ಎಡಿಟೋರಿಯಲ್

ಅಧಿಕಾರ ರಾಜಕಾರಣದಿಂದ ಸಾಮಾಜಿಕ ಜವಾಬ್ದಾರಿ ವಿಫಲ

ನಾ.ದಿವಾಕರ

ಭಾರತದಲ್ಲಿ ಪ್ರಜಾಪ್ರಭುತ್ವದ ನೆಲೆಗಳನ್ನು ಶತಮಾನಗಳ ಹಿಂದಿನ ಸಮಾಜಗಳಲ್ಲೇ ಗುರುತಿಸುವ ಒಂದು ಬೌದ್ಧಿಕ ಪ್ರಯತ್ನ ಸದ್ಯದಲ್ಲಿ ಜಾರಿಯಲ್ಲಿದೆ. ಆಧುನಿಕ ಜಗತ್ತಿನ ಪ್ರಜಾಪ್ರಭುತ್ವದ ತಾತ್ವಿಕ ಹಾಗೂ ಸೈದ್ಧಾಂತಿಕ ನೆಲೆಯಲ್ಲಿ ನಿಂತು, ಪ್ರಾಚೀನ ಸಮಾಜದಲ್ಲಿನ ಆಡಳಿತ ವ್ಯವಸ್ಥೆಯನ್ನು ಗಮನಿಸುವಾಗ ಈ ಪ್ರತಿಪಾದನೆಯಲ್ಲಿ ಸತ್ಯಾಂಶ ಕಾಣುವುದು ಕಷ್ಟ. ಆದರೂ ನಮ್ಮಲ್ಲಿ ಎಲ್ಲವೂ ಇತ್ತು ಎಂದು ಹೇಳುವ ಬೌದ್ಧಿಕ ಪರಂಪರೆ ಇತ್ತೀಚಿನ ದಿನಗಳಲ್ಲಿ ಗಟ್ಟಿಯಾಗುತ್ತಿರುವುದರಿಂದ ಇದು ಕೂಡ ಸಾರ್ವಜನಿಕ ಸಂಕಥನದ ಒಂದು ಭಾಗವಾಗಿದೆ. ಅದೇನೇ ಇರಲಿ, ಸಮಕಾಲೀನ ರಾಜಕಾರಣ ಮತ್ತು ವರ್ತಮಾನದ ಆಡಳಿತ ವ್ಯವಸ್ಥೆಯನ್ನು ಗಮನಿಸುವಾಗ ನಮಗೆ ಕಾಣುವುದು ಶತಮಾನಗಳ ಹಿಂದಿನ ಊಳಿಗಮಾನ್ಯ ಧೋರಣೆ, ಪಿತೃಪ್ರಧಾನ ಆಲೋಚನೆಗಳು, ಶ್ರೇಣೀಕೃತ ಜಾತಿ ವ್ಯವಸ್ಥೆಯ ಮೇಲು-ಕೀಳಿನ ತರತಮಗಳು ಮತ್ತು ರೂಪಾಂತರಗೊಂಡ ಶೋಷಣೆಯ ಹಲವು ಆಯಾಮಗಳು. ಇಷ್ಟು ಮಾತ್ರ.

ಒಂದು ವರ್ಗವು ಪ್ರತಿಪಾದಿಸುತ್ತಿರುವಂತೆ ಪ್ರಜಾಪ್ರಭುತ್ವವು ಪ್ರಾಚೀನ ಭಾರತದ ಮೂಲದಲ್ಲಿ ಇದ್ದುದೇ ಆದರೆ, ಇಂದಿನ ಭಾರತೀಯ ಸಮಾಜ ಇಡೀ ವಿಶ್ವಕ್ಕೆ ಪ್ರಜಾತಂತ್ರದ ಮಾದರಿಯಾಗಬೇಕಿತ್ತು. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಯಿದ್ದರೂ, ಭಾರತದ ಸಾಮಾಜಿಕ-ಆರ್ಥಿಕ ಹಾಗೂ ಸಾಂಸ್ಕ ತಿಕ ನೆಲೆಗಳಲ್ಲಿ ಇಂದಿಗೂ ಪ್ರಜಾತಂತ್ರದ ಮೂಲ ಆಶಯ ಗಳಾದ ಸಮಾನತೆ, ಸೌಹಾರ್ದತೆ ಮತ್ತು ಸಮನ್ವಯದ ಕೊರತೆಯನ್ನು ಗುರು ತಿಸಬಹುದು. ತಳಮಟ್ಟದಲ್ಲಿ ಜನಸಮುದಾಯಗಳ ನಡುವೆ ಸೌಹಾರ್ದತೆ ಮತ್ತು ಸಮನ್ವಯತೆ ಇಂದಿಗು ಜೀವಂತವಾಗಿದ್ದರೂ, ಈ ಸ್ಥಿರ ನೆಲೆಗಳನ್ನು ಭಂಜಿಸಿ, ಶಿಥಿಲಗೊಳಿಸುವ ಶಕ್ತಿಗಳು ದಿನದಿಂದ ದಿನಕ್ಕೆ ಬಲಗೊಳ್ಳುತ್ತಿವೆ. ಚುನಾಯಿತ ಅಧಿಕಾರ, ರಾಜಕಾರಣದಲ್ಲಿರುವ ವ್ಯಕ್ತಿ ಅಥವಾ ಪಕ್ಷಗಳಿಗೆ ಈ ಭಂಜಕ ಶಕ್ತಿಗಳನ್ನು ನಿಗ್ರಹಿಸುವ ಕ್ಷಮತೆ, ಬದ್ಧತೆ ಮತ್ತು ಪ್ರಾಮಾಣಿಕತೆ ಇದ್ದಲ್ಲಿ ಮಾತ್ರವೇ, ಶಿಥಿಲವಾಗುತ್ತಿರುವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸಲು ಸಾಧ್ಯವಾಗುತ್ತದೆ.

ಆಡಳಿತ ವ್ಯವಸ್ಥೆಯ ಹೊಣೆಗಾರಿಕೆ:

ಈ ದೃಷ್ಟಿಯಿಂದ ನೋಡಿದಾಗ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಽಕಾರ ರಾಜಕಾರಣದ ಸಾಮಾಜಿಕ ಜವಾಬ್ದಾರಿಗಳನ್ನು ಅರಿತುಕೊಳ್ಳುವುದು ಸಾಧ್ಯ.ಸಾಂವಿಧಾನಿಕವಾಗಿ ಜಾರಿಗೊಳಿಸಲಾಗುವ ಕಾಯ್ದೆ, ಕಾನೂನುಗಳು ಸಮಸ್ತ ಜನಸಮುದಾಯಗಳ ಬಗ್ಗೆ ಕಾಳಜಿ ಹೊಂದಿರುವಷ್ಟೇ ಪ್ರಮಾಣದಲ್ಲಿ, ಈ ಕಾನೂನುಗಳನ್ನು ಜಾರಿಗೊಳಿಸುವ ಅಽಕಾರ ರಾಜಕಾರಣದ ನೆಲೆಗಳೂ ಸಾಮಾಜಿಕ ಜವಾಬ್ದಾರಿಯೊಂದಿಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ. ವಸಾಹತು ದಾಸ್ಯದಿಂದ ವಿಮೋಚನೆ ಪಡೆದು 75 ವರ್ಷಗಳ ಪ್ರಜಾಸತ್ತಾತ್ಮಕ ವಸಂತಗಳನ್ನು ಪೂರೈಸಿರುವ ಭಾರತದ ಅಧಿಕಾರ ರಾಜಕಾರಣದಲ್ಲಿ ಈ ಸಾಮಾಜಿಕ ಜವಾಬ್ದಾರಿ ಮತ್ತು ಕಾಳಜಿ ಇಲ್ಲದಿರುವುದರಿಂದಲೇ, ಇಂದಿಗೂ ಸಮಾಜಘಾತುಕ, ಸೌಹಾರ್ದ ಭಂಜಕ ಶಕ್ತಿಗಳು ಸಮಾಜದ ಎಲ್ಲ ಸ್ತರಗಳನ್ನೂ ಆಕ್ರಮಿಸಿಕೊಂಡಿವೆ. ಇಂತಹ ಸಮಾಜಘಾತುಕ ಶಕ್ತಿಗಳಿಗೆ ರಾಜಕೀಯ ದೀಕ್ಷೆ ನೀಡುವ ಮೂಲಕ ಸುಧಾರಣೆ ಮಾಡುವ ಮಾತುಗಳೂ ಇತ್ತೀಚೆಗೆ ಕೇಳಿಬರುತ್ತಿರುವುದರಿಂದ, ಅಽಕಾರ ರಾಜಕಾರಣದ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ.

ಚುನಾಯಿತ ಸರ್ಕಾರಗಳು ಜಾರಿಗೊಳಿಸುವ ಕಾನೂನುಗಳು ಕಾಲದಿಂದ ಕಾಲಕ್ಕೆ ಪರಾಮರ್ಶೆಗೊಳಗಾಗುತ್ತಲೇ ಇರುತ್ತವೆ. ಕಾರ್ಯಾಂಗದ ಕಾರ್ಯವೈಖರಿಯ ಮೇಲೆ ನ್ಯಾಯಾಂಗವೂ ಸದಾ ಕಣ್ಣಿಟ್ಟಿರುತ್ತದೆ. ಸರ್ಕಾರಗಳ ತಪ್ಪು ಹೆಜ್ಜೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಭಾರತದ ನ್ಯಾಯಾಂಗದ ಕೊಡುಗೆ ಅಪಾರ. ಆದರೂ ವಿಶಾಲ ಬಾಹ್ಯ ಸಮಾಜದ ರಾಜಕೀಯ ಪ್ರಾಬಲ್ಯ ಮತ್ತು ಶಾಸನ ಸಭೆಗಳ ಪ್ರಾತಿನಿಽತ್ವದಲ್ಲಿನ ಬಹುಮತದ ಪರಿಣಾಮ, ನ್ಯಾಯಾಂಗದ ಸೂಚನೆಗಳನ್ನೂ ಮೀರಿ ಸರ್ಕಾರಗಳು ತಮ್ಮ ಆಡಳಿತ ನೀತಿಗಳನ್ನು ಜಾರಿಗೊಳಿಸುತ್ತವೆ. ಸಂವಿಧಾನದ ಮೂಲ ಆಶಯಗಳಿಗೆ ವ್ಯತಿರಿಕ್ತವಾದ ಹಲವಾರು ಕಾನೂನುಗಳು ಇಂದಿಗೂ ಜಾರಿಯಲ್ಲಿರುವುದು ಇದನ್ನೇ ಸೂಚಿಸುತ್ತದೆ. ಈ ಕಾನೂನುಗಳನ್ನು ಸಮಾಜ ಭಂಜಕ ಶಕ್ತಿಗಳನ್ನು ನಿಗ್ರಹಿಸುವ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಉದ್ದೇಶದೊಂದಿಗೆ ಜಾರಿಗೊಳಿಸಲಾಗಿದ್ದರೂ, ಬಹುತೇಕ ಸಂದರ್ಭಗಳಲ್ಲಿ ಆಡಳಿತಾರೂಢ ಸರ್ಕಾರಗಳು ತಮ್ಮ ತಾತ್ವಿಕ-ಸೈದ್ಧಾಂತಿಕ ನಿಲುವುಗಳಿಗೆ ಅನುಗುಣವಾಗಿ, ಇದೇ ಕಾನೂನುಗಳನ್ನು ಬಳಸುವ ಮೂಲಕ ಪ್ರತಿರೋಧಗಳನ್ನು ಹತ್ತಿಕ್ಕಲು ಮುಂದಾಗುತ್ತವೆ. ಈ ಪ್ರವೃತ್ತಿಯ ಪರಾಕಾಷ್ಠೆಯನ್ನು ೧೯೭೫ರ ತುರ್ತುಪರಿಸ್ಥಿತಿಯಲ್ಲಿ ಕಂಡಿದ್ದರೂ ಇಂದಿಗೂ ಪ್ರಜಾಸತ್ತಾತ್ಮಕ ನೆಲೆಗಳನ್ನು ದುರ್ಬಲಗೊಳಿಸುವ ಆಡಳಿತ ನೀತಿಗಳು ವಿಭಿನ್ನ ಸ್ತರಗಳಲ್ಲಿ ಜಾರಿಯಲ್ಲಿವೆ. ನಿತ್ಯ ಜೀವನದಲ್ಲಿ ಸಮಾಜದ ಎಲ್ಲ ಸ್ತರಗಳಲ್ಲೂ ಒಂದು ಆರೋಗ್ಯಪೂರ್ಣ ಸೌಹಾರ್ದಯುತ ವಾತಾವರಣವನ್ನು ಮೂಡಿಸುವ ನಿಟ್ಟಿನಲ್ಲಿ ಚುನಾಯಿತ ಪ್ರತಿನಿಽಗಳು ಹೆಚ್ಚಿನ ಹೊಣೆ ಹೊರಬೇಕಾಗುತ್ತದೆ. ಸಮಾಜದಲ್ಲಿ ಕ್ರಮೇಣ ಶಿಥಿಲವಾಗುತ್ತಿರುವ ನೈತಿಕ ಮೌಲ್ಯಗಳನ್ನು ಕಾಪಾಡುವುದಷ್ಟೇ ಅಲ್ಲದೆ, ಸಾಮಾಜಿಕ ಬದುಕಿನಲ್ಲಿ ನುಸುಳಿರಬಹುದಾದ ಅಸಭ್ಯತೆ, ಅಶ್ಲೀಲತೆ, ಅನಾಗರಿಕತೆ, ಕ್ರೌರ್ಯ ಮತ್ತು ಅಸೂಕ್ಷ್ಮತೆಗಳನ್ನು ಗ್ರಹಿಸಿ, ಹೋಗಲಾಡಿಸುವ ಜವಾಬ್ದಾರಿಯೂ ಚುನಾಯಿತ ಪ್ರತಿನಿಽಗಳ ಮೇಲಿರುತ್ತದೆ. ಅಽಕಾರ ರಾಜಕಾರಣದ ಫಲಾನುಭವಿಗಳಾಗಿ ಈ ಪ್ರತಿನಿಧಿಗಳ ಪ್ರತಿಯೊಂದು ಮಾತು, ವರ್ತನೆ ಕೂಡ ಬಾಹ್ಯ ಸಮಾಜಕ್ಕೆ ಅನುಕರಣೀಯವಾಗಿರಬೇಕಾಗುತ್ತದೆ.

೧೯೯೦ರ ದಶಕದವರೆಗಿನ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದಾಗ, ಅಽಕಾರ ಪೀಠದಲ್ಲಿರುವ ನಾಯಕರು ಮತ್ತು ಅಽಕಾರಾಕಾಂಕ್ಷಿ ನಾಯಕರು ತಮ್ಮ ನಡೆ, ನುಡಿಗಳ ಮೂಲಕವೇ ಸಾಮಾನ್ಯ ಜನತೆಯ ದೃಷ್ಟಿಯಲ್ಲಿ ಅನುಕರಣೀಯವಾಗಿದ್ದುದನ್ನು ಗುರುತಿಸಬಹುದು. ಭ್ರಷ್ಟಾಚಾರ, ಸ್ವಜನಪಕ್ಷಪಾತ, ಸ್ವಾರ್ಥ ಹಿತಾಸಕ್ತಿ ಮತ್ತು ಸಂಪತ್ತಿನ ಕ್ರೋಢೀಕರಣ ಈ ಮೂಲ ಲಕ್ಷಣಗಳನ್ನು ಕಾಪಾಡಿಕೊಂಡೇ ರಾಜಕೀಯ ನಾಯಕರು

ತಮ್ಮ ನಿತ್ಯ ಬದುಕಿನ ವರ್ತನೆಯ ಮೂಲಕ ಜನರ ಮೆಚ್ಚುಗೆ ಗಳಿಸುತ್ತಿದ್ದ ಕೆಲವು ನಿದರ್ಶನಗಳನ್ನಾದರೂ ಈ ಕಾಲಘಟ್ಟದಲ್ಲಿ ಶೋಽಸಲು ಸಾಧ್ಯ. ಹಾಗಾಗಿಯೇ ಮತೀಯವಾದ, ಕೋಮುವಾದ, ಭ್ರಷ್ಟಾಚಾರಗಳ ನಡುವೆಯೇ ರಾಜಕೀಯ ಕ್ಷೇತ್ರದ ನಿರಪರಾಽಕರಣದ ಕೂಗು ಕೂಡ ಕೇಳಿಬರುತ್ತಿತ್ತು.

ಆದರೆ ಭಾರತ ಇಂದು ಬದಲಾಗಿದೆ. ರಾಜಕಾರಣದ ನಿರಪರಾಽಕರಣ ಇಂದು ಯಾವುದೇ ಪಕ್ಷದ ಕಾರ್ಯಸೂಚಿಯಲ್ಲಾಗಲೀ, ಪ್ರಣಾಳಿಕೆಯಲ್ಲಾಗಲೀ ಕಾಣಲಾಗುವುದಿಲ್ಲ. ಇತ್ತೀಚೆಗೆ ನಡೆದ ಗುಜರಾತ್ ಚುನಾವಣೆಯಲ್ಲಿ ಶೇ.೨೨ರಷ್ಟು ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿರುವುದಾಗಿ ವರದಿಯಾಗಿದೆ. ಈ ಅಂಕಿ-ಅಂಶಗಳನ್ನು ಬದಿಗಿಟ್ಟು ಇಂದು ನಾವು ನೋಡಬೇಕಿರುವುದು ಅಧಿಕಾರ ರಾಜಕಾರಣದಲ್ಲಿ ಸ್ಥಾಪಿತವಾಗುತ್ತಿರುವ ರಾಜಕೀಯ ನಾಯಕರ ವ್ಯಕ್ತಿತ್ವ, ಚಹರೆ ಮತ್ತು ವ್ಯಕ್ತಿ ವೈಶಿಷ್ಟ್ಯಗಳನ್ನು. ತಮ್ಮ ಗತ ಜೀವನದ ಅಪರಾಽ ಲಕ್ಷಣಗಳನ್ನು ಹೆಮ್ಮೆಯಿಂದ ಬೆನ್ನುತಟ್ಟಿಕೊಂಡು ಹೇಳಿಕೊಳ್ಳುತ್ತಿರುವ ನಾಯಕರು ಒಂದೆಡೆಯಾದರೆ ಮತ್ತೊಂದೆಡೆ, ಸಮಾಜಘಾತುಕರಿಗೂ ರಾಜಕೀಯ ದೀಕ್ಷೆ ನೀಡಿ ಸುಧಾರಣೆಗೊಳಪಡಿಸುವ ಮಾತುಗಳೂ ಕೇಳಿಬರುತ್ತಿವೆ. ಅಽಕಾರ ರಾಜಕಾರಣದ ಒಳಾಂಗಣದಿಂದಲೇ ಕೇಳಿಬರುವ ಇಂತಹ ಮಾತುಗಳು ಯುವ ಸಮೂಹಕ್ಕೆ, ಭವಿಷ್ಯದ ತಲೆಮಾರಿಗೆ ಯಾವ ಸಂದೇಶವನ್ನು ನೀಡಲು ಸಾಧ್ಯ? ಈಗಾಗಲೇ ಹಾದಿತಪ್ಪಿರುವ ಯುವ ಸಮೂಹಕ್ಕೂ ಕೂಡ ಅಧಿಕಾರ ವಲಯದಲ್ಲಿ ಸ್ಥಾನಮಾನಗಳನ್ನು ಗಳಿಸುವ ಆಶಾಭಾವನೆಯನ್ನು ಸಹಜವಾಗಿಯೇ ಮೂಡಿಸುತ್ತದೆ ಅಲ್ಲವೇ?

(ಮುಂದುವರಿಯುವುದು)

andolanait

Recent Posts

ತಿ.‌ ನರಸೀಪುರ: ಬೈಕ್ ಡಿಕ್ಕಿ ಚಿರತೆ ಸಾವು

ತಿ. ನರಸೀಪುರ: ತಾಲೂಕಿನ ಬನ್ನೂರು ಹೋಬಳಿಯ ಬಸವನಹಳ್ಳಿ ಗ್ರಾಮದ ಸಮೀಪದ ಮುಖ್ಯರಸ್ತೆಯಲ್ಲಿ ದ್ವಿಚಕ್ರ ವಾಹನ ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ…

6 hours ago

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

8 hours ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

8 hours ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

9 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

10 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

10 hours ago