ಎಡಿಟೋರಿಯಲ್

ತರೀಕೆರೆ ಏರಿಮೇಲೆ : ಅಪ್ಪನೆಂಬ ಭುಜಂಗಯ್ಯನ ದಶಾವತಾರ

ಓದಿದ್ದರೆ ಇಂಜಿನಿಯರ್ ಆಗಿರುತ್ತಿದ್ದ ಅಪ್ಪ

ಅಪ್ಪನ ಹೆಸರು ಮಹಮದ್ ದಸ್ತಗಿರ್ ಸಾಹೇಬ್. ಇದರಲ್ಲಿ ಪೈಗಂಬರರನ್ನು ಸೂಚಿಸುವ ಮಹಮದ್ ಮತ್ತು ಅವರ ಅನುಯಾಯಿಗಳನ್ನು ಸೂಚಿಸುವ ಸಾಹೆಬ್ -ಇವು ಅರಬಿ ಶಬ್ದಗಳು. ಬಾಗ್ದಾದಿನ ಸೂಫಿಸಂತ ಅಬ್ದುಲ್ ಖಾದರ್ ಜೀಲಾನಿಯವರನ್ನು ಸೂಚಿಸುವ ದಸ್ತಗಿರ್, ಫಾರಸಿ ಶಬ್ದ. ಸಂಸ್ಕೃತದ ಸೋದರ ಭಾಷೆಯಾದ ಫಾರಸಿಯಲ್ಲಿ ದಸ್ತಗಿರ್ (ಹಸ್ತಗ್ರಹಣ) ಎಂದರೆ, ಬಿದ್ದವರನ್ನು ಕೈಹಿಡಿದು ಎತ್ತುವವನು ಎಂದರ್ಥ. ಅಪ್ಪ ಪತಿತರನ್ನು ಕೈಹಿಡಿದು ಎತ್ತಿದನೋ ಇಲ್ಲವೊ ತಿಳಿಯದು. ಫೀನಿಕ್ಸಿನಂತೆ ಬಿದ್ದುಹೋದ ಬಾಳಿನಿಂದ ತಾನೇ ಎದ್ದದ್ದು ಮಾತ್ರ ದಿಟ. ನಮ್ಮೂರಲ್ಲಿ ಅನೇಕ ದಸ್ತಗಿರ್‌ಗಳಿದ್ದರು. ಅವರಿಂದ ಬೇರ್ಪಡಿಸಲು ಅವನನ್ನು ಫತ್ತೂಕ ದಸ್ತು, ಕುಲುಮಿ ದಸ್ತು, ಎಪ್ಪೇಸ್ ದಸ್ತು ಎಂದೆಲ್ಲ ಕರೆಯಲಾಗುತ್ತಿತ್ತು. ಫತ್ತೂ ಎನ್ನುವುದು ಪೈಗಂಬರರ ಮಗಳಾದ ಫಾತಿಮಾರ ಸ್ವರೂಪ. ಈ ಹೆಸರು ಬರಲು ಕಾರಣ, ಅಪ್ಪನನ್ನು ಎಳವೆಯಲ್ಲೇ ಕಳೆದುಕೊಂಡು, ತಾಯಿ ಫಾತಿಮಾರ ಸಾಕಾಣಿಕೆಯಲ್ಲಿ ಬೆಳೆದಿದ್ದು. ‘ಎಪ್ಪೇಸ್’ ಶಬ್ದದ ಮೂಲ ಬಹುಶಃ ಎಸ್ಕೇಪ್ ಇರಬೇಕು. ಸಮಯಕ್ಕೆ ತಕ್ಕಂತೆ ಸತ್ಯದ ತಲೆಯ ಮೇಲೆ ಹೊಡೆಯುವಂತಹ ಸುಳ್ಳುಹೇಳುವ ಅವನ ಕಿಲಾಡಿತನದಿಂದ ಈ ಬಿರುದು ಒದಗಿರಬೇಕು. ನಮ್ಮೂರ ದನದ ಜಾತ್ರೆ ಬಂದರೆ, ಬರಿಗೈಯಲ್ಲಿ ಹೋಗುತ್ತಿದ್ದ ಆತ, ದನ ಮಾರುವವರ ಕೊಳ್ಳುವವರ ನಡುವೆ ಏಜೆಂಟಾಗಿ ಕಿಸೆ ತುಂಬ ರೊಕ್ಕ ದುಡಿಯುತ್ತಿದ್ದನು. ಅವನನ್ನು ಬಲ್ಲವರು ‘ನೀನು ಬಿಡಪ್ಪ, ಚಾಟಿಯಿಲ್ಲದೆ ಬುಗುರಿ ಆಡಿಸೋನು’ ಎನ್ನುವರು.

ಬಿಡುವಿನ ಪರಿವೆಯಿಲ್ಲದೆ ದುಡಿಯುವುದು, ಮಕ್ಕಳಿಂದಲೂ ಅದನ್ನು ನಿರೀಕ್ಷಿಸುವುದು ಅಪ್ಪನ ಸ್ವಭಾವ. ಅವನು ಎಂಟು ಮಕ್ಕಳನ್ನು ಬೆಳೆಸಿ ಬದುಕು ಕಟ್ಟಿಕೊಂಡಿದ್ದು ಇರುವೆ ಎವರೆಸ್ಟ್ ಆರೋಹಣ ಮಾಡಿದಂತೆ. ಹಳ್ಳಿಯಲ್ಲಿ ಸಣ್ಣರೈತ, ಪಟ್ಟಣದಲ್ಲಿ ಕಮ್ಮಾರ, ನಡುವೆ ದನವ್ಯಾಪಾರ, ತೆಂಗಿನತೋಟದ ಗುತ್ತಿಗೆ, ಕಂತ್ರಾಟುದಾರಿಕೆ, ಗತಿಗೆಟ್ಟಾಗ ಗಾಡಿಬಾಡಿಗೆ-ಉದರ ನಿಮಿತ್ತಂ ಬಹುಕೃತ ವೇಷಂ. ಅವನ ಕಾಯಕದ ಬಹುರೂಪಿತನ ಮತ್ತು ವೃತ್ತಿಭೇದವಿಲ್ಲದ ಸಮದರ್ಶನಗಳು. ನಮ್ಮ ಸೀಮೆಯ ಬಹುತೇಕ ಕೆಳವರ್ಗದ ಮುಸ್ಲಿಮರ ಚಹರೆಗಳಾಗಿದ್ದವು. ಬಸವಣ್ಣ -ಕಾರ್ಲ್ ಮಾರ್ಕ್ಸರನ್ನು ಓದದೆಯೂ ಇವರು ಬದುಕಿನಿಂದ ಪಡೆದುಕೊಂಡ ಶ್ರಮತತ್ವವಿದಾಗಿತ್ತು. ಈ ವರ್ಗದ ಉಪಾಯಗಾರಿಕೆ, ಕ್ರಿಯಾಶೀಲತೆ, ಕುಶಲತೆಯ ಬಹುತ್ವವು, ಜನ್ಮಜಾತ ಪ್ರತಿಭೆಯಲ್ಲ. ಪರಿಸ್ಥಿತಿಯ ಒತ್ತಡದಿಂದ ಉದ್ಭವಿಸಿದ್ದು. ಮಳೆಗಾಲದಲ್ಲಿ ಕೆಲಸವಿಲ್ಲದೆ ಬಂದಾಗುತ್ತಿದ್ದ ಕುಲುಮೆ, ಅಪ್ಪನ ಕಾಯಕ ಕುತೂಹಲವನ್ನು ಕೆರಳಿಸುತ್ತಿತ್ತು. ಅವನದು ಚಾಲಾಕಿತನವೆಂಬ ಉಳಿಯೂ, ಕಾಠಿಣ್ಯಕ್ಕೆ ಡಿಕ್ಕಿಹೊಡೆಯಲು ಅಂಜದ ದುಡಿಮೆಯೆಂಬ ಸುತ್ತಿಗೆಯೂ ಸೇರಿ ಕಟೆದ ಮಜಬೂತಾದ ವಿಗ್ರಹ.

ಅಪ್ಪ ಓದಿದ್ದರೆ ಒಳ್ಳೆಯ ಇಂಜಿನಿಯರ್ ಆಗಿರುತ್ತಿದ್ದನು. ಒಂದು ಕಬ್ಬಿಣದ ಅಥವಾ ಮರದ ತುಂಡನ್ನು ನೋಡಿದೊಡನೆ, ಅದರೊಳಗೆ ಹೊಮ್ಮುವ ಸಿದ್ಧವಸ್ತುವೊಂದನ್ನು ಕ್ಷಣಾರ್ಧದಲ್ಲಿ ಕಲ್ಪಿಸಿಕೊಳ್ಳುತ್ತಿದ್ದನು. ಒಣಗಿದ ಕೆರೆ, ಬಿದ್ದಮರ, ಎದ್ದಕಲ್ಲು, ನಿಂತ ನೀರು, ಉರುಳಿದ ಕಂಬ, ಅಲೆದಾಡುವ ಬಿಡಾಡಿ ದನ ಅವನ ಉಪಯೋಗವಾದಿ ಕಲ್ಪನೆಯನ್ನು ಕೆರಳಿಸುತ್ತಿತ್ತು. ತನ್ನ ಕ್ರಿಯಾಶೀಲ ಸಾಹಸ ಪ್ರಜ್ಞೆಯನ್ನು ತೊಡಗಿಸಲು ಅವಕಾಶಗಳಿಗೆ ಆತ ಹದ್ದಿನಂತೆ ಕಾಯುತ್ತಿದ್ದನು. ಒಮ್ಮೆ ನಮ್ಮೂರಿಗೆ ಉತ್ತರ ಭಾರತದ ನ್ಯೂಗ್ರ್ಯಾಂಡ್ ಸರ್ಕಸ್ ಬಂದಿಳಿಯಿತು. ಅದಕ್ಕೆ ಬೇಕಾದ ದೊಡ್ಡ ಮೈದಾನ ಇದ್ದುದು ನಮ್ಮ ಕುಲುಮೆಯ ಮುಂದೆ. ಅದೊಂದು ಕೆರೆ ಕೆಳಗಿನ ಪಾಳು ಹೊಲ. ಸ್ಥಳದ ಮಹಜರು ಮಾಡಲು ಸರ್ಕಸ್ಸಿನ ಮ್ಯಾನೇಜರ್, ಹುಲಿ, ಸಿಂಹಗಳ ಚಿತ್ರಗಳಿರುವ ಜೀಪಿನಲ್ಲಿ ಬಂದು ಹೊಲದ ಬದಿ ನಿಂತುಕೊಂಡನು. ಕೂಡಲೇ ಅಪ್ಪ ಹೋಗಿ ಮ್ಯಾನೇಜರ್‌ನನ್ನು ಕಂಡು ನಮಸ್ಕಾರ ಮಾಡಿ, ತನ್ನ ಪರಿಚಯ ಹೇಳಿಕೊಂಡನು. ಹೊಲದ ಮಾಲೀಕರನ್ನು ಭೇಟಿ ಮಾಡಿಸಿದನು. ಸರ್ಕಸ್ ಇರುವಷ್ಟೂ ದಿನ, ಡೇರೆಹಾಕಲು ಕೂಲಿಕಾರರನ್ನು ಒದಗಿಸುವುದು, ಆನೆ ಒಂಟೆಗಳಿಗೆ ಬೇಕಾದ ಮೇವನ್ನು ಒದಗಿಸುವುದು, ಹುಲಿ, ಸಿಂಹಗಳಿಗೆ ಬೇಕಾದ ಮಾಂಸದ ವ್ಯವಸ್ಥೆ, ಅಡುಗೆಗೆ ಬೇಕಾದ ಕಿರಾಣಿ ಒದಗಿಸುವುದು ಇತ್ಯಾದಿ ಸ್ಥಳೀಯ ಸೌಲಭ್ಯ ಒದಗಿಸುವ ಕಂತ್ರಾಟು ಅವನಿಗೆ ಸಿಕ್ಕಿತು. ಸರ್ಕಸ್ ಶುರುವಾದಲ್ಲಿಂದ ಹಿಡಿದು, ಅದು ಇದ್ದ ಮೂರೂ ತಿಂಗಳ ಕಾಲ, ಅಪ್ಪ ಮಾಲೀಕನ ಜತೆ ತಾನೂ ಗತ್ತಿನಲ್ಲಿ ಆವರಣದಲ್ಲಿ ತಿರುಗುತ್ತ, ಜನರಿಂದ ಸಲಾಮನ್ನು ಸ್ವೀಕರಿಸುತ್ತಿದ್ದನು. ಅಮ್ಮನಿಗೆ ಇವನು ಸರ್ಕಸ್ಸಿನವರ ಜತೆಯಲ್ಲೇ ಎಲ್ಲಿ ಹೋದಾನೋ ಎಂದು ಆತಂಕವಿತ್ತು.

ಆನೆಗಳು ಬೆಳಗಿನ ಹೊತ್ತು ಅರಳಿ, ಆಲ ಬಸರಿ ಮರದ ಸೊಪ್ಪನ್ನು ತರಲು ಊರಾಚೆ ಹೋಗುತ್ತಿದ್ದವು. ಮರಗಳಿರುವ ಜಾಗ ತೋರಿಸಲು ನಾವು ಆನೆಯ ಮೇಲೇರಿ ಹೋಗುತ್ತಿದ್ದೆವು. ಆನೆಗಳು ಸೊಂಡಲಿಂದ ಕೊಂಬೆಗಳನ್ನು ಕಬ್ಬು ಮುರಿಯುವಂತೆ ಮುರಿಯುತ್ತಿದ್ದವು. ಗೆಲ್ಲುಗಳನ್ನು ಅವುಗಳ ಮೇಲೆ ಹೇರಿಕೊಂಡು ಬರಲಾಗುತ್ತಿತ್ತು. ಸರ್ಕಸ್ಸನ್ನು ಯಾವ ಹೊತ್ತಿಗೂ ಹೋಗಿ ನೋಡುವಂತೆ ನಮಗೆ ಪಾಸುಗಳನ್ನು ಕೊಡಲಾಗಿತ್ತು. ನಾನು ನನ್ನ ಸಹಪಾಠಿಗಳನ್ನು ಕರೆದೊಯ್ಯುತ್ತಿದ್ದೆ. ಸರ್ಕಸ್ ಊರು ಬಿಟ್ಟುಹೋದ ಬಳಿಕ, ಆನೆ, ಒಂಟೆ, ಹುಲಿ, ಸಿಂಹಗಳ ತೊಪ್ಪೆಯು ಗುಂಡಿ ತುಂಬಿ ಬೆಟ್ಟದಂತೆ ಬೆಳೆದು ನಿಂತಿತ್ತು. ಆ ಗೊಬ್ಬರವನ್ನು ಅಪ್ಪ ಐನೂರು ರೂಪಾಯಿಗೆ ಮಾರಿದನು. ನಮ್ಮ ಕುಟುಂಬ ಕಂಡರಿಯದ ಭಾರೀ ಮೊತ್ತವದು. ನಾವು ಅದರಿಂದ ಹೊಸ ಬಟ್ಟೆ, ಚಪ್ಪಲಿ, ಸೈಕಲ್ಲುಗಳನ್ನು ಕೊಂಡೆವು. ಬಟ್ಟೆಯ ಗುರುತನ್ನು ಹೇಳಬೇಕಾದಾಗ ‘ಅದೇ ಕಣೊ, ಆ ಸರ್ಕಸ್ ಹಣದಿಂದ ಖರೀದಿಸಿದ್ದು’ ಎನ್ನುತ್ತಿದ್ದೆವು.

ಕುಲುಮೆ ದಿಸೆಯಿಂದ ಅಪ್ಪನಿಗೆ ನಮ್ಮ ಧರ್ಮದಾಚೆಗಿನ ಹಲವಾರು ಕಸುಬುದಾರರ ಮತ್ತು ರೈತರ ಜತೆ ವ್ಯಾವಹಾರಿಕ ನಂಟಿತ್ತು. ಹಳ್ಳಿಗಳಿಂದ ರೈತರು ಸಂತೆಗೆಂದು ಬಂದವರು, ಕುಲುಮೆ ಕೆಲಸ ಮಾಡಿಸಿಕೊಂಡು ಹೋಗುತ್ತಿದ್ದರು. ಅವರು ಬಯಸಿದ ವೇಳೆಗೆ ಕೆಲಸ ಮುಗಿಯುತ್ತಿರಲಿಲ್ಲ. ಆಗವರು ಕುಲುಮೆಯಲ್ಲೇ ಬಹಳ ಹೊತ್ತು ಕೂರಬೇಕಾಗಿತ್ತು. ಅಪ್ಪ ಅವರು ಬೇಸರಗೊಳ್ಳದಂತೆ ಲೋಕದ ವಿಷಯಗಳನ್ನು ತಂದು ಹರಟುತ್ತಿದ್ದನು. ಕುಲುಮೆ ವಿಚಾರ ಗೋಷ್ಠಿಯಾಗಿ ಮಾರ್ಪಡುತ್ತಿತ್ತು. ಆರೋಗ್ಯಕ್ಕೆ ಒಳ್ಳೆಯ ಬೀಡಿ ಯಾವುದು ಎಂಬುದರಿಂದ ಹಿಡಿದು ಇಂದಿರಾ ಗಾಂಽಯ ಆಡಳಿತದ ತನಕ ಚರ್ಚೆಯ ವಿಷಯದ ಹರವು ಇರುತ್ತಿತ್ತು. ತಿದಿ ಎಳೆಯುತ್ತ ಕೂತಿರುತ್ತಿದ್ದ ನಾನು ಅದನ್ನು ಕೇಳಿಸಿಕೊಳ್ಳುತ್ತಿದ್ದೆ. ಅಪ್ಪ ಧಾರ್ಮಿಕ ಶ್ರದ್ಧೆಯ ಮನುಷ್ಯನಾಗಿರಲಿಲ್ಲ. ಕುಲುಮೆ ಕೆಲಸದವರಿಗೆ ಐದು ಹೊತ್ತು ನಮಾಜಿಗೆ ಹೋಗಲು ಸಾಧ್ಯವಿರಲಿಲ್ಲ. ಆತ ವರ್ಷಕ್ಕೆ ಎರಡು ಬಾರಿ ನಮ್ಮನ್ನು ಹಿಂದಿಕ್ಕಿಕೊಂಡು ಈದಗಾಕ್ಕೆ ನಮಾಜಿಗೆ ಹೋಗುತ್ತಿದ್ದನು. ವರ್ಷಕ್ಕೊಮ್ಮೆ ಬಾಬಾಬುಡನಗಿರಿಗೆ ಯಾತ್ರೆ ನಡೆಸುತ್ತಿದ್ದನು. ಅವನಿಗೆ ಪ್ರಿಯವಾದ ಹಬ್ಬವೆಂದರೆ ಬಗ್ದಾದಿನ ಸೂಫಿಸಂತ ಮೆಹಬೂಬ ಸುಭಾನಿಯವರ ಪುಣ್ಯತಿಥಿ. ಆ ದಿನ ಆತ ಗಂಟೆಗಟ್ಟಲೆ ಫಾತೆಹಾ ಓದುತ್ತ, ತನ್ನ ಅಪ್ಪ ಅಮ್ಮನನ್ನು ಒಳಗೊಂಡಂತೆ ಸತ್ತುಕೆಟ್ಟು ಹೋದ ಪೂರ್ವಜರ ಹೆಸರನ್ನು ಮಂತ್ರಗಳಂತೆ ಹೇಳುತ್ತ ಉರಿವಕೆಂಡದ ಮೇಲೆ ಲೋಬಾನವನ್ನು ಹಾಕುತ್ತಿದ್ದ. ತುಪ್ಪದ ದೀಪ ಹಾಗೂ ಎಡೆಯಲ್ಲಿ ಇಟ್ಟ ಪಾಯಸ, ಖುರ್ಮ ಪಲಾವುಗಳ ಪರಿಮಳ ಮೀರಿಸುವಂತೆ, ಲೋಬಾನದ ಹೊಗೆಯಿಂದ ಮನೆ ಘಮಗುಡುತ್ತಿತ್ತು. ಒಮ್ಮೆ ಅಪ್ಪ ನನ್ನ ಮಗಳನ್ನು ಜತೆಗೆ ಕೂರಿಸಿಕೊಂಡು ಆಕೆಯ ಕೈಯಿಂದ ಹಿರಿಯರನ್ನೆಲ್ಲ ಆವಾಹನೆ ಮಾಡಿ ಲೋಬಾನ ಹಾಕಿಸುತ್ತ ಹೋದನು. ಅತಿಯಾದ ಹೊಗೆ ಮಗುವಿನ ಶ್ವಾಸಕೋಶ ಸೇರಿ ಉಸಿರಾಟಕ್ಕೆ ತೊಂದರೆಯಾಯಿತು. ಬಾನು ಕೂಡಲೇ ಬಂದು, ಕೂಸನ್ನೆತ್ತಿಕೊಂಡು ಶುದ್ಧ ಗಾಳಿಗೆ ಹೊರಗೆ ಎತ್ತಿಕೊಂಡು ಹೋದಳು. ಈ ಕಾರ್ಯಾಚರಣೆ ಕೊಂಚ ತಡವಾಗಿದ್ದರೂ ಕೂಸು ಪೂರ್ವಜರ ಪಾದ ಸೇರುವ ಸಂಭವವಿತ್ತು.

ಅಕ್ಕಂದಿರೂ ಅವರ ಮಕ್ಕಳೂ ಮನೆಯನ್ನು ತುಂಬಿಕೊಂಡಾಗ ಅಪ್ಪನ ಸಂಭ್ರಮ ಹೇಳತೀರದು. ಅವನದು ಚಿಲ್ಲರೆ ವ್ಯಾಪಾರವಲ್ಲ. ಸಾರಾಸಗಟು. ಬಜಾರಿಗೆ ಹೋದವನೆ ಅರ್ಧಮೂಟೆ ಶೇಂಗಾ, ಮೂಟೆ ಪುರಿ-ಕಾರ, ಒಂದು ದೊಡ್ಡ ಬಾಳೆಗೊನೆ, ಪುಟ್ಟಿತುಂಬ ಕಿತ್ತಲೆ ಹಣ್ಣು ಹೊತ್ತು ತರುತ್ತಿದ್ದನು. ಫಾರಮ್ಮಿನಲ್ಲಿ ಕೋಳಿಗಳು ಕಾಳನ್ನು ಹೆಕ್ಕುವಂತೆ, ಮಕ್ಕಳು ಮೊಮ್ಮಕ್ಕಳೆಲ್ಲ ಒಟ್ಟಿಗೆ ಕೂತು ತಿನ್ನುವಾಗ, ಸಂತೋಷದಿಂದ ಖೋಖೋ ಎಂದು ಹುರಿದುಂಬಿ ಸುತ್ತಿದ್ದನು. ತನ್ನ ಹೆಣ್ಣುಮಕ್ಕಳ ಶ್ರದ್ಧೆ ಅಚ್ಚುಕಟ್ಟುತನಗಳನ್ನು ಮನಸಾರೆ ಹೊಗಳುತ್ತ, ಗಂಡುಮಕ್ಕಳನ್ನು ಟೀಕಿಸುತ್ತಿದ್ದನು. ಕೊನೆಯ ದಿನಗಳಲ್ಲಿ ಈ ಲೌಡಿಮಕ್ಕಳು ಕೈಕೊಡುತ್ತಾರೆ; ಹೆಣ್ಣುಮಕ್ಕಳೇ ನನ್ನನ್ನು ಸಾಕುವವರು ಎಂದು ಭವಿಷ್ಯ ಹೇಳುತ್ತಿದ್ದನು. ಅವನಿಗೆ ಮುಪ್ಪಾಗಿ ಮನೆಹಿಡಿದಾಗ ಕಾಲ ಕಳೆಯುವುದು ಶಾನೇ ಕಷ್ಟವಾಯಿತು. ಸರ್ಕಸ್ಸಿನಲ್ಲಿ ದಿನವೂ ಚಾಟಿಯ ಶಬ್ದಕ್ಕೆ ಗುರುಗುಟ್ಟುತ್ತ, ಸಣ್ಣ ಸ್ಟೂಲನ್ನೇರಿ ಶೋ ಕೊಡುತ್ತ ಜನರನ್ನು ರಂಜಿಸುತ್ತಿದ್ದ ಸಿಂಹವೀಗ ಮುದಿಯಾಗಿ ಪಂಜರ ಸೇರಿತ್ತು. ‘ಮೂರ‍್ಹೊತ್ತು ಉಂಡು ಮನೆಯಲ್ಲಿ ಕೂರಲು ಆಗಲ್ಲಪ್ಪ. ಜಮೀನು ಇದ್ದಿದ್ದರೆ ಅಡ್ಡಾಡಿಕೊಂಡು ಹೊಲದ ಮೇಲಾದರೂ ಹೋಗಬಹುದಿತ್ತು. ಗಂಡುಮಕ್ಕಳು ನೀವು ಅದನ್ನೂ ಮಾರಿ ನೀರು ಕುಡಿದಿರಿ. ಹಿಂಗೆ ಬದುಕುವ ಬದಲು ಸಾಯೋದು ಒಳ್ಳೇದು’ ಎಂದು ಗೊಣಗುತ್ತಿದ್ದನು. ದುಡಿದು ಬದುಕಿದ ಜನರಿಗೆ ವಿಶ್ರಾಂತಿಯೇ ಪರಮ ಶತ್ರುವೆಂದು ಕಾಣುತ್ತದೆ.

andolanait

Recent Posts

ಚಾ.ನಗರ ಜಿಲ್ಲೆಯಲ್ಲಿ ಹುರುಳಿ ಬೆಳೆ ‘ಇಳಿ’ವರಿ!

ಒಟ್ಟು ೧೭ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ; ಗುಂಡ್ಲುಪೇಟೆಯಲ್ಲೇ ಹೆಚ್ಚು  ಚಾಮರಾಜನಗರ: ಹಿಂಗಾರು ಅವಧಿಯಲ್ಲಿ ಈ ಬಾರಿ ಹಿಂದಿಗಿಂತ ಹುರುಳಿ ಬಿತ್ತನೆ…

23 mins ago

ಮುದ್ದಿನ ಹಸುವಿಗೆ ಸೀಮಂತ ನೆರವೇರಿಸಿದ ರೈತ ಮಹಿಳೆ!

ಭೇರ್ಯ ಮಹೇಶ್ ಶಾಸೋಕ್ತವಾಗಿ ನಡೆದ ಕಾರ್ಯಕ್ರಮ; ಮುತ್ತೈದೆಯರ ಮೂಲಕ ಹಸುವಿಗೆ ಸೀರೆ ತೊಡಿಸಿ, ಹಣ್ಣು, ಸಿಹಿ ನೀಡಿP ಕೆ.ಆರ್.ನಗರ :…

4 hours ago

ಕಾಡಾನೆ ದಾಳಿ; ಶಾಲೆಯ ಗೇಟ್, ನೀರಿನ ಪೈಪ್ ನಾಶ

ಹನೂರು ತಾಲ್ಲೂಕಿನ ಪಚ್ಚೆದೊಡ್ಡಿ ಶಾಲೆಗೆ ಪದೇಪದೇ ಕಾಡಾನೆ ಲಗ್ಗೆ; ಪೋಷಕರು, ಗ್ರಾಮಸ್ಥರಲ್ಲಿ ಭೀತಿ ಹನೂರು: ಕಾಡಾನೆ ದಾಳಿಯಿಂದ ಪದೇಪದೇ ಶಾಲಾ…

4 hours ago

‘ಪ್ರಾದೇಶಿಕ ಪಕ್ಷಗಳಿಂದಷ್ಟೇ ರಾಜ್ಯಗಳ ಅಭಿವೃದ್ಧಿ ಸಾಧ್ಯ’

‘ಪ್ರಸ್ತುತ ರಾಜಕೀಯ ನಿಲುವುಗಳು’ ಸಂವಾದದಲ್ಲಿ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಅಭಿಮತ ಮೈಸೂರು: ಚಳವಳಿಗಳ ಉತ್ಪನ್ನವಾಗಿ ಪ್ರಾದೇಶಿಕ ಪಕ್ಷಗಳು ಉಗಮಿಸಬೇಕು. ರಾಷ್ಟ್ರೀಯ…

5 hours ago

ಡಿಕೆಶಿ ಬರಿಗೈಲಿ ವಾಪಸ್

ರವಿಚಂದ್ರ ಚಿಕ್ಕೆಂಪಿಹುಂಡಿ ರಾಹುಲ್ ಬಳಿ ಅಧಿಕಾರ ಹಂಚಿಕೆ ವಿಚಾರ ಪ್ರಸ್ತಾಪ ತಕ್ಷಣಕ್ಕೆ ಸಿಗದ ಸ್ಪಂದನೆ; ಚರ್ಚೆ ಮುಂದೂಡಿದ ರಾಹುಲ್ ಹೈಕಮಾಂಡ್ ನಾಯಕರಿಂದ…

5 hours ago