಿಂದ ಆರಂಭಿಸುತ್ತಾರೆ. ಕನ್ನಡದ ಮೊದಲ ವಾಕ್ಚಿತ್ರ ‘ಸತಿಸುಲೋಚನ’ದ ಸುಬ್ಬಯ್ಯ ನಾಯ್ಡು, ಆರ್.ನಾಗೇಂದ್ರರಾವ್, ಅದಕ್ಕೂ ಮೊದಲು ಮೂಕಿ ಚಿತ್ರಗಳ ನಿರ್ಮಾಪಕ, ಪ್ರದರ್ಶಕ, ನಟ, ಗುಬ್ಬಿ ವೀರಣ್ಣ, ಬಿ.ಆರ್.ಪಂತುಲು, ಎಂ.ವಿ.ರಾಜಮ್ಮ, ಪಂಢರಿಬಾಯಿ, ಲಕ್ಷೀಬಾಯಿ ಮುಂತಾದವರನ್ನು ಮರೆತೇ ಬಿಡುತ್ತಾರೆ. ನಗರಗಳ ರಸ್ತೆಗಳಿಗೆ, ವೃತ್ತಗಳಿಗೆ ಹೆಸರನ್ನು ಇಡುವಾಗ ಈ ಹೆಸರುಗಳನ್ನು ಪರಿಗಣಿಸುವ ಯೋಚನೆ ಸರ್ಕಾರಕ್ಕೂ ಇರುವುದಿಲ್ಲ, ಸೂಚಿಸುವ ಉದ್ಯಮದ ಸಂಘಟನೆಗಳೂ ಇಲ್ಲ.
ನರಸಿಂಹರಾಜು ಅವರ ಶತಮಾನೋತ್ಸವ ಎಂದು ಮಾತ್ರವಲ್ಲ, ಯಾವು ದಾದರೂ ಸಾಧನೆಗಳಾದಾಗ, ಮೈಲಿಗಲ್ಲುಗಳಾದಾಗ ಉದ್ಯಮ ಅದನ್ನು ಸಂಭ್ರಮಿಸಲು ಕಾರ್ಯಕ್ರಮಗಳನ್ನು ಹಿಂದೆ ಆಯೋಜಿಸಿದ್ದಿದೆ. ಸಾರ್ವಜನಿಕ ಸಮಾರಂಭಗಳನ್ನು ಹಮ್ಮಿಕೊಂಡದ್ದಿದೆ. ರಾಜಕುಮಾರ್ ನೂರು, ನೂರೈವತ್ತು ಚಿತ್ರಗಳನ್ನು ಪೂರೈಸಿದಾಗ, ಅವರಿಗೆ ಪದ್ಮಭೂಷಣ ಗೌರವ ಸಂದಾಗ ಅದ್ಧೂರಿ ಸಾರ್ವಜನಿಕ ಕಾರ್ಯಕ್ರಮಗಳು ನಡೆದಿದ್ದವು.
ಕೆಲವು ವರ್ಷಗಳ ಹಿಂದೆ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರಿಗೆ ಪದ್ಮಶ್ರೀ ಸಂದಿತು. ಬಿ.ಜಯಶ್ರೀ, ಭಾರತಿ ವಿಷ್ಣುವರ್ಧನ್ ಅವರಿಗೆ ಈ ಗೌರವ ಇತ್ತು. ದೊಡ್ಡರಂಗೇಗೌಡರಿಗೆ ಗೀತರಚನೆಗಾಗಿಯೇ ಪದ್ಮಶ್ರೀ ಪುರಸ್ಕಾರ ಬಂತು. ಬಹುಶಃ ಗೀತರಚನೆಗಾಗಿ ಪದ್ಮಶ್ರೀ ಪ್ರಶಸ್ತಿ ಪಡೆದವರು ದೊರಂಗೌ ಒಬ್ಬರೇ ಇರಬೇಕು. ಇಲ್ಲೆಲ್ಲೂ ಈ ಮಹನೀಯರನ್ನು ಗೌರವಿಸುವ, ಆ ಮೂಲಕ ಸಂಭ್ರಮಿಸುವ ಯೋಚನೆ ಚಿತ್ರೋದ್ಯಮಕ್ಕೆ ಬರಲೇ ಇಲ್ಲ.
ಒಳ್ಳೆಯ ಕೆಲಸಗಳಾದಾಗ ಅವುಗಳನ್ನು ಗುರುತಿಸಿ, ಗೌರವಿಸುವ ಕೆಲಸವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಾಡುತ್ತವೆ. ಅದು ವಾರ್ಷಿಕ ಪ್ರಶಸ್ತಿಗಳನ್ನು ಚಲನಚಿತ್ರಗಳಿಗೆ ನೀಡುವ ಮೂಲಕ. ಕಳೆದ ನಾಲ್ಕೆ ದು ವರ್ಷಗಳಿಂದ ಈ ಕೆಲಸವೂ ನನೆಗುದಿಗೆ ಬಿದ್ದಿದೆ. 2018ರ ಸಾಲಿನ ಪ್ರಶಸ್ತಿ ಪ್ರಕಟವಾದ ನಂತರ ಅದನ್ನು ಪ್ರಶ್ನಿಸಿ ಮೂವರು ನಿರ್ಮಾಪಕರು ನ್ಯಾಯಾಲಯದ ಮೆಟ್ಟಲೇರಿದ್ದು ಈ ಬೆಳವಣಿಗೆಗೆ ಕಾರಣ. ವಿವಿಧ ವಿಭಾಗಳಲ್ಲಿ ಸಿನಿಮಾಗಳನ್ನು ಮತ್ತು ಕಲಾವಿದ, ತಂತ್ರಜ್ಞ ರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಸಲಹಾ ಸಮಿತಿಯ ಅಧ್ಯಕ್ಷರು ಪಾಲ್ಗೊಂಡ ಚಿತ್ರಗಳು ಆ ಪಟ್ಟಿಯಲ್ಲಿದ್ದವು ಹಾಗೂ ಆ ಚಿತ್ರಗಳಲ್ಲಿನ ಒಬ್ಬರು ಪ್ರಶಸ್ತಿ ಪುರಸ್ಕೃತರಾದರು ಎನ್ನುವುದು ಈ ದೂರಿಗೆ ಕಾರಣ.
ಈ ಹಿಂದೆಯೂ ಇಂತಹದೊಂದು ಪ್ರಕರಣವಿತ್ತು. 2010-11ರ ಸಾಲಿನ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದ ಸದಸ್ಯರೊಬ್ಬರ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಂದಿತ್ತು. ಅದನ್ನು ಪ್ರಶ್ನಿಸಿ ಕೆಲವು ನಿರ್ಮಾಪಕರು ನ್ಯಾಯಾಲಯದ ಮೆಟ್ಟಿಲೇರಿದರು. ನ್ಯಾಯಾಲಯ ಈ ಪ್ರಕರಣ ಕಂಡು ಇದನ್ನು ಸಿಬಿಐಗೆ ಕೂಡಲೇ ವಹಿಸಬೇಕೆಂದು ಸರ್ಕಾರವನ್ನು ಕೇಳಿತ್ತು. ಕೊನೆಗೆ ಆಯ್ಕೆ ಸಮಿತಿಯ ಸಲಹೆಯನ್ನು ತಿರಸ್ಕರಿಸುವುದಾಗಿಯೂ, ಹೊಸ ಸಮಿತಿಯನ್ನು ರಚಿಸುವುದಾ ಗಿಯೂ ನ್ಯಾಯಾಲಯಕ್ಕೆ ಸರ್ಕಾರ ಹೇಳಿದ ಮೇಲೆ ದೂರನ್ನು ತೆಗೆದು ಹಾಕಲಾಯಿತು.
ಯಾವುದೇ ಚಿತ್ರದ ಜೊತೆ ಕೆಲಸ ಮಾಡಿದವರು, ಅದರ ಪ್ರಶಸ್ತಿ ಸಲಹಾ ಸಮಿತಿಯಲ್ಲಿ ಇರುವ ಹಾಗಿಲ್ಲ ಎನ್ನುವುದು ನಿಯಮ. ಅದು ಕಡ್ಡಾಯ. 2018ನೇ ಸಾಲಿನ (ಮೊದಲು ಆರ್ಥಿಕ ವರ್ಷವನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತಿತ್ತು. 2011ರಿಂದ ಅದು ಕ್ಯಾಲೆಂಡರ್ ವರ್ಷಕ್ಕೆ ಬದಲಾಗಿದೆ) ವಾರ್ಷಿಕ ಪ್ರಶಸ್ತಿಗೆ ಚಿತ್ರಗಳನ್ನು ವೀಕ್ಷಿಸಲು ಆರಂಭಿಸಿ ಕೆಲವು ದಿನಗಳಾಗುತ್ತಲೇ ಸಮಿತಿಯ ಅಧ್ಯಕ್ಷರು ಪಾಲ್ಗೊಂಡ ಚಿತ್ರಗಳು ಇರುವುದು ತಿಳಿದಿದೆ. ಚಿತ್ರ ವೀಕ್ಷಣೆಯನ್ನು ಕೆಲವು ದಿನ ಸ್ಥಗಿತಗೊಳಿಸಲಾಯಿತು. ನಂತರ ಆ ಸಮಿತಿಗೆ ಅನುಕೂಲವಾಗುವಂತೆ, ಕರ್ನಾಟಕ ಚಲನಚಿತ್ರ ನೀತಿಯ ನಿಯಮವೊಂದಕ್ಕೆ ತಿದ್ದುಪಡಿ ತಂದು ಆದೇಶ ಹೊರಡಿಸಲಾಯಿತು. ಅದರ ಪ್ರಕಾರ ಸಮಿತಿ ಯಲ್ಲಿರುವ ಸದಸ್ಯರು ಪಾಲ್ಗೊಂಡ ಮೂರಕ್ಕಿಂತ ಹೆಚ್ಚು ಚಿತ್ರಗಳಿದ್ದರೆ ಅವರನ್ನು ತೆಗೆದು ಬೇರೆಯವರನ್ನು ನೇಮಿಸಬೇಕು!
ನ್ಯಾಯಾಲಯ ಇದನ್ನು ಹೇಗೆ ಪರಿಗಣಿಸುತ್ತದೋ ನೋಡಬೇಕು. 2010-11ನೇ ಸಾಲಿನ ಉಲ್ಲೇಖ ಮಾಡಿ ಈ ಸಮಿತಿಯ ಶಿಫಾರಸ್ಸನ್ನು ಒಪ್ಪದೆ, ಹೊಸ ಸಮಿತಿಯನ್ನು ಮಾಡಲು ಹೇಳಬಹುದು, ಇಲ್ಲವೇ ಸರ್ಕಾರವೇ ತಾನು ಹೊಸ ಸಮಿತಿ ಮಾಡುವುದಾಗಿಯೂ ಹೇಳಬಹುದು. ಚಿತ್ರಕ್ಕೆ ಸಂಬಂಧಪಟ್ಟವರು ಇರಲೇ ಕೂಡದು ಎನ್ನುವ ಬದಲು 3 ಚಿತ್ರಗಳಲ್ಲಿ ಪಾಲ್ಗೊಂಡವರು ಇರಬಹುದು ಎಂದರೆ ಮುಂದಿನ ದಿನಗಳಲ್ಲಿ ಎರಡೋ ಮೂರೋ ಚಿತ್ರಗಳಲ್ಲಿ ನಟಿಸಿದ ನಟರು, ಬರೆದ ಲೇಖಕರು, ತಂತ್ರಜ್ಞರು ಯಾರು ಬೇಕಾದರೂ ಇರಬಹುದು ಎಂದ ಹಾಗಾಯಿತು. ಇದು ಒಳ್ಳೆಯ ಪೂರ್ವ ನಿದರ್ಶನ ಆಗಲು ಸಾಧ್ಯವೇ ಇಲ್ಲ.
ಮೈಸೂರು: ಬದಲಿ ನಿವೇಶನ ಹಂಚಿಕೆ, ೫೦:೫೦ ಅನುಪಾತದಲ್ಲಿ ನಿವೇಶನ ಅಕ್ರಮ ಹಂಚಿಕೆ ಹಗರಣದಿಂದಾಗಿ ಇಡೀ ರಾಜ್ಯದ ಗಮನ ಸೆಳೆದಿರುವ ಮೈಸೂರು…
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜುಂಬೂ ಸವಾರಿ ಸಾಗುವ ಮಾರ್ಗದಲ್ಲಿ ಕಳೆದ ಎರಡೂ ವರ್ಷಗಳಿಂದ ಬಿದ್ದಿದ್ದ ಬೃಹತ್ ಮರದ ಕಾಂಡವನ್ನು…
ಮೈಸೂರು: ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿಯನ್ನು ವೀಕ್ಷಿಸಲು ಆಗಮಿಸಿದ ಎಲ್ಲರಿಗೂ ಚಿನ್ನದ ಅಂಬಾರಿ ನೋಡುವ ಅವಕಾಶ ಸಿಗಬೇಕು…
ಮೈಸೂರು: ಸಾಂಸ್ಕೃತಿಕ ರಾಜಧಾನಿ, ಅರಮನೆಗಳ ನಗರಿ ಎಂದು ಕರೆಯುವ ಮೈಸೂರನ್ನು ಗರಡಿ ಮನೆಗಳ ನಗರಿ ಎಂದೂ ಇತ್ತೀಚಿನ ವರ್ಷಗಳಲ್ಲಿ ಕರೆಯುವುದು…
ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…
ಅಮರಾವತಿ: ಜಗತ್ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…